ನೆಟ್‌ಫ್ಲಿಕ್ಸ್‌ನಲ್ಲಿ ಬರಲಿದೆ ಬಿಕಿನಿ ಕಿಲ್ಲರ್‌ ಶೋಭರಾಜ್ ಜೀವನದ ಕತೆ!

By Suvarna NewsFirst Published Jan 17, 2020, 3:51 PM IST
Highlights

ಆಕರ್ಷಕ, ಭಯಾನಕ ವ್ಯಕ್ತಿತ್ವದ ಸೀರಿಯಲ್ ಕಿಲ್ಲರ್‌ ಚಾರ್ಲ್ಸ್ ಶೋಭರಾಜ್ ಬಗ್ಗೆ ಬರ್ತಾ ಇದೆ ಹೊಸ ಸೀರಿಯಲ್. ಸದ್ಯವೇ ಬಿಬಿಸಿ ಹಾಗೂ ನೆಟ್‌ಫ್ಲಿಕ್ಸ್‌ನಲ್ಲಿ ನೀವಿದನ್ನು ನೋಡಬಹುದು.

ಅವನ ಹೆಸರು ಚಾರ್ಲ್ಸ್ ಶೋಭರಾಜ್. ಮೋಡಿಗಾರ. ಸೊಗಸುಗಾರ. ಎಂಥ ಚೆಲುವ ಎಂದರೆ, ಜೊತೆಗೆ ಮಾತನಾಡಿದ ಹುಡುಗಿ ಹಾಗೇ ಅವನ ಹಿಂದೆ ಎದ್ದು ಹೋಗಿ ಬಿಡಬೇಕು. ಅಷ್ಟೊಂದು ಅಯಸ್ಕಾಂತದ ಸೆಳೆತ. ಕನ್ನಡಕದ ಮರೆಯಲ್ಲಿ ಫಳಫಳ ಹೊಳೆಯುವ, ಎದುರಿಗಿರುವವರ ಸರ್ವಸ್ವವನ್ನೂ ಅಳೆಯುವ ಕಣ್ಣುಗಳು, ಇಂಥವನು ಮೂರು ಖಂಡಗಳ ಪೊಲೀಸರಿಗೆ ಬೇಕಾಗಿದ್ದ. ಭಾರತದಲ್ಲಿ ಈತನನ್ನು ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಹುಡುಕುತ್ತಿದ್ದರು. ಇಂಟರ್‌ಪೋಲ್‌ ಇವನ ಪತ್ತೆಗಾಗಿ ಕೆಂಪು ಅಂಚಿನ ನೋಟೀಸ್‌ ಹೊರಡಿಸಿತ್ತು.

ಇವನು ಮಾಡಿದ ಅಪರಾಧ ಘೋರ- ಭಾರತಕ್ಕೆ ಬರುತ್ತಿದ್ದ ವಿದೇಶಿ ಹುಡುಗಿಯರನ್ನು ಆಕರ್ಷಿಸಿ, ಪಟಾಯಿಸಿ, ಮನಸೋ ಇಚ್ಛೆ ಅನುಭವಿಸಿ ನಂತರ ಕೊಂದು ಹಾಕುತ್ತಿದ್ದ! ಎರಡು ದಶಕಗಳ ಅವಧಿಯಲ್ಲಿ ಆತ ಹೀಗೆ ಕೊಂದು ಹಾಕಿದ ಪ್ರವಾಸಿಗಳ ಸಂಖ್ಯೆ ಸುಮಾರು 30. ಇದು ಅಧಿಕೃತ. ಅನಧಿಕೃತ ಎಷ್ಟೋ ಗೊತ್ತಿಲ್ಲ.

ಕಿಚ್ಚ ಚಿತ್ರದಲ್ಲಿ ಚಾನ್ಸ್ ಕೊಡಿಸುವುದಾಗಿ ಹೇಳಿ ರೇಪ್

1970ರ ದಶಕದಲ್ಲಿ ಭಾರತದ ಎಲ್ಲ ಕಡೆ ಹಿಪ್ಪಿಗಳದೇ ಹಾವಳಿ, ನಮ್ಮ ದೇಶದ ಮುಂಬಯಿ, ಗೋವಾ, ಗೋಕರ್ಣ, ಚೆನ್ನೈ ಹೀಗೆ ಎಲ್ಲ ಬೀಚುಗಳಲ್ಲಿ, ಹಸಿರು ಯಾತ್ರಾ ತಾಣಗಳಲ್ಲಿ ವಿದೇಶಗಳಿಂದ ಬಂದ ಹಿಪ್ಪಿಗಳೇ ತುಂಬಿರುತ್ತಿದ್ದರು. ಹಿಪ್ಪಿಗಳದೊಂದು ಮಜಾ ಉಡಾಯಿಸುವ ಜೀವನ ಶೈಲಿ. ಕೈತುಂಬ ಹಣ ಇಟ್ಟುಕೊಂಡು ಭಾರತಕ್ಕೆ ಬರುತ್ತಿದ್ದ ಅವರಿಗೆ ಜೀವನದಲ್ಲಿ ಇಂಥದೇ ಬಾಂಡಿಂಗ್ ಅಂತ ಇರುತ್ತಿರಲಿಲ್ಲ. ಕುಡಿಯುತ್ತಿದ್ದರು, ಗಾಂಜಾ ಸೇದುತ್ತಿದ್ದರು, ಅಮಲು ವ್ಯಸನ ಸಾಮಾನ್ಯವಾಗಿತ್ತು. ತಮ್ಮ ತಮ್ಮಲ್ಲೇ ಒಬ್ಬ ಸಂಗಾತಿಯನ್ನು ಹುಡುಕಿಕೊಂಡು ಸುಖ ಅನುಭವಿಸುತ್ತಿದ್ದರು, ಅವರು ಬೋರ್‌ ಆದಾಗ, ಬೇರೊಬ್ಬರನ್ನು ಹುಡುಕಿಕೊಳ್ಳುತ್ತಿದ್ದರು. ಭಾರತ, ನೇಪಾಳ ಹಾಗೂ ಥಾಯ್ಲೆಂಡ್‌ಗಳು ಇವರ ಸಾಮಾನ್ಯ ಅಡ್ಡೆಗಳಾಗಿದ್ದವು. ಇಂಥ ಸಂದರ್ಭದಲ್ಲಿ ಇವರ ನಡುವೆ ಭೂತವಾಗಿ ಹೊಮ್ಮಿದವನು ಚಾರ್ಲ್ಸ್‌ ಶೋಭರಾಜ್.

ಭಾರತೀಯ ಸಿಂಧಿ ಮೂಲದ ಒಬ್ಬ ಬ್ಯುಸಿನೆಸ್‌ಮ್ಯಾನ್‌ ಹಾಗೂ ವಿಯೆಟ್ನಾಮಿ ಪ್ರೇಯಸಿಯಲ್ಲಿ ಹುಟ್ಟಿಕೊಂಡವನು ಈ ಶೋಭರಾಜ್‌. ಹುಟ್ಟಿದ್ದು ಫ್ರಾನ್ಸಿನಲ್ಲಿ. ಬೆಳೆದದ್ದು ವಿಯೆಟ್ನಾಮ್‌, ಇಂಡೋನೇಷ್ಯಾ, ಭಾರತ ಇತ್ಯಾದಿ ಕಡೆ. ತಂದೆಯ ಮರಣದ ಬಳಿಕ ಈತನ ತಾಯಿ ಇನ್ನೊಂದು ಮದುವೆಯಾದಳು. ಮಲತಂದೆ ಈತನಿಗೆ ಹಿಂಸೆ ನೀಡಿದ, ಈತ ಬೀದಿಯಲ್ಲಿ ಬೆಳೆದ. ಬಹುಶಃ ಆಗಲೇ ಆತ ಸೈಕೋಪಾತ್‌ ಗುಣಗಳನ್ನು ರೂಢಿಸಿಕೊಂಡಿರಬೇಕು. ಆಗಲೇ ಕಳ್ಳತನ, ದರೋಡೆ ಇತ್ಯಾದಿಗಳನ್ನು ಮಾಡಿ ಜೈಲುಪಾಲಾಗಿದ್ದ. ಬಳಿಕ ಭಾರತಕ್ಕೆ ಬಂದು, ಇಲ್ಲಿ ಓಡಾಡುತ್ತಿದ್ದ ಹಿಪ್ಪಿಗಳನ್ನು ಆಕರ್ಷಕ ಮಾತುಗಾರಿಕೆಯಿಂದ ಒಲಿಸಿಕೊಂಡು, ಅವರನ್ನು ಕೊಲೆ ಮಾಡಿ ದೋಚುತ್ತಿದ್ದ. ಇದರಲ್ಲಿ ಆತನ ಪತ್ನಿಯೂ ಜೊತೆಗಾತಿಯಾಗಿದ್ದಳು.

ಸಾಲ ಕೊಟ್ಟು ಕ್ಲೋಸ್ ಆದ ನಾಟಕವಾಡೋ ರಸಿಕ ಅಂಕಲ್!

ಈತ ಕೊಲೆ ಮಾಡುತ್ತಿದ್ದ ರೀತಿಯೂ ವಿಶೇಷವಾಗಿತ್ತು. ಕೊಲೆಯಾಗಲಿರುವವರನ್ನು ಏಕಾಂತದ ಜಾಗಕ್ಕೆ ಕರೆಒದಯ್ದು, ಅವರಿಗೆ ಡ್ರಗ್ಸ್‌ ನೀಡಿ ಮತ್ತು ಬರಿಸುತ್ತಿದ್ದ. ನಂತರ ನೀರಿನಲ್ಲಿ ಮುಳುಗಿಸಿ ಉಸಿರುಗಟ್ಟಿಸಿ ಅಥವಾ ಕೈಕಾಲು ಕಟ್ಟಿ ಬೆಂಕಿ ಹಚ್ಚಿ ಕೊಲ್ಲುತ್ತಿದ್ದ. ಹೀಗೆ ಸತ್ತವರ ಪಾಸ್‌ಪೋರ್ಟ್‌, ವೀಸಾ ಇತ್ಯಾದಿ ಅಪಹರಿಸಿ ಅವರದೇ ಹೆಸರಿನಲ್ಲಿ ಸಂಚರಿಸುತ್ತಿದ್ದ. ಈತನಿಂದ ಕೊಲೆಯಾದ ಬಹುತೇಕ ಸ್ತ್ರೀಯರು ಬಿಕಿನಿಯಲ್ಲಿದ್ದರು. ಹೀಗಾಗಿ ಇವನಿಗೆ ಬಿಕಿನಿ ಕಿಲ್ಲರ್‌ ಎಂಬ ಕುಖ್ಯಾತಿ ಅಂಟಿಕೊಂಡಿತು. ದಿ ಸರ್ಪೆಂಟ್‌ ಅಂತಲೂ ಕರೆಯುತ್ತಿದ್ದರು. ಹತ್ತಾರು ಬಾರಿ ಸಿಕ್ಕಿಬಿದ್ದ. ಅಷ್ಟೇ ಬಾರಿ ಪರಾರಿಯಾದ. ಹೀಗಾಗಿ ಇವನನ್ನು ಎಸ್ಕೇಪ್‌ ಸ್ಪೆಶಲಿಸ್ಟ್‌ ಅಂತಲೂ ಕರೆಯುತ್ತಿದ್ದರು.

ಈತ ಹೀಗೆ ಕೊಲೆ ಮಾಡಲು ಕಾರಣವೇನು? ಪಾಶ್ಚಾತ್ಯ ಸಂಸ್ಕೃತಿ ನನಗೆ ಇಷ್ಟವಾಗುವುದಿಲ್ಲ ಎಂದು ಸುಳ್ಳು ಸುಳ್ಳೇ ಹೇಳುತ್ತಾನೆ. ದೋಚುವುದೇ ಆತನ ಮುಖ್ಯ ಕಾಯಕ. ಹಾಗೆ ದೋಚಿದ್ದನ್ನು ಜೀಜಾಡಿ ಕಳೆಯುತ್ತಿದ್ದ. ಆದೆ ಫ್ರಾನ್ಸ್, ಭಾರತ, ಇಂಡೋನೇಷ್ಯಾ ಮುಂತಾದ ಕಡೆ ದೊಡ್ಡ ದೊಡ್ಡವರ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ . ಪ್ರಭಾವ ಬಳಸುತ್ತಿದ್ದ. ಈಗ ನೇಪಾಳದ ಜೈಲಿನಲ್ಲಿದ್ದಾನೆ. ಅಲ್ಲಿಂದಲೇ ಮೀಡಿಯಾಗಳಿಗೆ ಇಂಟರ್‌ವ್ಯೂ ಕೊಡುತ್ತಾನೆ. ಆತನ ಜೀವನಕತೆ ಆಧರಿಸಿ ಐದಾರು ಸಿನೆಮಾಗಳು ಬಂದಿವೆ. ಇದಕ್ಕೆಲ್ಲ ಆತ ದೊಡ್ಡಮೊತ್ತದ ರಾಯಲ್ಟಿ ವಸೂಲಿ ಮಾಡಿದ್ದಾನೆ. ಜೈಲಿನಲ್ಲಿದ್ದರೂ ಬಿಂದಾಸ್‌ ಆಗಿ ಬದುಕುತ್ತಿದ್ದಾನೆ.

ಇನ್ನೂ ಇಬ್ಬರು ಮಕ್ಕಳ ಹತ್ಯೆಗೆ ಕೇರಳ ಸೈನೈಡ್‌ ಸೊಸೆ ಸಂಚು!...

ಇಂಥ ಆಕರ್ಷಕ, ಭಯಾನಕ ವ್ಯಕ್ತಿತ್ವದವನ ಬಗ್ಗೆ ಬರುತ್ತಿರುವ ಈ ಸೀರೀಸ್‌ನಲ್ಲಿ ಎನಿಗ್ಮಾಟಿಕ್, ಚರಿಷ್ಮಾಟಿಕ್‌ ಸೀರಿಯಲ್‌ ಕಿಲ್ಲರ್‌ ಆಗಿ ತಹಾರ್‌ ರಹೀಮ್‌ ನ್ಯಾಚುರಲ್‌ ಆಗಿ ನಟಿಸಿದ್ದಾನೆ. ಆತನ ಪ್ರೇಯಸಿ, ಆತನ ಕೊಲೆಗಳಲ್ಲಿ ಪಾಲುಗಾರ್ತಿಯಾದ ಹಾಟ್‌ ಹಾಟ್‌ ಸುಂದರಿಯಾಗಿ ಜೆನ್ನಾ ಕೋಲ್‌ಮನ್‌ ಅಭಿನಯಿಸಿದ್ದಾಳೆ. ಎಂಟು ಭಾಗಗಳಲ್ಲಿ ಬರಲಿರುವ ಈ ಸೀರೀಸ್‌ ಈಗಲೇ ಕುತೂಹಲ ಕೆರಳಿಸಿದೆ.

click me!