
ಬೆಂಗಳೂರು (ನ.18): ರಾಜ್ಯ ಸರ್ಕಾರದಿಂದ ಬರೋಬ್ಬರಿ 11 ಲಕ್ಷ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ ಎಂದು ವರದಿ ಆಗುತ್ತಿದ್ದಂತೆಯೇ ಸರ್ಕಾರ ಅಡಕತ್ತರಿಯಲ್ಲಿ ಸಿಲುಕಿದ ಅಡಿಕೆಯಂತಾಗಿದೆ. ಹೀಗಾಗಿ, ಆಹಾರ ಇಲಾಖೆ ಸಚಿವರು ಹಾಗೂ ಅಧಿಕಾರಿಗಳನ್ನು ತುರ್ತು ಸಭೆ ಕರೆದ ಸಿಎಂ ಸಿದ್ದರಾಮಯ್ಯ ಅವರು ತರಾಟೆ ತೆಗೆದುಕೊಂಡ ಬೆನ್ನಲ್ಲಿಯೇ ಅರ್ಹರ ರೇಷನ್ ಕಾರ್ಡ್ಗಳು ರದ್ದಾಗಿದ್ದರೆ, ಅಂಥವರಿಗೆ ಮರು ಅರ್ಜಿ ಸಲ್ಲಿಕೆ ಮಾಡಿ ಅಗತ್ಯವಿರುವ ರೇಷನ್ ಕಾರ್ಡ್ ಕೊಡಲು ವ್ಯವಸ್ಥೆ ಮಾಡಲಾಗುತ್ತದೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ಸಭೆಯಲ್ಲಿ ತಿಳಿಸಿದ್ದಾರೆ.
ರಾಜ್ಯದಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಿರಂತರ ಟೀಕೆ ಟಿಪ್ಪಣಿ ವ್ಯಕ್ಯವಾಗ್ತಿರುವ ಹಿನ್ನೆಲೆಯಲ್ಲಿ ಸಿಎಂ ಸಿದ್ದರಾಮಯ್ಯ ಸೋಮವಾರ ದಿಢೀರನೇ ಹಿರಿಯ ಸಚಿವರ ಸಭೆ ಕರೆದಿದ್ದರು. ಸಿಎಂ ನಿವಾಸ ಕಾವೇರಿಯಲ್ಲಿ ನಡೆದಿದ್ದು, ಆಹಾರ ಇಲಾಖೆಯ ರೇಷನ್ ಕಾರ್ಡ್ ರದ್ದತಿ, ವಕ್ಫ್ ವಿವಾದ, ಗ್ಯಾರಂಟಿಗಳ ಸ್ಥಗಿ ಮತ್ತು ಪರಿಷ್ಕರಣೆ ಗೊಂದಲ, ಆಪರೇಷನ್ ಕಮಲ, ಉಪಚುನಾವಣೆ ಫಲಿತಾಂಶ ಹಾಗೂ ಸರ್ಕಾರದ ಭಾಗವಾದ ಸಚಿವರ ಹೇಳಿಕೆ ಕುರಿತು ಚರ್ಚೆ ಮಾಡಲು ಈ ಸಭೆಯನ್ನು ನಿಗದಿ ಮಾಡಲಾಗಿತ್ತು. ಅದರಂತೆ, ಹಿರಿಯ ಸಚಿವ ಕೆ.ಹೆಚ್. ಮುನಿಯಪ್ಪ ಅವರನ್ನು ಸಭೆಗೆ ಆಹ್ವಾನಿಸಿ ರೇಷನ್ ಕಾರ್ಡ್ ರದ್ದತಿಯ ಗೊಂದಲ ನಿವಾರಣೆ ಮಾಡುವಂತೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರ ಗ್ಯಾರಂಟಿಗಳಿಗೆ ಹಣ ಹೊಂದಸಲಾಗದೇ ರೇಷನ್ ಕಾರ್ಡ್ ಬದಲಾವಣೆ; ಸೂರಜ್ ರೇವಣ್ಣ!
ಸಭೆಯಲ್ಲಿ ನಡೆದ ಚರ್ಚೆಯ ಅಂಶಗಳು ಇಲ್ಲಿವೆ ನೋಡಿ..
ಮುಖ್ಯಮಂತ್ರಿ ಸಿದ್ದರಾಮಯ್ಯ: ರೇಷನ್ ಕಾರ್ಡ್ ಗೊಂದಲದ ಯಾಕೆ ಉಂಟಾಗಿದೆ, ಆಹಾರ ಇಲಾಖೆಯಲ್ಲಿ ಏನು ನಡೆಯುತ್ತಿದೆ? ರಾಜ್ಯದಲ್ಲಿ ಬಿಪಿಎಲ್ ರೇಷನ್ ಕಾರ್ಡ್ಗಳು (BPL Ration Cards) ರದ್ದಾಗಿದೆ ಅಂತ ವಿಪಕ್ಷಗಳು ವಿವಾದವನ್ನು ಮಾಡುತ್ತಿವೆ. ಇದಕ್ಕೆ ಅಂಕಿಅಂಶಗಳ ಸಮೇತವಾಗಿ ಅವರಿಗೆ ಮತ್ತು ರಾಜ್ಯದ ಜನತೆಗೆ ಉತ್ತರ ಕೊಡಬೇಕು.
ಆಹಾರ ಸಚಿವ ಮುನಿಯಪ್ಪ: ರಾಜ್ಯದಲ್ಲಿ ಯಾವುದೇ ಬಿಪಿಎಲ್ (BPL) ಅಥವಾ ಎಪಿಎಲ್ (APL) ರೇಷನ್ ಕಾರ್ಡ್ಗಳನ್ನು ರದ್ದುಗೊಳಿಸಿಲ್ಲ. ಆದರೆ, ಆದಾಯ ತೆರಿಗೆ ಪಾವತಿ ಮಾಡುವವರಿಗೆ ನೀಡಲಾಗಿದ್ದ ಎಲ್ಲ ಬಿಪಿಎಲ್ ಕಾರ್ಡ್ಗಳನ್ನು ಇದೀಗ ರದ್ದು ಮಾಡಿದ್ದೇವೆ. ಇಲ್ಲಿ ಮುಖ್ಯವಾಗಿ ಪಡಿತರ ಚೀಟಿಯ ನಿಯಮಾವಳಿಗಳಂತೆ ಬಿಪಿಎಲ್ ರೇಷನ್ ಕಾರ್ಡ್ ಪಡೆಯುವುದಕ್ಕೆ ಅರ್ಹತೆ ಇಲ್ಲದ ಲಕ್ಷಾಂತರ ಜನರು ಬಿಪಿಎಲ್ ಕಾರ್ಡ್ಗಳನ್ನು ಪಡೆದುಕೊಂಡಿದ್ದಾರೆ. ಆದ್ದರಿಂದ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹತೆ ಇಲ್ಲದವರನ್ನು ಎಪಿಎಲ್ ಕಾರ್ಡ್ಗಳಿಗೆ ಶಿಫ್ಟ್ ಮಾಡುತ್ತಿದ್ದೇವೆ. ರಾಜ್ಯದಲ್ಲಿ 11 ಲಕ್ಷ ಪಡಿತರ ಚೀಟಿಗಳು ರದ್ದಾಗಿದೆ ಅನ್ನೋದು ಬಿಜೆಪಿ ಸುಳ್ಳಿನ ಆರೋಪವಾಗಿದೆ ಎಂದು ಸ್ಪಷ್ಟನೆಯನ್ನು ನೀಡಿದರು.
ಇದನ್ನೂ ಓದಿ: ಕರ್ನಾಟಕದಲ್ಲಿವೆ 22 ಲಕ್ಷ ಅನರ್ಹ ಅಂತ್ಯೋದಯ, ಬಿಪಿಎಲ್ ಕಾರ್ಡ್
ಸಿಎಂ ಸಿದ್ದರಾಮಯ್ಯ: ನೀವು ಏನಾದರೂ ಮಾಡಿ, ರೇಷನ್ ಕಾರ್ಡ್ ಕುರಿತಂತೆ ರಾಜ್ಯದಲ್ಲಿ ಉಂಟಾಗಿರುವ ಸಮಸ್ಯೆ ಹಾಗೂ ಗೊಂದಲ ನಿವಾರಣೆ ಮಾಡಬೇಕು. ನಿಮ್ಮ ಇಲಾಖೆಯ ಅಧಿಕಾರಿಗಳೊಂದಿಗೆ ತುರ್ತು ಸಭೆಯನ್ನು ಮಾಡಿ ಈಗ ಉಂಟಾಗಿರುವ ಗೊಂದಲ ನಿವಾರಣೆ ಮಾಡಬೇಕು ಎಂದು ಮತ್ತೊಮ್ಮೆ ಸೂಚಿಸಿದರು.
ಸಚಿವ ಮುನಿಯಪ್ಪ: ಬಿಪಿಎಲ್ನಿಂದ ಎಪಿಎಲ್ಗೆ ವರ್ಗಾವಣೆ ಮಾಡಲಾಗಿರುವ ಕಾರ್ಡ್ದಾರರ ಪೈಕಿ ಒಂದು ವೇಳೆ ಅರ್ಹರಿಗೆ ಬಿಪಿಎಲ್ ಕಾರ್ಡ್ ರದ್ದು ಮಾಡಲಾಗಿದ್ದೆರೆ, ಅಂತಹ ಫಲಾನುಭವಿಗಳು ಮರು ಅರ್ಜಿ ಹಾಕುವುದಕ್ಕೆ ವ್ಯವಸ್ಥೆಯನ್ನು ಮಾಡಿಕೊಡಲಾಗುವುದು. ಕೂಡಲೇ ಈ ಗೊಂದಲಕ್ಕೆ ಯಾವ ರೀತಿ ಪರಿಹಾರ ಮಾಡಬೇಕು, ಸಮಸ್ಯೆ ನಿವಾರಣೆಗೆ ಯಾವ ಕ್ರಮ ಕೈಗೊಳ್ಳಬೇಕು ಎಂಬುದರ ಬಗ್ಗೆ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಭರವಸೆ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ