ಕರಾವಳಿ ತೀರ ರಕ್ಷಣೆಗೆ ಕೋಸ್ಟ್‌ಗಾರ್ಡ್ಸ್ ನೂತನ ತಂತ್ರಜ್ಞಾನ

By Suvarna NewsFirst Published Oct 29, 2022, 11:22 PM IST
Highlights

ಮೂರು ಸೇನೆಗಳ ಜತೆ ಕರಾವಳಿ ಸಮುದ್ರ ತೀರ ಪ್ರದೇಶವನ್ನು ಸುರಕ್ಷಿತಗೊಳಿಸುವ ಹಾಗೂ ದೇಶದ ಆಂತರಿಕ ಭದ್ರತೆಯನ್ನು ಹೆಚ್ಚಿಸುವ ದೃಷ್ಠಿಯಿಂದ ಈಗಾಗಲೇ ಕೋಸ್ಟ್ ಗಾರ್ಡ್ ಇಲಾಖೆ ಕೂಡಾ ಅಸ್ಥಿತ್ವದಲ್ಲಿದೆ. ಮುಂಬೈ ದಾಳಿಯ ಬಳಿಕ ಈ ಇಲಾಖೆಯ ಭದ್ರತಾ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲು ಕೇಂದ್ರ ಸರಕಾರ ನೂತನ ಯೋಜನೆ ಜಾರಿಗೆ ತರುತ್ತಿದೆ.

ಭರತ್‌ರಾಜ್ ಕಲ್ಲಡ್ಕ ಏಷಿಯಾನೆಟ್ ಸುವರ್ಣ ನ್ಯೂಸ್  

ಮಂಗಳೂರು (ಅ.29): ದೇಶದ ಭದ್ರತೆಯಲ್ಲಿ ಭೂ ಸೇನೆ, ವಾಯು ಸೇನೆ ಹಾಗೂ ಜಲ ಸೇನೆ ಬಹಳಷ್ಟು ಪ್ರಾಮುಖ್ಯತೆ ವಹಿಸಿಕೊಂಡಿದೆ. ಜಲ ಮಾರ್ಗವನ್ನು ಇನ್ನಷ್ಟು ಭದ್ರಗೊಳಿಸಲು ಹಾಗೂ ಕರಾವಳಿ ತೀರ ಪ್ರದೇಶಗಳ ಸುರಕ್ಷಿತವಾಗಿಡಲು ಕೋಸ್ಟ್ ಗಾರ್ಡ್ಸ್ ಇಲಾಖೆ ಕೂಡಾ ಈಗಾಗಲೇ ಅಸ್ಥಿತ್ವದಲ್ಲಿದೆ. ನೂತನ ತಂತ್ರಜ್ಞಾನ ಅಳವಡಿಕೆಯೊಂದಿಗೆ ಮೀನುಗಾರರ ರಕ್ಷಣೆ ನಡೆಸುತ್ತಿರುವ ಕೋಸ್ಟ್‌ಗಾರ್ಡ್ಸ್, ಭಯೋತ್ಪಾದನಾ ಚಟುವಟಿಕೆ, ಡ್ರಗ್ಸ್ ಸಾಗಾಟ ಹಾಗೂ ನಿಷೇಧಿಸಲ್ಪಟ್ಟಿರುವ ಸ್ಯಾಟಲೈಟ್ ಫೋನ್‌ಗಳ ಬಳಕೆಯನ್ನು ಹತ್ತಿಕ್ಕಲು ಕೂಡಾ ಸಾಕಷ್ಟು ಕೊಡುಗೆ ನೀಡುತ್ತಿದೆ. ದೇಶದ ಭದ್ರತಾ ದೃಷ್ಠಿಯಿಂದ ಭೂ ಸೇನೆ, ವಾಯು ಸೇನೆ ಹಾಗೂ ಜಲಸೇನೆ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿದೆ. ಈ ಮೂರು ಸೇನೆಗಳ ಜತೆ ಕರಾವಳಿ ಸಮುದ್ರ ತೀರ ಪ್ರದೇಶವನ್ನು ಸುರಕ್ಷಿತಗೊಳಿಸುವ ಹಾಗೂ ದೇಶದ ಆಂತರಿಕ ಭದ್ರತೆಯನ್ನು ಹೆಚ್ಚಿಸುವ ದೃಷ್ಠಿಯಿಂದ ಈಗಾಗಲೇ ಕೋಸ್ಟ್ ಗಾರ್ಡ್ ಇಲಾಖೆ ಕೂಡಾ ಅಸ್ಥಿತ್ವದಲ್ಲಿದೆ. ಕರಾವಳಿ ಪ್ರದೇಶಗಳಲ್ಲಿ ಎಲ್ಲಿ ನೇವಿ ತನ್ನ ವ್ಯಾಪ್ತಿಯನ್ನು ಮುಗಿಸುತ್ತೋ ಅಲ್ಲಿ ದೇಶದ ಸುರಕ್ಷತೆಗೆ ಆದ್ಯತೆ ನೀಡುತ್ತಿದೆ ಕೋಸ್ಟ್‌ಗಾರ್ಡ್. ಮುಂಬೈ ದಾಳಿಯ ಬಳಿಕ ಈ ಇಲಾಖೆಯ ಭದ್ರತಾ ಶಕ್ತಿಯನ್ನು ಮತ್ತಷ್ಟು ಹೆಚ್ಚಿಸಲು ಕೇಂದ್ರ ಸರಕಾರ ನೂತನ ಯೋಜನೆ ಜಾರಿಗೆ ತರುತ್ತಿದೆ.

ಇದರ ಅಂಗವಾಗಿ ಇತ್ತೀಚಿನ ದಿನಗಳಲ್ಲಿ ಕೋಸ್ಟಲ್ ಸೆಕ್ಯುರಿಟಿ ಮೆಕಾನಿಸಂ ಎಂಬ ಯೋಜನೆ ರೂಪಿಸಿದೆ. ಇದರಲ್ಲಿ ಕೋಸ್ಟ್ ಆಫ್ ಸ್ಟ್ಯಾಟಿಸ್ಟಿಕ್ಸ್ ಚೈನ್ ಸೆನ್ಸಾರ್ ಇದ್ದು , 30 ನಾಟಿಕಲ್ ಮೈಲ್‌ನಲ್ಲಿ ಒಂದೊಂದು ರೇಡಾರ್ ಅಳವಡಿಸಲಾಗಿದೆ. ಅಲ್ಲದೇ, ಅಲ್ಲಿ ಸಿಸಿ ಕ್ಯಾಮೆರಾ ಕೂಡಾ ಹೊಂದಿರುತ್ತದೆ. ಯಾವುದೇ ಬೋಟ್‌ಗಳು ರೇಡಾರ್ ಹತ್ತಿರ ಬರುತ್ತಿದ್ದಂತೇ ಇಲಾಖೆಗೆ ಮಾಹಿತಿ ರವಾನಿಸುತ್ತದೆ. ಸಮುದ್ರದ ಭದ್ರತಾ ದೃಷ್ಟಿಯಿಂದ ಈ ತಂತ್ರಜ್ಞಾನ ಸಾಕಷ್ಟು ಸಹಾಯಕವಾಗಲಿದೆ. 

ಮುಂದಿನ ದಿನಗಳಲ್ಲಿ ಕಾರವಾರದ ಬೇಲೆಕೇರಿಯಲ್ಲಿ ಈ ರೇಡಾರ್ ಚೈನ್ ಅನ್ನು ಅಳವಡಿಸಲಾಗುತ್ತಿದ್ದು, ಈ ಮೂಲಕ ಕಡಲ ಭದ್ರತೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಭಾರತೀಯ ಪಶ್ಚಿಮ ವಲಯದ ಕೋಸ್ಟ್ ಗಾರ್ಡ್ ಕಮಾಂಡೆಂಟ್ ಮನೋಜ್ ಬಾಡ್ಕರ್ ಹೇಳುವ ಪ್ರಕಾರ, ಕೋಸ್ಟಲ್ ಏರಿಯಾದಲ್ಲಿ ಭದ್ರತಾ ದೃಷ್ಠಿಯಿಂದ ಮತ್ತು ಜನರ ಜೀವ ರಕ್ಷಣೆ ದೃಷ್ಠಿಯಿಂದ ಸಾಕಷ್ಟು ಕೆಲಸ ಮಾಡಿದೆ. ಈ ವರ್ಷದಲ್ಲಿ ಕೋಸ್ಟ್ ಗಾರ್ಡ್ ಪಶ್ಚಿಮ ವಲಯದಲ್ಲಿ 720 ಜನರ ಜೀವ ರಕ್ಷಣೆ ಮಾಡಲಾಗಿದೆ. ಮೀನುಗಾರರ ಹಿತದೃಷ್ಠಿಯಿಂದಲೇ ಈ ವಿಭಾಗ ಕೆಲಸ ಮಾಡಿದೆ ಎಂದು ಕಮಾಂಡರ್ ಬಾಡ್ಕರ್ ಮಾಹಿತಿ ನೀಡಿದ್ದಾರೆ.

ಅಂದಹಾಗೆ, ಕರಾವಳಿ ಪ್ರದೇಶದಲ್ಲಿ ಈ ಹಿಂದಿನಿಂದಲೂ ತುರಾಯ ಸ್ಯಾಟಲೈಟ್ ಫೋನ್ ಪದೇ ಪದೇ ಆಕ್ಟಿವ್ ಆಗುತ್ತಿರುವ ವಿಚಾರ ಗುಪ್ತದಳ ಹಾಗೂ ಪೊಲೀಸ್ ಇಲಾಖೆಗೆ ಪ್ರತೀ ಬಾರಿ ತಲೆ ನೋವಿಗೆ ಕಾರಣವಾಗುತ್ತಿದೆ‌. ಈ ವಿಷಯವಾಗಿ ಪ್ರತಿಕ್ರಯಿಸಿರುವ ಕಮಾಂಡರ್ ಮನೋಜ್ ಬಾಡ್ಕರ್, ತುರಾಯ ಸ್ಯಾಟಲೈಟ್ ಫೋನ್‌ಗಳು ಬೇರೆ ಬೇರೆ ದೇಶಗಳಲ್ಲಿ ಬಳಕೆ ಮಾಡಲು ಅವಕಾಶವಿದ್ರೂ,  ಭಾರತದಲ್ಲಿ ಮಾತ್ರ ಇದಕ್ಕೆ ನಿಷೇಧವಿದೆ. ಆದರೂ ಕೆಲವು ಕಡೆಗಳಲ್ಲಿ ಈ ಪೋನ್‌ಗಳು ಆ್ಯಕ್ಟಿವ್ ಆಗುತ್ತವೆ.

ದೆಹಲಿ ವಾಯು ಗುಣಮಟ್ಟ ತೀರಾ ಕುಸಿತ : ನಿನ್ನೆ ಈ ವರ್ಷದ ಅತಿ ಮಲಿನ ದಿನ

ಜಲಭಾಗಗಳಲ್ಲಿ ಈ ಫೋನ್‌ಗಳು ಆ್ಯಕ್ಟಿವ್ ಆದಾಗ ಕೂಡಲೇ ಅವುಗಳನ್ನು ಸಂಬಂಧಪಟ್ಟ ಬೋಟ್‌ಗಳು ಹಾಗೂ ಶಿಪ್‌ಗಳಿಂದ ವಶಪಡಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ. ಹಿಂದೆ ಎಟಿಎಸ್ ಜತೆಗೂಡಿ ಭಾರೀ ಪ್ರಮಾಣದ ಡ್ರಗ್ಸ್ ವಶಪಡಿಸಲು ಕೂಡಾ ಕೋಸ್ಟ್ ಗಾರ್ಡ್ಸ್ ತನ್ನ ಕೊಡುಗೆ ನೀಡಿದೆ. ಇನ್ನು ಕಾರವಾರದಲ್ಲಿ ಕೋಸ್ಟ್ ಗಾರ್ಡ್ಸ್ ಹೋವರ್ ಕ್ರಾಫ್ಟ್ ನಿಲ್ಲಿಸಲು ಖಾಯಂ ಜಾಗಕ್ಕಾಗಿ ನಿರಂತರವಾಗಿ ಪ್ರಯತ್ನ ಮಾಡಲಾಗುತ್ತಿದೆ. ಆದರೆ, ಇದಕ್ಕೆ ಸ್ಥಳೀಯ ಮೀನುಗಾರರು ನಮ್ಮ ಮೀನುಗಾರಿಕೆಗೆ ತೊಂದರೆ ಆಗುತ್ತದೆ ಎಂದು ವಿರೋಧ ಮಾಡುತ್ತಿದ್ದಾರೆ. ನೈಜವಾಗಿಯೂ ಇದರಿಂದ ಜೀವ ರಕ್ಷಣೆಯಾಗುತ್ತದೆ ಹೊರತು ಮೀನುಗಾರಿಕೆಗೆ ಹಾಗೂ ಬೀಚ್‌ಗಳಿಗೆ ಯಾವುದೇ ತೊಂದರೆಗಳಾಗಲ್ಲ. ಈ ವಿಷಯವಾಗಿ ಮೀನುಗಾರರ ಮನವೊಲಿಸಲು ಸಭೆ ಕರೆದು ಚರ್ಚೆ ಮಾಡಲಾಗಿದೆ ಎಂದು ಕಮಾಂಡರ್ ಹೇಳಿದ್ದಾರೆ. ಕೋಸ್ಟ್‌ಗಾರ್ಡ್ಸ್ ಕಮಾಂಡರ್ ಮೀನುಗಾರರ ಮನವೊಲಿಸಲು ಸಾಕಷ್ಟು ಪ್ರಯತ್ನಿಸಿದ್ದರೂ, ಸಂಧಾನಕ್ಕೆ ಬಗ್ಗದೆ ಮೀನುಗಾರರು ಮಾತ್ರ ಇದಕ್ಕೆ ವಿರೋಧ ಮುಂದುವರಿಸಿದ್ದಾರೆ.

Udupi: ಪಡುಕೆರೆ ಬೀಚ್‌ಗೆ ಸಂಜೆ ನಂತರ ಪ್ರವಾಸಿಗರಿಗೆ ನೋ ಎಂಟ್ರಿ: ಸ್ಥಳೀಯರ ನಿರ್ಧಾರ

ಒಟ್ಟಿನಲ್ಲಿ ದೇಶದ ತೀರ ಪ್ರದೇಶಗಳ ಭದ್ರತಾ ದೃಷ್ಠಿಯಿಂದ ಕೋಸ್ಟ್ ಗಾರ್ಡ್ಸ್ ಕೂಡಾ ಸಾಕಷ್ಟು ಕೊಡುಗೆ ನೀಡುತ್ತಿದೆ. ದೇಶದ ಕರಾವಳಿ ತೀರಗಳ ರಕ್ಷಣೆಯೊಂದಿಗೆ ಮೀನುಗಾರರ ಮನವೊಲಿಸಿ ಅವರ ರಕ್ಷಣೆ ಕೂಡಾ ಮಾಡುವುದರೊಂದಿಗೆ ಕೋಸ್ಟ್‌ಗಾರ್ಡ್ಸ್ ಇನ್ನಷ್ಟು ಬಲಯುತಗೊಳ್ಳಲಿ ಅನ್ನೋದು ನಮ್ಮ ಆಶಯ.

click me!