Mandya Crime: ಮೋಹನ್‌ ಹತ್ಯೆ ಕೇಸ್‌: ನಾಗಮಂಗಲದಲ್ಲಿ ಪ್ರಕ್ಷುಬ್ಧ ವಾತಾವರಣ

By Girish GoudarFirst Published May 22, 2022, 12:55 PM IST
Highlights

*  ಕ್ರಷರ್‌ ನಡೆಸುತ್ತಿದ್ದ ಪ್ರದೇಶದ ಮೇಲೆ ಗ್ರಾಮಸ್ಥರ ದಾಳಿ
*  ಸ್ಥಳಾಂತರಿಸುತ್ತಿದ್ದ ಯಂತ್ರೋಪಕರಣಗಳಿಗೆ ಅಡ್ಡಿ
*  ಪೊಲೀಸರ ವಿರುದ್ಧ ಭುಗಿಲೆದ್ದ ಜನರ ಆಕ್ರೋಶ
 

ನಾಗಮಂಗಲ(ಮೇ.22):  ಅಪಹರಣವಾಗಿದ್ದ ಮೋಹನ್‌ ಹೊಳೆನರಸೀಪುರದಲ್ಲಿ ಹತ್ಯೆಯಾದ ಬಳಿಕ ತಾಲೂಕಿನ ನರಗಲು ಗ್ರಾಮ ಉದ್ರಿಕ್ತಗೊಂಡಿದೆ. ಗಣಿ ಪ್ರದೇಶದ ಮೇಲೆ ದಾಳಿ ನಡೆಸಿರುವ ಗ್ರಾಮಸ್ಥರು ಗಣಿ ಪ್ರದೇಶದಿಂದ ಸಾಗಿಸುತ್ತಿದ್ದ ಯಂತ್ರೋಪಕರಣಗಳಿಗೆ ಅಡ್ಡಿಪಡಿಸಿ ವಾಹನಗಳ ಗಾಳಿ ತೆಗೆದಿದ್ದಾರೆ.

ಮೋಹನ್‌ ಹತ್ಯೆಯಿಂದ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ನೆಲೆಸಿದ್ದು, ಹತ್ಯೆ ಆರೋಪಿಯ ಗಣಿ ಪ್ರದೇಶ, ಮನೆಗೆ ಬಿಗಿ ಭದ್ರತೆ ಒದಗಿಸಿದ್ದು, ಅಕ್ರಮ ಗಣಿ ಪ್ರದೇಶ ಸೇರಿದಂತೆ ಗ್ರಾಮಾದ್ಯಂತ ಪೊಲೀಸರ ಸರ್ಪಗಾವಲು ಹಾಕಲಾಗಿದೆ. ಮೋಹನ್‌ ಹತ್ಯೆ ವಿರುದ್ಧ ಗ್ರಾಮಸ್ಥರು ರೊಚ್ಚಿಗೆದ್ದಿರುವುದರಿಂದ ಜಿಲ್ಲೆಯ ವಿವಿಧೆಡೆಯಿಂದ ಪೊಲೀಸರನ್ನು ಸ್ಥಳಕ್ಕೆ ಕರೆಸಿಕೊಳ್ಳಲಾಗಿದೆ. ಹೆಚ್ಚುವರಿಯಾಗಿ ಕೆಎಸ್‌ಆರ್‌ಪಿ, ಡಿಎಆರ್‌ ತುಕಡಿಗಳನ್ನು ನಿಯೋಜಿಸಲಾಗಿದೆ.
ಶಾಸಕ ಸುರೇಶ್‌ಗೌಡ ಭೇಟಿ, ಪರಿಶೀಲನೆ:

Latest Videos

ಸಿನಿಮೀಯ ರೀತಿಯಲ್ಲಿ ದರೋಡೆ, ಸಹಾಯ ಕೇಳುವ ನೆಪದಲ್ಲಿ ಬಂದವರಿಂದ ಕೃತ್ಯ

ಶನಿವಾರ ಬೆಳಗ್ಗೆಯೇ ಸ್ಥಳಕ್ಕೆ ಶಾಸಕ ಕೆ.ಸುರೇಶ್‌ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗ್ರಾಮಸ್ಥರಿಂದ ಮಾಹಿತಿ ಪಡೆದುಕೊಂಡರಲ್ಲದೆ ಆರೋಪಿ ಕುಮಾರ್‌ಗೆ ಸಂಬಂಧಿಸಿದ ಜಮೀನು, ಗಣಿಗಾರಿಕೆ ನಡೆಸುತ್ತಿದ್ದ ಸ್ಥಳ, ಯಂತ್ರೋಪಕರಣಗಳ ವೀಕ್ಷಣೆ ನಡೆಸಿದರು. ಇದೇ ವೇಳೆ ಮೋಹನ್‌ ಹತ್ಯೆಗೆ ಕಾರಣರಾದ ಗಣಿ ಮಾಲೀಕನ ಸಹಾಯಕ್ಕೆ ಪೊಲೀಸರ ಯತ್ನಿಸಿದ್ದಾರೆ ಎಂದು ಆರೋಪಿಸಿದರು. ಅಕ್ರಮ ಗಣಿ ಪ್ರದೇಶದಿಂದ ವಾಹನಗಳಲ್ಲಿ ಸ್ಥಳಾಂತರಿಸುತ್ತಿದ್ದ ಯಂತ್ರೋಪಕರಣಗಳಿಗೆ ಅಡ್ಡಿಪಡಿಸಿದರಲ್ಲದೆ, ಶಾಸಕ ಸುರೇಶ್‌ ಗೌಡರ ನೇತೃತ್ವದಲ್ಲಿ ವಾಹನಗಳ ಚಕ್ರದ ಗಾಳಿ ತೆಗೆದ ಗ್ರಾಮಸ್ಥರು ಸ್ಥಳಾಂತರಕ್ಕೆ ಬ್ರೇಕ್‌ ಹಾಕಿದರು.

ಮೇ. 15ರಿಂದ ನಿಗೂಢವಾಗಿ ನಾಪತ್ತೆಯಾಗಿದ್ದ ನರಗಲು ಮೋಹನ್‌ನನ್ನು ಗಣಿ ಮಾಲಿಕನ ಜೊತೆ ಸೇರಿ ಆತನ ಸಂಬಂಧಿಕರೇ ಕೊಲೆ ಮಾಡಿರುವ ವಿಷಯ ತಿಳಿದು ಗ್ರಾಮಸ್ಥರು ರೊಚ್ಚಿಗೆದ್ದಿದ್ದರು. ಅಪಹರಣದ ವಿಷಯ ಗೊತ್ತಿದ್ದರೂ ತನಿಖೆಗೆ ಪೊಲೀಸರು ತೋರಿಸಿದ ವಿಳಂಬ, ದೂರು ದಾಖಲಿಸಿಕೊಳ್ಳಲು ವಹಿಸಿದ ನಿರ್ಲಕ್ಷ್ಯದ ವಿರುದ್ಧ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಕೊಲೆಗಾರರಿಗೆ, ಅಕ್ರಮ ಗಣಿಗಾರಿಕೆಗೆ ಬೆಂಬಲವಾಗಿ ನಿಂತಿರುವ ಪೊಲೀಸರು ಅಮಾಯಕರ ಸಾವಿಗೆ ಕಾರಣರಾಗಿದ್ದಾರೆ ಎಂದು ಪೊಲೀಸರ ವಿರುದ್ಧವೇ ಆರೋಪಗಳ ಸುರಿಮಳೆಗರೆದರು. ಇದರ ನಡುವೆ ಶಾಸಕ ಕೆ.ಸುರೇಶ್‌ಗೌಡ ಅವರು ಗ್ರಾಮಸ್ಥರನ್ನು ಸಮಾಧಾನಪಡಿಸಿ ಗಲಾಟೆಗೆ ಅವಕಾಶ ಮಾಡಿಕೊಡಬೇಡಿ. ಶಾಂತಿ-ಸಮಾಧಾನ, ಸಂಯಮದಿಂದ ವರ್ತಿಸುವಂತೆ ತಿಳಿಸಿದರು. ಆದರೂ, ಗ್ರಾಮಸ್ಥರು ಪೊಲೀಸರ ವಿರುದ್ಧ ತಮ್ಮ ಆಕ್ರೋಶ ಮುಂದುವರಿಸಿದ್ದರು.

ಆರೋಪಿಗಳ ಕೈಬಿಡುವಂತೆ ಪೊಲೀಸರ ಒತ್ತಡ

ಶುಕ್ರವಾರ ತಡರಾತ್ರಿ ನರಗಲು ಗ್ರಾಮಕ್ಕೆ ಜಿಲ್ಲಾ ಪೊಲೀಸ್‌ ಅಧೀಕ್ಷಕ ಎನ್‌.ಯತೀಶ್‌ ಭೇಟಿ ನೀಡಿ ಬಿಂಡಿಗನವಿಲೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ಸಂಬಂಧ ಮಾಹಿತಿ ಸಂಗ್ರಹಿಸಿದರು. ಕುಟುಂಬಸ್ಥರು ಕೊಟ್ಟಿರುವ ದೂರು, ಪೊಲೀಸರು ಕೈಗೊಂಡ ಕ್ರಮದ ಬಗ್ಗೆ ಪರಿಶೀಲನೆ ನಡೆಸಿದರು.

ಪಕ್ಕದ್ಮನೆ ಆಂಟಿ ಮೇಲೆ ಕಣ್ಣು, ಗಂಡನಿಗೆ ಕೆಲ್ಸ ಕೊಡಿಸಿ ಆಸೆ ತೀರಿಸಿಕೊಂಡ ಕಿರಾತಕ

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಹತ್ಯೆಯಾದ ಮೋಹನ್‌ ನಿವಾಸಕ್ಕೆ ಭೇಟಿ ನೀಡಿದ ವೇಳೆ ಕುಟುಂಬಸ್ಥರು ಪೊಲೀಸರ ವಿರುದ್ಧ ಆರೋಪಗಳ ಸುರಿಮಳೆಗರೆದರು. ಮೋಹನ್‌ ಅಪಹರಣದ ಬಗ್ಗೆ ದೂರು ಕೊಟ್ಟರೆ ಅದನ್ನು ದಾಖಲಿಸಿಕೊಳ್ಳದೆ ಕೇವಲ ನಾಪತ್ತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳುವುದಕ್ಕೆ ವಿಳಂಬ ಮಾಡಿದರು. ಅಪಹರಣದ ಬಗ್ಗೆ ಸಿಸಿಟಿವಿ ಸಾಕ್ಷ್ಯ ಕೊಟ್ಟರೂ ತನಿಖೆಗೆ ಮೀನಮೇಷ ಎಣಿಸಿದರು. ಆರೋಪಿಗಳ ಹೆಸರು ಕೈ ಬಿಡುವಂತೆ ಪೊಲೀಸರೇ ನಮ್ಮ ಮೇಲೆ ಒತ್ತಡ ಹಾಕುತ್ತಿದ್ದಾರೆ. ಆರೋಪಿಗಳನ್ನು ಬಂಧಿಸಿ, ಲಂಚ ಪಡೆದು ಬಿಡುಗಡೆ ಮಾಡಿದ್ದಾರೆ ಎಂದು ಆರೋಪಿಸಿದರು.

ಗ್ರಾಮಸ್ಥರು ತೀವ್ರ ಒತ್ತಡ ಹಾಕಿದ ನಂತರ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿರುವುದಾಗಿ ಜಿಲ್ಲಾ ಪೊಲೀಸ್‌ ಅಧೀಕ್ಷಕರ ಎದುರಿನಲ್ಲೇ ಪೊಲೀಸರ ಸಾಚಾತನವನ್ನು ಕುಟುಂಬಸ್ಥರು, ಗ್ರಾಮಸ್ಥರು ಬಯಲು ಮಾಡಿದರು.
 

click me!