'ವಿಡಿಯೋ ಇದ್ರೆ ತೋರಿಸಿ' ಬಿಜೆಪಿಗೆ ಪ್ರಿಯಾಂಕ್ ಖರ್ಗೆ ಸವಾಲ್

Jul 29, 2023, 8:23 PM IST

ಬೆಂಗಳೂರು (ಜು.29): ಉಡುಪಿ ಕಾಲೇಜಿನಲ್ಲಿ ನಡೆದ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಮಹಿಳಾ‌ ಆಯೋಗದ ಸದಸ್ಯೆ ಖುಷ್ಬು ಸುಂದರ್, ಶೌಚಾಲಯದಲ್ಲಿ ಗುಪ್ತ ಕ್ಯಾಮೆರಾ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇವಾಗ ಬಿಜೆಪಿ ನಾಯಕರು ಏನು ಹೇಳುತ್ತಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನೆ ಮಾಡಿದರು. ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು,‌ ಉಡುಪಿ ವಿಚಾರವಾಗಿ ವಿಪಕ್ಷದವರು ಬೀದಿಗಿಳಿದು ಹೋರಾಟ ಮಾಡುತ್ತಿದ್ದಾರೆ‌. ಈ ಹಿಂದೆ ಎಬಿವಿಪಿಯವರು ಅವರ ಪಕ್ಷದ ಗೃಹ ಸಚಿವರನ್ನೆ ಬಿಟ್ಟಿಲ್ಲ. ಆರಗ ಜ್ಞಾನೇಂದ್ರ ಅವರ ಕಚೇರಿಗೆ ಮುತ್ತಿಗೆ ಹಾಕಿದ್ದರು. ಇವಾಗ ಉಡುಪಿ ಪ್ರಕರಣವನ್ನು ಬಿಡುತ್ತಾರಾ ? ಎಂದು ಪ್ರಶ್ನಿಸಿದರು. ಈಗ ಅವರ ಪಾರ್ಟಿಯವರೇ ಬಂದು ಅಲ್ಲಿ ಕ್ಯಾಮೆರಾ ಇರಲಿಲ್ಲ ಎಂದು ಹೇಳಿದ್ದಾರೆ. ನಾವೂ ಕಾಲೇಜು ಶೌಚಾಲಯದಲ್ಲಿ ಕ್ಯಾಮೆರಾ ಸಿಕ್ಕಿಲ್ಲ ಎಂದು ಹೇಳಿದ್ದೆವು. ಮಾಜಿ ಸಚಿವ ಅಶ್ವಥ್ ನಾರಾಯಣ್ ಸೇರಿದಂತೆ ಎಲ್ಲಾ ನಾಯಕರು ಕ್ರಾಂತಿಕಾರಿಗಳಂತೆ ಹೋಗಿದ್ದರು. ಈಗ ಅವರೆಲ್ಲಾ ಎಲ್ಲಿ ಹೋದರು ಎಂದು ವಾಗ್ದಾಳಿ ನಡೆಸಿದರು.