ನಾನು ಮನೆಗೆ ಬಂದ್ರೆ ಊಟ ಹಾಕ್ತೀರಾ, ಸಂವಾದದ ವೇಳೆ ಫಲಾನುಭವಿಗೆ ಮೋದಿ ಪ್ರಶ್ನೆ!

Jun 20, 2022, 8:45 PM IST

ಮೈಸೂರು (ಜೂನ್ 20): ಕರ್ನಾಟಕ (Karnataka) ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Prime Minister Narendra Modi) ಸೋಮವಾರ ಸಂಜೆಯ ವೇಳೆಗೆ ಮೈಸೂರಿಗೆ ತೆರಳಿದರು. ಮೈಸೂರಿನಲ್ಲಿ ವಿವಿಧ ಕಾರ್ಯಕ್ರಮಗಳಿಗೂ ಮುನ್ನ ಹಳೆ ಮೈಸೂರು (Old Mysuru) ವಿಭಾಗದಲ್ಲಿ ಕೇಂದ್ರದ ಯೋಜನೆಗಳಿಂದ ಲಾಭ ಪಡೆದುಕೊಂಡವರೊಂದಿಗೆ (beneficiaries of central government scheme)ಸಂವಾದ ನಡೆಸಿದರು.

ಈ ವೇಳೆ ಪ್ರಧಾನಿ ಮಂತ್ರಿ ಆವಾಸ್ ಯೋಜನೆ ಸೇರಿದಂತೆ ಇತರ ಯೋಜನೆಗಳಿಂದ ಲಾಭ ಪಡೆದುಕೊಂಡು ಸ್ವಂತ ಮನೆ ಕಟ್ಟಿಕೊಂಡ ಯಶೋದಾ ಎನ್ನುವ ಮಹಿಳೆಯು ಯೋಜನೆಯ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಮನೆಗೆ ನೀರಿ ಸಂಪರ್ಕವಿರಲಿಲ್ಲ. ಸರ್ಕಾರದ ಯೋಜನೆಯಿಂದಲೇ ಮನೆಗೆ ಸಂಪರ್ಕ ಸಿಕ್ಕಿದೆ. ಮನೆಯನ್ನೂ ಚೆನ್ನಾಗಿ ಕಟ್ಟಿಕೊಂಡಿದ್ದೇವೆ. ಇದಕ್ಕೂ ಸರ್ಕಾರದ ಸಹಾಯ ಸಿಕ್ಕಿತು ಎಂದರು. ಈ ವೇಳೆ ಮಾತನಾಡಿದ ಮೋದಿ ಹಾಗಿದ್ದರೆ, ನಾನು ಮನೆಗೆ ಬಂದರೆ ನನಗೆ ಊಟ ಮಾಡಿ ಹಾಕ್ತೀರಾ ಎಂದು ಖುಷಿಯಿಂದಲೇ ಪ್ರಶ್ನೆ ಮಾಡಿದರು. ಇದಕ್ಕೆ ಮಹಿಳೆಯು, ಖಂಡಿತವಾಗಿ ಬನ್ನಿ, ನಿಮಗೆ ಏನು ಬೇಕೋ ಎಲ್ಲವನ್ನೂ ಮಾಡಿ ಹಾಕುತ್ತೇವೆ ಎಂದಾಗ ಮೋದಿ ಮುಖದಲ್ಲಿ ಯೋಜನೆಗಳು ಜನರಿಗೆ ಮುಟ್ಟಿದ ಸಂತೃಪ್ತಿ ಕಂಡಿತು.

ಸುತ್ತೂರು ಮಠ ಅನ್ನ, ಅಕ್ಷರ ದಾಸೋಹಕ್ಕೆ ಪ್ರಸಿದ್ಧಿ, ಕರ್ನಾಟಕ ಮಠದ ಶ್ರೇಷ್ಠತೆ ವಿವರಿಸಿದ ಮೋದಿ!

ಅದರೊಂದಿಗೆ ಪಾಲ್ಗೊಂಡಿದ್ದ ಇತರ ಫಲಾನುಭವಿಗಳು, ಜಲಜೀವನ ಮಿಷನ್ (JalJeevan) , ಆಯುಷ್ಮಾನ್ ಭಾರತ, ಮುದ್ರಾ (Mudra) ಯೋಜನೆ ಇವುಗಳಿಂದ ತಾವು ಪಡೆದ ಲಾಭದ ಬಗ್ಗೆ ಹೇಳಿಕೊಂಡರು. ಒಬ್ಬ ವ್ಯಕ್ತಿ ಬಹುತೇಕ ಎಲ್ಲಾ ಯೋಜನೆಯ ಲಾಭವನ್ನು ಪಡೆದುಕೊಂಡಿದ್ದನ್ನು ಕೇಳಿದ್ದಾಗ, ನೀವು ಸರ್ಕಾರದ ಯಾವ ಯೋಜನೆಯನ್ನೂ ಬಿಟ್ಟಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.