ನಾವು ಬದುಕಿದ್ದೇವೆ: ಅತೃಪ್ತರ ಹೊಸ ವಿಡಿಯೋ!

Jul 21, 2019, 3:50 PM IST

ಮುಂಬೈ(ಜು.21): ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿ ಬೀಡು ಬಿಟ್ಟಿರುವ ಅತೃಪ್ತ ಶಾಸಕರು, ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ.

ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆ ವೇಳೆ ಬಸವಕಲ್ಯಾಣ ಶಾಸಕ ವಿ ನಾರಾಯಣ್ ರಾವ್ ಮಾತನಾಡಿ, ಅತೃಪ್ತ ಶಾಸಕರು ಬದುಕಿದ್ದಾರೋ ಸತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದ್ದರು.

ಇದಕ್ಕೆ ಉತ್ತರವೆಂಬಂತೆ ಹೊಸ ವಿಡಿಯೋ ಬಿಡುಗಡೆ ಮಾಡಿರುವ 13 ಜನ ಅತೃಪ್ತ ಶಾಸಕರು, ನಾವು ಜೀವಂತವಾಗಿದ್ದು ಒಟ್ಟಾಗಿದ್ದೇವೆ ಎಂದು ಸಂದೇಶ ರವಾನಿಸಿದ್ದಾರೆ.

ವಿಡಿಯೋದಲ್ಲಿ ಮಾತನಾಡಿರುವ ಎಲ್ಲಾ 13 ಜನ ಶಾಸಕರು, ಯಾವುದೇ ಆಮೀಷಕ್ಕೆ ಬಲಿಯಾಗಿ ತಾವು ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿಲ್ಲ ಬದಲಾಗಿ ಆತ್ಮ ಸ್ವಾಭಿಮಾನ ಉಳಿಸಿಕೊಳ್ಳಲು ಮುಂಬೈಗೆ ಬಂದಿದ್ದಾಗಿ ತಿಳಿಸಿದ್ದಾರೆ.

ಸ್ಪೀಕರ್ ತಮ್ಮ ರಾಜೀನಾಮೆ ಅಂಗೀಕರಿಸುವವರೆಗೂ ತಾವು ಬೆಂಗಳೂರಿಗೆ ಬರುವುದಿಲ್ಲ ಎಂದಿರುವ ಅತೃಪ್ತರು, ನಾಳೆ(ಜು.22) ವಿಧಾನಸಭೆಯಲ್ಲಿ ನಡೆಯಲಿರುವ ವಿಶ್ವಾಸಮತ ಯಾಚನೆ ವೇಳೆ ಭಾಗವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.