Karnataka Budget 2022: ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಜೆಟ್‌ನಲ್ಲಿ ಬಂಪರ್ ಕೊಡುಗೆ ಘೋಷಿಸಿದ ರಾಜ್ಯ ಸರಕಾರ

By Suvarna NewsFirst Published Mar 4, 2022, 6:31 PM IST
Highlights

ಜೋಗದಲ್ಲಿ ರೋಪ್ ವೇ ಅಭಿವೃದ್ಧಿಗೆ 116 ಕೋಟಿ ರೂ., ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ., ನಂದಿ ಬೆಟ್ಟದಲ್ಲಿ 93 ಕೋಟಿ ವೆಚ್ಚದಲ್ಲಿ ರೋಪ್ ವೇ ನಿರ್ಮಾಣ ಹೀಗೆ  ತಮ್ಮ ಚೊಚ್ಚಲ ಬಜೆಟ್ ಮಂಡಿಸಿರುವ ಸಿಎಂ ಬಸವರಾಜ ಬೊಮ್ಮಾಯಿ ಅವರು  ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಂಪರ್ ಕೊಡುಗೆಗಳನ್ನು ನೀಡಿದ್ದಾರೆ. 

ಬೆಂಗಳೂರು(ಮಾ.4): ವಿಧಾನಸಭೆಯಲ್ಲಿ 2022-23ನೇ ಸಾಲಿನ  ತಮ್ಮ ಮೊದಲನೇ ಬಜೆಟ್‌ ಮಂಡಿಸಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು  ಪ್ರವಾಸೋದ್ಯಮ ಕ್ಷೇತ್ರಕ್ಕೆ ಬಂಪರ್ ಕೊಡುಗೆ ಘೋಷಿಸಿದ್ದಾರೆ. ಮುಖ್ಯವಾಗಿ  ಜೋಗದಲ್ಲಿ ರೋಪ್ ವೇ ಅಭಿವೃದ್ಧಿಗೆ 116 ಕೋಟಿ ರೂ., ಅಂಜನಾದ್ರಿ ಬೆಟ್ಟದ ಅಭಿವೃದ್ಧಿಗೆ 100 ಕೋಟಿ ರೂ., ನಂದಿ ಬೆಟ್ಟದಲ್ಲಿ 93 ಕೋಟಿ ವೆಚ್ಚದಲ್ಲಿ ರೋಪ್ ವೇ ನಿರ್ಮಾಣ ಹೀಗೆ ಭರ್ಜರಿ ಕೊಡುಗೆ ನೀಡಿದ್ದಾರೆ. ಬಜೆಟ್‌ನಲ್ಲಿ ಘೋಷಿಸಿದ ಪ್ರಮುಖ ಅಂಶಗಳು ಇಂತಿವೆ.

  • ಪ್ರವಾಸೋದ್ಯಮವನ್ನು ಉತ್ತೇಜಿಸಲು ಹಂಪಿಯ-ಬಾದಾಮಿ- ಐಹೊಳೆ-ಪಟ್ಟದಕಲ್ಲು-ವಿಜಯಪುರ ಪ್ರವಾಸಿ ವೃತ್ತ ವನ್ನು ಮತ್ತು ಮೈಸೂರು-ಶ್ರೀರಂಗಪಟ್ಟಣ-ಹಾಸನ-ಬೇಲೂರು- ಹಳೇಬೀಡು ಪ್ರವಾಸಿ ವೃತ್ತವನ್ನು ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ.
  • ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಜೋಗಜಲಪಾತದಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಹೋಟೆಲ್ ಹಾಗೂ ರೋಪ್‌ವೇ ಅಭಿವೃದ್ಧಿ ಕಾಮಗಾರಿಗಳನ್ನು 116 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಕೈಗೊಳ್ಳಲಾಗುವುದು ಎಂದಿದ್ದಾರೆ. ಪ್ರವಾಸೋದ್ಯಮ ಕ್ಷೇತ್ರಕ್ಕೆ ನೀಡಿರುವ ಇತರ ಕೊಡುಗೆಗಳ ಮಾಹಿತಿ ಈ ಕೆಳಗಿನಂತಿದೆ.

Karnataka budget 2022: ಬಜೆಟ್‌ನಲ್ಲಿ ಪಶುಸಂಗೋಪನೆ ಕ್ಷೇತ್ರಕ್ಕೆ ಭರ್ಜರಿ ಕೊಡುಗೆ

  •  ಬೇಲೂರು, ಹಳೇಬೀಡು, ಸೋಮನಾಥಪುರಗಳನ್ನು ಒಳಗೊಂಡಂತೆ ಹೊಯ್ಸಳರ ಪವಿತ್ರ ತಾಣಗಳ ವ್ಯಾಪ್ತಿಯಲ್ಲಿ ಬರುವ ಸ್ಮಾರಕಗಳನ್ನು ಪ್ರಸಕ್ತ ಸಾಲಿನಲ್ಲಿ ಯುನೆಸ್ಕೊ ವಿಶ್ವ ಪರಂಪರೆ ತಾಣಗಳ (UNESCO World Heritage Sites) ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು.
  • ನಂದಿ ಬೆಟ್ಟದಲ್ಲಿ ಪಿ.ಪಿ.ಪಿ ಅಡಿ ರೋಪ್‌ವೇ ಅನ್ನು 93 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಅನುಮೋದನೆ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಾಣದಲ್ಲಿ ಖಾಸಗಿ ಸಹಭಾಗಿತ್ವದೊಂದಿಗೆ ರೋಪ್‌ವೇ ನಿರ್ಮಿಸಲು ಯೋಜನೆ ರೂಪಿಸಲಾಗುವುದು.
  • ಶ್ರೀ ಆಂಜನೇಯ ಸ್ವಾಮಿಯ ಜನ್ಮಸ್ಥಳವೆಂದು ಪ್ರಸಿದ್ಧವಾದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಬೆಟ್ಟದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. ಪ್ರವಾಸಿಗಳಿಗೆ ಮೂಲಭೂತ ಸೌಕರ್ಯ, ರೋಪ್‌ವೇ ಒಳಗೊಂಡಂತೆ ಕಾಮಗಾರಿಗಳನ್ನು 100 ಕೋಟಿ ರೂ.ಗಳ ಮೊತ್ತದಲ್ಲಿ ಅನುಷ್ಠಾನಗೊಳಿಸಲಾಗುವುದು.
  • ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಹಾಗೂ ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ದತ್ತಪೀಠ ಬೆಟ್ಟದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ರೋಪ್‌ವೇ ಅನ್ನು ನಿರ್ಮಾಣ ಮಾಡಲು ಕೇಂದ್ರ ಸರ್ಕಾರದ "ಪರ್ವತಮಾಲಾ" ಯೋಜನೆಯಡಿ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು.
  • ಕಡಲತೀರದಲ್ಲಿ ಪರಿಸರ ಸ್ನೇಹಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸಿ.ಆರ್.ಜಡ್ ಮಾನದಂಡಗಳನ್ನು ಸಡಿಲಗೊಳಿಸಲು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಿ ಅನುಮೋದನೆ ಪಡೆಯಲು ಎಲ್ಲಾ ಕ್ರಮಗಳನ್ನು ನಮ್ಮ ಸರ್ಕಾರವು ಕೈಗೊಳ್ಳಲಿದೆ.
  • ಪಾರಂಪರಿಕ ಪ್ರವಾಸಿ ತಾಣಗಳಾದ ಬೀದರ್ ಹಾಗೂ ಕಲಬುರಗಿ ಕೋಟೆಗಳಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (Archaeological Survey of India)ಯ ಸಹಯೋಗದೊಂದಿಗೆ ಪುನರುಜ್ಜೀವನಗೊಳಿಸಲು ಉದ್ದೇಶಿಸಲಾಗಿದೆ.
  • ರಾಜ್ಯದ ಸ್ಮಾರಕಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ “Adopt a Monument" ಯೋಜನೆ ಮೂಲಕ ದತ್ತು ಪಡೆಯಲು ಅವಕಾಶ ಕಲ್ಪಿಸಲಾಗುವುದು.
  • ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿಯಾಗಿರುವ 400 ಪ್ರವಾಸಿ ಮಾರ್ಗದರ್ಶಿಗಳಿಗೆ ಮಾಸಿಕ 2000 ರೂ.ಗಳ ಪ್ರೋತ್ಸಾಹಕವನ್ನು ನೀಡಿ ಸಂವಹನ ಕೌಶಲ್ಯ ತರಬೇತಿ ನೀಡಲಾಗುವುದು.

Karnataka Budget 2022: ಮೀನುಗಾರಿಕೆ ಕ್ಷೇತ್ರಕ್ಕೆ "ಮತ್ಸ್ಯ ಸಿರಿ" ಎಂಬ ವಿ‍ಶೇಷ ಯೋಜನೆ

  • ಬೆಂಗಳೂರು ವಿಶ್ವದ ಪ್ರಮುಖ ವ್ಯಾವಹಾರಿಕ ಕೇಂದ್ರವಾಗಿದ್ದು, ನಮ್ಮ ದೇಶದ ಐಟಿ. ರಾಜಧಾನಿ ಯಾಗಿದೆ. ವಿಶ್ವ ದರ್ಜೆಯ ಮೂಲಭೂತ ಸೌಕರ್ಯ, ಸಾರಿಗೆ ಸಂಪರ್ಕ, ತಂತ್ರಜ್ಞಾನ Ease of Doing Business, ಮತ್ತು ಉತ್ತಮ ಹವಾಮಾನ ಇರುವುದರಿಂದ ಬೆಂಗಳೂರು ನಗರವನ್ನು Meeting, Incentives, conferences & Exhibitions (MICE) ಹಬ್ ಆಗಿ ಮೇಲ್ದರ್ಜೆಗೇರಿಸಲಾಗುವುದು.
  • ಕಳೆದ ಐದು ವರ್ಷಗಳ ಅವಧಿಯಲ್ಲಿ ರಾಜ್ಯದಲ್ಲಿ ಅರಣ್ಯ ಜೀವಿಶಾಸ್ತ್ರ ವ್ಯವಸ್ಥೆಯ ಮೇಲೆ ಪ್ರಾಕೃತಿಕ ಮತ್ತು ಮಾನವ ನಿರ್ಮಿತ ಒತ್ತಡಗಳಿಂದ ಉಂಟಾದ ದುಷ್ಪರಿಣಾಮವನ್ನು ಸರಿದೂಗಿಸುವ (compensate) ಉದ್ದೇಶಕ್ಕಾಗಿ ಹಸಿರು ಆಯವ್ಯಯವನ್ನು (Eco-Budget) ರೂಪಿಸಿ, 100 ಕೋಟಿ ರೂ. ಅನುದಾನವನ್ನು ಹಂಚಿಕೆ ಮಾಡಲಾಗುವುದು.
  • ಕರಾವಳಿ ಭಾಗದ ಜಲಮೂಲಗಳನ್ನು ಕಲುಷಿತಗೊಳಿಸುತ್ತಿರುವ ಪ್ಲಾಸ್ಟಿಕ್ ಮಾಲಿನ್ಯವನ್ನು ನಿರ್ವಹಿಸಲು ವಿಶ್ವಬ್ಯಾಂಕ್ ನೆರವಿನೊಂದಿಗೆ ವಿನೂತನವಾದ ``ಬ್ಲೂ-ಪ್ಲಾಸ್ಟಿಕ್ ನಿರ್ವಹಣೆ ಯೋಜನೆ" ಯನ್ನು ಮುಂದಿನ 5 ವರ್ಷಗಳ ಅವಧಿಗೆ ಒಟ್ಟು 840 ಕೋಟಿ ರೂ.ಗಳ ವೆಚ್ಚದಲ್ಲಿ ದೇಶದಲ್ಲೇ ಮೊಟ್ಟಮೊದಲಿಗೆ ಜಾರಿಗೆ ತರಲಾಗುವುದು.
  • ಖಾಸಗಿ ಭೂಮಿಗಳಲ್ಲಿ ಶ್ರೀಗಂಧ ಮರಗಳನ್ನು ಬೆಳೆಸುವಂತೆ ಉತ್ತೇಜನ ನೀಡಲು ಶ್ರೀಗಂಧದ ಮರಗಳ ಕತ್ರಾವಣೆ, ಸಾಗಾಣಿಕೆ ಮತ್ತು ಮಾರಾಟ ಪ್ರಕ್ರಿಯೆಗಳನ್ನು ಸರಳೀಕರಣ ಮಾಡಲು ಶ್ರೀಗಂಧ ನೀತಿಯನ್ನು ರೂಪಿಸಲಾಗುವುದು.
  • ವನ್ಯಜೀವಿ ಸಂರಕ್ಷಣೆ ಅಧಿನಿಯಮ, 1972ರಡಿ ಅಧಿಸೂಚಿಸಿರುವ ಸಂರಕ್ಷಣಾ ಮೀಸಲು (Conservation
  • Reserves) ಪ್ರದೇಶಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ ಐದು ಕೋಟಿ ರೂ.ಗಳ ಅನುದಾನ ಒದಗಿಸಲಾಗುವುದು.
  • ಹಾಸನ, ಚಿಕ್ಕಮಗಳೂರು ಹಾಗೂ ಕೊಡಗು ಜಿಲ್ಲೆಗಳಲ್ಲಿ ಆನೆ ಹಾವಳಿಯನ್ನು ತಡೆಗಟ್ಟಲು 100 ಕೋಟಿ ರೂ.ಗಳ ಅನುದಾನದಲ್ಲಿ ರೈಲುಹಳಿ ತಡೆಗೋಡೆ ನಿರ್ಮಿಸಲಾಗುವುದು.
  • ಖಾಸಗಿ ಭೂಮಿಗಳಲ್ಲಿ ರೈತರು ಬೆಳೆದಿರುವ ಮರಗಳ ಕಡಿಯುವ ಮತ್ತು ಸಾಗಾಣಿಕೆ ಅನುಮತಿ ಪ್ರಕ್ರಿಯೆಯನ್ನು ಸರಳೀಕೃತಗೊಳಿಸಲಾಗುವುದು.
  • ಪರಿಸರವನ್ನು ಸಂರಕ್ಷಿಸಲು ಜಾರಿಗೊಳಿಸಿರುವ ಅಧಿನಿಯಮಗಳ ಉದ್ದೇಶಗಳನ್ನು ಈಡೇರಿಸಲು ಮತ್ತು ಅವುಗಳ ಅನುಷ್ಠಾನವನ್ನು ಬಲಪಡಿಸಲು, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಆಡಳಿತ ವಿಧಾನಗಳಲ್ಲಿ ಸುಧಾರಣೆ ತರಲಾಗುವುದು.
  • ಬೆಳಗಾವಿ ಜಿಲ್ಲೆಯ ಹಿಡ್ಕಲ್ ಅಣೆಕಟ್ಟು ಪ್ರದೇಶವನ್ನು ಪ್ರವಾಸಿ ತಾಣವಾಗಿ ಅಭಿವೃದ್ಧಿಪಡಿಸಿ, ಪಕ್ಷಿಗಳ ಹಾಗೂ ಚಿಟ್ಟೆಗಳ ಸಂರಕ್ಷಣೆಗಾಗಿ ಮತ್ತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಪಕ್ಷಿಧಾಮ ಹಾಗೂ ಚಿಟ್ಟೆಗಳ ಉದ್ಯಾನವನ್ನು ಸ್ಥಾಪಿಸಲಾಗುವುದು.
  • ಸಂಸ್ಕೃತಿ, ಪರಂಪರೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ರಕ್ಷಣೆ 2022-23ನೇ ಸಾಲಿನಲ್ಲಿ ಒಟ್ಟಾರೆಯಾಗಿ  3,012 ಕೋಟಿ ರೂ. ಅನುದಾನ ಒದಗಿಸಲಾಗಿದೆ.
click me!