Cabinet Expansion: ವಯಸ್ಸಿನಲ್ಲಿ ಹಿರಿಯರು, 2 ಬಾರಿ ಮಂತ್ರಿಯಾದವರಿಗೆ ಕೊಕ್‌?

Mar 11, 2022, 4:41 PM IST

ಬೆಂಗಳೂರು (ಮಾ. 11): ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯ ಫಲಿತಾಂಶದಿಂದ ಹೊಸ ಹುಮ್ಮಸ್ಸು ಪಡೆದಿರುವ ಬಿಜೆಪಿ ಇದೀಗ ಕರ್ನಾಟಕದಲ್ಲಿ ಮುಂದಿನ ವಿಧಾನಸಭೆ ಚುನಾವಣೆ ಗುರಿಯಾಗಿಸಿಕೊಂಡು ಸಂಪುಟ ಪುನಾರಚನೆಯ ಪ್ರಯೋಗ ಕೈಗೊಳ್ಳುವ ಬಗ್ಗೆ ಗಂಭೀರ ಚಿಂತನೆ ನಡೆದಿದೆ.

ಪುನಾರಚನೆಯೇ ಅಂತಿಮಗೊಂಡಲ್ಲಿ ವಯಸ್ಸಿನಲ್ಲಿ ಹಿರಿಯರಾಗಿರುವ ಅಥವಾ ಎರಡು ಬಾರಿ ಸಚಿವರಾಗಿರುವವರನ್ನು ಕೈಬಿಡುವ ಬಗ್ಗೆ ಚರ್ಚೆ ನಡೆಯಬಹುದು. ಉತ್ತರ ಭಾರತದ ಗುಜರಾತ್‌ ಅಥವಾ ಉತ್ತರಾಖಂಡ ರಾಜ್ಯಗಳಂತೆ ದಕ್ಷಿಣ ಭಾರತದ ಕರ್ನಾಟಕದಲ್ಲೂ ಎಲ್ಲ ಸಚಿವರನ್ನು ಕೈಬಿಟ್ಟು ಹೊಸಬರನ್ನು ಒಳಗೊಂಡ ಸಂಪುಟ ರಚನೆ ಮಾಡಲು ಅಷ್ಟುಸುಲಭವಾಗಿ ಸಾಧ್ಯವಾಗುತ್ತದೆಯೇ ಎಂಬ ಅನುಮಾನವೂ ಇದೆ. ಉತ್ತರ ಭಾರತದ ರಾಜಕಾರಣಕ್ಕೂ ಮತ್ತು ದಕ್ಷಿಣ ಭಾರತದ ರಾಜಕಾರಣಕ್ಕೂ ವ್ಯತ್ಯಾಸ ಇರುವುದರಿಂದ ಅಲ್ಲಿನ ಪ್ರಯೋಗ ಇಲ್ಲಿ ಯಶಸ್ವಿಯಾಗುವುದೇ ಎಂಬುದರ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಳ್ಳಲಾಗಿಲ್ಲ. ಇದೀಗ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದುದರಿಂದ ಕೆಲದಿನಗಳಲ್ಲೇ ಬಿಜೆಪಿ ವರಿಷ್ಠರು ಕರ್ನಾಟಕ ರಾಜಕಾರಣದತ್ತ ಚಿತ್ತ ಹರಿಸುವುದು ನಿಶ್ಚಿತವಾಗಿದೆ.