ಇದೇನಪ್ಪ?: ಬಿಜೆಪಿ ಮೇಲೆ ಮಂದಿರ ಕೆಡವಿದ ಅರೋಪ!

By Web DeskFirst Published Dec 16, 2018, 5:16 PM IST
Highlights

ಬಿಜೆಪಿ ವಿರುದ್ಧವೇ ಮಂದಿರ ಕೆಡವಲು ಹುನ್ನಾರದ ಆರೋಪ| ಅಯೋಧ್ಯೆಯಲ್ಲಿ ಹಳೆಯ ಮಂದಿರ ಕೆಡವಲು ಸರ್ಕಾರದ ನಿರ್ಧಾರ?| ಮಹಾನಗರ ಪಾಲಿಕೆ ನಿರ್ಧಾರದ ವಿರುದ್ಧ ಸಂತರ ಆಕ್ರೋಶ| ಹಳೆಯ ಮಂದಿರಗಳನ್ನು ಕೆಡವದಂತೆ ಸಂತರ ಎಚ್ಚರಿಕೆ| ಯಾವುದೇ ಮಂದಿರ ಕೆಡವುದಿಲ್ಲ ಎಂದು ಮೇಯರ್ ಭರವಸೆ 

ಅಯೋಧ್ಯೆ(ಡಿ.16): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಬೇಕು ಎಂಬುದು ಬಹುಸಂಖ್ಯಾತರ ಕೂಗು. ಇದಕ್ಕೆ ಆಡಳಿತಾರೂಢ ಬಿಜೆಪಿ ಸರ್ಕಾರ ಕೂಡ ಸಮ್ಮತಿ ಇದೆ. ರಾಮ ಮಂದಿರ ನಿರ್ಮಾಣ ಬಿಜೆಪಿಯ ಪ್ರಮುಖ ರಾಜಕೀಯ ನಿರ್ಣಯಗಳಲ್ಲಿ ಒಂದು.

ಆದರೆ ಬಿಜೆಪಿ ವಿರುದ್ಧವೇ ಇದೀಗ ಮಂದಿರ ಕೆಡವಿದ ಆರೋಪ ಕೇಳಿ ಬಂದಿದೆ. ಉತ್ತರಪ್ರದೇಶ ಬಿಜೆಪಿ ಸರ್ಕಾರ ಮಂದಿರಗಳನ್ನು ಕೆಡವುತ್ತಿದೆ ಎಂಬ ಕೂಗು ಇದೀಗ ರಾಜ್ಯದಲ್ಲಿ ಕೇಳಿ ಬಂದಿದೆ.

ಅಯೋಧ್ಯೆಯ ನಗರ ಸಭೆ ನಗರದ ಸುಮಾರು 177 ಹಳೆಯ ಭವನಗಳನ್ನು ಕೆಡವಿ ಹಾಕುವ ನಿರ್ಣಯ ಕೈಗೊಂಡಿದೆ.  ಇದರಲ್ಲಿ ಬಹುತೇಕ ಮಂದಿರಗಳೇ ಆಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಕುರಿತು ರಾಮಜನ್ಮ ಭೂಮಿಯ ಮುಖ್ಯ ಪೂಜಾರಿ ಸತ್ಯೇಂದ್ರ ದಾಸ್ ತಮ್ಮ ಅಸಮಾಧಾನ ಹೊರ ಹಾಕಿದ್ದು, ಮಂದಿರಗಳ ನಗರಿ ಎಂದೇ ಖ್ಯತಿ ಗಳಿಸಿರುವ ಅಯೋಧ್ಯೆಯಲ್ಲಿ ಬಿಜೆಪಿ ಸರ್ಕಾರ ಹಳೆಯ ಮಂದಿರಗಳನ್ನು ಕೆಡವಲು ಸಿದ್ಧವಾಗಿದೆ ಎಂದು ದಾಸ್ ಆರೋಪಿಸಿದ್ದಾರೆ.

ಇದೇ ವೇಳೆ ನಗರದ ನರಹರದಾಸ್ ಮಂದಿರದ ಪೂಜಾರಿ ರಾಮ್ ಬಹಾದ್ದೂರ್ ದಾಸ್ ಕೂಡ ಈ ಪ್ರಸ್ತಾವನೆಗೆ ವಿರೋಧ ವ್ಯಕ್ತಪಡಿಸಿದ್ದು, ಮಂದಿರಗಳನ್ನು ಕೆಡವಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಇನ್ನು ವಿವಾದದ ಕುರಿತು ಸ್ಪಷ್ಟನೆ ನೀಡಿರುವ ಅಯೋಧ್ಯೆ ನಗರ ಪಾಲಿಕೆ ಮೇಯರ್ ಋಷಿಕೇಶ್ ಉಪಾಧ್ಯಾಯ, ನಗರದ ಯಾವುದೇ ಮಂದಿರಗಳನ್ನು ಕೆಡವುದಿಲ್ಲ, ವದಂತಿಗೆ ಕಿವಿಕೊಡಬೇಡಿ ಎಂದು ಮನವಿ ಮಾಡಿದ್ದಾರೆ.

click me!