Fishing | ಒಳನಾಡು ಮೀನುಗಾರಿಕೆ ಇಳುವರಿ ಹೆಚ್ಚಳ ಗುರಿ : ಉತ್ತಮ ಅವಕಾಶ

By Kannadaprabha NewsFirst Published Nov 22, 2021, 3:18 PM IST
Highlights
  • ಮೀನು ಕೃಷಿಯತ್ತ ಯುವ ಜನರು ಹೆಚ್ಚಿನ ಗಮನ ಹರಿಸಬೇಕು 
  • ಈ ಕ್ಷೇತ್ರದಲ್ಲಿ ತೊಡಗಿಕೊಳ್ಳುವವರಿಗೆ ಉತ್ತಮ ಅವಕಾಶಗಳಿವೆ 
  • ವಿಶ್ವ ಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯ ಹಿರಿಯ ಮೀನುಗಾರಿಕಾ ಅಧಿಕಾರಿ ಪ್ರೊ. ಇಡ್ಯಾ ಕರುಣಾಸಾಗರ್‌ ಸಲಹೆ

 ಮಂಗಳೂರು (ನ.22):  ರಾಜ್ಯದಲ್ಲಿ ಒಳನಾಡು ಮೀನುಗಾರಿಕೆಯಿಂದ (Fishing) ವಾರ್ಷಿಕ 2,51,000 ಮೆಟ್ರಿಕ್‌ ಟನ್‌ ಮೀನು ಸಿಗುತ್ತಿದ್ದು, ಈ ಪ್ರಮಾಣವನ್ನು 6,51,000 ಮೆಟ್ರಿಕ್‌ ಟನ್‌ಗೆ ಏರಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದು ರಾಜ್ಯ ಮೀನುಗಾರಿಕಾ ಇಲಾಖೆಯ (Fishery department ) ಹೆಚ್ಚುವರಿ ನಿರ್ದೇಶಕ ದಿನೇಶ್‌ ಕುಮಾರ್‌ ತಿಳಿಸಿದ್ದಾರೆ. ಬೀದರ್‌ನ (Bidar) ಕರ್ನಾಟಕ (Karnataka) ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯ, ಮಂಗಳೂರು (Mangaluru) ಮೀನುಗಾರಿಕಾ ಕಾಲೇಜು, ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆಗಳ ಸಚಿವಾಲಯದ ಸಂಯುಕ್ತ ಆಶ್ರಯದಲ್ಲಿ ನಗರದ ಮೀನುಗಾರಿಕಾ ಕಾಲೇಜಿನಲ್ಲಿ (College) ಭಾನುವಾರ ವಿಶ್ವ ಮೀನುಗಾರಿಕೆ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಮುದ್ರ ಮೀನುಗಾರಿಕೆಯಿಂದ (sea fishing) ವಾರ್ಷಿಕ 3,47,000 ಮೆಟ್ರಿಕ್‌ ಟನ್‌ ಮೀನು ಲಭಿಸುತ್ತಿದೆ. ಹಲವು ಕಾರಣಗಳಿಂದ ಈ ಪ್ರಮಾಣ ಏರಿಕೆ ಮಾಡಲು ಅವಕಾಶಗಳು ಕಡಿಮೆ ಇರುವ ಕಾರಣ ಒಳನಾಡು ಮೀನುಗಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ. ಅನೇಕ ಯೋಜನೆಗಳನ್ನು ಉಪಯೋಗಿಸಿ ಮೀನು ಕೃಷಿಯತ್ತ ಯುವ ಜನರು ಹೆಚ್ಚಿನ ಗಮನ ಹರಿಸಬೇಕು ಎಂದು ದಿನೇಶ್‌ ಕುಮಾರ್‌ ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ವಿಶ್ವ ಸಂಸ್ಥೆಯ (UNO) ಆಹಾರ ಮತ್ತು ಕೃಷಿ ಸಂಸ್ಥೆಯ ಹಿರಿಯ ಮೀನುಗಾರಿಕಾ ಅಧಿಕಾರಿ ಪ್ರೊ. ಇಡ್ಯಾ ಕರುಣಾಸಾಗರ್‌ ಮಾತನಾಡಿ, ಪೌಷ್ಟಿಕ ಆಹಾರವಾದ  (Food) ಮೀನು ಶೇ.15ರಷ್ಟು ಪ್ರೊಟೀನ್‌ ಯುಕ್ತ ಆಹಾರವಾಗಿದ್ದು, ಈ ಕ್ಷೇತ್ರದಲ್ಲಿ ತೊಡಗಿಕೊಳ್ಳುವವರಿಗೆ ಉತ್ತಮ ಅವಕಾಶಗಳಿವೆ ಎಂದು ಹೇಳಿದರು.

ಇಂಡಿಯನ್‌ ಕೋಸ್ಟ್‌ ಗಾರ್ಡ್‌ನ (Cost Gaurd) ಡಿಐಜಿ ಎಸ್‌. ಬಾಬು ವೆಂಕಟೇಶ್‌ ಮಾತನಾಡಿ, ಅನಧಿಕೃತ ಮತ್ತು ಅನಿಯಂತ್ರಿತ ಮೀನುಗಾರಿಕೆಯನ್ನು ನಿಯಂತ್ರಿಸಬೇಕಾದ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

‘ಕರ್ನಾಟಕದಲ್ಲಿ  ನೀಲ ಆರ್ಥಿಕತೆ’ ವರದಿ ಬಿಡುಗಡೆ ಮಾಡಲಾಯಿತು. ಮೀನುಗಾರಿಕಾ ಕಾಲೇಜು ಮೀನುಗಾರಿಕೆ ಕುರಿತಂತೆ ತಯಾರಿಸಿದ ವಿಡಿಯೊ ಮತ್ತು ಧ್ವನಿ ಮುದ್ರಣ ಹಾಗೂ ಫಿಶ್‌ ಗ್ಯಾಲಕ್ಸಿ ಪುಸ್ತಕವನ್ನು ಅನಾವರಣ ಮಾಡಲಾಯಿತು.

ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆಗಳ ಸಚಿವಾಲಯದ ರಾಷ್ಟ್ರೀಯ ಸುಸ್ಥಿರ ಕರಾವಳಿ ನಿರ್ವಹಣೆ ವಿಭಾಗದ ನಿರ್ದೇಶಕ ಪ್ರೊ. ರಮೇಶ್‌ ರಾಮಚಂದ್ರನ್‌, ನಿಟ್ಟೆವಿಶ್ವ ವಿದ್ಯಾನಿಲಯದ ಹಿರಿಯ ನಿರ್ದೇಶಕಿ ಡಾ. ಇಂದಾಣಿ ಕರುಣಾಸಾಗರ್‌ ಮಾತನಾಡಿದರು. ಮೀನುಗಾರಿಕಾ ಕಾಲೇಜಿನ ಡೀನ್‌ ಡಾ.ಎ. ಸೆಂಥಿಲ್‌ ವೇಲ್‌ ಸ್ವಾಗತಿಸಿದರು. ಮೀನುಗಾರಿಕಾ ಇಲಾಖೆಯ ಅಪರ ನಿರ್ದೇಶಕ ತಿಪ್ಪೇಸ್ವಾಮಿ ವಂದಿಸಿದರು. ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಮನಿ, ಡಾ. ಆಂಜನೇಯಪ್ಪ ಮತ್ತಿತರರಿದ್ದರು.

ಮೀನುಗಾರರಿಗೆ ಗುಡ್ ನ್ಯೂಸ್ : 

ರಾಜ್ಯದ ಕರಾವಳಿಯಲ್ಲಿ  (karavali) ರೋಬೋಟಿಕ್ಸ್ ಮತ್ತು ಕೃತಕ ಬುದ್ಧಿಮತ್ತೆ (Artificial Intelligence) ತಂತ್ರಜ್ಞಾನದ ಮೂಲಕ ಮೀನುಗಾರಿಕೆಯನ್ನು (Fishing) ದೊಡ್ಡ ಆದಾಯದ ಮೂಲವನ್ನಾಗಿ ಬೆಳೆಸಲಾಗುವುದು ಮತ್ತು ಮಂಗಳೂರಿನಲ್ಲಿ ಸಾಫ್ಟ್ ವೇರ್ ಪಾರ್ಕ್ ಸ್ಥಾಪಿಸಲಾಗುವುದು ಎಂದು ಐಟಿ-ಬಿಟಿ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ (Dr CN Ashwath narayan) ಹೇಳಿದ್ದಾರೆ. 

`ಬಿಯಾಂಡ್ ಬೆಂಗಳೂರು’ ಉಪಕ್ರಮದಡಿ ಇಂದು (ಶುಕ್ರವಾರ) ಹಮ್ಮಿಕೊಂಡಿದ್ದ ಒಂದು ದಿನದ `ಮಂಗಳೂರು ಟೆಕ್ನೋವಾಂಜಾ’ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಕ್ಷಿಣ ಕನ್ನಡವೂ ಸೇರಿದಂತೆ ರಾಜ್ಯದ ಕರಾವಳಿಯಲ್ಲಿ ಅಪಾರವಾದ ಮತ್ಸ್ಯ ಸಂಪತ್ತಿದೆ. ಸರಕಾರವು ಜೈವಿಕ ಸಂಪನ್ಮೂಲಗಳನ್ನು ಆಧರಿಸಿದ ಆರ್ಥಿಕ ಮೂಲಗಳಲ್ಲಿ (ಬಯೊನಾಮಿಕ್ಸ್) ಗುರುತಿಸಿರುವ ಆದಾಯದ ಐದು ಶಕ್ತಿಗಳಲ್ಲಿ ಮೀನುಗಾರಿಕೆಯೂ ಒಂದಾಗಿದೆ. ಇದನ್ನು ಆದಾಯದ ದೊಡ್ಡ ವಲಯವಾಗಿ ಬೆಳೆಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು. 

ಇದಲ್ಲದೆ, ಕಿಯೋನಿಕ್ಸ್ ವತಿಯಿಂದ ಮಂಗಳೂರಿನಲ್ಲಿ ಸಾಫ್ಟ್ ವೇರ್ ಪಾರ್ಕನ್ನು ಸ್ಥಾಪಿಸಲಾಗುವುದು. ಇದಕ್ಕೆ ಬೇಕಾದ ತಾಂತ್ರಿಕ  ಅನುಮತಿ ಈಗಾಗಲೇ ಸಿಕ್ಕಿದ್ದು, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಅಡಿಯಲ್ಲಿ `ಎಲಿವೇಟ್’ ಕಾರ್ಯಕ್ರಮದ ಅನ್ವಯ ಮಂಗಳೂರು ಕ್ಲಸ್ಟರ್ ಗೆ ವಿಶೇಷ ನಿಧಿಯನ್ನು ಕೊಡಲಾಗುವುದು. ಜತೆಗೆ, ಮಂಗಳೂರಿನಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ಆರ್ಥಿಕ ಸೇವೆಗಳನ್ನು (ಫಿನ್-ಟೆಕ್) ಒದಗಿಸುವ ಉತ್ಕೃಷ್ಟತಾ ಕೇಂದ್ರವನ್ನು ಸ್ಥಾಪಿಸಲಾಗುವುದು ಎಂದು ಸಚಿವರು ಘೋಷಿಸಿದರು.

ರಾಜ್ಯದಲ್ಲಿ ಉದ್ದಿಮೆಗಳ ಬೆಳವಣಿಗೆಗೆ ದೂರಸಂಪರ್ಕ ಮತ್ತು ಅಂತರ್ಜಾಲ ಸೇವೆಗಳು ಅಡೆತಡೆ ಇಲ್ಲದೆ ನಡೆಯಬೇಕು. ಇದನ್ನು ಪರಿಗಣಿಸಿ, ಸದ್ಯದಲ್ಲೇ ಟೆಲಿಕಾಂ ನೀತಿಯನ್ನು ಜಾರಿಗೆ ತರಲಾಗುತ್ತಿದ್ದು, ಏಕಗವಾಕ್ಷಿ ವ್ಯವಸ್ಥೆ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗುವುದು. ಅಲ್ಲದೆ ದೂರದ ಪ್ರದೇಶಗಳಲ್ಲಿ ಉಪಗ್ರಹ ಆಧಾರಿತ ಸೇವೆಗಳನ್ನು ಆರಂಭಿಸಲಾಗುವುದು ಎಂದು ಅವರು ಭರವಸೆ ನೀಡಿದರು. 

click me!