ಮಂಚದಡಿ ಕುಳಿತು ಪತ್ನಿಯ ಪ್ರಿಯಕರನ ಹತ್ಯೆ..!

By Kannadaprabha NewsFirst Published Mar 26, 2021, 7:24 AM IST
Highlights

ಪ್ರೀತಿಸಿ ವಿವಾಹವಾದ ಪತ್ನಿಯಿಂದ ದ್ರೋಹ| ಮತ್ತೊಬ್ಬನೊಂದಿಗೆ ಅನೈತಿಕ ಸಂಬಂಧ| ಕೊಲೆಗೆ ಸಂಚು ರೂಪಿಸಿದ ಪತಿ| ಆಂದ್ರಹಳ್ಳಿಯಲ್ಲಿ ಘಟನೆ| ಅನೈತಿಕ ಸಂಬಂಧದಿಂದ ದೂರವಾಗಿದ್ದ ದಂಪತಿ| ಬಳಿಕವೂ ಪ್ರೇಮಿಯೊಂದಿಗೆ ಪತ್ನಿಯ ಒಡನಾಟ| 

ಬೆಂಗಳೂರು(ಮಾ.26): ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಂದಿಗೆ ಮಂಚದ ಮೇಲಿದ್ದಾಗಲೇ ವ್ಯಕ್ತಿಯನ್ನು ಮಹಿಳೆಯ ಪತಿ ಹತ್ಯೆ ಮಾಡಿರುವ ಘಟನೆ ಬ್ಯಾಡರಹಳ್ಳಿ ಠಾಣಾ ವ್ಯಾಪ್ತಿಯ ಅಂದ್ರಹಳ್ಳಿಯಲ್ಲಿ ಗುರುವಾರ ಬೆಳಗಿನ ಜಾವ ಸಂಭವಿಸಿದೆ.

ಚಿಕ್ಕಮಗಳೂರು ತರಿಕೆರೆ ತಾಲೂಕಿನ ಹೊಸಹಳ್ಳಿ ನಿವಾಸಿ ಶಿವಕುಮಾರ್‌ (26) ಹತ್ಯೆಯಾದ ವ್ಯಕ್ತಿ. ಕೊಲೆ ಆರೋಪಿ ನೆಲಮಂಗಲದ ನಿವಾಸಿ ಭರತ್‌ ಕುಮಾರ್‌ (31) ಎಂಬಾತನನ್ನು ಬಂಧಿಸಲಾಗಿದೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಡಾ. ಸಂಜೀವ್‌ ಪಾಟೀಲ್‌ ತಿಳಿಸಿದ್ದಾರೆ.

ಬಂಧಿತ ಆರೋಪಿ ಭರತ್‌ ಕಾರ್ಪೆಂಟರ್‌ ಆಗಿದ್ದು, ಮೂಲತಃ ನೆಲಮಂಗಲ ನಿವಾಸಿಯಾಗಿದ್ದಾನೆ. ಕಳೆದ ಎಂಟು ವರ್ಷಗಳ ಹಿಂದೆ ಭರತ್‌ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿನುತಾ ಎಂಬಾಕೆಯನ್ನು ಪ್ರೀತಿಸಿ ವಿವಾಹವಾಗಿದ್ದ. ವಿನುತಾ ಮೂಲತಃ ಚಿಕ್ಕಮಗಳೂರು ಜಿಲ್ಲೆಯವರಾಗಿದ್ದಾರೆ. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ವಿನುತಾ ಶಿವಕುಮಾರ್‌ ಜತೆ ಅನೈತಿಕ ಸಂಬಂಧ ಹೊಂದಿದ್ದಳು. ಪತ್ನಿಯನ್ನು ಹೆಚ್ಚಾಗಿ ಪ್ರೀತಿಸುತ್ತಿದ್ದ ಭರತ್‌, ಹಲವು ಬಾರಿ ಪತ್ನಿಗೆ ಬುದ್ಧಿ ಹೇಳಿದ್ದ. ಇದೇ ವಿಚಾರಕ್ಕೆ ಹಲವು ಬಾರಿ ಜಗಳ ಕೂಡ ನಡೆದಿತ್ತು. ಇಷ್ಟಾದರೂ ಅನೈತಿಕ ಸಂಬಂಧವನ್ನು ಮಹಿಳೆ ಮುಂದುವರಿಸಿದ್ದಳು. ಇದೇ ವಿಚಾರಕ್ಕೆ ದಂಪತಿ ನಡುವೆ ಜಗಳ ನಡೆದು ಆರು ತಿಂಗಳಿಂದ ಪ್ರತ್ಯೇಕವಾಗಿದ್ದರು. ಆದರೂ ಶಿವಕುಮಾರ್‌ ಆಗ್ಗಾಗ್ಗೆ ತನ್ನ ಪ್ರಿಯತಮೆಯ ಮನೆಗೆ ಬಂದು ಹೋಗುತ್ತಿದ್ದ. ವಿನುತಾ ಅಂದ್ರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಪ್ರತ್ಯೇವಾಗಿ ವಾಸವಿದ್ದಳು. ಮಕ್ಕಳು ಭರತ್‌ ಪೋಷಕರ ಸುಪರ್ದಿಯಲ್ಲಿದ್ದರು.

ಮನೆಗೆ ನುಗ್ಗಿ ರಿಯಲ್‌ ಎಸ್ಟೇಟ್‌ ಏಜೆಂಟ್‌ ಕತ್ತು ಕೊಯ್ದು ಬರ್ಬರ ಹತ್ಯೆ

ವಿನುತಾ ತನ್ನ ಕಾಲೇಜು ವ್ಯಾಸಂಗ ಸಮಯದಿಂದಲ್ಲೂ ಭರತ್‌ನನ್ನು ಪ್ರೀತಿಸುತ್ತಿದ್ದಳು. ವಿವಾಹವಾದ ಬಳಿಕವೂ ಶಿವಕುಮಾರ್‌ನೊಂದಿಗೆ ಅನೈತಿಕ ಸಂಬಂಧ ಮುಂದುವರೆಸಿದ್ದಳು. ಎರಡು ದಿನಗಳ ಹಿಂದೆ ಕರೆ ಮಾಡಿ ವಿನುತಾ ಮೃತನನ್ನು ಮನೆಗೆ ಕರೆಯಿಸಿಕೊಂಡಿದ್ದಳು. ಶಿವಕುಮಾರ್‌, ವಿನುತಾಳ ಮನೆಗೆ ಬರುತ್ತಿರುವ ವಿಷಯ ತಿಳಿದಿದ್ದ ಭರತ್‌, ಆತನ ಕೊಲೆಗೆ ನಿರ್ಧರಿಸಿದ್ದ. ಬುಧವಾರ ರಾತ್ರಿ ಶಿವಕುಮಾರ್‌, ವಿನುತಾಗೆ ಕರೆ ಮಾಡಿ ಮನೆಗೆ ಬರುತ್ತೇನೆ ಎಂದು ತಿಳಿಸಿದ್ದ. ಈ ವಿಚಾರ ಭರತ್‌ ಗಮನಕ್ಕೆ ಬಂದಿತ್ತು. ಇದರಿಂದ ಆಕ್ರೋಶಗೊಂಡ ಭರತ್‌ ಪತ್ನಿ ಜತೆ ಸಲುಗೆ ಬೆಳೆಸಿಕೊಂಡಿದ್ದ ಶಿವಕುಮಾರ್‌ನನ್ನು ಹತ್ಯೆ ಮಾಡಲು ಸಂಚು ರೂಪಿಸಿದ್ದ.

ಮನಬಂದಂತೆ ಇರಿದು ಕೊಂದ

ಬುಧವಾರ ರಾತ್ರಿ 8.30ರ ಸುಮಾರಿಗೆ ಮನೆಯ ಬಾಗಿಲಿಗೆ ಬೀಗ ಹಾಕದೇ ವಿನುತಾ ಸಮೀಪದಲ್ಲಿದ್ದ ಅಂಗಡಿಯಲ್ಲಿ ‘ಚಿಕನ್‌’ ತರಲು ಹೊರ ಹೋಗಿದ್ದಳು. ಇದೇ ಸಮಯಕ್ಕಾಗಿ ಹೊಂಚು ಹಾಕಿದ್ದ ಭರತ್‌ ಮನೆಯೊಳಗೆ ನುಗ್ಗಿ ಮಂಚದ ಕೆಳಗೆ ಅವಿತುಕೊಂಡಿದ್ದ. ಊಟ ಎಲ್ಲ ಮುಗಿಸಿ ವಿನುತಾ ತನ್ನ ಪ್ರಿಯತಮನ ಜತೆ ಮಂಚವೇರಿದ್ದಳು. ಇಬ್ಬರು ಏಕಾಂತದಲ್ಲಿದ್ದು, ಬೆಳಗಿನ ಜಾವ ವಿನುತಾ ಶೌಚಗೃಹಕ್ಕೆ ಹೋಗಿದ್ದಳು. ಈ ವೇಳೆ ಆರೋಪಿ ಚೂರಿಯಿಂದ ಮನಬಂದಂತೆ ಇರಿದಿದ್ದಾನೆ. ತೀವ್ರ ರಕ್ತಸ್ರಾವವಾಗಿ ಗಾಯಾಳುವ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಇದಕ್ಕಾಗಿ ಪೂರ್ವ ನಿಯೋಜನೆಯಂತೆಯೇ ಭರತ್‌ ಚಾಕುವೊಂದನ್ನು ಕೆಲ ದಿನಗಳ ಹಿಂದೆಯೇ ಖರೀದಿ ಮಾಡಿದ್ದ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

click me!