ಕೊರೋನಾ ನಿಯಂತ್ರಣಕ್ಕೆ ಬಿಎಸ್‌ವೈಗೆ 9 ಸಲಹೆ ನೀಡಿದ ಎಚ್‌ಕೆ ಪಾಟೀಲ್​

By Suvarna NewsFirst Published Apr 14, 2021, 3:20 PM IST
Highlights

ಕೊರೋನಾ ನಿಯಂತ್ರಣ ಮಾಡುವ ಸಲುವಾಗಿ ಮುಖ್ಯಮಂತ್ರಿ ಬಿ. ಎಸ್.​ ಯಡಿಯೂರಪ್ಪನವರಿಗೆ ಕಾಂಗ್ರೆಸ್ ನಾಯಕ ಪತ್ರ ಬರೆದಿದ್ದಾರೆ. ಪತ್ರದಲ್ಲಿ 9 ಸಲಹೆಗಳನ್ನ ನೀಡಿದ್ದಾರೆ.

ಬೆಂಗಳೂರು, (ಏ.14): ಕಳೆದ ವರ್ಷದ ಬಂದು ಹೋಗಿದ್ದ ಕೊರೋನಾ ಮೊದಲ ಅಲೆಗಿಂತ ಈಗ ಬಂದಿರುವ ಎರಡನೇ ಅಲೆ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಹಾಸಿಗಗಳು, ಆಮ್ಲಜನಕದ ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ.

ಈ ಕುರಿತು ಕಾಂಗ್ರೆಸ್ ಹಿರಿಯ ​ ನಾಯಕ ಎಚ್​.ಕೆ. ಪಾಟೀಲ್​  ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದು, ಮಹತ್ವದ 9 ಸಲಹೆಗಳನ್ನು ನೀಡಿದ್ದಾರೆ.

ಸಭೆ ಮುಕ್ತಾಯ: ಅಧಿಕಾರಿಗಳಿಗೆ ಖಡಕ್ ಸೂಚನೆಗಳನ್ನ ಕೊಟ್ಟ ಸಿಎಂ! 

ಪಾಟೀಲರು ಕೊಟ್ಟ ಸಲಹೆ ಇಂತಿವೆ
1. ಆರೋಗ್ಯ ತುರ್ತು ಪರಿಸ್ಥಿತಿ ಘೋಷಣೆ ಮಾಡಿ,ಅನುಷ್ಠಾನಗೊಳಿಸಿ.(ಕಾಗದದ ಮೇಲೆ ಉಳಿಯುವ ಆದೇಶ
ಮಾಡಬೇಡಿ).

2. ಆಕ್ಸಿಜನ್ ವಿಪುಲವಾಗಿ ಲಭ್ಯವಾಗುವಂತೆ ವ್ಯವಸ್ಥೆಗೊಳಿಸಿ.ಅಗತ್ಯವೆನಿಸಿದರೆ, ಆಕ್ಸಿಜನ್ ಬಳಕೆ ಮಾಡುವ, ಕೈಗಾರಿಕಾ ಉದ್ದೇಶಕ್ಕೆ ಆಕ್ಸಿಜನ್ ಉಪಯೋಗಿಸುವ ಕೈಗಾರಿಕೆಗಳನ್ನು ಕೆಲ ಕಾಲ ಬಂದ್ ಮಾಡಿ. ಆಕ್ಸಿಜನ್ ಹಾಸಿಗೆಗಳನ್ನು ತುರ್ತಾಗಿ ಹೆಚ್ಚಿಸಿ.

3. ಎಲ್ಲಿ ಜನ ಹೆಚ್ಚು ಸೇರುತ್ತಾರೆ ಎಂಬ ಭಾವನೆ-ಮಾಹಿತಿ ಇದೆಯೋ ಅಲ್ಲಿ ತಾತ್ಕಾಲಿಕ ಕೋರೋನಾ ತಪಾಸಣಾ ಕೇಂದ್ರ ಸ್ಥಾಪಿಸಿ. ಪರೀಕ್ಷೆಗಳನ್ನು ಮಾಡಿ. ಸೊಂಕಿತರು ಮತ್ತು ಶಂಕಿತರನ್ನು ಉಳಿದವರಿಂದ ಪ್ರತ್ಯೇಕಿಸಿ. ಪರೀಕ್ಷೆ ಮತ್ತು ಪರಿಣಾಮಕಾಗಿ ಪ್ರತ್ಯೇಕಿಸುವುದರಿಂದ ಮಾತ್ರ ಈ ರೋಗ ಹರಡುವಿಕೆಯನ್ನು ತಡೆಗಟ್ಟಬಹುದು.

4. ತಪಾಸಣಾ ಪರಿಣಾಮ ವಿಳಂಬವಾಗಿ ಬರುತ್ತಿವೆ. ಟೆಸ್ಟ್​ ಕಿಟ್​ಗಳ ಕೊರತೆ ಇದೆ. ಸಕಾಲಿಕ ಪರೀಕ್ಷೆ, ಫಲಿತಾಂಶ ಹಾಗೂ ಚಿಕಿತ್ಸೆ ಕಡೆಗೆ ದೃಢ ಹೆಜ್ಜೆ ಇಡಿ.

5. ಫಾರ್ಮಸಿಗಳಲ್ಲಿ ಔಷಧಿ ಸರಳವಾಗಿ ದೊರಕುವಂತೆ ಮಾಡಿ. ಈಗಿರುವ ಪದ್ಧತಿ ಜನರಿಗೆ ತೊಂದರೆ ಮಾಡುತ್ತಿದೆ.

6. ತುರ್ತಾಗಿ ಅಗತ್ಯ ಪ್ರಮಾಣದಲ್ಲಿ ಔಷಧಿ ಮತ್ತು ಪರಿಕರಗಳ ದಾಸ್ತಾನು ಮಾಡಿಕೊಳ್ಳಿ. ಕೊರೊನಾ ಚಿಕಿತ್ಸೆ ನೀಡುವ ಪ್ರತಿಯೊಂದು ಆಸ್ಪತ್ರೆಯಲ್ಲೂ ಲಭ್ಯವಿರುವ ಔಷಧಿ ಮತ್ತು ಪರಿಕರಗಳ ವಿವರಗಳನ್ನು ಸಾರ್ವಜನಿಕವಾಗಿ ದೈನಿಂದಿನ ಆಧಾರದ ಮೇಲೆ ಪ್ರಕಟಿಸಿ.

7. ಲಸಿಕಾ ಕಾರ್ಯಕ್ರಮ ನಿಸ್ತೇಜಗೊಂಡಿದೆ. ಲಸಿಕೆ ಹಾಕಿಸಿಕೊಳ್ಳುವುದರಿಂದ ಪ್ರಯೋಜನವಾಗಿರುವ ಕುರಿತು
ಜಾಗೃತಿ ಮೂಡಿಲ್ಲ. ಲಸಿಕೆ ಪಡೆದವರೂ ಸಹ ಸೊಂಕಿಗೆ ತುತ್ತಾಗಿರುವುದರಿಂದ ಜನರಲ್ಲಿ ಲಸಿಕೆ ಪಡೆಯುವುದರಿಂದ ಪ್ರಯೋಜನಗಳ ಕುರಿತು ಅನುಮಾನ ಮೂಡಿದೆ. ಒಂದು ವೇಳೆ ಲಸಿಕೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರೇ, ವೈಜ್ಞಾನಿಕ ಆಧಾರಗಳು ಮತ್ತು ಪ್ರಮಾಣಗಳೊಂದಿಗೆ ಅದನ್ನು ಸಾಬೀತುಪಡಿಸಿ ಜನರ ಗಮನಕ್ಕೆ ಸತ್ಯವಾದ ಮಾಹಿತಿಯನ್ನು ನೀಡಿ, ಜಾಗೃತಿ ಮೂಡಿಸಿ.

8. ಔಷಧಿಯನ್ನು ಪಡೆಯಲು ಕೊರೊನಾ ಸೋಂಕಿತರು ಹರಸಾಹಸ ಮಾಡಬೇಕಾಗಿದೆ. ಆಸ್ಪತ್ರೆಗಳಲ್ಲಿ ಹಾಸಿಗೆ ಮತ್ತು ಔಷಧಿ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಿ.

9. ಚುನಾವಣಾ ನೆಪದಿಂದ ಸರ್ವಪಕ್ಷ ಸಭೆ ವಿಳಂಬ ಮಾಡುವದು ಸೂಕ್ತವಲ್ಲ. 18ರ ಬದಲು ತುರ್ತಾಗಿ ಸರ್ವಪಕ್ಷಗಳ ಸಭೆ ಮಾಡಿ. ಸಭೆಯ ಅಜೆಂಡಾ ನಿರ್ಧರಿಸಿ, ಬಹಿರಂಗಗೊಳಿಸಿ.ಈ ಸಭೆಯಲ್ಲಿ ತಜ್ಞರ ಸಮಿತಿಯ ಶಿಫಾರಸ್ಸುಗಳನ್ನು ಮಂಡಿಸಿ. 
ಹಲವಾರು ಅಗತ್ಯ ನಿರ್ಣಯಗಳನ್ನು ಕೈಗೊಳ್ಳುವದನ್ನು ವಿಳಂಬ ಮಾಡಬೇಡಿ. ಕೊರೊನಾ ಔಷಧಿ ನಾಗರೀಕರಿಗೆ ಸುಲಭವಾಗಿ, ಸರಳವಾಗಿ ದೊರೆಯುವಂತೆ ಕ್ರಮಕೈಗೊಳ್ಳಿ, ಅದಕ್ಕಾಗಿ ಮತ್ತೆ ಬೇರೆ ವಿವರಗಳು ಅಂದರೆ, ಸೋಂಕಿತರ ಆಧಾರ್ ಮತ್ತಿತರ ವೈಯಕ್ತಿಕ ವಿವರಗಳು ಮೆಡಿಕಲ್ ಸ್ಟೋರ್‍ಗೆ ಅಗತ್ಯವಿಲ್ಲ. ಉಳಿದ ಔಷಧಿಗಳಂತೆ ಈ ಔಷಧಿಗಳನ್ನು ಲಭ್ಯಗೊಳಿಸಿ. ಈ ಮೇಲಿನ ಕ್ರಮಗಳು ತುರ್ತು ಅಗತ್ಯಗಳು, ತುರ್ತಾಗಿ ಅಗತ್ಯ ಕ್ರಮ ಕೈಗೊಳ್ಳಿ.

ರಾತ್ರಿ ಕರ್ಫ್ಯೂನಂತಹ ನಗೆಪಾಟಲೀನ ಕ್ರಮ ಕೈಬಿಡಿ. ಕೊರೊನಾ ನಿಯಂತ್ರಣಕ್ಕೆ ಪರಿಣಾಮಕಾರಿ ದೃಢ ಹೆಜ್ಜೆ ಗಳನ್ನಿಡಿ. pic.twitter.com/kCYWz9cUcy

— HK Patil (@HKPatil1953)
click me!