Aug 15, 2022, 2:43 PM IST
ಬೆಂಗಳೂರು (ಆ. 15): ದೇಶ ಸ್ವಾತಂತ್ರ್ಯ ಪಡೆದು 75 ವರ್ಷಗಳನ್ನು ಪೂರೈಸಿದೆ. 76ನೇ ಸ್ವಾತಂತ್ರ್ಯೋತ್ಸವದ ಸಂಭ್ರಮವನ್ನು ಸೋಮವಾರ ದೇಶದ ಎಲ್ಲೆಡೆ ಆಚರಿಸಿಕೊಳ್ಳಲಾಗಿದೆ. ವಿಶ್ವದ ಅಧುನಿಕ ಕಾಲದ ಪ್ರಮುಖ ಯುದ್ಧ ಎಂದೇ ಬಿಂಬಿತವಾಗಿರುವ 1999ರ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಕ್ಯಾಪ್ಟನ್ ನವೀನ್ ನಾಗಪ್ಪ ಯುದ್ಧದ ಕಥೆಗಳನ್ನು ಮಾತನಾಡಿದ್ದಾರೆ.
ಯುದ್ಧದಲ್ಲಿ ಭಾಗಿಯಾಗಬೇಕು ಎಂದು ನನ್ನ ಆಸೆಯಾಗಿತ್ತು. ನಮ್ಮ ಕಂಪನಿಗೆ ಪಾಯಿಂಟ್ 4875 ವಶಪಡಿಸಿಕೊಳ್ಳಬೇಕು ಎನ್ನುವ ಕಮಾಂಡ್ ಬಂದಾಗ ನನಗೆ ಯುದ್ಧಕ್ಕೆ ಕಳಿಸಲೇಬೇಕು ಎಂದು ಎಲ್ಲಾ ನಿಯಮವನ್ನು ಮೀರಿ ಕಮಾಂಡಿಂಗ್ ಆಫೀಸರ್ ಬಳಿ ಮಾತನಾಡಿದ್ದೆ. ಅದಕ್ಕೆ ಅವರು ಒಂದೇ ಮಾತು ಹೇಳಿದ್ದರು. ನಿಮಗೆ ಬರೀ 6 ತಿಂಗಳ ಸರ್ವೀಸ್ ಆಗಿದೆ. ನಿಮ್ಮ ಅಡಿಯಲ್ಲಿರುವ ಸೈನಿಕರಿಗೆ ನಿಮ್ಮ ಮೇಲೆಯೇ ನಂಬಿಕೆ ಇರದೇ ಇದ್ದಲ್ಲಿ ನೀವು ಅವರನ್ನು ಯುದ್ಧಕ್ಕೆ ಹೇಗೆ ಕರೆದುಕೊಂಡು ಹೋಗ್ತೀರಿ ಎಂದಿದ್ದರು. ಆದರೆ, ಅವರನ್ನು ಒಪ್ಪಿಸಿದ್ದ ನಾನು ಸೈನಿಕರಲ್ಲಿ ವಿಶ್ವಾಸ ತುಂಬುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತನಾಗಿದ್ದೆ.
ಧನೋವಾ ಮುನ್ನಡೆಸಿದ್ದ ಗೋಲ್ಡನ್ ಆ್ಯರೋಸ್ಗೆ ರಫೇಲ್ ವಿಮಾನ ಹೊಣೆ!
ಮರುದಿನ 120 ಸೈನಿಕರನ್ನು ನಿಲ್ಲಿಸಿ ಮಾತನಾಡಿದ್ದೆ. ನನಗೆ ಸರ್ವೀಸ್ ಕಡಿಮೆ ಇರಬಹುದು, ಅನುಭವ ಕಡಿಮೆ ಇರಬಹುದು. ಆದರೆ, ಹೋರಾಟದ ಮನೋಭಾವ ಕಡಿಮೆ ಇಲ್ಲ. ಯಾರನ್ನೂ ಬ್ಲೀಡ್ ಟು ಡೆತ್ ಆಗೋಕೆ ಬಿಡಲ್ಲ. ನನಗೆ ಭಾರತೀಯ ಸೇನೆ ಒಂದು ಟಾಸ್ಕ್ ಕೊಟ್ಟಿದೆ. ಬೈ ಚಾನ್ಸ್ ನನಗೆನಾದರೂ ಆದರೆ, ನನ್ನ ಎದೆಗೆ ಗುಂಡು ಬಿದ್ದಿರುತ್ತೆ. ನನ್ನ ಬೆನ್ನಿಗೆ ಗುಂಡು ಬಿದ್ದಿರೋದಿಲ್ಲ. ತಿರಂಗಾ ಸಾಥ್ ಮೇ ಲೇಕೇ ಆನಾ, ಪಾಯಿಂಟ್ 4875ಅಲ್ಲಿ ಪೆಹಲಾಯೇಂಗೆ (ಧ್ವಜವನ್ನು ಜೊತೇಲಿ ಹಿಡ್ಕೊಂಡು ಬನ್ನಿ, ಪಾಯಿಂಟ್ 4875ಅಲ್ಲಿ ಹಾರಿಸೋಣ)' ಎಂದಿದ್ದೆ. ಅದಾದ ಬಳಿಕ ಅವರಲ್ಲಿ ನನ್ನ ಮೇಲೆ ವಿಶ್ವಾಸ ಮೂಡಿತ್ತು.