Karnataka Assembly Election- 2018
May 28, 2018, 7:05 PM IST
ನವದೆಹಲಿ(ಮೇ. 28): ರೈತರ ಸಾಲಮನ್ನಾ ಕುರಿತಂತೆ ಬುಧವಾರ ಅಧಿಕೃತ ಘೋಷಣೆ ಮಾಡುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ನಂತರ ಮಾತನಾಡಿದ ಅವರು, ರೈತರ ಸಾಲಮನ್ನಾ ಕುರಿತು ಬುಧವಾರ ಅಧಿಕೃತ ಘೋಷಣೆ ಮಾಡುತ್ತೇನೆ. ರೈತರ ಸಾಲಮನ್ನಾ ಕುರಿತು ಈಗಾಗಲೇ ಎಲ್ಲ ಟಿಪ್ಪಣಿ ಸಿದ್ಧಪಡಿಸಿದ್ದೇನೆ. ಸಾಲ ಮನ್ನ ಮಾಡದಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದು ಖಂಡಿತಾ ಎಂದರು.
ಬಿಜೆಪಿ ಕುತಂತ್ರದ ರಾಜಕಾರಣಕ್ಕೆ ರಾಜ್ಯದ ಜನತೆ ಬಲಿಯಾಗಬಾರದು. ಸಮ್ಮಿಶ್ರ ಸರ್ಕಾರವಾಗಿದ್ದರೂ ನಾನು ಸಿಎಂ ಆಗಿರುವವರೆಗೂ ಜನಸ್ನೇಹಿ ಸರ್ಕಾರ. ನಾಡಿನ ಆರೂವರೆ ಕೋಟಿ ಜನರ ಸರ್ಕಾರ ಇದೆ. ಯಾರೂ ಆತಂಕ, ಅನುಮಾನಗಳಿಗೆ ಒಳಗಾಗಬೇಡಿ. ಪ್ರತಿಕ್ಷಣವನ್ನೂ ನಾನು ಜನರ ಅಭಿವೃದ್ಧಿಗಾಗಿ ಮೀಸಲಿಟ್ಟಿದ್ದೇನೆ. ಕರ್ನಾಟಕದ ಜನತೆಯ ಅಭಿವೃದ್ಧಿಗೆ ನನ್ನ ಜೀವನ ಮೀಸಲು. ಕನ್ನಡಿಗರ ಜನತೆಯ ಹೆಸರಿನಲ್ಲಿ ನಾನು ಪ್ರಮಾಣ ವಚನ ಸ್ವೀಕರಿಸಿದ್ದೇನೆ. ಬದ್ಧತೆ ಬಗ್ಗೆ ಯಡಿಯೂರಪ್ಪ, ಬಿಜೆಪಿ ನಾಯಕರಿಂದ ಹೇಳಿಸಿಕೊಳ್ಳಬೇಕಿಲ್ಲ. ನಾನು ಸೂಕ್ಷ್ಮ ವ್ಯಕ್ತಿ, ರಾಜೀನಾಮೆ ನೀಡಲು ನಾನು ಸಿದ್ಧ ಎಂದು ಹೇಳಿದರು.
4 ರೈತರ ಆತ್ಮಹತ್ಯೆ
ನಿನ್ನೆ 4 ಮಂದಿ ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆ ರೈತರ ಕುಟುಂಬಗಳ ಜವಾಬ್ದಾರಿ ಹೊರುವವರು ಯಾರು? ಬಿಜೆಪಿ, ನಾನು ಸಾಲ ಮನ್ನಾ ಮಾಡುವುದೇ ಇಲ್ಲ ಎಂಬಂತೆ ಸುದ್ದಿ ಹಬ್ಬಿಸುತ್ತಿದೆ. ಆ ಕುಟುಂಬ ಉಳಿಸಲು ಯಡಿಯೂರಪ್ಪ ಬರುತ್ತಾರಾ ಎಂದು ಪ್ರಶ್ನಿಸಿದ ಅವರು ನಾನು ರೈತ ಸಾಲ ಮನ್ನಾ ಮಾಡಲು ಸಿದ್ಧ. ನನಗೆ ಉಸಿರಾಡಲು ಸ್ವಲ್ಪ ಸಮಯ ಕೊಡಿ ಮನವಿ ಮಾಡಿದರು.