ಕುಮಟಾ: ಪತ್ನಿ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದ ವ್ಯಕ್ತಿಯ ಬಂಧನ

By Kannadaprabha NewsFirst Published Apr 22, 2021, 12:37 PM IST
Highlights

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಉಪ್ಪಿನಪಟ್ಟಣದಲ್ಲಿ ನಡೆದ ಘಟನೆ| ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿದ್ದ ಆರೋಪಿ| ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ಪೊಲೀಸರು| 

ಕುಮಟಾ(ಏ.22): ತಾಲೂಕಿನ ಉಪ್ಪಿನಪಟ್ಟಣದಲ್ಲಿ ಮಂಗಳವಾರ ರಾತ್ರಿ ವ್ಯಕ್ತಿಯೊಬ್ಬ ಪತ್ನಿಯ ಕತ್ತು ಹಿಸುಕಿ ಹತ್ಯೆ ಮಾಡಿ, ಆತ್ಮಹತ್ಯೆ ಎಂದು ಬಿಂಬಿಸುವ ನಾಟಕವಾಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಕತಗಾಲ ಸಮೀಪದ ಉಪ್ಪಿನಪಟ್ಟಣದ ಮಮತಾ ಮಂಜುನಾಥ ಶಾನಭಾಗ (38) ಹತ್ಯೆಗೀಡಾದವರು. ಈಕೆಯ ಪತಿ ಮಂಜುನಾಥ ಶಾನಭಾಗ ಹತ್ಯೆ ಮಾಡಿದ ಆರೋಪ ಎದುರಿಸುತ್ತಿದ್ದಾನೆ.

ಮಂಗಳವಾರ ರಾತ್ರಿ ಪತ್ನಿ ಮಮತಾಳೊಂದಿಗೆ ಜಗಳವಾಡಿ, ಆಕೆಯ ಕತ್ತು ಹಿಸುಕಿದಾಗ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಆನಂತರ ಆಕೆಯ ಕತ್ತಿಗೆ ಟವೆಲ್‌ ಬಿಗಿದು ಪತ್ನಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಸಮೀಪದವರಿಗೆ ತಿಳಿಸಿದ್ದಾನೆ. ಇದಲ್ಲದೆ, ಕುಮಟಾ ಪೊಲೀಸ್‌ ಠಾಣೆಗೆ ತೆರಳಿ ಪತ್ನಿಯ ಮಾನಸಿಕ ಸ್ಥಿತಿ ಸರಿಯಾಗಿ ಇರಲಿಲ್ಲ. ಇದರಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವಿವರ ನೀಡಿದ್ದಾನೆ.

ಹಣಕ್ಕಾಗಿ ರೈಟರ್‌ ಕೊಲೆ: ಲಾರಿ ಚಾಲಕ, ಕ್ಲೀನರ್‌ ಬಂಧನ

ಪೊಲೀಸರು ಅನುಮಾನಗೊಂಡು ಮಂಜುನಾಥನ ಬಗ್ಗೆ ವಿಚಾರಿಸಿದಾಗ ಮಮತಾಳ ಸಹೋದರ ದಾಮೋದರ ಶಾನಭಾಗ ತನ್ನ ಭಾವ ಮಂಜುನಾಥನೇ ಮಮತಾಳನ್ನು ಕೊಲೆ ಮಾಡಿರುವುದಾಗಿ ದೂರು ನೀಡಿದರು. ತಕ್ಷಣ ಸ್ಥಳಕ್ಕೆ ಸಿಪಿಐ ಶಿವಪ್ರಕಾಶ ನಾಯ್ಕ, ಪಿಎಸ್‌ಐ ಆನಂದಮೂರ್ತಿ, ಕ್ರೈಮ್‌ ಪಿಎಸ್‌ಐ ಸುಧಾ ಅಘನಾಶಿನಿ, ರವಿ ಗುಡ್ಡಿ ಮತ್ತಿತರರ ತಂಡ ತೆರಳಿ ಪರಿಶೀಲನೆ ನಡೆಸಿದ್ದಾರೆ. ಪತಿ ಮಂಜುನಾಥನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನೇ ಹತ್ಯೆ ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಮಂಜುನಾಥನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪಿಎಸ್‌ಐ ಆನಂದಮೂರ್ತಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
 

click me!