ವಿಜಯಪುರ: ಮರ್ಯಾದೆ ಹತ್ಯೆ ಪ್ರಕರಣ, ನಾಲ್ವರ ಬಂಧನ

By Kannadaprabha NewsFirst Published Jun 25, 2021, 8:18 AM IST
Highlights

* 6 ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಪ್ರೇಮಿಗಳು
*  ಬಾಲಕಿ ಅಜ್ಜನ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದ ಲವರ್ಸ್‌
* ಮಗಳು ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿ ಪರಾರಿಯಾಗಿದ್ದ ಮೃತ ಬಾಲಕಿಯ ತಂದೆ 

ವಿಜಯಪುರ(ಜೂ.25): ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಸಲಾದಹಳ್ಳಿ ಬಳಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಾರಿಯಾಗಿದ್ದ ಬಾಲಕಿಯ ತಂದೆ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಇನ್ನೊಬ್ಬ ಆರೋಪಿಗಾಗಿ ತೀವ್ರ ಶೋಧನೆ ಕಾರ್ಯ ಮುಂದುವರಿದಿದೆ.

ಹತ್ಯೆಗೀಡಾದ ಬಾಲಕಿಯ ತಂದೆ ಬಂದಗಿಸಾಬ ಕಾಶಿಮಸಾಬ ತಂಬದ (52), ಅಳಿಯಂದಿರಾದ ಅಲ್ಲಾಪಟೇಲ್ ಲಾಲೇಸಾಬ ವಲ್ಲಿಬಾಯಿ (29), ರಫೀಕ ಲಾಲೇಸಾಬ ವಲ್ಲಿಬಾಯಿ (26) ಹಾಗೂ ಬಾಲಕಿ ಸಹೋದರ ದಾವಲಪಟೇಲ್‌ ಬಂದಗಿಸಾಬ ತಂಬದ (20) ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ವಿಜಯಪುರದಲ್ಲಿ ಮರ್ಯಾದಾ ಹತ್ಯೆ: ಪ್ರೇಮಿಗಳ ಮೇಲೆ ಕಲ್ಲು ಎತ್ತಿಹಾಕಿ ಬರ್ಬರ ಕೊಲೆ

ಗ್ರಾಮದ ಬಸವರಾಜ ಬಡಿಗೇರ ಎಂಬ ಯುವಕ ಹಾಗೂ ಬಾಲಕಿ ಇಬ್ಬರೂ 6 ತಿಂಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಈ ವಿಷಯ ಬಾಲಕಿ ತಂದೆಗೆ ಗೊತ್ತಾಗಿತ್ತು. ಈ ಬಗ್ಗೆ ಆತ ಯುವಕನಿಗೆ ತಮ್ಮ ಮಗಳ ಜೊತೆಗೆ ತಿರುಗಾಡಬೇಡ ಎಂದು ತಾಕೀತು ಮಾಡಿದ್ದ. ಆದರೂ ಯುವಕ ಹಾಗೂ ಬಾಲಕಿ ಇಬ್ಬರ ಮಧ್ಯೆ ಪ್ರೇಮ ಸಲ್ಲಾಪ ಮುಂದುವರೆದಿತ್ತು. ಜೂ.21ರಂದು ಮಧ್ಯಾಹ್ನ ಹೊಲದಲ್ಲಿ ಈ ಪ್ರೇಮಿಗಳು ಬಾಲಕಿ ಅಜ್ಜನ ಕೈಗೆ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದರು. ಇದರಿಂದ ಕೋಪಗೊಂಡ ಬಾಲಕಿ ತಂದೆ ಬಂದಗಿಸಾಬನು ತನ್ನ ಅಳಿಯಂದಿರು ಹಾಗೂ ಪುತ್ರನೊಂದಿಗೆ ಮಗಳು ಹಾಗೂ ಆಕೆಯ ಪ್ರಿಯಕರನನ್ನು ಅಮಾನುಷವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು. ನಂತರ ಈ ಸಂಬಂಧ ಮೂವರು ಪಲೀಸ್‌ ತಂಡಗಳನ್ನು ರಚಿಸಲಾಗಿತ್ತು. ಅದರಂತೆ ಪೊಲೀಸರು ಜಾಲ ಬೀಸಿ ಮಿಂಚಿನ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ಈ ಬಗ್ಗೆ ಕಲಕೇರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆ ಸ್ಥಳಕ್ಕೆ ಎಸ್ಪಿ ಅನುಪಮ ಅಗರವಾಲ್‌ ಅವರು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ದರು. ಆರೋಪಿಗಳ ಪತ್ತೆಗೆ ಮೂರು ಪ್ರತ್ಯೇಕ ತಂಡ ರಚಿಸಲಾಗಿತ್ತು. ಈ ತನಿಖಾ ತಂಡಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿವೆ. ತಲೆ ಮರೆಸಿಕೊಂಡಿದ್ದ ಮತ್ತೊಬ್ಬ ಆರೋಪಿ ಲಾಲೇಸಾಬ ವಲ್ಲಿಬಾಯಿ ಎಂಬುವವನು ಬಂಧಿಸಲು ತೀವ್ರ ಶೋಧನೆ ಕಾರ್ಯ ನಡೆದಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ ಅಗರವಾಲ ತಿಳಿಸಿದರು.
 

click me!