ಶೀಲ ಶಂಕಿಸಿದ ಪತಿಯನ್ನು ಇರಿದು ಹತ್ಯೆಗೈದ ಪತ್ನಿ

By Kannadaprabha NewsFirst Published Jun 29, 2021, 11:37 AM IST
Highlights
  • ಶೀಲ ಶಂಕಿಸಿದ ಪತಿಯನ್ನೇ ಹತ್ಯೆಗೈದ ಪತ್ನಿ
  • ಸಹೋದರರು ಮತ್ತು ಬಾವನೊಂದಿಗೆ ಸೇರಿಕೊಂಡು ಪತಿ ಕೊಲೆ
  • ಮೈಸೂರಿನ ಹೊರವಲಯದ ಕೂರ್ಗಳ್ಳಿಯಲ್ಲಿ  ಘಟನೆ

ಮೈಸೂರು (ಜೂ.29): ತನ್ನ ಸಹೋದರರು ಮತ್ತು ಬಾವನೊಂದಿಗೆ ಸೇರಿಕೊಂಡು ಪತ್ನಿ ತನ್ನ ಪತಿಯನ್ನೆ ಹತ್ಯೆ ಮಾಡಿರುವ ಘಟನೆ ಮೈಸೂರಿನ ಹೊರವಲಯದ ಕೂರ್ಗಳ್ಳಿಯಲ್ಲಿ ಭಾನುವಾರ ರಾತ್ರಿ ನಡೆದಿದೆ.

ನಂಜನಗೂಡು ತಾಲೂಕಿನ ಹಿಬ್ಜಾಲ ಗ್ರಾಮದ ಕೆಂಪಶೆಟ್ಟಿ(35) ಎಂಬವರೇ ಕೊಲೆಯಾದವರು. ಇವರ ಪತ್ನಿ ಶಶಿಕಲಾ, ಬಾಮೈದ ಕೆಂಡಶೆಟ್ಟಿ, ರಮೇಶ್‌ ಮತ್ತು ನಾಗೇಂದ್ರ ಎಂಬವರೇ ಹತ್ಯೆ ಮಾಡಿದ ಆರೋಪಿಗಳು.

ಆ ಒಂದು ವದಂತಿಯೇ ರೇಖಾ ಹತ್ಯೆಗೆ ಕಾರಣವಾಯ್ತಾ..? ..

12 ವರ್ಷಗಳ ಹಿಂದೆ ಕೆಂಪಶೆಟ್ಟಿಮತ್ತು ಎಚ್‌.ಡಿ. ಕೋಟೆ ತಾಲೂಕಿನ ಹೊಸಹುಂಡಿ ಗ್ರಾಮದ ಶಶಿಕಾಲ ಅವರನ್ನು ಮದುವೆಯಾಗಿದ್ದರು. ಇವರಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ಕಳೆದ 3 ವರ್ಷಗಳಿಂದ ಇವರು ಕೂರ್ಗಳ್ಳಿಯಲ್ಲಿ ವಾಸವಿದ್ದರು. ಕೆಂಪಶೆಟ್ಟಿಕೂಲಿ ಕೆಲಸಕ್ಕೆ ಹೋಗುತ್ತಿದ್ದರು ಮತ್ತು ಶಶಿಕಲಾ ಗಾರ್ಮೆಂಟ್ಸ್‌ ಕೆಲಸಕ್ಕೆ ಹೋಗುತ್ತಿದ್ದರು.

ಈ ನಡುವೆ ಶಶಿಕಲಾ ಶೀಲದ ಮೇಲೆ ಕೆಂಪಶೆಟ್ಟಿಗೆ ಅನುಮಾನ ಬಂದಿದ್ದು, ಈ ವಿಚಾರವಾಗಿ ಇಬ್ಬರ ನಡುವೆ ಪದೇ ಪದೇ ಜಗಳವಾಗುತ್ತಿತ್ತು. ಎರಡು ಬಾರಿ ಹೆಂಡತಿಯ ಮೇಲೆ ಹಲ್ಲೆಗೆ ಯತ್ನಿಸಿದ್ದು, ಒಮ್ಮೆ ಮೂರು ತಿಂಗಳು ಜೈಲು ವಾಸ ಅನುಭವಿಸಿ ಜಾಮೀನಿನ ಮೇಲೆ ಹೊರಬಂದಿದ್ದ. ಬಳಿಕ ಶಶಿಕಲಾ ಪ್ರತ್ಯೇಕವಾಗಿದ್ದು ಕೆಂಪಶೆಟ್ಟಿಪದೇ ಪದೆ ಪತ್ನಿ ಮನೆಯ ಬಳಿ ಹೋಗಿ ಗಲಾಟೆ ಮಾಡುತ್ತಿದ್ದ.

ಹೀಗೆ ಭಾನುವಾರ ರಾತ್ರಿ ಕೂರ್ಗಳ್ಳಿ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದ ಕೆಂಪಶೆಟ್ಟಿಯನ್ನು ಪತ್ನಿ ಶಶಿಕಲಾ, ಸಹೋದರರಾದ ಕೆಂಡಶೆಟ್ಟಿ, ನಾಗೇಂದ್ರ, ಭಾವ ರಮೇಶ ಸೇರಿಕೊಂಡು ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ವಿಜಯನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕೆಲವು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

click me!