ನಾನು ಶತಾಬ್ದಿ, ಮುರಿದ ಬೆನ್ನು ಮೂಳೆಯೊಂದಿಗೆ ಚಿನ್ನ ಗೆಲ್ಲುವ ಕನಸು ನನ್ನದು!

By Bhavani BhatFirst Published Sep 16, 2021, 6:25 PM IST
Highlights

ಈಕೆ ಓಡಾಡುವುದು ವ್ಹೀಲ್ ಚೇರ್‌ನಲ್ಲಿ. ಎದ್ದು ಓಡಾಡಲಾಗುವುದಿಲ್ಲ. ಆದರೆ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ದೇಶಕ್ಕೆ ಚಿನ್ನ ತಂದು ಕೊಡುವ ಕನಸು ಇವರದು. ಬನ್ನಿ ಇವರ ಸ್ಫೂರ್ತಿದಾಯಕ ಕತೆ ಓದೋಣ

ಟೆರೇಸ್‌ನಿಂದ ಬಿದ್ದು ಬೆನ್ನು ಮೂಳೆ ಮುರಿದು, ದೇಹದ ಕೆಳಭಾಗ ಲಕ್ವಕ್ಕೆ ತುತ್ತಾಗಿ, ತಂದೆಯನ್ನೂ ಕಳೆದುಕೊಂಡು...ಬೇರ್ಯಾರಾದರೂ ಆಗಿದ್ದರೆ ಇಷ್ಟು ಹೊತ್ತಿಗೆ ಹತಾಶರಾಗಿ ಬದುಕುತ್ತಿರುತ್ತಿದ್ದರು. ಆದರೆ ಇವರು ಮಾತ್ರ ವ್ಹೀಲ್‌ ಚೇರ್‌ನಿಂದಲೇ ಚಿನ್ನದ ಕನಸು ಕಾಣುತ್ತಿದ್ದಾರೆ. ಬನ್ನಿ, ಅವರ ಹ್ಯೂಮನ್ಸ್ ಆಫ್ ಬಾಂಬೇಯಲ್ಲಿ ಪ್ರಕಟವಾದ ಅವರ ಕತೆಯನ್ನು ಅವರ ಬಾಯಿಯಿಂದಲೇ ಕೇಳೋಣ.

 

ನನ್ನ ಹೆಸರು ಶತಾಬ್ದಿ. ನನ್ನ ಹೆತ್ತವರು ನನಗೆ ಶತಾಬ್ದಿ ಎಂಬ ವೇಗದ ರೈಲಿನ ಹೆಸರಿಟ್ಟರು. ಏಕೆಂದರೆ ನಾನು ಒಂದು ಸ್ಥಳದಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದ ಹೈಪರ್ಆಕ್ಟಿವ್ ಮಗುವಾಗಿದ್ದೆ. ನನಗೆ ದೊಡ್ಡ ಕನಸುಗಳಿದ್ದವು- ನಾನು ಸೇನಾ ಅಧಿಕಾರಿಯಾಗಲು ಮತ್ತು ದೇಶಕ್ಕೆ ಸೇವೆ ಸಲ್ಲಿಸಲು ಬಯಸಿದ್ದೆ. ಆದರೆ ನಾನು 21 ವರ್ಷದವಳಿದ್ದಾಗ, ಟೆರೇಸ್‌ನಿಂದ ಜಾರಿ ಕೆಳಗೆ ಬಿದ್ದು ಬಿದ್ದೆ. ನನ್ನ ಕಿರುಚಾಟ ಕೇಳಿ ನನ್ನ ಪೋಷಕರು ಧಾವಿಸಿಬಂದರು. ಆಸ್ಪತ್ರೆಯಲ್ಲಿ 5 ಗಂಟೆಗಳ ನಂತರ ನನಗೆ ಎಚ್ಚರವಾಯಿತು. ವೈದ್ಯರು ಹೇಳಿದರು- ''ನೀವು ಸೊಂಟದಿಂದ ಕೆಳಗೆ ಪಾರ್ಶ್ವವಾಯುವಿಗೆ ಒಳಗಾಗಿದ್ದೀರಿ; ನೀವು ಇನ್ನು ಮುಂದೆ ನಡೆಯಲು ಆಗುವುದಿಲ್ಲ.'' ನನ್ನ ಜಗತ್ತು ಕುಸಿದುಬಿದ್ದಿತ್ತು.

ಕೆಲವು ಕಾಲ ನಾನು ಎಷ್ಟೊಂದು ಅಸಹಾಯಕಳಾಗಿದ್ದೆ ಎಂದರೆ, ಸಹಾಯವಿಲ್ಲದೆ ಟಾಯ್ಲೆಟ್‌ಗೆ ಹೋಗಲೂ ನಂಗೆ ಸಾಧ್ಯವಾಗಲಿಲ್ಲ. ನಾಚಿಕೆಯಾಗುತ್ತಿತ್ತು, ನನ್ನ ಆತ್ಮವಿಶ್ವಾಸ ಕುಸಿಯಿತು. ಸಂಬಂಧಿಕರು ನನ್ನ ಹೆತ್ತವರಿಗೆ ಹೇಳುವುದನ್ನು ನಾನು ಕೇಳಿಸಿಕೊಳ್ಳುತ್ತಿದ್ದೆ- "ಹೀಗೆ ಬದುಕುವುದರಿಂದ ಪ್ರಯೋಜನವೇನು, ಇದಕ್ಕಿಂತ ಸತ್ತಾದರೂ ಹೋಗಬಹುದಲ್ಲವೇ?' ಆದರೆ ನನ್ನ ಕುಟುಂಬ ನನ್ನ ರಕ್ಷಣೆಗೆ ಬಂದಿತು. ನನ್ನ ಮಗಳು ಭವಿಷ್ಯದಲ್ಲಿ ಬಹಳ ಮುಂದೆ ಬರುತ್ತಾಳೆ' ಎಂದು ಪಾಪಾ(ತಂದೆ) ಹೇಳುತ್ತಿದ್ದರು.

ಮುಂದಿನ 6 ವರ್ಷಗಳಲ್ಲಿ, ಆಸ್ಪತ್ರೆಯೇ ನನ್ನ ಮನೆಯಾಗಿತ್ತು. ನನ್ನ ಕುಟುಂಬ ನನ್ನ ಚಿಕಿತ್ಸೆ ಸಾಲ ಮಾಡಿ ಹೆಣಗಾಡುತ್ತಿತ್ತು. ಸಂಬಂಧಿಕರಿಂದ ಸಾಲ ಪಡೆದರು. ತಾಯಿ ತಮ್ಮ ಪಿಂಚಣಿ ಹಣವನ್ನು ನನ್ನ ಚಿಕಿತ್ಸೆಗೆ ಪಾವತಿಸಿದರು. ನನ್ನ ಚಿಕಿತ್ಸೆ ಮುಗಿದ ನಂತರ ನಾನು ದೃಢನಿರ್ಧಾರ ಮಾಡಿದೆ- '‘ಈ ಘಟನೆಯು ನನ್ನ ಜೀವನವನ್ನು ಮುಗಿಸಲು ನಾನು ಬಿಡುವುದಿಲ್ಲ, ನಾನು ಸ್ವತಂತ್ರಳಾಗಿ ಬೆಳೆಯುತ್ತೇನೆ''

ಕಣ್ಣಿಲ್ಲದಿದ್ದರೇನು, ಕೈ ಇದ್ಯಾಲ್ಲಾ ? 5 ಪತ್ತೆದಾರಿ ಬರೆದ ಗಟ್ಟಿಗಿತ್ತಿ

ನಾನು ಬ್ಯಾಂಕಿಂಗ್ ಪರೀಕ್ಷೆಗಳಿಗೆ ತಯಾರಿ ಆರಂಭಿಸಿದೆ ಮತ್ತು ಮೊದಲ ಪ್ರಯತ್ನದಲ್ಲೇ ಅವುಗಳನ್ನು ಪಾಸು ಮಾಡಿದೆ! ಪಾಪಾ ಹೆಮ್ಮೆಯಿಂದ ಹೇಳಿದರೆ- ''ನಾನು ಮ್ಯಾನೇಜರ್‌ನ ತಂದೆ...'' ಆದರೆ ಆ ಸಂತೋಷವು ಅಲ್ಪಕಾಲಿಕವಾಗಿತ್ತು- ಅವರು ಹೃದಯಾಘಾತಕ್ಕೆ ಒಳಗಾದರು ಮತ್ತು 6 ತಿಂಗಳಲ್ಲಿ ನಿಧನರಾದರು. ನಾನು ಟೆರೇಸ್‌ನಿಂದ ಬಿದ್ದಾಗ ತಿಂದುದಕ್ಕಿಂತಲೂ ಕೆಟ್ಟ ನೋವನ್ನು ಅನುಭವಿಸಿದೆ.

ತಂದೆಯಿಲ್ಲದ ಶೂನ್ಯವನ್ನು ತುಂಬಲು ನಾನು ಸಾಮಾಜಿಕ ಕಾರ್ಯಗಳನ್ನು ಮಾಡಲು ಪ್ರಾರಂಭಿಸಿದೆ. ಓವರ್‌ಟೈಮ್ ಮಾಡಿದೆ. ಇದು ನನಗೆ ಗುಣವಾಗಲು ಸಹಾಯ ಮಾಡಿತು. ನಿಜವಾಗಿಯೂ ನನ್ನ ಜನರು ಮತ್ತು ದೇಶಕ್ಕೆ ಸೇವೆ ಸಲ್ಲಿಸಬೇಕೆಂಬುದು ಅರಿವಾಯಿತು. ಒಂದು ವರ್ಷದ ನಂತರ, ಪ್ಯಾರಾಲಿಂಪಿಕ್ಸ್ ನೋಡುವಾಗ, ನನಗೆ ದೀಪಾ ಮಲಿಕ್ ಸ್ಫೂರ್ತಿ ಎನಿಸಿದರು. ನಾನು ಯೋಚಿಸಿದೆ, "ದೀಪಾ ಸಾಧನೆ ಮಾಡಬಹುದಾದರೆ, ನಾನು ಕೂಡ ಮಾಡಬಹುದು!’

ಹಾಗಾಗಿ, 31ನೇ ವಯಸ್ಸಿನಲ್ಲಿ, ನಾನು ತರಬೇತುದಾರರನ್ನು ಸಂಪರ್ಕಿಸಿದೆ. ಶಾಟ್ ಪುಟ್, ಜಾವೆಲಿನ್ ಥ್ರೋ ಮತ್ತು ಡಿಸ್ಕಸ್ ಥ್ರೋನಲ್ಲಿ ತರಬೇತಿಯನ್ನು ಆರಂಭಿಸಿದೆ. ನಾನು ತರಬೇತಿಗಾಗಿ ಬೆಳಿಗ್ಗೆ 5 ಗಂಟೆಗೆ ಏಳುತ್ತೇನೆ, ಮುಂಜಾನೆ 9ರಿಂದ 6ರವರೆಗೆ ಬ್ಯಾಂಕಿನಲ್ಲಿ ಕೆಲಸ ಮಾಡುತ್ತೇನೆ ಮತ್ತು ಮತ್ತೆ ತರಬೇತಿ ಪಡೆಯುತ್ತೇನೆ. ಆರಂಭದಲ್ಲಿ, ತೂಕವನ್ನು ಎತ್ತುವುದು ಕಷ್ಟಕರವಾಗಿತ್ತು; ನನಗೆ ನೋವಿತ್ತು, ಆದರೆ ನಾನು ಅದನ್ನು ಹಲ್ಲು ಕಚ್ಚಿ ಸಹಿಸಿಕೊಂಡು ಮುಂದುವರಿಯುತ್ತಿದ್ದೆ.

ಅಮೆರಿಕದಲ್ಲಿ ಪೈಲಟ್‌ ಆದ ಗುಜರಾತ್ ರೈತನ 19 ವರ್ಷದ ಪುತ್ರಿ!

ರಾಜ್ಯ ಚಾಂಪಿಯನ್‌ಶಿಪ್‌ಗೆ ನಾನು ಕಷ್ಟಪಟ್ಟು ತರಬೇತಿ ಪಡೆದೆ ಮತ್ತು 3 ತಿಂಗಳ ನಂತರ, ಶಾಟ್‌ ಪುಟ್, ಜಾವೆಲಿನ್ ಮತ್ತು ಡಿಸ್ಕಸ್ ಥ್ರೋಗಳಲ್ಲಿ ನಾನು ಚಿನ್ನದ ಪದಕ ಗೆದ್ದೆ! ಅಮ್ಮ ತುಂಬಾ ಭಾವುಕರಾಗಿದ್ದರು; ಆ ದಿನ ನಾವೆಲ್ಲರೂ ಅಪ್ಪನನ್ನು ನೆನಪಿಸಿಕೊಂಡೆವು, ಅವನು ಇದ್ದಿದ್ದರೆ ಹೆಮ್ಮೆ ಪಡುತ್ತಿದ್ದ ಎಂದು ನನಗೆ ತಿಳಿದಿತ್ತು. ತದನಂತರ ನಾನು ಪತ್ರಿಕೆಗಳಲ್ಲಿ ನನ್ನ ವಿಜಯದ ಬಗ್ಗೆ ಓದಿದೆ. "ಇಂಥ ಮಗುವಿದ್ದರೆ ಏನು ಪ್ರಯೋಜನ?'' ಎಂಬ ಸಂಬಂಧಿಕರ ಕೊಂಕುಗಳಿಗೆ ಅದರಲ್ಲಿ ಉತ್ತರವಿತ್ತು!

ಅದರ ನಂತರ, ನಾನು ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕ್ರೀಡಾಸ್ಪರ್ಧೆಗಳಲ್ಲಿ ಭಾಗವಹಿಸಿ ಗೆದ್ದೆ. ನಾನು ಈಗ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ತಯಾರಿ ನಡೆಸುತ್ತಿದ್ದೇನೆ. ಈ ಬಾರಿ ಅಲ್ಲಿಯೂ ಚಿನ್ನದ ಪದಕ ಗೆಲ್ಲುವ ಹಠ ನನ್ನದು, ಗೆದ್ದೇ ಗೆಲ್ಲುತ್ತೇನೆ!

 

click me!