ಉತ್ತರಾಖಂಡದ ತ್ರಿಯುಗಿನಾರಾಯಣ ದೇವಾಲಯದಲ್ಲಿ ಶಿವ-ಪಾರ್ವತಿಯರ ವಿವಾಹದ ಸಂದರ್ಭದಲ್ಲಿ ಉರಿಸಿದ ಅಗ್ನಿಕುಂಡ ಇಂದಿಗೂ ಉರಿಯುತ್ತಿದೆ. ಇಂದಿಗೂ ಪ್ರತಿವರ್ಷ ನೂರಾರು ಜೋಡಿಗಳು ಇಲ್ಲಿ ಮದುವೆಯಾಗುತ್ತಿದ್ದು, ಈ ದೇವಾಲಯ ಪ್ರೀತಿ, ಭಕ್ತಿ ಮತ್ತು ದೈವಿಕ ಸಂಬಂಧದ ಶಾಶ್ವತ ಸಂಕೇತವಾಗಿದೆ.
ನಮ್ಮದು ದೇವಾಲಯಗಳು, ಪವಾಡಗಳು, ದಂತಕಥೆಗಳ ದೇಶ. ಇಲ್ಲಿ ಸಾವಿರಾರು ಪವಿತ್ರ ಮತ್ತು ದೈವಿಕ ಸ್ಥಳಗಳಿವೆ. ಇಲ್ಲಿ ಮೂಕವಿಸ್ಮಿತಗೊಳಿಸುವಂಥ ಅಚ್ಚರಿಗಳೂ, ವಿಚಿತ್ರ ಆಚರಣೆಗಳೂ, ದಿಗ್ಭ್ರಮೆಗೊಳಿಸುವ ಸತ್ಯಗಳೂ ಇವೆ. ಬಿಳಿ ಇಲಿಗಳನ್ನು ಪೂಜಿಸುವ ದೇವಾಲಯಗಳಿಂದ ಹಿಡಿದು, ಮುಟ್ಟನ್ನು ಆಚರಿಸುವ ದೇವಾಲಯದ ಜಾತ್ರೆಗಳವರೆಗೆ, ಕುದಿಯುವ ನೀರನ್ನು ತಣ್ಣಗಾಗಿಸುವ ವಿಗ್ರಹಗಳು ಮತ್ತು ಮೂರ್ತಿಗಳಿಂದ ಹಿಡಿದು ಶತಮಾನಗಳಿಂದ ಬೆಳಗುತ್ತಿರುವ ಪವಿತ್ರ ಬೆಂಕಿಯವರೆಗೆ, ಪ್ರತಿಯೊಂದು ಭಾರತೀಯ ದೇವಾಲಯದಲ್ಲೂ ವಿಶಿಷ್ಟವಾದದ್ದೇನಾದರೂ ಇದೆ.
ಅಂಥ ಪವಿತ್ರ ದೇವಾಲಯಗಳಲ್ಲಿ, ಉತ್ತರಾಖಂಡದಲ್ಲಿ ಈ ಸಣ್ಣ ದೇವಾಲಯವೂ ಒಂದು. ಅದು ಶಿವ ಮತ್ತು ಪಾರ್ವತಿಯ ವಿವಾಹ ನಡೆದ ಜಾಗವಂತೆ. ಅವರ ವಿವಾಹಕ್ಕಾಗಿ ಉರಿಸಿದ ಬೆಂಕಿ ಇನ್ನೂ ಪ್ರಕಾಶಮಾನವಾಗಿ ಉರಿಯುತ್ತಿದೆಯಂತೆ. ಇದನ್ನು 'ಅಖಂಡ ಧುನಿ' ಅಥವಾ ಶಾಶ್ವತ ಬೆಂಕಿ ಎಂದು ಕರೆಯಲಾಗುತ್ತದೆ. ಈ ಪವಿತ್ರ ಬೆಂಕಿ ಅವರ ಶಿವ ಪಾರ್ವತಿಯರ ದೈವಿಕ ಒಕ್ಕೂಟಕ್ಕೆ ಸಾಕ್ಷಿಯಾಗಿದೆ. ಇದು ಪ್ರೀತಿ, ಭಕ್ತಿ ಮತ್ತು ದೈವಿಕ ಸಂಬಂಧದ ಶಾಶ್ವತ ಸಂಕೇತವಾಗಿದೆ.
'ತ್ರಿಯುಗಿನಾರಾಯಣ' ಎಂದು ಕರೆಯಲಾಗುವ ಈ ದೇವಾಲಯ ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯಲ್ಲಿದೆ. ಸುತ್ತಮತ್ತ ಹಿಮಾಲಯದ ಸುಂದರ ಮತ್ತು ರೋಮಾಂಚಕ ನೋಟವಿದೆ. ಈ ದೇವಾಲಯವು ರಮ್ಯವಾದ ಸ್ಥಳದಲ್ಲಿದ್ದು, ಪ್ರಶಾಂತತೆಯಿಂದ ತುಂಬಿದೆ. ದೇವಾಲಯಕ್ಕೆ ಹೋಗುವ ದಾರಿಯು ಸುಂದರವಾದ ಮರಗಳು, ಹೂವುಗಳು ಮತ್ತು ವನ್ಯಜೀವಿಗಳಿಂದ ಕೂಡಿದೆ.
ತ್ರಿಯುಗಿನಾರಾಯಣನ ಕಥೆ
ನಂಬಿಕೆಗಳ ಪ್ರಕಾರ ತ್ರಿಯುಗಿನಾರಾಯಣವು ಶಿವ ಮತ್ತು ಪಾರ್ವತಿ ವಿವಾಹವಾದ ಸ್ಥಳ ಮತ್ತು ದೇವಾಲಯ. ಅವರ ವಿವಾಹವು ಸಾಮಾನ್ಯ ಕಾರ್ಯಕ್ರಮವಾಗಿರಲಿಲ್ಲ. ಶ್ರೇಷ್ಠ ಗುರುಗಳು, ಸಂತರು, ಋಷಿಗಳು ಮತ್ತು ದೇವತೆಗಳು ಭಾಗವಹಿಸಿದ್ದ ದೈವಿಕ ಸಮಾರಂಭವಾಗಿತ್ತು. ವಿವಾಹವನ್ನು ಬ್ರಹ್ಮ ದೇವರು ನಿರ್ವಹಿಸಿದ್ದರು. ಮಹಾವಿಷ್ಣುವು ಪಾರ್ವತಿಯ ಸಹೋದರನ ಪಾತ್ರವನ್ನು ನಿರ್ವಹಿಸಿದ. ಪಾರ್ವತಿಯ ಕನ್ಯಾದಾನವನ್ನು ಮಾಡುವ ಜವಾಬ್ದಾರಿಯನ್ನು ವಹಿಸಿಕೊಂಡ.
ಇದಕ್ಕೂ ಮೊದಲು ಶಿವನ ಪ್ರೀತಿ ಮತ್ತು ಒಡನಾಟವನ್ನು ಗೆಲ್ಲಲು ಪಾರ್ವತಿ ತೀವ್ರವಾದ ಧ್ಯಾನ ಮತ್ತು ತಪಸ್ಸು ಮಾಡಬೇಕಾಯಿತು. ವರ್ಷಗಳ ತಪಸ್ಸಿನ ನಂತರ ಶಿವನು ಅಂತಿಮವಾಗಿ ಅವಳನ್ನು ಮದುವೆಯಾಗಲು ಒಪ್ಪಿದ. ಅವರ ದೈವಿಕ ವಿವಾಹದಲ್ಲಿ ಎಲ್ಲಾ ದೇವರು, ದೇವತೆಗಳು, ಅಸುರರು, ದೇವಲೋಕದ ಜೀವಿಗಳು ಮತ್ತು ಅಪ್ಸರೆಯರು, ಸಂತರು ಮತ್ತು ಋಷಿಗಳು ಮತ್ತು ಇನ್ನೂ ಅನೇಕ ಜನರು ಭಾಗವಹಿಸಿದ್ದರು.
ಭಾರತದ ಕಟ್ಟಕಡೆಯ ಗ್ರಾಮದ ವಿಶೇಷತೆಯೇನು? ವಿದ್ಯುತ್, ನೀರು ಇಲ್ಲದ ಗ್ರಾಮ ವೀಕ್ಷಣೆಗೆ ಪ್ರವಾಸಿಗರಿಂದ ಭಾರೀ ಬೇಡಿಕೆ!
ಮದುವೆಯಲ್ಲಿ ದಂಪತಿಗಳು 7 ಬಾರಿ ಅಗ್ನಿಗೆ ಪ್ರದಕ್ಷಿಣೆ ಹಾಕುತ್ತಾರೆ. ಇದೇ ಸಪ್ತಪದಿ. ಶಿವ ಮತ್ತು ಪಾರ್ವತಿಯರ ವಿವಾಹದ ಸಮಯದಲ್ಲಿ ಹಾಗೆ ಬೆಳಗಿದ ಪವಿತ್ರ ಬೆಂಕಿ ಇಂದಿಗೂ ಉರಿಯುತ್ತಿದೆ. 'ಅಖಂಡ ಧುನಿ' ಸಾವಿರಾರು ವರ್ಷಗಳಿಂದ ಉರಿಯುತ್ತಿರುವುದರಿಂದ ಇದು ದೇವಾಲಯದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿದೆ. ದೇವಾಲಯಕ್ಕೆ ಭೇಟಿ ನೀಡುವ ಪುರೋಹಿತರು ಮತ್ತು ಭಕ್ತರು ಇದನ್ನು ಮರದ ಕಟ್ಟಿಗೆಗಳಿಂದ ಜೀವಂತವಾಗಿರಿಸುತ್ತಾರೆ. ಈ ಬೆಂಕಿಯ ಸುತ್ತಲೂ ಪ್ರದಕ್ಷಿಣೆ ಮಾಡುವ ದಂಪತಿಗಳು ಶಾಶ್ವತವಾಗಿ ಒಟ್ಟಿಗೆ ಇರುತ್ತಾರೆ ಎಂದು ಹೇಳಲಾಗುತ್ತದೆ.
ಜನರು ತ್ರಿಯುಗಿನಾರಾಯಣ ದೇವಾಲಯದ ವೈಶಿಷ್ಟ್ಯದ ಬಗ್ಗೆ ತಿಳಿದ ಬಳಿಕ ಇಲ್ಲಿ ಬಂದು ಮದುವೆಯಾಗುವ ಜೋಡಿಗಳ ಸಂಖ್ಯೆ ಹೆಚ್ಚಿದೆ. ಯುವ ಜೋಡಿಗಳು ತಿಂಗಳುಗಳ ಮುಂಚಿತವಾಗಿ ದೇವಾಲಯದಲ್ಲಿ ತಮ್ಮ ವಿವಾಹದ ಮುಹೂರ್ತ ಕಾಯ್ದಿರಿಸುತ್ತಾರೆ. ಅಖಂಡ ಧುನಿಗೆ ಪ್ರದಕ್ಷಿಣೆ ಬಂದು ಅವರಂತೆಯೇ ಶಾಶ್ವತ ದಂಪತಿಗಳಾಗಿರಲು ಬಯಸುತ್ತಾರೆ.
ಈ ದೇಗುಲದಲ್ಲಿ ದೇವಿಗೆ ಹೂವು, ಹಣ್ಣುಗಳ ಬದಲಾಗಿ ಸ್ಯಾನಿಟರಿ ಪ್ಯಾಡ್ ಗಳನ್ನ ಅರ್ಪಿಸ್ತಾರೆ ಭಕ್ತರು