ಕೋವಿಡ್-19 ಪರಿಹಾರ ಕಾರ್ಯಕ್ಕೆ ಇನ್ಫೋಸಿಸ್ ಫೌಂಡೇಷನ್‌ನಿಂದ 100 ಕೋಟಿ ರೂಪಾಯಿ ದೇಣಿಗೆ

By Suvarna NewsFirst Published Mar 31, 2020, 8:01 PM IST
Highlights

ಕರ್ನಾಟಕದ ಹೆಮ್ಮೆಯ ಸಂಸ್ಥೆ ಇನ್ಫೋಸಿಸ್ ಕೊರೋನಾ ಪರಿಹಾರ ನಿಧಿಗೆ 100 ಕೋಟಿ ರುಪಾಯಿ ದೇಣಿಗೆ ನೀಡಿದೆ. ಇದರಲ್ಲಿ 50 ಕೋಟಿ ರುಪಾಯಿಗಳನ್ನು ಪಿಎಂ ಕೇರ್ಸ್‌ಗೆ ನೀಡುವ ಮೂಲಕ ಸಾಮಾಜಿಕ ಬದ್ಧತೆ ಮೆರೆದಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

ಬೆಂಗಳೂರು(ಮಾ.31): ಇನ್ಫೋಸಿಸ್‌ನ ಸಿಎಸ್‌ಆರ್ ಮತ್ತು ಜನೋಪಕಾರಿ ಸಂಸ್ಥೆಯಾಗಿರುವ ಇನ್ಫೋಸಿಸ್ ಫೌಂಡೇಷನ್ ದೇಶದಲ್ಲಿ ಕೋವಿಡ್-19 ವಿರುದ್ಧ ಹೋರಾಟಕ್ಕೆ ಒಟ್ಟು 100 ಕೋಟಿ ರೂಪಾಯಿಗಳ ದೇಣಿಗೆಯನ್ನು ನೀಡುವುದಾಗಿ ಘೋಷಿಸಿದೆ. ಈ ಹಣದಲ್ಲಿ ಪಿಎಂ ಕೇರ್ಸ್ ನಿಧಿಗೆ 50 ಕೋಟಿ ರೂಪಾಯಿಗಳನ್ನು ನೀಡಲಿದೆ. 

ಇನ್ಫೋಸಿಸ್ ಮೂರು ಪ್ರಮುಖವಾದ ಕ್ಷೇತ್ರಗಳಿಗೆ ಈ ಹಣವನ್ನು ನೀಡುತ್ತಿದೆ:

1. ದೇಶಾದ್ಯಂತ ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ನೆರವಾಗಲು ಮತ್ತು ಈ ಚಿಕಿತ್ಸೆಗಾಗಿಯೇ ಆಸ್ಪತ್ರೆಗಳ ಸಾಮರ್ಥ್ಯವನ್ನು ವಿಸ್ತರಣೆ ಮಾಡಲು ಬಳಸಿಕೊಳ್ಳಲಾಗುತ್ತದೆ. ವಿಶೇಷವಾಗಿ ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲ ವರ್ಗದ ರೋಗಿಗಳ ಚಿಕಿತ್ಸೆಗಾಗಿ ಈ ಹಣವನ್ನು ಬಳಸಿಕೊಳ್ಳಲಾಗುತ್ತದೆ.

2. ವೆಂಟಿಲೇಟರ್‌ಗಳು, ಪರೀಕ್ಷಾ ಕಿಟ್‌ಗಳು ಮತ್ತು ಪರ್ಸನಲ್ ಪ್ರೋಆಕ್ಟೀವ್ ಇಕ್ವಿಪ್‌ಮೆಂಟ್ (ಪಿಪಿಇ)ಗಳಾದ ಮಾಸ್ಕ್‌ಗಳು ಸೇರಿದಂತೆ ಇನ್ನಿತರೆ ಪರಿಕರಗಳನ್ನು ಆರೋಗ್ಯರಕ್ಷಣೆ ಸಿಬ್ಬಂದಿಗೆ ಒದಗಿಸಲು.

3. ಸಮಾಜದ ದುರ್ಬಲ ವರ್ಗದವರಿಗೆ ಆಹಾರ ಮತ್ತು ಪೌಷ್ಠಿಕಾಂಶ ಲಭ್ಯವಾಗುವಂತೆ ಮಾಡಲು ಇದನ್ನು ಬಳಸಿಕೊಳ್ಳಲಾಗುತ್ತದೆ. ಈ ಮೂಲಕ ಪ್ರಸ್ತುತ ಆರ್ಥಿಕ ಪರಿಣಾಮ ಉಂಟಾಗಿರುವ ಹೊರೆಯಿಂದ ಹೊರಬರಲು ಈ ಹಣ ವಿನಿಯೋಗವಾಗಲಿದೆ.

ಕಳೆದ ಎರಡು ವಾರಗಳ ಹಿಂದೆ ಇನ್ಫೋಸಿಸ್ ಬೆಂಗಳೂರಿನಲ್ಲಿ ಕೋವಿಡ್-19 ರೋಗಿಗಳ ಚಿಕಿತ್ಸೆಗೆಂದೇ ಪ್ರತ್ಯೇಕ ಆಸ್ಪತ್ರೆ ಸ್ಥಾಪನೆಗೆ ನೆರವನ್ನು ಘೋಷಣೆ ಮಾಡಿತ್ತು. ಇದಲ್ಲದೇ, ದೇಶದ ಹಲವಾರು ಮಿಲಿಟರಿ ಮತ್ತು ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯಕೀಯ ಮತ್ತು ಪಿಪಿಇ ಸಲಕರಣೆಗಳನ್ನು ಒದಗಿಸುವುದಾಗಿ ಪ್ರಕಟಿಸಿದೆ. ಇದಲ್ಲದೇ, ಫೌಂಡೇಷನ್ ಅಗತ್ಯವಿರುವ ಸಾವಿರಾರು ಜನರಿಗೆ ಆಹಾರ ಮತ್ತು ನೈರ್ಮಲ್ಯ ಕಿಟ್‌ಗಳನ್ನು ಪೂರೈಕೆ ಮಾಡಲು ಹಲವಾರು ಎನ್‌ಜಿಒಗಳಿಗೆ ನೆರವು ನೀಡುತ್ತಿದೆ.

ಕೊರೋನಾ ಮಣಿಸಲು ಪಿಎಂ ಕೇರ್ಸ್ ನಿಧಿಗೆ 500 ಕೋಟಿ ದೇಣಿಗೆ ನೀಡಿದ ರಿಲಯನ್ಸ್ ಇಂಡಸ್ಟ್ರೀಸ್‌

ಈ ಬಗ್ಗೆ ಮಾತನಾಡಿದ ಇನ್ಫೋಸಿಸ್ ಫೌಂಡೇಷನ್‌ನ ಅಧ್ಯಕ್ಷೆ ಸುಧಾ ಮೂರ್ತಿ ಅವರು, “ಹಲವಾರು ಅನಿರೀಕ್ಷಿತ ಸಮಯಗಳು ಬರುತ್ತವೆ. ಸಮಾಜದ ಪ್ರತಿಯೊಂದು ವರ್ಗವೂ ಈ ಸವಾಲುಗಳನ್ನು ಮೆಟ್ಟಿ ನಿಲ್ಲುವ ಅಗತ್ಯವಿದೆ. ಇನ್ಫೋಸಿಸ್ ಫೌಂಡೇಷನ್ ಯಾವಾಗಲೂ ಕಠಿಣ ಪರಿಸ್ಥಿತಿಗಳಲ್ಲಿ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ತನ್ನ ಬೆಂಬಲವನ್ನು ನೀಡುತ್ತಾ ಬರುತ್ತಿದೆ. ಇದೀಗ ಎದುರಾಗಿರುವ ಜಾಗತಿಕ ಸಾಂಕ್ರಾಮಿಕ ಪಿಡುಗಿನ ವಿರುದ್ಧ ಹೋರಾಟ ಮಾಡುತ್ತಿರುವ ಸರ್ಕಾರಗಳು, ಲಾಭರಹಿತ ಸಂಸ್ಥೆಗಳು, ಆರೋಗ್ಯರಕ್ಷಣೆ ಸಂಸ್ಥೆಗಳ ಜತೆಗೆ ಕೈಜೋಡಿಸುವುದನ್ನು ಮುಂದುವರಿಸುತ್ತಿದೆ. ಅಗತ್ಯವಿರುವ ಎಲ್ಲರಿಗೂ ಪರಿಹಾರ ಸಾಮಗ್ರಿಗಳು ತಲುಪುವಂತೆ ಮಾಡುವ ಎಲ್ಲಾ ಪ್ರಯತ್ನಗಳನ್ನು ನಾವು ಮಾಡುತ್ತಿದ್ದೇವೆ. ಚಿಕಿತ್ಸೆಗೆ ಹಣ ಭರಿಸಲು ಸಾಧ್ಯವಾಗದಂತಹ ರೋಗಿಗೆ, ನಮ್ಮ  ಆರೋಗ್ಯರಕ್ಷಣೆ ಸಿಬ್ಬಂದಿ ಅಥವಾ ಗಂಭೀರವಾಗಿ ಸಂಕಷ್ಟಕ್ಕೆ ಸಿಲುಕಿರುವ ದಿನಗೂಲಿ ಕಾರ್ಮಿಕರಿಗೆ ನೆರವಾಗುತ್ತಿದ್ದೇವೆ ಎಂದು ತಿಳಿಸಿದರು.

ಇನ್ಫೋಸಿಸ್‌ನ ಸಿಇಒ ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಸಲೀಲ್ ಪಾರೇಖ್ ಅವರು ಮಾತನಾಡಿ, “ಇಡೀ ವಿಶ್ವದಲ್ಲಿ ಎದುರಾಗಿರುವ ಕೋವಿಡ್-19 ಸಾಂಕ್ರಾಮಿಕ ಸೋಂಕು ಒಂದು ದೊಡ್ಡ ಸವಾಲನ್ನು ತಂದೊಡ್ಡಿದೆ. ಇಂತಹ ಸಂದರ್ಭದಲ್ಲಿ ಸಮುದಾಯದ ಆರೋಗ್ಯ ರಕ್ಷಣೆಗೆ ಹಗಲಿರುಳೂ ಶ್ರಮಿಸುತ್ತಿರುವ ಸರ್ಕಾರಗಳು, ನಾಗರಿಕ ಸಮಾಜ, ಆರೋಗ್ಯರಕ್ಷಣೆ ಸಂಸ್ಥೆಗಳ ಜತೆಗೆ ಎಲ್ಲರೂ ಕೈಜೋಡಿಸಬೇಕಿದೆ. ಭಾರತ ಮತ್ತು ಯುಎಸ್‌ಎದಲ್ಲಿ ಇನ್ಫೋಸಿಸ್ ಫೌಂಡೇಷನ್‌ಗಳು ಈ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿರುವವರ ನೆರವಿಗೆ ತಮ್ಮೆಲ್ಲಾ ಸಂಪನ್ಮೂಲಗಳು ಮತ್ತು ತಂತ್ರಜ್ಞಾನಗಳ ನೆರವನ್ನು ನೀಡುತ್ತಿವೆ ಎಂದು ಹೇಳಿದರು.

click me!