ದಿಕ್ಕು ತಪ್ಪಿ ರಸ್ತೆಯಲ್ಲಿ ತಿರುಗಾಡುತ್ತಿದ್ದ ಬಾತುಕೋಳಿಗೆ ನೆರವಾದ ಮಹಿಳೆ

By Suvarna NewsFirst Published Jan 26, 2022, 9:48 AM IST
Highlights
  • ಸೇತುವೆಯಲ್ಲಿ ಸಿಲುಕಿಕೊಂಡಿದ್ದ ಬಾತುಕೋಳಿ
  • ಬಾತುಕೋಳಿಗೆ ನೆರವಾದ ಮಹಿಳೆ
  • ಮಹಿಳೆಯ ಕಾರ್ಯಕ್ಕೆ ನೆಟ್ಟಿಗರ ಶ್ಲಾಘನೆ

ಬರ್ಲಿನ್‌(ಜ. 26):  ನೀವು ಇತ್ತೀಚೆಗೆ ಪ್ರಾಣಿ, ಪಕ್ಷಿಗಳ ಮುದ್ದಾದ ಸಾಕಷ್ಟು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ನೋಡಿರುತ್ತಿರಿ. ಅದರೊಂದಿಗೆ ಕಷ್ಟದಲ್ಲಿದ್ದ ಪ್ರಾಣಿಗಳ  ನೆರವಿಗೆ ಧಾವಿಸುವ ಮನುಷ್ಯರ ವಿಡಿಯೋಗಳು ಕೂಡ ಇಂಟರ್‌ನೆಟ್‌ನಲ್ಲಿ ಮನೋರಂಜನೆ ಹಾಗೂ ಖುಷಿ ಪಡೆಯಲು ಇಚ್ಚಿಸುವವರ ಹೃದಯ ಕದ್ದಿರುವುದರಲ್ಲಿ ಸಂಶಯವಿಲ್ಲ. ಹಾಗೆಯೇ ಆ ವೀಡಿಯೋಗಳು ಸಾಮಾನ್ಯವಾಗಿ ಜನರ ಹೃದಯದಲ್ಲಿ ಬೆಚ್ಚಗಿನ ಭಾವನೆಯನ್ನು ತುಂಬುತ್ತವೆ. ಇಲ್ಲೊಬ್ಬರು ಮಹಿಳೆ  ನಡುರಸ್ತೆಯಲ್ಲಿ ಸಿಲುಕಿಕೊಂಡಿದ್ದ ಬಾತುಕೋಳಿ(Swan) ಗೆ ನೆರವಾಗುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಈ ಘಟನೆ ಜರ್ಮನಿಯ(Germany) ಬರ್ಲಿನ್‌ (Berlin)ನಲ್ಲಿ ನಡೆದಿದೆ. ನೀರು ಬಿಟ್ಟು ರಸ್ತೆಗೆ ಬಂದು ದಿಕ್ಕು ತಪ್ಪಿ ಅಲೆಯುತ್ತಿದ್ದ ಬಾತುಕೋಳಿಗೆ ಮಹಿಳೆ  ನೆರವಾಗಿದ್ದಾರೆ. ವಿಡಿಯೋದಲ್ಲಿ ಬ್ರಿಡ್ಜ್ ಮೇಲೆ ಬಾತುಕೋಳಿ ಓಡಾಡುತ್ತಿರುವ ದೃಶ್ಯವಿದ್ದು, ಇದನ್ನು ನೋಡಿದ ಅದೇ ಹಾದಿಯಲ್ಲಿ ಹೋಗುತ್ತಿದ್ದ ಮಹಿಳೆ ಅದನ್ನು ಹಿಡಿದಿದ್ದಾರೆ. ಮೊದಲು ತಪ್ಪಿಸಿಕೊಳ್ಳಲು ನೋಡಿದ ಬಾತುಕೋಳಿ ಕೊನೆಗೂ ಮಹಿಳೆಯ ಕೈಗೆ ಸಿಕ್ಕಿದ್ದು, ಅವರು ಅದನ್ನು ಹಿಡಿದು ತೆಗೆದುಕೊಂಡು ಹೋಗಿ ನೀರಿನ ಮೂಲಕ್ಕೆ ಬಿಟ್ಟಿದ್ದಾರೆ. ಕೊನೆಗೂ ತನ್ನ ನೆಲೆಗೆ ಸೇರಿದ ಬಾತುಕೋಳಿ ನಂತರ ತನ್ನ ರೆಕ್ಕೆಗಳನ್ನೊಮ್ಮೆ ಬಡಿದು ನೀರಿನಲ್ಲಿ ಸ್ವಚ್ಛಂದವಾಗಿ ವಿಹಾರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು. 

 

ಒಟ್ಟಿನಲ್ಲಿ ಮಹಿಳೆಯ ಈ ಒಳ್ಳೆಯ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ(woman) ನಡೆಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಹಿಂದೊಮ್ಮೆ  ಬಾತುಕೋಳಿಗಳು ಈಜಾಡಿದರೆ ಕೆರೆಗಳಲ್ಲಿ ತನ್ನಿಂತಾನೇ ಆಮ್ಲಜನಕ ಹೆಚ್ಚಾಗುತ್ತದೆ ಎಂದು ತ್ರಿಪುರ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ದೇಬ್‌ (Biplab Kumar Deb) ಹೇಳಿಕೆ ನೀಡಿದ್ದರು. ಅವರ ಹೇಳಿಕೆ ಆನ್‌ಲೈನ್‌ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ನಗೆಪಾಟಲಿಗೀಡಾಗಿತ್ತು. ಆದರೆ ನಂತರದಲ್ಲಿ ಬಿಪ್ಲಬ್‌ ಹೇಳಿದ್ದು ಸರಿಯಾಗಿಯೇ ಇದೆ ಎಂದು ತಜ್ಞರು  ಬಿಪ್ಲಬ್‌ ಕುಮಾರ್‌ ದೇಬ್‌ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದರು. 

ಬಾತುಕೋಳಿ ಹಿಂಡು ರಸ್ತೆ ದಾಟಲು ಸಂಚಾರ ಸ್ಥಗಿತ!

ಬಾತುಕೋಳಿಗಳು ಕೆರೆ, ಕೊಳಗಳಲ್ಲಿ ನೀರಿಗೆ ಗಾಳಿ ತುಂಬುವ ಏರೇಟರ್‌ ರೀತಿ ಕೆಲಸ ಮಾಡುತ್ತವೆ. ಅವುಗಳಿಂದ ನೀರಿನಲ್ಲಿ ಆಮ್ಲಜನಕ ಹೆಚ್ಚಾಗುತ್ತದೆ ಎಂದು ಪಶು ಸಂಗೋಪನೆ ಅಭಿವೃದ್ಧಿ ಇಲಾಖೆಯ ಜಂಟಿ ನಿರ್ದೇಶಕರಾಗಿದ್ದ ಮನೋರಂಜನ್‌ ಸರ್ಕಾರ್‌ (Manoranjan Sarkar) ತಿಳಿಸಿದ್ದಾರೆ. ಬಾತುಕೋಳಿಗಳು ನೀರು ಹೀರಿಕೊಳ್ಳುವ ವ್ಯವಸ್ಥೆ ವಿಶಿಷ್ಟವಾಗಿದೆ. ಅಕ್ವೇರಿಯಂ ರೀತಿ ಇವು ಕೆಲಸ ಮಾಡುತ್ತವೆ. ಬಾತುಕೋಳಿಗಳು ನೀರು ಹೀರಿಕೊಂಡು ನೀರಿನ ಗುಳ್ಳೆ ಸೃಷ್ಟಿಯಾಗುತ್ತವೆ. ಅದರಿಂದ ಜಲಮೂಲಗಳಲ್ಲಿ ಆಮ್ಲಜನಕ ಪ್ರಮಾಣ ವೃದ್ಧಿಯಾಗುತ್ತದೆ. ಹೀಗಾಗಿ ಬಾತುಕೋಳಿಗಳು ಈಜಾಡುವ ನೀರಿನಲ್ಲಿ ಆಮ್ಲಜನಕ ಮಟ್ಟ ಹೆಚ್ಚಾಗುತ್ತದೆ ಎಂದು ತ್ರಿಪುರ ಮಾಲಿನ್ಯ ನಿಯಂತ್ರಣ ಮಂಡಳಿಯ ವಿಜ್ಞಾನಿ ಮಿಹಿರ್‌ ಕುಮಾರ್‌ ದಾಸ್‌ (Mihir Kumar Das) ಕೂಡ ಹೇಳಿದ್ದಾರೆ.

ಬಾಲಕನಿಗೆ ಚಪ್ಪಲಿ ಎತ್ತಿಕೊಟ್ಟ 'ಸ್ಮಾರ್ಟ್' ಬಾತುಕೋಳಿ: ವಿಡಿಯೋಗೆ ನೆಟ್ಟಿಗರು ಫುಲ್ ಫಿದಾ! 

ತ್ರಿಪುರದ ಬಿಜೆಪಿ ಮುಖ್ಯಮಂತ್ರಿ ಬಿಪ್ಲಬ್‌ ಕುಮಾರ್‌ ಬಾತುಕೋಳಿಗಳು ಈಜಾಡಿದರೆ ಕೆರೆಗಳಲ್ಲಿ ಆಮ್ಲಜನಕ ಪ್ರಮಾಣ ತನ್ನಿಂತಾನೇ ಏರಿಕೆಯಾಗಲಿದೆ. ಆದ ಕಾರಣ, ತ್ರಿಪುರದ ಗ್ರಾಮಸ್ಥರಿಗೆ 50 ಸಾವಿರ ಬಾತುಕೋಳಿ ಮರಿಗಳನ್ನು ವಿತರಣೆ ಮಾಡುತ್ತೇನೆ ಎಂದು ಹೇಳಿಕೆ ನೀಡಿದ್ದರು. 'ನೀರಮಹಲ್‌' ಸುತ್ತ ಸೃಷ್ಟಿಸಲಾಗಿರುವ ಕೃತಕ ಸರೋವರ ರುದ್ರಸಾಗರದಲ್ಲಿ ದೋಣಿ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಅವರು, ಕೆರೆಗಳಲ್ಲಿ ಬಾತುಕೋಳಿಗಳು ಈಜಾಡುತ್ತಿದ್ದರೆ, ಅಂತಹ ಕೆರೆಗಳಲ್ಲಿ ಆಮ್ಲಜನಕ ಪ್ರಮಾಣ ತನ್ನಿಂತಾನೇ ವೃದ್ಧಿಯಾಗುತ್ತದೆ. ಇದರಿಂದ ಕೆರೆಗಳಲ್ಲಿರುವ ಮೀನುಗಳಿಗೆ ಹೆಚ್ಚು ಆಮ್ಲಜನಕ ಲಭಿಸುತ್ತದೆ.

ಬಾತುಕೋಳಿಗಳ ತ್ಯಾಜ್ಯದಿಂದ ಮೀನುಗಳಿಗೂ ಅನುಕೂಲವಾಗುತ್ತದೆ. ಸಾವಯವ ರೀತಿಯಲ್ಲಿ ಮೀನುಗಳು ಬೆಳೆಯುತ್ತವೆ. ಆದ ಕಾರಣ 50 ಸಾವಿರ ಬಾತುಕೋಳಿ ಮರಿಗಳನ್ನು ಜನರಿಗೆ ನೀಡುತ್ತೇವೆ. ಇದರಿಂದ ಗ್ರಾಮೀಣ ಆರ್ಥಿಕತೆ ವೃದ್ಧಿಯಾಗುವುದಲ್ಲದೆ, ಕೆರೆಗಳ ಸೌಂದರ್ಯವೂ ಹೆಚ್ಚುತ್ತದೆ ಎಂದಿದ್ದರು.

click me!