ನಮ್ಮ ಕೃಷಿ ವಿವಿಗಳು ಕ್ಯಾಂಪಸ್ ಬಿಟ್ಟು ಹೊರಬಂದು ಇಡೀ ರೈತನ ಭೂಮಿಯನ್ನು ಕ್ಯಾಂಪಸ್ ಆಗಿ ಮಾಡಿಕೊಳ್ಳಬೇಕು. ಆಗ ಕೃಷಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಮೈಸೂರು (ಜ.30): ನಮ್ಮ ಕೃಷಿ ವಿವಿಗಳು ಕ್ಯಾಂಪಸ್ ಬಿಟ್ಟು ಹೊರಬಂದು ಇಡೀ ರೈತನ ಭೂಮಿಯನ್ನು ಕ್ಯಾಂಪಸ್ ಆಗಿ ಮಾಡಿಕೊಳ್ಳಬೇಕು. ಆಗ ಕೃಷಿ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು. ಸುತ್ತೂರು ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಆದಿ ಜಗದ್ಗುರು ಶ್ರೀಶಿವರಾತ್ರೀಶ್ವರ ಶಿವಯೋಗಿಗಳ ಜಾತ್ರಾ ಮಹೋತ್ಸವದಲ್ಲಿ ಅವರು ಸುಸ್ಥಿರ ಕೃಷಿಗಾಗಿ ನಿಖರ ಬೇಸಾಯ ಕ್ರಮಗಳು ಕುರಿತ ವಿಚಾರ ಸಂಕಿರಣದಲ್ಲಿ ಅತಿಥಿಯಾಗಿ ಪಾಲ್ ಮಾತನಾಡಿದರು. ಈ ದೇಶದ ರೈತ ಅನಿಶ್ಚಿತತೆಯಲ್ಲಿ ಬದುಕುತ್ತಿದ್ದಾನೆ. ಅದಕ್ಕಾಗಿ ಕೃಷಿಯಲ್ಲಿ ಸ್ಥಿರತೆ ಬೇಕು. ಅದಕ್ಕಾಗಿ ಮೂಲ ಬಂಡವಾಳ ಹೆಚ್ಚಾಗಬೇಕು. ಹೊಸ ಆರ್ಥಿಕ ನೀತಿ ಕೃಷಿಗೆ ಬರಬೇಕು. ಹಳ್ಳಿಗಾಡಿನಲ್ಲಿ ಕೃಷಿ ಕ್ಷೇತ್ರ ಕ್ಷೀಣಿಸುತ್ತಿದೆ. ಪೂರ್ಣ ಪ್ರಮಾಣದಲ್ಲಿ ರೈತರಿಗೆ ಸಾಲ ದೊರಕಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರ ಸೇರಿ ಹೊಸ ಕೃಷಿ ಆರ್ಥಿಕ ನೀತಿ ತರಬೇಕು ಎಂದರು.
ಮಣ್ಣಿನ ಸಂರಕ್ಷಣೆ ಇಂದು ರೈತನಿಂದ ಮಾತ್ರ ಆಗಿದೆ. ಬೇರೆ ಯಾರಿಂದಲೂ ಅದು ಸಾಧ್ಯವಾಗಿಲ್ಲ. ರೈತನ ಕೃಷಿ ಕಾಯಕದಿಂದ ಇಂದು ಮಣ್ಣು ಫಲವತ್ತಾಗಿದೆ. ಸ್ಥಾನಿಕ ಬುದ್ಧಿವಂತಿಕೆ ಹೆಚ್ಚಾಗಬೇಕು. ಮಣ್ಣಿನ ಸಾರ ಉಳಿಸಬೇಕು. ಕೃಷಿ ವಿವಿಗಳು ತಮ್ಮ ಕ್ಯಾಂಪಸ್ಬಿಟ್ಟು ಹೊರ ಬಂದು ಸ್ಥಾನಿಕ ಬುದ್ಧಿವಂತಿಕೆ ಬಳಸಿಕೊಂಡು, ರೈತರ ಜಮೀನನ್ನೇ ತಮ್ಮ ಕ್ಯಾಂಪಸ್ಮಾಡಿಕೊಂಡು ಉತ್ತಮ ಇಳುವರಿ ತೆಗೆಯಬೇಕೆ ಹೊರತು ತಮ್ಮ ಕ್ಯಾಂಪಸ್ನ ಮಣ್ಣಿನಲ್ಲಿ ಸಾಧಿಸಿ ತೋರಿಸುವುದು ಸರಿಯಲ್ಲ ಎಂದರು. ಬಿಸ್ಲರಿ ನೀರು ಇಟ್ಟುಕೊಂಡು ಬರಗಾಲದ ಬಗ್ಗೆ ಚರ್ಚೆ ಮಾಡುತ್ತೆವೆ. ಸಮಸ್ಯೆ ಜತೆ ಜೀವನ ಮಾಡುವುದಕ್ಕೂ, ಚರ್ಚೆ ಆಗುವುದಕ್ಕೂ ವ್ಯತ್ಯಸವಿದೆ. ಸಮಸ್ಯೆ ಇರುವ ಕಡೆಯೇ ಪರಿಹಾರ ಇರುತ್ತದೆ. ಅದನ್ನು ನಾವು ಅಲ್ಲಿಯೇ ಹೋಗಿ ಸರಿಪಡಿಸಬೇಕೆ ಹೊರತು ಕಚೇರಿಯಲ್ಲಿ ಕುಳಿತು ಅಲ್ಲ ಎಂದರು.
ನಾನು ರಾಜ್ಯಾಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ: ಬಸವರಾಜ ಬೊಮ್ಮಾಯಿ
ಕೃಷಿ ಬೆಳವಣಿಗೆ ಹೊಂದುತ್ತಾ ಹೋಗುತ್ತಿದೆ. ಆದರೆ, ರೈತ ಮಾತ್ರ ಇದ್ದಲ್ಲಿಯೇ ಇದ್ದಾನೆ. ಸರ್ಕಾರ ಮಾಡಲಾರದ ಕೆಲಸವನ್ನು ಮಠ ಮಾನ್ಯಗಳು ಮಾಡಿವೆ. ಧರ್ಮ, ಸಂಸ್ಕೃತಿ, ಸಂಸ್ಕಾರವನ್ನು ಉಳಿಸುವುದರ ಜೊತೆಗೆ ಜ್ಞಾನವನ್ನು ಹೆಚ್ಚಿಸಿವೆ. ಕೃಷಿಯನ್ನು ಸುತ್ತೂರು ಮಠ ಉಳಿಸಿಕೊಂಡಿದೆ. ಶ್ರೀಗಳು ಈ ಭಾಗದಲ್ಲಿ ಬರ ನೀಗಿಸಿದ್ದಾರೆ. ನಾನು ಮುಖ್ಯಮಂತ್ರಿ ಆಗಿದ್ದಾಗ ನೀರಾವರಿ ಯೋಜನೆ ಜಾರಿಗೊಳಿಸುವಂತೆ ಶ್ರೀಗಳು ತಿಳಿಸಿದ್ದರು. ಅದರಂತೆ ಜಾರಿಗೊಳಿಸಿದ್ದೆ. ಯಡಿಯೂರಪ್ಪನವರೂ ಈ ಬಗ್ಗೆ ಪ್ರತಿದಿನವೂ ವಿಚಾರಿಸಿಕೊಳ್ಳುತ್ತಿದ್ದುದಾಗಿ ತಿಳಿಸಿದರು. ಪರಿಸರ ಮತ್ತು ಜೀವಶಾಸ್ತ್ರ ಇಲಾಖೆ ಸಚಿವ ಈಶ್ವರ ಖಂಡ್ರೆ ಮಾತನಾಡಿ, ಸುತ್ತೂರು ಜಾತ್ರೆಯು ಎಲ್ಲಾ ಜಾತ್ರೆಗೂ ಮಾದರಿಯಾಗಿದೆ. ಸಡಗರ ಸಂಭ್ರಮ ಇಲ್ಲಿ ಮನೆ ಮಾಡಿದೆ. ನಮ್ಮ ಭಾಗದ ಸಾವಿರಾರು ಮಕ್ಕಳು ಇಲ್ಲಿದ್ದಾರೆ. ಬಡವರು, ರೈತರ ಮಕ್ಕಳಿಗೆ ಶಿಕ್ಷಣಕ್ಕೆ ಉಚಿತ ಪ್ರವೇಶ ನೀಡುತ್ತಿದ್ದಾರೆ ಎಂದರು.
ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ಎನ್ನಲಾಗುತ್ತದೆ. ಆರಂಭದಲ್ಲಿ ಆಹಾರ ಉತ್ಪಾದನೆ ಕಡಿಮೆ ಇತ್ತು. ಈಗ ದೇಶದ 140 ಕೋಟಿ ಜನರಿಗೆ ಆಹಾರ ನೀಡಿ ರಫ್ತು ಮಾಡುವ ಹಂತಕ್ಕೆ ಬಂದಿದ್ದೇವೆ. ರೈತರು ಸ್ವಾಭಿಮಾನಿಗಳಿದ್ದಾರೆ. ಪ್ರಕೃತಿ ವಿಕೋಪ, ಅತಿವೃಷ್ಟಿ ಆಗುತ್ತದೆ. ಇವುಗಳ ನಿಯಂತ್ರಣಕ್ಕೆ ಶಾಶ್ವತ ಪರಿಹಾರ ಇರಬೇಕು. ಮಣ್ಣು ಉಳಿಸಬೇಕು. ಪ್ರಕೃತಿ ವಿಕೋಪ ತಡೆಯಬೇಕು ಎಂದರು. ನಮ್ಮ ಐಷಾರಾಮಿ ಜೀವನಕ್ಕೆ ನಾವು ಮಾಲಿನ್ಯ ಹೆಚ್ಚು ಮಾಡುತ್ತಿದ್ದೇವೆ. ಜಾಗತಿಕ ತಾಪಮಾನ ಏರಿಕೆ ಆಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ನಿಷೇಧ ಮಾಡಬೇಕು. ಬಟ್ಟೆ ಬ್ಯಾಗ್ ಉಪಯೋಗಿಸಬೇಕು. ಯುವಕರಲ್ಲಿ ಅಗಾಧವಾದ ಶಕ್ತಿ ಇದೆ. ಅದನ್ನು ಬಳಸಿಕೊಂಡು ಕೃಷಿಯನ್ನು ಉಳಿಸಬೇಕಿದೆ. ಜ್ಞಾನ-ವಿಜ್ಞಾನ- ತಂತ್ರಜ್ಞಾನದಿಂದ ಸಾಧನೆ ಆಗುತ್ತಿದೆ. ಈ ಮೂಲಕ ಆರ್ಥಿಕ ಬೆಳವಣಿಗೆ ಆಗುತ್ತಲಿದೆ.
ನಮ್ಮ ಅಂತರಂಗ ವಿಕಸನ ಆಗಲು ಧ್ಯಾನ ಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, 20 ವರ್ಷದ ಹಿಂದೆ ಹಾವೇರಿಯಲ್ಲಿ ನಡೆದ ಕೃಷಿ ವಿಚಾರ ಸಂಕೀರ್ಣದಲ್ಲಿ ಅಜ್ಜನೊಬ್ಬ ಬಂದು ಮನುಷ್ಯ ಸತ್ತರೆ ಮಣ್ಣಿಗೆ, ಮಣ್ಣೆ ಸತ್ತರೆ ಮತ್ತೆಲ್ಲಗೆ? ಎಂಬ ಪ್ರಶ್ನೆ ಹಾಕಿದರು. ಆ ಪ್ರಶ್ನೆಗೆ ನಾವು ಈಗಲೂ ಉತ್ತರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು. ನಾವು ಈ ಹಿಂದೆ ರಾಶಿ ಪೂಜೆ ಮಾಡುತ್ತಿದ್ದವು. ಆಗ ರಾಶಿ ಬಳಿಗೆ ಚಪ್ಪಲಿ ಹಾಕಿ ಹೋಗುವಂತಿರಲಿಲ್ಲ. ಆದರೆ, ಈಗ ರಸ್ತೆಯಲ್ಲಿಯೇ ರಾಶಿ ಮಾಡುತ್ತೇವೆ. ಏಕೆಂದರೆ ಭೂಮಿ, ಬೆಳೆಗೆ ನಮ್ಮದೊಂದು ಸಂಬಂಧ ಇರುತ್ತಿತ್ತು. ಆದರೆ ಈಗ ತಂದೆ ತಾಯಿ ಸಂಬಂಧವು ಉಳಿಯುತ್ತಿಲ್ಲ. ಆಸ್ತಿ ಮಾತ್ರ ಬೇಕು, ಅಪ್ಪ ಅಮ್ಮ ಬೇಡ ಎಂಬ ವ್ಯವಹಾರದ ಸಂಬಂಧವಾಗಿದೆ. ಆದ್ದರಿಂದ ನಾವು ಭೂಮಿಗೆ ಬೀಜ ಹಾಕುವ ಜತೆಗೆ ವಿಷವನ್ನೂ ಹಾಕುತ್ತಿದ್ದೇವೆ ಎಂದರು.
ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಯುವಕರು ಪಟ್ಟಣ್ಣಕ್ಕೆ ವಲಸೆ ಹೋಗುತ್ತಿದ್ದಾರೆ. ಇಲ್ಲಿ ಶೇ. 90ರಷ್ಟು ಮಂದಿ ವಯಸ್ಸಾದವರು ಕೃಷಿ ಮಾಡುತ್ತಿದ್ದೀರಿ. ಉಳಿದ ಶೇ. 10ರಷ್ಟು ಮಂದಿ ಯುವಕರಿಗೆ ಒಕ್ಕಲುತನದ ಬಗ್ಗೆ ತಿಳಿಸಬೇಕಾದ ಪರಿಸ್ಥಿತಿ ಇದೆ. ಆದರೆ ಮುಂದಿನ ದಿನಗಳಲ್ಲಿ ಶೇ. 90ರಷ್ಟು ಯುವಕರು ಕೃಷಿಗೆ ಬರಬೇಕು ಎಂದರು. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಸೆಕಂಡರಿ ಕೃಷಿ ಯೋಜನೆಯನ್ನು ಮಾಡಿದ್ದೆವು. ರೈತರು ಮೂಲ ಕೃಷಿ ಪದ್ಧತಿ ಮರೆಯಬಾರದು. ಹೆಣ್ಣಿಗೆ ಹೆರಿಗೆಯಾಗುವ ಹೇಗೆ ಆರೈಕೆ ಮಾಡುತ್ತೇವೋ ಹಾಗೆ ಭೂಮಿಗೂ ಮಾಡಬೇಕು. ಮಣ್ಣು ಪರೀಕ್ಷೆ ಮಾಡಿಸಬೇಕು.
ರಾಮುಲು, ರೆಡ್ಡಿ ಒಂದಾಗುತ್ತಾರೆ, ನೀವೇ ನೋಡ್ತೀರಿ: ಬೊಮ್ಮಾಯಿ
ಔಷಧ ಅಂಗಡಿಯವ ಹೇಳಿದ ಗೊಬ್ಬರ, ಔಷಧ ಹಾಕಬಾರದು. ಅವರು ಬಹುರಾಷ್ಟ್ರೀಯ ಕಂಪನಿಗಳ ವಿದೇಶಿ ಪ್ರವಾಸದ ಆಸೆಯಿಂದ ಮಾರಿಸುತ್ತಾರೆ. ಜ್ವರ ಬಂದಾಗ ಕೆಮ್ಮಿಗೆ ಔಷಧ ಕೊಡುವಂತೆ ಕೊಡುತ್ತಿದ್ದಾರೆ. ನಾವು ತಿನ್ನುವ ಆಹಾರ ವಿಷಪೂರಿತ ಆಗುತ್ತಿದೆ. ಅದನ್ನು ತಿನ್ನುತ್ತಿದ್ದೇವೆ. ಸಾವಯವ ಕೃಷಿ ಮಾಡಿದರೆ ಸ್ವಲ್ಪವಾದರೂ ಆರೋಗ್ಯ ಉಳಿಯುತ್ತದೆ ಎಂದರು. ಯುವಕರು ಕೃಷಿಯ ಬಗ್ಗೆ ಆಸಕ್ತಿ ವಹಿಸಬೇಕು. ಕೃಷಿ ನಂಬಿದರೆ ಭೂಮಿತಾಯಿ ಮೋಸ ಮಾಡುವುದಿಲ್ಲ. ರೈತರಿಗೆ ನಾವು ಬೀಜ, ಗೊಬ್ಬರ, ಇತರ ಪರಿಕರ ನೀಡುತ್ತೇವೆ. ಆದರೆ ಬೆಳೆ ಬಂದ ನಂತರ ಏನಾಗುತ್ತಿದೆ ಎಂಬುದನ್ನು ನೋಡುತ್ತಿಲ್ಲ ಈ ಬಗ್ಗೆ ಸರ್ಕಾರಗಳು ಗಮನಹರಿಸಬೇಕು ಎಂದರು. ಸಂಸದ ಶ್ರೇಯಸ್ಎಸ್. ಪಾಟೀಲ್ ಮಾತನಾಡಿ, ನಾನು ಸುತ್ತೂರು ಮಠಕ್ಕೆ ಭಕ್ತನಾಗಿ ಬಂದಿಲ್ಲ. ಬದಲಿಗೆ ಶಿಷ್ಯನಾಗಿ ಬಂದಿದ್ದೇನೆ. ಶಿಷ್ಯನಾಗಿಯೇ ಇರುತ್ತೇನೆ ಎಂದರು.