ಗಾಂಧೀನಗರ ಎಂಬ ಜುಗಾರಿ ಕ್ರಾಸ್‌!

Published : Sep 27, 2019, 10:23 AM IST
ಗಾಂಧೀನಗರ ಎಂಬ ಜುಗಾರಿ ಕ್ರಾಸ್‌!

ಸಾರಾಂಶ

ಈಗ ಬರುತ್ತಿರುವ ಸಿನಿಮಾಗಳೆಲ್ಲವೂ ಪ್ಯಾನ್‌ ಇಂಡಿಯಾ ಸಿನಿಮಾಗಳೇ. ಆದರೆ ಅವು ಪ್ಯಾನ್‌ ಕರ್ನಾಟಕ ಅಂತೂ ಅಲ್ಲ. ಇಡೀ ಕರ್ನಾಟಕದಲ್ಲಿ ಆ ಸಿನಿಮಾಗಳು ನೋಡಲು ಸಿಗುತ್ತವೆಯೇ ಎಂದು ಕೇಳಿದರೆ ಬಹುಶಃ ಸಿಗುವ ಉತ್ತರ ನಕಾರಾತ್ಮಕವೇ ಆಗಿದೆ.

 

ಜೋಗಿ

ಕನ್ನಡ ಸಿನಿಮಾದ ಹಿಂದಿ ಡಬ್ಬಿಂಗ್‌ ರೈಟ್‌ಗಳನ್ನು ದುಬಾರಿ ಬೆಲೆಗೆ ಕೊಳ್ಳಲಾಗುತ್ತಿದೆ!

ಬಹುಶಃ ಒಳ್ಳೆಯ ಕತೆಯಿದ್ದರೆ ಮಾತ್ರ?

ಹಾಗೇನಿಲ್ಲ, ಕತೆಯೇ ಬೇಕಾಗಿಲ್ಲ!

ಸ್ಟಾರ್‌ ಇರಬೇಕಲ್ಲವೇ?

ಸ್ಟಾರ್‌, ಸ್ಟಾರ್‌ ಡೈರೆಕ್ಟರ್‌ ಏನೂ ಬೇಕಿಲ್ಲ!

ಮತ್ತೇನು ನೋಡಿ ಕೊಂಡುಕೊಳ್ಳುತ್ತಾರೆ?

ಫೈಟಿಂಗ್‌ ಇದ್ದರೆ ಸಾಕು. ಒಂದು ಫೈಟಿಂಗಿಗೆ ಇಪ್ಪತ್ತೈದು ಲಕ್ಷದಿಂದ ಒಂದು ಕೋಟಿಯ ತನಕ ಕೊಡಲಾಗುತ್ತದೆ. ಐದು ಫೈಟಿಂಗ್‌ ಇದ್ದರೆ ಯಾರ ಸಿನಿಮಾ ಆದರೂ ಸರಿಯೇ ಒಂದು ಕೋಟಿ ಗ್ಯಾರಂಟಿ. ಸ್ಟಾರ್‌ ಸಿನಿಮಾ ಆದರೆ ಐದು ಕೋಟಿ ಕೊಡುತ್ತಾರೆ.

ಆಮೇಲೆ ಆ ಸಿನಿಮಾಗಳು ಏನಾಗುತ್ತವೆ?

ಸ್ಟಾರ್‌ಗಳಿಗೆ ಕತೆ ಬರೆದು ಸಿನಿಮಾ ಮಾಡೋನಲ್ಲ ನಾನು: ನಾಗಾಭರಣ

ಬೇರೆ ಬೇರೆ ಹಿಂದಿ ಚಾನಲ್ಲುಗಳಲ್ಲಿ ಮತ್ತೆ ಮತ್ತೆ ಪ್ರಸಾರ ಆಗುತ್ತವೆ!

ಅದನ್ನು ಯಾರು ನೋಡುತ್ತಾರೆ?

ಯಾರಾದರೂ ನೋಡಿಕೊಳ್ಳಲಿ ನಿಮಗೇನಂತೆ. ನಾವು ದುಡ್ಡು ಕೊಡುತ್ತೇವೆ, ನೀವು ಸಿನಿಮಾ ಕೊಡಿ. ಅದೀಗ ಡೀಲ್‌. ಇದರ ಪರಿಣಾಮವಾಗಿಯೇ ಕನ್ನಡದ ಅನೇಕ ಸಣ್ಣಪುಟ್ಟನಟರೂ ಸೇರಿದಂತೆ ಮಿಡ್‌ರೇಂಜ್‌ ಸ್ಟಾರುಗಳೂ ಅವರ ಜೊತೆಗೆ ಕಾಮಿಡಿಯನ್‌ ಮತ್ತು ವಿಲನ್‌ಗಳೂ ಪ್ಯಾನ್‌ ಇಂಡಿಯಾ ತಾರೆಯರಾಗಿ ಬಿಟ್ಟಿದ್ದಾರೆ. ಸಾಧುಕೋಕಿಲಾ ಈಗ ಪಂಜಾಬಿನ ರೈತನಿಗೂ ಗೊತ್ತು, ಬಿಹಾರದ ಮೆಕ್ಯಾನಿಕ್‌ಗೆ, ಜೈಪುರದ ಕಾರ್‌ ಡ್ರೈವರಿಗೆ, ದೆಹಲಿಯ ಹೋಟೆಲ್‌ ಮಾಣಿಗೂ ಗೊತ್ತು! ಚಿಕ್ಕಣ್ಣ ಛತ್ತೀಸಗಡದಲ್ಲೂ ವಲ್‌ರ್‍್ಡ ಫೇಮಸ್ಸು!

ಇದೆಲ್ಲ ಹೇಗಾಯಿತು ಅಂತ ಕೇಳಿದರೆ ಉತ್ತರ ಸಿಗುವುದು ಕಷ್ಟ. ಒಂದು ವಿಚಿತ್ರವಾದ ವಿದ್ಯಮಾನವೊಂದು ಯಾರಿಗೂ ಗೊತ್ತಿಲ್ಲದ ಹಾಗೆ ಮನರಂಜನಾ ಕ್ಷೇತ್ರದಲ್ಲಿ ನಡೆಯುತ್ತಿದೆ. ಹಾಗಾಗುತ್ತಿರುವುದು ಒಳ್ಳೆಯದಕ್ಕೋ ಕೆಟ್ಟದಕ್ಕೋ ಅಂತ ಕೇಳಿದರೆ ನಡೆಯುವಷ್ಟುದಿನ ನಡೀಲಿ, ಆಮೇಲೆ ನೋಡಿಕೊಳ್ಳೋಣ ಅಂತ ಹಿರಿಯ ನಿರ್ಮಾಪಕರೊಬ್ಬರು ಬಾಯಿ ಮುಚ್ಚಿಸುತ್ತಾರೆ.

ಏನಾಗುತ್ತಿದೆ ಅಂತಲೇ ಗೊತ್ತಾಗುತ್ತಿಲ್ಲ. ಸಣ್ಣ ಸಣ್ಣ ಸಿನಿಮಾಗಳಿಗೂ ಐವತ್ತು ಲಕ್ಷದ ಪ್ಯಾಕೇಜ್‌ ಕೊಡಿ ಅಂತ ಸಂಗೀತ ನಿರ್ದೇಶಕರು ಕೇಳುತ್ತಿದ್ದಾರೆ. ಅದರ ಹಕ್ಕುಗಳನ್ನು ಮತ್ಯಾರೋ ಕೊಳ್ಳುತ್ತಿದ್ದಾರೆ. ಅದು ಎಲ್ಲಿ ಮಾರಾಟವಾಗುತ್ತದೆ, ಯಾರು ಅದರ ಹಕ್ಕುಗಳನ್ನು ಕೊಂಡುಕೊಳ್ಳುತ್ತಾರೆ ಅಂತ ನನಗೂ ಗೊತ್ತಿಲ್ಲ. ಕೋಟಿ ಕೋಟಿ ಕೊಟ್ಟು ಕನ್ನಡದ ಸೂಪರ್‌ ಹಿಟ್‌ ಸಿನಿಮಾಗಳ ಹಾಡುಗಳ ಹಕ್ಕುಗಳನ್ನು ಕೊಂಡುಕೊಳ್ಳುವ ಮಂದಿ ಮುಂದೇನು ಮಾಡುತ್ತಾರೆ. ಅವರು ಕೊಟ್ಟದುಡ್ಡು ಹೇಗೆ ವಾಪಸ್ಸು ಬರುತ್ತದೆ. ಈಗಂತೂ ಮಾರುಕಟ್ಟೆಯಲ್ಲಿ ಕೆಸೆಟ್ಟಾಗಲೀ, ಆಡಿಯೋ ಸೀಡಿಯಾಗಲೀ ಮಾರಾಟವೇ ಆಗುವುದಿಲ್ಲ. ಹಾಗಿದ್ದರೂ ಈ ದಂಧೆ ಹೇಗೆ ನಡೆಯುತ್ತಿದೆ.

ಬಡತನದಿಂದ ಬಂದ ಸರಿಗಮಪ ಹುಡುಗ ಕರುನಾಡಿನ ಮನೆಮಾತಾದ ಕಥೆ!

ಹಿರಿಯ ನಟ ಭಾರ್ಗವ ಅಚ್ಚರಿಯಿಂದ ಪ್ರಶ್ನಿಸುತ್ತಾ ಕೂತಿದ್ದರು. ಅವರೊಬ್ಬರಿಗೇ ಅಲ್ಲ, ಅನೇಕರಿಗೆ ಈಗೇನಾಗುತ್ತಿದೆ ಎಂಬ ಅರಿವಿಲ್ಲ. ವಾರಕ್ಕೆ ಐದಾರು ಸಿನಿಮಾಗಳು ಬರುತ್ತಿವೆ. ಅವಕ್ಕೆ ಬಣ ಹೂಡುವವರು ಯಾರು? ವರ್ಷಕ್ಕೆ 230 ಸಿನಿಮಾಗಳು ಸೋಲುತ್ತವಲ್ಲ, ಆ ನಷ್ಟಯಾರು ಭರಿಸುತ್ತಾರೆ? ಹೊಸಬರು ಒಂದೇ ಒಂದು ಸಿನಿಮಾದಲ್ಲಿ ನಟಿಸಿದ ನಂತರ ಕಣ್ಮರೆಯಾಗುತ್ತಾರಲ್ಲ, ಅವರೆಲ್ಲ ಎಲ್ಲಿಗೆ ಹೋಗುತ್ತಾರೆ? 240 ಸಿನಿಮಾಗಳಿಗೋಸ್ಕರ ರೆಕಾರ್ಡ್‌ ಮಾಡಿದ ಸುಮಾರು ಒಂದು ಸಾವಿರ ಹಾಡುಗಳ ಗತಿ ಏನಾಗುತ್ತದೆ? ಕಳೆದ ವರ್ಷ ಬಂದ ಹಾಡುಗಳ ಪೈಕಿ ಹತ್ತಕ್ಕಿಂತ ಹೆಚ್ಚು ಯಾರಿಗೂ ನೆನಪೇ ಇಲ್ಲ. ಇಪ್ಪತ್ತಕ್ಕಿಂತ ಹೆಚ್ಚು ಯಾರೂ ಕೇಳೇ ಇಲ್ಲ. ಅಂದ ಮೇಲೆ ಆ ಹಾಡಿಗೆ ಯಾರು ಹಣ ಹೂಡುತ್ತಾರೆ?

ಇನ್ನೊಂದು ಅಚ್ಚರಿಗೊಳಿಸುವ ವಿದ್ಯಮಾನವೂ ಇಲ್ಲಿ ನಡೆಯುತ್ತಿದೆ. ಯಾವುದೇ ಟೀಸರ್‌ ಆಗಲೀ, ಟ್ರೈಲರ್‌ ಆಗಲೀ ಬಿಡುಗಡೆಯಾಗಿ ಒಂದು ಗಂಟೆಯಾಗುತ್ತಿದ್ದಂತೆ ಲಕ್ಷಾಂತರ ಮಂದಿಯ ವೀಕ್ಷಣೆ ಪಡೆದು ವೈರಲ್‌ ಆಗುತ್ತದೆ. ಸಿನಿಮಾ ಗೆಲ್ಲುತ್ತದೋ ಇಲ್ಲವೋ ಟೀಸರ್‌ ಅಂತೂ ಗೆಲ್ಲುವುದು ಖಾತ್ರಿ. ಅದನ್ನು ಗೆಲ್ಲಿಸಲಿಕ್ಕೆಂದೇ ಮಂದಿಯಿದ್ದಾರೆ. ಆದರೆ ಬಂದಿರುವ ನಂಬರುಗಳೆಲ್ಲ ಆರ್ಗಾ್ಯನಿಕ್‌ ನಂಬರ್‌ ಎಂದೇ ನಂಬಲಾಗುತ್ತದೆ. ಅಥವಾ ನಂಬಿಸಲಾಗುತ್ತದೆ.

 

ಈ ಡಿಜಿಟಲ್‌ ಸಕ್ಸೆಸ್‌ ಎಂಬುದು ಅಂತಿಮವಾಗಿ ಏನು ಮಾಡಿದೆ ಎಂದು ನೋಡಿದರೆ ಆಶ್ಚರ್ಯವಾಗುತ್ತದೆ. ಕನ್ನಡಕ್ಕೆ ಬೇರೆ ಸಿನಿಮಾಗಳು ಡಬ್‌ ಆದರೆ ನೋಡುವವರಿಲ್ಲ ಎಂದು ನಂಬಲಾಗುತ್ತಿತ್ತು. ಈಗ ಪರಭಾಷೆಯ ಚಿತ್ರಗಳು ಕನ್ನಡಕ್ಕೆ ಬರುತ್ತಿವೆ. ಆ ಚಿತ್ರಗಳಲ್ಲಿ ಕನ್ನಡದ ನಟರಿರುತ್ತಾರೆ. ಹೀಗಾಗಿ ಅವು ಕನ್ನಡ ಸಿನಿಮಾಗಳ ಹಾಗೆಯೇ ಸ್ವಾಗತ ಪಡೆದುಕೊಳ್ಳುತ್ತವೆ. ಅಷ್ಟೇ ದೊಡ್ಡ ಓಪನಿಂಗ್‌ ಸಿಗುತ್ತದೆ. ಆದರೆ ಸಿನಿಮಾಗಳು ಕನ್ನಡದ ಸಿನಿಮಾಗಳಿಗಿಂತ ಹತ್ತು ಪಟ್ಟು ಬಜೆಟ್ಟಿನಲ್ಲಿ ತಯಾರಾಗುತ್ತವೆ. ಇದರಿಂದ ಕನ್ನಡಕ್ಕೇನಾದರೂ ಕುತ್ತು ಇದೆಯೇ ಎಂದು ಕೇಳಿದರೆ, ಯಾರೂ ಉತ್ತರಿಸುವುದಿಲ್ಲ. ಈ ಸಲ ಮಾತ್ರ ಗೀತಾ ಚಿತ್ರದ ನಾಯಕ ಗಣೇಶ್‌ ಪರಭಾಷಾ ಚಿತ್ರಗಳ ವಿರುದ್ಧ ಗುಡುಗಿದ್ದಾರೆ. ಯಾಕೆಂದರೆ ಅವರ ಸಿನಿಮಾ ಬಂದ ಮಾರನೇ ವಾರವೇ ಎರಡು ದೊಡ್ಡ ಸಿನಿಮಾಗಳು ಬರುತ್ತಿವೆ.

ಇನ್ನು ಮುಂದೆ ಕೇವಲ ಸ್ಟಾರುಗಳ ಸಿನಿಮಾ ಮಾತ್ರ ಓಡುತ್ತವೆ. ಸಣ್ಣಪುಟ್ಟಸಿನಿಮಾಗಳು ಇಲ್ಲಿ ನಿಲ್ಲುವುದು ಕಷ್ಟ. ಒಂದು ಸಿನಿಮಾ ಎಲ್ಲರನ್ನೂ ತಲುಪಬೇಕಿದ್ದರೆ ಹಿಂದೆಲ್ಲ ಒಂದೋ ಎರಡೋ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟರೆ ಸಾಕಿತ್ತು. ಈ ಡಿಜಿಟಲ್‌ ಮಾಧ್ಯಮ, ಟೀವಿಗಳು ಇಲ್ಲದ ಕಾಲದಲ್ಲಿ ರಾಜ್‌ಕುಮಾರ್‌ ಸಿನಿಮಾ ಬಂದರೆ ಇಡೀ ಕರ್ನಾಟಕಕ್ಕೇ ಗೊತ್ತಾಗುತ್ತಿತ್ತು. ಸಂಸ್ಕಾರದಂಥ ಪುಟ್ಟಸಿನಿಮಾ ಬಂದಾಗಲೂ ಗೊತ್ತಾಗುತ್ತಿತ್ತು. ಈಗ ಎಲ್ಲ ಕಡೆಗೂ ಸುದ್ದಿ ಹೋಗುತ್ತದೆ. ಆದರೆ ಎಲ್ಲರಿಗೂ ಗೊತ್ತಾಗುತ್ತದೆ ಎಂಬುದು ಖಾತ್ರಿಯಿಲ್ಲ. ಅಲ್ಲದೇ, ಒಂದು ಸಿನಿಮಾದ ಬಜೆಟ್ಟಿನ ಅರ್ಧದಷ್ಟನ್ನು ಸಣ್ಣ ಸಿನಿಮಾಗಳು ಪ್ರಚಾರಕ್ಕೆ ಖರ್ಚು ಮಾಡಬೇಕಾಗಿದೆ. ಅದು ಅವುಗಳಿಗೆ ಸಾಧ್ಯವಿಲ್ಲ. ಹೀಗಾಗಿ ಮುಂಬರುವ ದಿನಗಳಲ್ಲಿ ಕನ್ನಡ ಚಿತ್ರೋದ್ಯಮ ಎಂಬ ಸ್ವಂತ ಐಡೆಂಟಿಟಿ ಉಳಿಯುವುದು ಕಷ್ಟವಲ್ಲವೇ ಎಂದು ಕೇಳುತ್ತಾರೆ ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿರುವ ಒಬ್ಬ ನಿರ್ದೇಶಕರು.

ಅವರ ಮಾತಲ್ಲಿ ಸತ್ಯಾಂಶ ಇದೆಯಲ್ಲವೇ!

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಅಪಘಾತದಲ್ಲಿ ಪ್ರತಿಭಾವಂತ ಮಗಳು ನಿಧನ; ಜಾತಕದಲ್ಲಿ ಏನಿತ್ತು? Nanda Gokula Serial ನಟಿ ಮಾತು
ಅಲ್ಲು ಅರ್ಜುನ್‌ ಸಿನಿಮಾವನ್ನು ಕಸದ ಬುಟ್ಟಿಗೆ ಹಾಕ್ರೀ...; ಮಗನ ಸಿನಿಮಾ ಬಗ್ಗೆ ಅಲ್ಲು ಅರವಿಂದ್‌ ಇಂಥ ಮಾತು.. ಛೇ