
ಬೆಂಗಳೂರು (ಫೆ.21): ಆ ಭಗವಂತ ಬಹುಶಃ ನಮ್ಮ (ಡಿ.ಕೆ. ಶಿವಕುಮಾರ್) ಮಂತ್ರಿಗಳನ್ನು ಕೈಬಿಟ್ಟಿರಬಹುದು. ಇದು ಆಡಳಿತ ವೈಫಲ್ಯ ಒಪ್ಪಿಕೊಳ್ಳುವುದಾಗಿದೆ. ಇನ್ನೂ ಬೆಂಗಳೂರನ್ನು ಕೈಬಿಟ್ಟಿಲ್ಲ. ದಯವಿಟ್ಟು ಬೆಂಗಳೂರು ಅಭಿವೃದ್ಧಿ ಮೇಲೆ ಗಮನಹರಿಸಿ ಮತ್ತು ನಮ್ಮ ಜೀವನವನ್ನು ಸುಧಾರಿಸಿ ಎಂದು ಉದ್ಯಮಿ ಮೋಹನ್ದಾಸ್ ಪೈ ತಿರುಗೇಟು ನೀಡಿದ್ದಾರೆ.
ಆ ಭಗವಂತನೇ ಬಂದರೂ ಮುಂದಿನ ಎರಡು-ಮೂರು ವರ್ಷಗಳಲ್ಲಿ ರಸ್ತೆಗಳನ್ನು ಹಾಗೂ ಟ್ರಾಫಿಕ್ ನಿಯಂತ್ರಣ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ ಡಿಸಿಎಂ ಡಿ.ಕೆ. ಶಿವಕುಮಾರ್ ಹೇಳಿದ್ದರು. ಆ ದೇವರು ಇನ್ನೂ ಬೆಂಗಳೂರನ್ನು ಕೈಬಿಟ್ಟಿಲ್ಲ. ಬಹುಶಃ ನಮ್ಮ ಮಂತ್ರಿಗಳನ್ನು ಕೈಬಿಟ್ಟಿರಬಹುದು. ಇದು ಆಡಳಿತ ವೈಫಲ್ಯ ಒಪ್ಪಿಕೊಳ್ಳುವುದಾಗಿದೆ. ದಯವಿಟ್ಟು ಬೆಂಗಳೂರು ಅಭಿವೃದ್ಧಿ ಮೇಲೆ ಗಮನಹರಿಸಿ ಮತ್ತು ನಮ್ಮ ಜೀವನವನ್ನು ಸುಧಾರಿಸಿ. ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಬರೋಬ್ಬರಿ 1 ಲಕ್ಷ ಮೆಟ್ರೋ ಪ್ರಯಾಣಿಕರು ಕಡಿಮೆ ಆಗುವಂತೆ ದರ ಹೆಚ್ಚಳ ಮಾಡಿ ಘೋಷಣೆ ಮಾಡಲಾಗಿದೆ. ಮೆಟ್ರೋ ದರ ಹೆಚ್ಚಳವು ಕೆಟ್ಟ ಪರಿಣಾಮ ಬೀರುತ್ತಿದ್ದರೂ ನಿಮ್ಮಿಂದ ಯಾವುದೇ ಮೇಲ್ವಿಚಾರಣೆ ಮಾಡಲು ಸಾಧ್ಯವಾಗಿಲ್ಲ. ನೀವು ನಮ್ಮ ಪ್ರಭಲ ಸಚಿವರು- ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಮನವಿ ಮಾಡಿದ್ದಾರೆ.
ಮುಂದುವರೆದು ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರೇ ನೀವು ನಮ್ಮ ಸಚಿವರಾಗಿ 2 ವರ್ಷಗಳಾಗಿವೆ. ನಾವು ನಿಮ್ಮನ್ನು ಪ್ರಬಲ ಸಚಿವರೆಂದು ಆದರದಿಂದ ಶ್ಲಾಘಿಸಿ ಸ್ವಾಗತಿಸಿದ್ದೇವೆ. ಆದರೆ, ನಮ್ಮ ಜೀವನವು ತುಂಬಾ ಕೆಟ್ಟದಾಗಿ ಪರಿವರ್ತನೆ ಆಗುತ್ತಿದೆ. ಸರ್ಕಾರದಿಂದ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸಲಾಗಿದೆ. ಆದರೆ, ಸರ್ಕಾರ ನಗರದಲ್ಲಿ ಯಾವುದೇ ಯೋಜನೆಯನ್ನು ಸರಿಯಾದ ಸಮಯಕ್ಕೆ ಪೂರ್ಣಗೊಳಿಸುತ್ತಿಲ್ಲ. ವಿನಾ ಕಾರಣ ಎಲ್ಲ ಯೋಜನೆಗಳನ್ನು ವಿಳಂಬ ಮಾಡುವ ಮೂಲಕ ಪೂರ್ಣಗೊಳಿಸಲು ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಆ ಭಗವಂತನೇ ಬಂದ್ರೂ 2-3 ವರ್ಷದಲ್ಲಿ ಬೆಂಗಳೂರು ಸರಿಪಡಿಸಲು ಸಾಧ್ಯವಿಲ್ಲ: ಡಿಕೆ ಶಿವಕುಮಾರ್
ಬೆಂಗಳೂರು ನಗರವನ್ನು ಸುಧಾರಿಸಲು ನೀವು ಉತ್ತಮ ಮತ್ತು ಸ್ವಚ್ಛ ಪಾದಚಾರಿ ಮಾರ್ಗ ನಿರ್ಮಾಣ ಮಾಡಿದರೆ ಜನರಿಗೆ ಅನುಕೂಲ ಆಗುತ್ತದೆ ಎಂದು ಏಕೆ ಖಚಿತಪಡಿಸಿಕೊಳ್ಳಲು ಸಾಧ್ಯವಿಲ್ಲ? ಸಾರ್ವಜನಿಕ ಸಾರಿಗೆಯನ್ನು ಸುಧಾರಿಸಲು ನೀವು 5000 ಹೊಸ EV ಬಸ್ಗಳನ್ನು ತುರ್ತಾಗಿ ಏಕೆ ಖರೀದಿಸಲು ಸಾಧ್ಯವಿಲ್ಲ? ನಿರಂತರ ವಿಳಂಬವನ್ನು ಒಪ್ಪಿಕೊಳ್ಳುವ ಬದಲು ಮೆಟ್ರೋ ಮಾರ್ಗ ಪೂರ್ಣಗೊಳಿಸಲು ಬಿಎಂಆರ್ಸಿಎಲ್ಗೆ 24x7 ಕೆಲಸ ಮಾಡಲು ನೀವು ಏಕೆ ಒತ್ತಾಯಿಸಬಾರದು? ಎಂದು ಪ್ರಶ್ನೆ ಮಾಡಿದ್ದಾರೆ.
ದಯವಿಟ್ಟು ಈ ಎಲ್ಲದರ ಮೇಲೆ ಗಮನಹರಿಸಿ ಮತ್ತು ನಮ್ಮ ಜೀವನವನ್ನು ಸುಧಾರಿಸಿ. ದಿನದಿಂದ ದಿನಕ್ಕೆ ಬೆಂಗಳೂರು ಹದಗೆಡುತ್ತಿದೆ. ಇತ್ತೀಚೆಗೆ ಮೆಟ್ರೋ ದರ ಹೆಚ್ಚಳದಿಂದಾಗಿ 1 ಲಕ್ಷ ಪ್ರಯಾಣಿಕರು ಕಡಿಮೆ ಆಗಿದ್ದಾರೆ. ಇದು ಗಂಭೀರವಾದ ವಿಚಾರವಾದರೂ ನಿಮ್ಮಿಂದ ಯಾವುದೇ ಮೇಲ್ವಿಚಾರಣೆಯಿಲ್ಲ. ನೀವು ನಮ್ಮ ಪ್ರಬಲ ಸಚಿವರು- ದಯವಿಟ್ಟು ನಮಗೆ ಸಹಾಯ ಮಾಡಿ ಎಂದು ಉದ್ಯಮಿ ಮೋಹನ್ ದಾಸ್ ಪೈ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಸಾರಿಗೆ ಸಮಸ್ಯೆ ಇಲ್ಲ, ಸಂಚಾರ ಸಮಸ್ಯೆ ಇಲ್ಲ. ಜನರು ಕಾಂಗ್ರೆಸ್ಗೆ ಆಡಳಿತ ನಡೆಸಲು ಭಾರಿ ಜನಾದೇಶ ನೀಡಿದ್ದಾರೆ. ಬೆಂಗಳೂರಿನಲ್ಲಿ ಸಂಪನ್ಮೂಲಗಳ ಕೊರತೆಯಿಲ್ಲ... ಬೆಂಗಳೂರಿನಲ್ಲಿ ಯೋಜಕರ ಕೊರತೆಯಿಲ್ಲ... ಬೆಂಗಳೂರಿನಲ್ಲಿ ವೃತ್ತಿಪರರ ಕೊರತೆಯಿಲ್ಲ... ಬೆಂಗಳೂರಿಗೆ ದೂರದೃಷ್ಟಿ, ನಾಯಕತ್ವ ಮತ್ತು ಕಾರ್ಯಗತಗೊಳಿಸುವ ಇಚ್ಛಾಶಕ್ತಿ ಬೇಕು... ಅದು ನಮ್ಮಲ್ಲಿ ಇದೆಯೇ? ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಉದ್ಯಮಿ ಭಾಸ್ಕರ್ ರಾವ್ ಎನ್ನುವವರು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: WPL ಟಿ20ಗಾಗಿ ಮೆಟ್ರೋ ವಿಸ್ತರಣೆ: ಆರ್ಸಿಬಿ ಮ್ಯಾಚ್ ಟಿಕೆಟ್ ಬೆಲೆಗಿಂತ, ಮೆಟ್ರೋ ಟಿಕೆಟ್ ದರವೇ ಹೆಚ್ಚಾಯ್ತು!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.