ನಾರಾಯಣ ಮೂರ್ತಿ (Narayana Murthy) ಅವರು ಇನ್ಫೋಸಿಸ್ (Infosys) ಕಟ್ಟಿದ ಕಾಲದಲ್ಲಿ ಅವರಲ್ಲಿ ಬಿಡಿಗಾಸಿರಲಿಲ್ಲ. ಆಗ ಅವರಿಗೆ ತಾವು ಗಂಟು ಕಟ್ಟಿ ಇಟ್ಟಿದ್ದ ಹತ್ತು ಸಾವಿರ ರೂಪಾಯಿಗಳನ್ನು ಕೊಟ್ಟು, ನಾನು ಮನೆ ನೋಡ್ಕೋತೀನಿ, ನೀವು ಬ್ಯುಸಿನೆಸ್ ಮಾಡಿ ಬನ್ನಿ ಎಂದು ಹೇಳಿದವರು ಸುಧಾ ಮೂರ್ತಿ (Sudha Murthy). ಅವರು ವೇದಿಕೆ ಮೇಲೆ ಮೂರ್ತಿ ಕಾಲೆಳೆಯುವ ಸೀನುಗಳು ಮಜವಾಗಿರುತ್ತವೆ.
ಏಂಜೆಲ್ ಇನ್ವೆಸ್ಟರ್ ಎಂದರೆ ನಿಮಗೆ ಗೊತ್ತು ತಾನೆ? ಗೊತ್ತಿಲ್ಲದಿದ್ದರೆ ಇಲ್ಲಿ ಕೇಳಿ. ಇವರು ಯಾವುದೇ ಒಂದು ಉದ್ಯಮಕ್ಕೆ ಮೂಲಭೂತ ಬಂಡವಾಳ ಹೂಡಿದವರು. ಅದು ತುಂಬಾ ಸಣ್ಣ ಅಮೌಂಟ್ ಇರಬಹುದು. ಕೆಲವೊಮ್ಮೆ ಅದಕ್ಕೆ ದಾಖಲೆಯೂ ಇರಲಿಕ್ಕಿಲ್ಲ. ಅಂಥವರನ್ನು ಏಂಜೆಲ್ ಇನ್ವೆಸ್ಟರ್ ಅನ್ನುತ್ತಾರೆ. ಭಾರತದ ಹೆಮ್ಮೆಯನ್ನು ಜಗದಗಲಕ್ಕೆ ಪಸರಿಸಿದ ಐಟಿ ಇಂಡಸ್ಟ್ರಿ ಕಟ್ಟಿದ ಇನ್ಫೋಸಿಸ್ನ ನಾರಾಯಣ ಮೂರ್ತಿಯವರಿಗೂ ಒಬ್ಬರು ಇಂಥ ಏಂಜೆಲ್ ಇನ್ವೆಸ್ಟರ್ ಇದ್ದಾರೆ. ಅವರು ಬೇರೆ ಯಾರೂ ಅಲ್ಲ, ಅವರ ಪತ್ನಿ ಸುಧಾ ಮೂರ್ತಿ!
ಹೌದು. ಈ ಕಥೆಯನ್ನು ಸ್ವತಃ ಸುಧಾ ಮೂರ್ತಿ ಮತ್ತು ನಾರಾಯಣ ಮೂರ್ತಿ ಆಗಾಗ ವೇದಿಕೆಗಳಲ್ಲಿ ಹೇಳಿಕೊಳ್ಳುತ್ತಾರೆ. ಮತ್ತು ಸುಧಾ ಮೂರ್ತಿ ಹೀಗೆ ಗಂಡನ ಕಾಲೆಳೆಯುವುದರಲ್ಲಿ ಎಕ್ಸ್ಪರ್ಟ್! ಹೀಗೆ ಒಮ್ಮೆ ಅವರು ಗಂಡನ ಕಾಲು ಎಳೆದರು. ಅದು ದೊಡ್ಡ ದೊಡ್ಡ ಉದ್ಯಮಿಗಳು ಹಾಗೂ ಅವರ ಪತ್ನಿಯರು ತುಂಬಿದ ಮೀಟಿಂಗ್. ಸುಧಾ ಮೂರ್ತಿ ಅವರನ್ನು ವೇದಿಕೆಗೆ ಕರೆದು ನಾಲ್ಕು ಮಾತಾಡುವಂತೆ ಹೇಳಲಾಯಿತು. ಅವರು ಹೇಳಿದ್ದು ಹೀಗೆ:
ʼʼಒಬ್ಬ ಉದ್ಯಮಿಯ ಹೆಂಡತಿ ಆಗಿರುವುದು ಎಂದರೆ ಸುಲಭ ಅಲ್ಲ. ಆಕೆ ಏಕಕಾಲದಲ್ಲಿ ಆತನ ಪತ್ನಿ, ಸೆಕ್ರೆಟರಿ, ಹಣಕಾಸು ಸಲಹೆಗಾರ್ತಿ, ಅಮ್ಮ, ಅಜ್ಜಿ, ಆಯಾ ಎಲ್ಲ ಆಗಿರಬೇಕಾಗುತ್ತದೆ. ಯಾವದೋ ಒಂದು ರೋಲ್ನಲ್ಲಿ ವಿಫಲಗೊಂಡರೂ ಅದು ಆ ಉದ್ಯಮಿಯನ್ನು ಕೆಟ್ಟದಾಗಿ ಹರ್ಟ್ ಮಾಡುತ್ತದೆ. ಹೀಗಾಗಿ ದೊಡ್ಡ ಉದ್ಯಮಿಗಳ ಪತ್ನಿಯರು ಆ ಉದ್ಯಮಿಗಳಿಗಿಂತಲೂ ಸ್ಟ್ರಾಂಗು!ʼʼ ನಾರಾಯಣಮೂರ್ತಿ ಇದನ್ನು ಕೇಳುತ್ತ ಮುಸಿನಗುತ್ತಿದ್ದರು.
ಅಂಥದೇ ಇನ್ನೊಂದು ಸಂದರ್ಭದಲ್ಲಿ ಒಬ್ಬರು ಪ್ರಶ್ನೆ ಕೇಳಿದರು: ʼʼನಿಮ್ಮ ಮೊದಲಿದ್ದ ಕೆಲಸ ಬಿಟ್ಟು ಕೈಯಲ್ಲಿ ಬಿಡಿಗಾಸೂ ಇಲ್ಲದೆ ಇನ್ಫೋಸಿಸ್ ಆರಂಭಿಸುವುದಕ್ಕೆ ಮುಂದಾದಾಗ ಭಯ ಆಗಲಿಲ್ವಾ?ʼʼ ಇದಕ್ಕೆ ಅಲ್ಲೇ ಇದ್ದ ಸುಧಾ ಮೂರ್ತಿ ಥಟ್ಟನೆ ಉತ್ತರಿಸಿದರು, ʼʼಇಲ್ಲ, ಅವರಿಗೆ ವರ್ಕಿಂಗ್ ವೈಫ್ ಇದ್ದಳಲ್ಲ!ʼʼ ಈ ಮಾತಿಗೆ ಚಪ್ಪಾಳೆ ಬಿತ್ತು. ಅದಕ್ಕೆ ಕಾರಣ ಇಷ್ಟೆ- ನಾರಾಯಣ ಮೂರ್ತಿ ಇನ್ಫೋಸಿಸ್ ಕಟ್ಟಲು ಮುಂದಾದಾಗ ಅವರೊಬ್ಬ ಸಾಮಾನ್ಯ ಸಾಫ್ಟ್ವೇರ್ ಇಂಜಿನಿಯರ್. ಕೈಯಲ್ಲಿ ಕಾಸಿರಲಿಲ್ಲ. ಆದರೆ ಆ ಹೊತ್ತಿಗೆ ಸುಧಾ ಮೂರ್ತಿ ಶಿಕ್ಷಕಿಯಾಗಿದ್ದರು; ಒಳ್ಳೆಯ ಹೆಸರೂ ಗಳಿಸಿದ್ದರು.
ಪಟಪಟ ಮಾತನಾಡುವ ಸಿಕ್ರೆ ಸಾಕಾ? ಮದ್ವೆಯಾಗುವ ಹುಡುಗನ ಬಗ್ಗೆ ಅನುಶ್ರೀ ಹೇಳಿದ್ದೇನು?
ಇನ್ನು ಸುಧಾ ಮೂರ್ತಿ, ಇನ್ಫೋಸಿಸ್ಗೆ ಏಂಜೆಲ್ ಇನ್ವೆಸ್ಟರ್ ಆದ ಕಥೆ. ಅದು ಹೀಗೆ: "ನಾರಾಯಣ ಮೂರ್ತಿ 1981ರಲ್ಲಿ ಇನ್ಫೋಸಿಸ್ ಪ್ರಾರಂಭಿಸಿದರು. ಆಗ ನಾವು ಮುಂಬೈನ ಬಾಂದ್ರಾದಲ್ಲಿ ಬಾಡಿಗೆ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದೆವು. ಒಂದು ದಿನ ಅವರು ನನ್ನ ಬಳಿ ಬಂದು ಸಾಫ್ಟ್ವೇರ್ ಕಂಪನಿ ಪ್ರಾರಂಭಿಸುತ್ತಿರುವುದಾಗಿ ಹೇಳಿದರು. ನಾವು ಮಧ್ಯಮ ವರ್ಗದ ಕುಟುಂಬದವರು. ಕಂಪನಿ ಕಟ್ಟಲು ಹಣ ಎಲ್ಲಿ ಎಂಬುದು ಪ್ರಶ್ನೆ. ಆಗ ಭಾರತಕ್ಕೆ ಹೇಗೆ ಸಾಫ್ಟ್ವೇರ್ ಕ್ರಾಂತಿಯ ಅಗತ್ಯವಿದೆ ಎಂದು ಅವರು ಭಾಷಣ ಮಾಡಿದರು!ʼʼ ಇಲ್ಲೂ ಕಾಲೆಳೆಯುತ್ತಾರೆ ಸುಧಾ ಮೂರ್ತಿ.
ʼʼಕಂಪನಿ ಕಟ್ಟಿದರೆ ಮುಂದಿನ ಮೂರು ವರ್ಷಗಳ ಕಾಲ ಏನೂ ಆದಾಯ ಇರುವುದಿಲ್ಲ ಎಂದು ನಾರಾಯಣ ಮೂರ್ತಿ ಹೇಳಿದರು. ನೀನು ಕೆಲಸಕ್ಕೆ ಹೋಗಿ ಸಂಸಾರಕ್ಕಾಗಿ ದುಡಿ, ಸಂಪಾದಿಸು, ನನ್ನನ್ನೂ ಬೆಂಬಲಿಸು ಎಂದರು. ನಾನು ವೈಯಕ್ತಿಕವಾಗಿ 10,250 ರೂ. ಸೇವ್ ಮಾಡಿದ್ದೆ. ಅದನ್ನು ನಾರಾಯಣ ಮೂರ್ತಿಗೆ ಕೊಟ್ಟೆ. ಇದು ನನ್ನ ಜೀವನದ ಅತ್ಯುತ್ತಮ ಹೂಡಿಕೆ ಎಂದು ನಾನು ಭಾವಿಸುತ್ತೇನೆ” ಎನ್ನುತ್ತಾರೆ ಸುಧಾ.
ಅಮೆರಿಕದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆಯರ ಪಟ್ಟಿ ಪ್ರಕಟ; ನಾಲ್ವರು ಭಾರತೀಯ ಮೂಲದ ಮಹಿಳೆಯರಿಗೆ ಸ್ಥಾನ