ರಾಜ್ಯಾಧ್ಯಕ್ಷ ವಿಜಯೇಂದ್ರ ರಾಜೀನಾಮೆ ಪ್ರಶ್ನೆಯೇ ಇಲ್ಲ: ಮಾಜಿ ಸಚಿವ ರೇಣುಕಾಚಾರ್ಯ

By Kannadaprabha NewsFirst Published Sep 30, 2024, 4:59 PM IST
Highlights

ಯಾರೋ ನಾಲ್ಕಾರು ಜನ ದಾರಿ, ಬೀದಿಯಲ್ಲಿ ಹೇಳಿದಾಕ್ಷಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಿಜೆಪಿ ಅತೃಪ್ತ ಗುಂಪಿಗೆ ತಿರುಗೇಟು ನೀಡಿದರು. 
 

ದಾವಣಗೆರೆ (ಸೆ.30): ಯಾರೋ ನಾಲ್ಕಾರು ಜನ ದಾರಿ, ಬೀದಿಯಲ್ಲಿ ಹೇಳಿದಾಕ್ಷಣ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಬಿಜೆಪಿ ಅತೃಪ್ತ ಗುಂಪಿಗೆ ತಿರುಗೇಟು ನೀಡಿದರು. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಯಾವುದೇ ಕಾರಣಕ್ಕೂ ವಿಜಯೇಂದ್ರ ರಾಜೀನಾಮೆ ನೀಡುವುದಿಲ್ಲ. ಬಿ.ಎಸ್‌.ಯಡಿಯೂರಪ್ಪ ಪುತ್ರ ಅಂತಾ ವಿಜಯೇಂದ್ರ ರಾಜ್ಯಾಧ್ಯಕ್ಷ ಆಗಿಲ್ಲ ಎಂದರು.

ವಿಜಯೇಂದ್ರ ಪಕ್ಷ ಸಂಘಟನೆ, ಹೋರಾಟ, ಉಪ ಚುನಾವಣೆಯಲ್ಲಿ ತೋರಿಸಿದ ಸಾಧನೆ ಗುರುತಿಸಿ, ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಾಧ್ಯಕ್ಷರಾಗಿ ಮಾಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದರೆ, ಅದು ಬಿಜೆಪಿ ಕೇಂದ್ರ ನಾಯಕರಿಗೆ ಅವಮಾನಿಸಿದಂತೆ ಎಂದು ಅವರು ಹೇಳಿದರು. ನಮ್ಮ ವರಿಷ್ಠರು ಒಂದುವೇಳೆ ಬಸವನಗೌಡ ಪಾಟೀಲ್‌ ಯತ್ನಾಳರನ್ನು ರಾಜ್ಯಾಧ್ಯಕ್ಷರಾಗಿ ನೇಮಕ ಮಾಡಿದ್ದರೆ ನಾವು ಒಪ್ಪಿಕೊಳ್ಳುತ್ತಿದ್ದೆವು. ಎಲ್ಲರ ಅಭಿಪ್ರಾಯ ಸಂಗ್ರಹಿಸಿಯೇ ಬಿ.ವೈ.ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಮಾಡಲಾಗಿದೆ. 

Latest Videos

ಕಾಂಗ್ರೆಸ್ ಸರ್ಕಾರ ಗ್ಯಾರಂಟಿಯೊಂದಿಗೆ ಅಭಿವೃದ್ಧಿಗೂ ಒತ್ತು: ಸಚಿವ ಆರ್.ಬಿ.ತಿಮ್ಮಾಪೂರ

ಮುಂಬರುವ ತಾಪಂ, ಜಿಪಂ, ಪುರಸಭೆ, ಪಪಂ, ಮಹಾನಗರ ಪಾಲಿಕೆ, ವಿಧಾನಸಭೆ ಚುನಾವಣೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ನೇತೃತ್ವದಲ್ಲೇ ಎದುರಿಸಿ, ಭರ್ಜರಿ ಜಯಭೇರಿ ಬಾರಿಸಲಿದ್ದೇವೆ ಎಂದ ಅವರು, ನಾವೂ ಸಹ ದೆಹಲಿಗೆ ನಿಯೋಗ ಹೋಗಿ, ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಸುವಂತೆ ಮನವಿ ಮಾಡುತ್ತೇವೆ ಎಂದರು. ವಿಜಯೇಂದ್ರ ಪಾದಯಾತ್ರೆ ಪರಿಣಾಮ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿಯೇ ಅಲುಗಾಡುತ್ತಿದ್ದು, ರಾಜೀನಾಮೆಗೆ ಎಲ್ಲಾ ಕಡೆಯಿಂದಲೇ ಒತ್ತಾಯ ಕೇಳಿಬರುತ್ತಿದೆ. ನಾವೆಲ್ಲರೂ ವಿಜಯೇಂದ್ರ ಪರವಾಗಿ ನಿಲ್ಲುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು. ಬಿಜೆಪಿ ಮುಖಂಡರಾದ ರಾಜು ವೀರಣ್ಣ, ಪಿ.ಸಿ.ಶ್ರೀನಿವಾಸ ಭಟ್, ಪ್ರವೀಣ ರಾವ್ ಜಾಧವ್‌, ಜಯರುದ್ರೇಶ, ಮಣಿಕಂಠ, ಗಾಂಧಿ ನಗರ ಮಂಜು, ಶ್ರೀನಿವಾಸ ಇತರರು ಇದ್ದರು.

ಪಕ್ಷದಲ್ಲಿ ಕೇವಲ ಸ್ಥಾನಮಾನ ಪಡೆಯುವುದು ಮುಖ್ಯವಲ್ಲ: ಪಕ್ಷದಲ್ಲಿ ಕೇವಲ ಸ್ಥಾನಮಾನ ಪಡೆಯುವುದು ಮುಖ್ಯವಲ್ಲ. ಅದರ ಜತೆಯಲ್ಲೇ ಸದಸ್ಯತ್ವ ಅಭಿಯಾನದಲ್ಲೂ ಪಾಲ್ಗೊಂಡು ಅತೀ ಹೆಚ್ಚು ಸದಸ್ಯತ್ವ ಮಾಡಿಸಬೇಕು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು. ಪಟ್ಟಣದ ವಿವಿಧ ವಾರ್ಡುಗಳ ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಪಾಲ್ಗೊಂಡು ಸುದ್ದಿಗಾರರೊಂದಿಗೆ ಮಾತನಾಡಿದರು. ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕಿನಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಸದಸ್ಯತ್ವವನ್ನು ಕಾರ್ಯಕರ್ತರು ಹಾಗೂ ಬಿಜೆಪಿ ಮುಖಂಡ ಮಾಡಿಸಿದ್ದಾರೆ. ಇನ್ನೂ ಹೆಚ್ಚು ಸದಸ್ಯತ್ವ ಮಾಡಿಸಬೇಕು. 

ಈ ನಿಟ್ಟಿನಲ್ಲಿ ನಮ್ಮ ಕಾರ್ಯಕರ್ತರು ತಮ್ಮ ತಮ್ಮ ಬೂತ್‍ಗಳಲ್ಲಿ ಸದಸ್ಯತ್ವ ಮಾಡಿಸಿ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ತಾ.ಪಂ, ಜಿ.ಪಂ. ಹಾಗೂ ಪುರಸಭಾ ಚುನಾವಣೆಗಳು ಸಾಲು ಸಾಲಾಗಿ ಬರಲಿವೆ. ಅಷ್ಟೊತ್ತಿಗೆ ಸದಸ್ಯತ್ವ ಅಭಿಯಾನ ಮುಗಿದಿರಬೇಕು. ನಂತರ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಬೇಕಿದೆ. ಸಾಧ್ಯವಾದಷ್ಟು ಹೆಚ್ಚು ಸದಸ್ಯತ್ವ ಮಾಡಿಸಲು ಪ್ರಯತ್ನಿಸಿ ಎಂದರು. ಗ್ಯಾರಂಟಿ ಯೋಜನೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತಗೊಂಡಿದೆ. ರಸ್ತೆಗಳು ಹಾಳಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಘಟಕಗಳು ದುರಸ್ಥಿಗೆ ಬಂದಿದೆ. 

ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಜವಾಬ್ದಾರಿ: ಸಚಿವ ಪ್ರಲ್ಹಾದ್ ಜೋಶಿ

ಸರ್ಕಾರದ ಯೋಜನೆಗಳು ಸರಿಯಾಗಿ ಸಕಾಲದಲ್ಲಿ ಜನ ಸಾಮಾನ್ಯರಿಗೆ ತಲುಪುತ್ತಿಲ್ಲ. ಇಂತಹ ಎಲ್ಲಾ ವಿಚಾರಗಳನ್ನು ತಮ್ಮ ಗ್ರಾಮಗಳಲ್ಲಿ ಸಾಮಾನ್ಯ ಜನತೆಗೆ ತಿಳಿಸಬೇಕು ಎಂದರು. ಅತೀವೃಷ್ಟಿಯಲ್ಲಿ ಬೆಳೆಗಳು ಹಾಳಾಗಿದ್ದರೂ ಈವರೆವಿಗೂ ಪರಿಹಾರ ಸಿಕ್ಕಿಲ್ಲ. ಧಾರಕಾರವಾಗಿ ಬಿದ್ದ ಮಳೆಯಿಂದ ಹಾನಿಯಾದ ಮನೆಗಳಿಗೂ ಪರಿಹಾರ ಸಿಕ್ಕಿಲ್ಲ. ಆದರೂ ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆದಿದ್ದೇವೆ ಎಂದು ಹೇಳುತ್ತಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಈ ವೇಳೆ ಪ್ರಮುಖರಾದ ಪಾಲಕ್ಷಪ್ಪ, ಶಿವು, ಮಹಿಳೆಯರು ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.

click me!