
ನವದೆಹಲಿ (ಏ.30): ಕರ್ನಾಟಕದಲ್ಲಿ ಪ್ರಜ್ವಲ್ ರೇವಣ್ಣ ವಿಚಾರ ಅತ್ಯಂತ ಆಘಾತಕಾರಿ ಆಗಿದೆ. ನಾವು ಎಂದಿಗೂ ಮಹಿಳೆಯರ ಮೇಲೆ ಆಗುವಂತಹ ಅವಮಾನವನ್ನು ನಾವೆಂದೂ ಸಹಿಸಿಕೊಳ್ಳಲು ಆಗುವುದಿಲ್ಲ. ಕಾಂಗ್ರೆಸ್ ನಾಯಕರು ನಮ್ಮ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವೇ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಹೇಳಿದರು.
ಅಸ್ಸಾಂನ ಗುವಾಹಟಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರೇವಣ್ಣ ಅವರ ವಿಚಾರ ಆಘಾತಕಾರಿಯಾಗಿದೆ. ಬಿಜೆಪಿಯ ನಿಲುವು ಎಂದಿಗೂ ಮಹಿಳಾ ಪರಿವಾಗಿ ಇರುತ್ತದೆ. ಅದಕ್ಕಾಗಿಯೇ ನಾವು ನಾರಿಶಕ್ತಿಗೆ ಬೆಂಬಲ ನೀಡುತ್ತಾ ಬಂದಿದ್ದೇವೆ. ನರೇಂದ್ರ ಮೋದಿ ಅವರು ದೇಶದ ಮಹಿಳೆಯರಿಗೆ ಅವಮಾನ ಆಗುವುದಕ್ಕೆ ಎಂದಿಗೂ ಬಿಡವುದಿಲ್ಲ ಎಂಬ ಕಠಿಣ ನಿಲುವನ್ನು ಹೊಂದಿದ್ದಾರೆ. ಆದರೂ, ಕಾಂಗ್ರೆಸ್ ಸರ್ಕಾರ ನಮ್ಮ ಮೇಲೆ ಆರೋಪ ಮಾಡುತ್ತಿದೆ. ಅಲ್ಲಿ ಯಾವ ಸರ್ಕಾರ ಅಧಿಕಾರ ಆಡಳಿತದಲ್ಲಿದೆ? ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಈ ವಿಡಿಯೋವನ್ನು ಸರಿಯಾಗಿ ಚುನಾವಣಾ ಸಂದರ್ಭದಲ್ಲಿ ಬಿಡುಗಡೆ ಮಾಡಲಾಗಿದೆ ಎಂದರು.
ಅಲ್ಲಿ ವಿಡಿಯೋ ಹರಿದಾಡುತ್ತಿರುವ ಬಗ್ಗೆ ಸರ್ಕಾರಕ್ಕೆ ತಿಳಿಸಿದ್ದರೂ ಅಲ್ಲಿ ಯಾಕೆ ಕಠಿಣ ಕ್ರಮ ಕೈಗೊಂಡಿಲ್ಲ. ಕರ್ನಾಟಕದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಯಾಗಿಲ್ಲ ಎಂಬುದು ತಿಳಿಯುತ್ತಿದೆ. ಪ್ರಿಯಾಂಕಾ ಗಾಂಧಿ ಅವರು ನಮ್ಮನ್ನು ಪ್ರಶ್ನೆ ಮಾಡುತ್ತಿದ್ದಾರೆ. ನೀವು ನಮ್ಮನ್ನು ಪ್ರಶ್ನೆ ಮಾಡುವ ಬದಲು ನಿಮ್ಮದೇ ಸರ್ಕಾರದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅವರನ್ನು ಪ್ರಶ್ನೆ ಮಾಡಿ. ನೀವು ಕೇಂದ್ರ ಸರ್ಕಾರದ ಮೇಲೆ ಯಾಕೆ ಗೂಬೆ ಕೂರಿಸುತ್ತೀರಿ. ಇನ್ನು ಜೆಡಿಎಸ್ನೊಂದಿಗೆ ನಾವು ಮೈತ್ರಿ ಹೊಂದಿದ್ದೇವೆ. ಈಗ ಜೆಡಿಎಸ್ನಿಂದ ಕೋರ್ ಕಮಿಟಿ ಮೀಟಿಂಗ್ ಕರೆಯಲಾಗಿದೆ. ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗುತ್ತದೆ ಎಂದು ತಿಳಿಸಿದರು.
ಸಾರ್ವಜನಿಕ ಜೀವನದಲ್ಲಿ ಯಾವುದೇ ವ್ಯಕ್ತಿಯಾಗಿದ್ದರೂ ನಮ್ಮ ನಿಲುವು ಎಂದಿಗೂ ಮಹಿಳಾ ಪರವಾಗಿರುತ್ತದೆ. ನಾವು ಎಂದಿಗೂ ಮಹಿಳೆಯರಿಗೆ ಅವಮಾನ ಆಗುವುದನ್ನು ನಾವು ಎಂದಿಗೂ ಸಹಿಸಿಕೊಳ್ಳುವುದಿಲ್ಲ. ಅದು ಯಾವುದೇ ಸಾಮಾನ್ಯ ವ್ಯಕ್ತಿಯಾಗಲೀ ಅಥವಾ ಯಾರೇ ಆಗಿರಲಿ ನಾವು ಸಹಿಸಿಕೊಳ್ಳುವುದಿಲ್ಲ ಎಂದು ಕಿಡಿಕಾರಿದರು.
Prajwal Revanna Sex Scandal: ಎಸ್ಐಟಿಗೆ ಪೆನ್ಡ್ರೈವ್ ರಹಸ್ಯ ತಿಳಿಸಿದ ಹಾಸನ ಎಸ್ಪಿ
ಕೇಂದ್ರಕ್ಕೆ ಮೊದಲೇ ವಿಚಾರ ಗೊತ್ತಿತ್ತಾ?
ಹಾಸನದಲ್ಲಿ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಕೊಡಬೇಡಿ ಎಂದು ಸೂಚನೆ ನೀಡಿದ್ದರು. ಈ ವಿಚಾರವನ್ನು ಕುಮಾರಸ್ವಾಮಿ ಅವರು ಈ ಬಗ್ಗೆ ದೇವೇಗೌಡರಿಗೆ ತಿಳಿಸಿದ್ದರು. ಆದರೆ, ಸ್ವತಃ ದೇವೇಗೌಡರೇ ತಾವು ಜವಾಬ್ದಾರಿ ಹೊತ್ತುಕೊಂಡು ಚುನಾವಣೆಯಲ್ಲಿ ತಮ್ಮ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವುದಾಗಿ ಭರವಸೆ ನೀಡಿದ್ದರು. ಈಗ ಚುನಾವಣಾ ಮತದಾನ ದಿನಕ್ಕೆ 3 ದಿನ ಮುಂಚಿತವಾಗಿ ವಿಡಿಯೋ ಹರಿಬಿಡಲಾಗಿದೆ. ಚುನಾವಣೆಯ ಮತದಾನ ಪೂರ್ಣಗೊಂಡ ಹಿನ್ನೆಲೆಯಲ್ಲಿಯೇ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ರಾಜ್ಯ ಸರ್ಕಾರದಿಂದ ತನಿಖೆಗಾಗಿ ಎಸ್ಐಟಿ ರಚಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.