
ಬೆಂಗಳೂರು (ಏ.24): ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸೌಮ್ಯಾರೆಡ್ಡಿ ಅವರು ಪ್ರಚಾರಕ್ಕಾಗಿ ಸಾರ್ವಜನಿಕ ಆಸ್ತಿಯಾಗಿರುವ ಬಿಎಂಟಿಸಿ ಬಸ್ ಅನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಆರೋಪ ಮಾಡಿದೆ. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಆಗಿರುವ ಸೌಮ್ಯಾರೆಡ್ಡಿ ಪ್ರಚಾರಕ್ಕಾಗಿ ಸಾರ್ವಜನಿಕ ಆಸ್ತಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳಲಾಗಿದೆ.
ಬೆಂಗಳೂರಿನಲ್ಲಿ ಕಳೆದ ವಿಧಾನಸಭಾ ಚುನಾವನೆಯಲ್ಲಿ ಬೆರಳೆಣಿಕೆ ಮತಗಳ ಅಂತರದಿಂದ ಸೋಲು ಅನುಭವಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಪುತ್ರಿ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ. ಕಳೆದೊಂದು ತಿಂಗಳಿಂದ ಭರ್ಜರಿ ಪ್ರಚಾರ ಕೈಗೊಂಡಿರುವ ಸೌಮ್ಯಾರೆಡ್ಡಿ ಅವರು, ಬಿಜೆಪಿ ಹಾಲಿ ಸಂಸದ ತೇಜಸ್ವಿ ಸೂರ್ಯ ಅವರಿಗೆ ಪ್ರಭಲ ಪೈಪೋಟಿ ನೀಡುವುದಕ್ಕೆ ಸಿದ್ಧವಾಗಿದ್ದಾರೆ. ಇನ್ನು ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಉರ್ದು ಭಾಷೆಯಲ್ಲಿ ಮುದ್ರಿಸಿದ ಮತಯಾಚನೆ ಕರಪತ್ರವನ್ನು ಹಂಚಿಕೆ ಮಾಡಿ ವಿವಾದಕ್ಕೆ ಸಿಲುಕಿದ್ದರು. ಆದರೆ, ಈಗ ಬಿಎಂಟಿಸಿ ಬಸ್ನ ಮೇಲೆ ಪ್ರಚಾರದ ಪೋಸ್ಟರ್ ಅಂಟಿಸಿ ಮತ್ತೊಂದು ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಗ್ಯಾರಂಟಿ ಕರಪತ್ರ ಹಂಚಿದ ಕೈ ಅಭ್ಯರ್ಥಿ ಸೌಮ್ಯಾರೆಡ್ಡಿ ಮೇಲೆ ಎಫ್ಐಆರ್!
ಈ ಬಗ್ಗೆ ರಾಜ್ಯ ಬಿಜೆಪಿ ಸಮಾಜಿಕ ಜಾಲತಾಣ ವಿಭಾಗದಿಂದ ಪೋಸ್ಟ್ ಒಂದನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಬಿಎಂಟಿಸಿ ಬಸ್ನ ಮೇಲೆ ಸೌಮ್ಯಾರೆಡ್ಡಿ ಹಾಗೂ ಅವರ ತಂದೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಇನ್ನಿತರರ ಫೋಟೋಗಳನ್ನು ಇರುವ ಪೋಸ್ಟರ್ ಅಂಟಿಸಲಾಗಿದೆ. ಜೊತೆಗೆ, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಮಗಳು ಸೌಮ್ಯ ರೆಡ್ಡಿ ಪ್ರಚಾರಕ್ಕಾಗಿ ಬಿಎಂಟಿಸಿ ಬಸ್ಗಳನ್ನೇ ಬೀದಿಗೆ ಬಿಟ್ಟಿದ್ದಾರೆ. ಜನರ ತೆರಿಗೆ ಹಣವನ್ನು ಲೂಟಿ ಮಾಡಿದ ಮೇಲೆ ಇದೀಗ ಪಬ್ಲಿಕ್ ಸರ್ವೀಸ್ಗೆ ಮೀಸಲಿದ್ದ ಸರ್ಕಾರಿ ಬಸ್ಗಳನ್ನು ಕೂಡ ಚುನಾವಣೆಗೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ನ ಇಷ್ಟೆಲ್ಲಾ ಅನಾಚಾರಗಳ ವಿರುದ್ಧ ಚುನಾವಣಾ ಆಯೋಗ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಬಿಜೆಪಿಯಿಂದ ಆಗ್ರಹ ಮಾಡಲಾಗಿದೆ.
ನಾನ್ ಹುಟ್ಟಿದ ನಂತ್ರನೇ ಅಪ್ಪನಿಗೆ ಅದೃಷ್ಟ ಸಿಕ್ತು, 4 ತಿಂಗಳ ಮಗು ಇದ್ದಾಗ ಅಪ್ಪ ಕಾರ್ಪೋರೇಟರ್ ಆದ್ರು!
ಗ್ಯಾರಂಟಿ ಕರಪತ್ರ ಹಂಚಿಕೆ ಮಾಡಿದ್ದತರಿಂದ ಎಫ್ಐಆರ್ ದಾಖಲು:
ಬೆಂಗಳೂರು ದಕ್ಷಿಣ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿ ಅವರು ಲೋಕಸಭಾ ಚುನಾವಣೆಯ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದ್ದಾರೆ ಎಂದು ಚಿಕ್ಕಪೇಟೆ ಪೊಲೀಸ್ ಠಾಣೆಯಲ್ಲಿ ಸ್ವತಃ ಚುನಾವಣಾ ಅಧಿಕಾರಿಗಳಿಂದಲೇ ದೂರು ದಾಖಲಿಸಲಾಗಿತ್ತು. ಸೌಮ್ಯಾರೆಡ್ಡಿ ಹಾಗೂ ಚಿಕ್ಕಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜಶೇಖರ್ ಸೇರಿ ಹಲವರು ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 'ನುಡಿದಂತೆ ನಡೆದಿದ್ದೀವೆ, ಐದು ಗ್ಯಾರೆಂಟಿ ಕೊಟ್ಟಿದ್ದೇವೆ' ಕರಪತ್ರಗಳನ್ನು ಹಂಚಿಕೆ ಮಾಡಿದ್ದಾರೆ. ಸದರಿ ಕರಪತ್ರಗಳಲ್ಲಿ ಪ್ರಕಾಶಕರು ಹಾಗೂ ಮುದ್ರಕರ ಹೆಸರು, ವಿಳಾಸ, ಮುದ್ರಿತ ಪ್ರತಿಗಳ ಸಂಖ್ಯೆ, ಅದಕ್ಕೆ ತಗುಲಿರುವ ವೆಚ್ಚಗಳ ಬಗ್ಗೆ ಯಾವುದೇ ಅಂಶಗಳನ್ನು ನಮೂದು ಮಾಡಿಲ್ಲ. ಅಸ್ಪಷ್ಟ ಮಾಹಿತಿ ಇರುವ ಕರಪತ್ರಗಳನ್ನು ಹಂಚಿಕೆ ಮಾಡುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಲಾಗಿದೆ ಎಂದು ದೂರು ದಾಖಲಿಸಿದ್ದರು. ಈಗ ಬಿಎಂಟಿಸಿ ಬಸ್ನ ಮೇಲೆ ಪೋಸ್ಟರ್ ಅಂಟಿಸಿ ವಿವಾದಕ್ಕೆ ಸಿಲುಕಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.