ವಿಜಯಪುರದ ಗಾರ್ಮೆಂಟ್ಸ್‌ ಮಾಲೀಕ, ಪ್ರತಿಫಲಾಪೇಕ್ಷೆ ಇಲ್ಲದ ಸಂಸ್ಕೃತ ಶಿಕ್ಷಕ

By Web DeskFirst Published Jul 17, 2019, 3:31 AM IST
Highlights

ದೇಶದ ಏಕೈಕ ಸಂಸ್ಕೃತ ಗ್ರಾಮ ಎಂಬ ಹಿರಿಮೆ ನಮ್ಮದೇ ರಾಜ್ಯದ ಶಿವಮೊಗ್ಗ ಜಿಲ್ಲೆಯ ಮತ್ತೂರು ಗ್ರಾಮಕ್ಕಿದೆ. ಇಡೀ ಊರಿನ ವ್ಯವಹಾರಗಳು ಪ್ರಾಚೀನ ಭಾಷೆಯಲ್ಲಿಯೇ ನಡೆಯುವುದು ಇಲ್ಲಿನ ವಿಶೇಷ. ಈಗ ಮತ್ತೊಬ್ಬ ವಿಶೇಷ ವ್ಯಕ್ತಿ ಸಂಸ್ಕೃತವನ್ನು ಪ್ರಚಾರ ಮಾಡುತ್ತ ಮಾದರಿ ಕೆಲಸ ಮಾಡುತ್ತಿದ್ದಾರೆ. ಯಾರವರು? ಯಾವ ಕಾರಣಕ್ಕಾಗಿ ಸಂಸ್ಕೃತದ ಮೇಲೆ ಅವರಿಗೆ ಇಷ್ಟೊಂದು ಅಭಿಮಾನ? ಇಲ್ಲಿದೆ ಸಂಪೂರ್ಣ ವಿವರ..

ವಿಜಯಪುರ(ಜು. 17)  ಇವರು ಕಳೆದ 12 ವರ್ಷದಲ್ಲಿ ಬರೋಬ್ಬರಿ ಎರಡು ಸಾವಿರ ಜನರಿಗೆ ಸಂಸ್ಕೃತ ಹೇಳಿಕೊಟ್ಟಿದ್ದಾರೆ. ಪ್ರಾಚೀನ ಭಾಷೆಯ ಮೇಲಿನ ಅಭಿಮಾನವೇ ಇವರ ಈ ಪ್ರತಿಫಲಾಪೇಕ್ಷೆ ಇಲ್ಲದ ಕೆಲಸಕ್ಕೆ ಕಾರಣ.

ಭಾರತೀಯ ಭಾಷೆಗಳ ಮೂಲಬೇರು ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸಂಸ್ಕೃತ ಭಾಷೆಯನ್ನು 12 ವರ್ಷಗಳಿಂದ ಎರಡು ಸಾವಿರಕ್ಕೂ ಅಧಿಕ ಜನರಿಗೆ ಕಲಿಸಿಕೊಟ್ಟವರ ಹೆಸರು ರಣಧೀರ ಸಿಂಗ್ ರಜಪೂತ.

ಮತ್ತೂರು ಬಳಿಕ, ಕರ್ನಾಟಕಕ್ಕೆ ಮತ್ತೊಂದು ಸಂಸ್ಕೃತ ಗ್ರಾಮ!

ವಿಜಯಪುರದ ಮೀನಾಕ್ಷಿ ಚೌಕ್ ಬಳಿಯ ‘3 ಆರ್’ ಗಾರ್ಮೆಂಟ್ಸ್ ಗೆ ಕಾಲಿಟ್ಟರೆ ಸಂಸ್ಕೃತ ಅಧ್ಯಯನವನ್ನು ಕಣ್ಣಾರೆ ಕಾಣಬಹುದು. ಗಾರ್ಮೆಂಟ್ಸ್ ಮಾಲೀಕ ರಣಧೀರ ಸಿಂಗ್ ರಜಪೂತ.ಅವರ ಸಂಸ್ಕೃತ ಕಲಿಸುವ ಪ್ರಯೋಗ ಯಶಸ್ವಿಯಾಗಿ ಜನ ಮೆಚ್ಚುಗೆ ಗಳಿಸಿಕೊಂಡು ಮುಂದೆ ಸಾಗುತ್ತಿದೆ.

ಎಲ್ಲಿಂದ ಆರಂಭ?   ಗಾರ್ಮೆಂಟ್ಸ್ ಮಾಲೀಕ ರಜಪೂತ ಅವರು ಹಲವು ವರ್ಷಗಳ ಹಿಂದೆ ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ಬೆಂಗಳೂರಿನ ಸಂಸ್ಕೃತ ಭಾರತಿ ಕೇಂದ್ರ ಹಮ್ಮಿಕೊಂಡಿದ್ದ ಶಿಬಿರಕ್ಕೆ ತಮ್ಮ ಮಕ್ಕಳನ್ನು ಸಂಸ್ಕೃತ ಕಲಿಯಲು ಸೇರಿಸಿದರು. ಮಗ ಮತ್ತು ಮಗಳನ್ನು ಪ್ರತಿದಿನ ಕರೆದುಕೊಂಡು ಬರಲು ಹೋದ ವೇಳೆ ಕಿವಿಗೆ ಬಿದ್ದ ಸಂಸ್ಕೃತ ಪಾಠ ಕೇಳಿ ತಾನು ಕಲಿಯಬೇಕೆಂಬ ಆಸೆ ಹುಟ್ಟಿತು. ಮೊದಲು ಮನೆಯವರಿಗೆ ಸಂಸ್ಕೃತ ಕಲಿಸಿಕೊಟ್ಟ ಅವರು, ನಂತರ ಆಸಕ್ತ ಸಂಬಂಧಿಕರಿಗೆ ಹಾಗೂ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕಲಿಸಲು ಆರಂಭಿಸಿದರು. ಅಂಗಡಿಯಲ್ಲಿ ಸಂಸ್ಕೃತ ಭಾಷೆಯಿಂದ ವ್ಯವಹಾರ ಮಾಡುವಂತೆ ಮಾಡಿದರು. ಈಗ ಅಂಗಡಿಯಲ್ಲಿ ಕೆಲಸ ಮಾಡುವ  70 ಜನರು ಸ್ಪಷ್ಟ ಹಾಗೂ ಸರಳವಾಗಿ ಸಂಸ್ಕೃತದಲ್ಲಿಯೇ ಮಾತನಾಡುವಂತೆ ಮಾಡಿದ ಹೆಮ್ಮೆ ಅವರಿಗಿದೆ.

ಶಾಲಾ ಕಾಲೇಜಲ್ಲೂ ಬೋಧನೆ:  ಈಗ ಗಾರ್ಮೆಂಟ್ಸ್ ನ ಕೆಲಸದಿಂದ ನಿವೃತ್ತಿ  ಶಾಲಾ ಕಾಲೇಜುಗಳಲ್ಲಿಯೂ ಸಂಸ್ಕೃತ ಬೋಧನೆ ಮಾಡಲು ಹೋಗುತ್ತಿದ್ದಾರೆ. 'ನನಗೆ ಸಂಸ್ಕೃತ ಬಗ್ಗೆ ಎಳ್ಳಷ್ಟೂ ಗೊತ್ತಿರಲಿಲ್ಲ. ಬೇರೆಯವರು ಮಾತನಾಡುವುದನ್ನು ನೋಡಿ ಆಸಕ್ತಿ ಮೂಡಿತು. ಕ್ಲಾಸ್‌ಗೆ ಕುಳಿತುಕೊಂಡು ನಾನು ಎಲ್ಲರಂತೆ ಸಂಸ್ಕೃತ ಕಲಿತೆ. ಕನ್ನಡ, ಹಿಂದಿ ಜೊತೆಗೆ ಸಂಸ್ಕೃತ ಭಾಷೆ ಬರುತ್ತಿರುವುದು ಖುಷಿ' ಎಂದು ರಜಪೂತರು ತಾವು ಸಂಸ್ಕೃತ ಕಲಿತ ಕತೆ ಹೇಳುತ್ತಾರೆ.

ರಜಪೂತ ಏನೆನ್ನುತ್ತಾರೆ?  ನಮ್ಮ 'ತ್ರಿ ಆರ್’ ಗಾರ್ಮೆಂಟ್ಸ್‌ನಲ್ಲಿ ಶೇ.40ರಷ್ಟು ಮುಸ್ಲಿಂ ಸಮುದಾಯದ ಸಿಬ್ಬಂದಿ ಇದ್ದಾರೆ. ಅವರು ಕೂಡ ಸಂಸ್ಕೃತ ಕಲಿತು ಸರಳವಾಗಿ ಮಾತನಾಡುತ್ತಿರುವುದು ವಿಶೇಷ.  ಸುಮಾರು 200 ವಿದ್ಯಾರ್ಥಿಗಳಿಗೆ ಸಂಸ್ಕೃತ ಕಲಿಸಲಾಗಿದೆ. ಅವರು ಸರಳವಾಗಿ, ಸ್ಪಷ್ಟವಾಗಿ ಮಾತನಾಡುತ್ತಿದ್ದಾರೆ. ಪ್ರತಿವರ್ಷ ಮೇ 12 ರಂದು ಗ್ರಾಮದಲ್ಲಿ ಸಂಸ್ಕೃತ ಕುಂಭಮೇಳ ಮಾಡುತ್ತಾರೆ. ಜನರಿಗೆ ಆಸಕ್ತಿ ಬೆಳೆಯುತ್ತಿದೆ. ಇದೇ ಆಸಕ್ತಿ ನನಗೆ ಹುಮ್ಮಸ್ಸು ತಂದಿದ್ದು ಉಚಿತವಾಗಿ ಸಂಸ್ಕೃತ ಹೇಳಿಕೊಡುತ್ತಿದ್ದೇನೆ ಎಂದು ರಜಪೂತ  ಅನುಭವ ಹಂಚಿಕೊಳ್ಳುತ್ತಾರೆ.

ಒಟ್ಟಿನಲ್ಲಿ ಆಧುನಿಕ ಭಾಷೆಗಳ ಮೇಲಾಟದಲ್ಲಿ ನಮ್ಮ ಪ್ರಾಚೀನ ಭಾಷೆ ಮರೆಯಾಗುವ ಹಂತಕ್ಕೆ ತಲುಪಿದೆ ಎಂದು ಪದೇ ಪದೇ ಮಾತನಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ ಇಂತಹ ಮಾದರಿ ಕೆಲಸಗಳು ಇಲ್ಲ ಖಂಡಿತ ಇಲ್ಲ..ಅಂತ ಸಾಧ್ಯತೆಗಳು ದೂರವಾಗುತ್ತಿವೆ ಎಂದು ಸಾರಿ ಸಾರಿ ಹೇಳುತ್ತಿದೆ. ರಜಪೂತರ ಭಾಷಾಭಿಮಾನ ಮತ್ತು ಕಲಿಸುವ ಹುಮ್ಮಸ್ಸು ಹೀಗೆ ಮುಂದುವರಿಯಲಿ ಎಂಬುದು ನಮ್ಮ ಆಶಯ.

"

 

click me!