ಕೋವಿಡ್‌ಗೆ ಬಲಿಯಾದ ಬಡವರಿಗೆ 1 ಲಕ್ಷ ನೆರವು!

Published : Jul 09, 2021, 07:47 AM ISTUpdated : Jul 09, 2021, 08:14 AM IST
ಕೋವಿಡ್‌ಗೆ ಬಲಿಯಾದ ಬಡವರಿಗೆ 1 ಲಕ್ಷ ನೆರವು!

ಸಾರಾಂಶ

* ಬಿಪಿಎಲ್‌ನವರಿಗೆ ಪರಿಹಾರ: ಸರ್ಕಾರ ಆದೇಶ * ಕೋವಿಡ್‌ಗೆ ಬಲಿಯಾದ ಬಡವರಿಗೆ 1 ಲಕ್ಷ ನೆರವು * ದುಡಿಯುವ ಸದಸ್ಯರು ಮೃತಪಟ್ಟರೆ ಮಾತ್ರ ಪರಿಹಾರ * ಕುಟುಂಬದ ಹಲವರು ಮೃತರಾದರೂ ಒಂದೇ ಪರಿಹಾರ * ‘ಕೋವಿಡ್‌ ಸಾವು’ ಎಂದು ವೈದ್ಯರ ದೃಢೀಕರಣ ಕಡ್ಡಾಯ

ಬೆಂಗಳೂರು(ಜು.09): ಕೊರೋನಾದಿಂದ ದುಡಿಯುವ ಸದಸ್ಯರನ್ನು ಕಳೆದುಕೊಂಡ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್‌) ಕುಟುಂಬಕ್ಕೆ 1 ಲಕ್ಷ ರು. ಪರಿಹಾರ ನೀಡುವ ಕುರಿತು ಕಂದಾಯ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ.

ಈ ವೇಳೆ ಬಿಪಿಎಲ್‌ ಕುಟುಂಬದ ದುಡಿಯುವ ಸದಸ್ಯ ಮೃತಪಟ್ಟರೆ ಮಾತ್ರ ಪರಿಹಾರ ಒದಗಿಸಬೇಕು. ಒಂದು ಕುಟುಂಬದಲ್ಲಿ ಕೊರೋನಾದಿಂದ ಎಷ್ಟೇ ಮಂದಿ ಮೃತಪಟ್ಟಿದ್ದರೂ ಒಬ್ಬರಿಗೆ ಮಾತ್ರ ಪರಿಹಾರ ನೀಡಬೇಕು. ಜತೆಗೆ ಕೊರೋನಾ ಸೋಂಕಿನಿಂದಲೇ ಮೃತಪಟ್ಟಿರುವುದಾಗಿ ಆರೋಗ್ಯಾಧಿಕಾರಿಗಳು ದೃಢೀಕರಿಸಿದರೆ ಮಾತ್ರ ಪರಿಹಾರ ನೀಡಬೇಕು ಎಂದು ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯ ನಿರ್ದೇಶಕರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್‌. ಮಂಜುನಾಥ್‌ ಪ್ರಸಾದ್‌ ನಿರ್ದೇಶನ ನೀಡಿದ್ದಾರೆ.

ಆದರೆ, ದುಡಿಯುವ ವ್ಯಕ್ತಿಯನ್ನು ಗುರುತಿಸುವ ಮಾನದಂಡಗಳನ್ನು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿಲ್ಲ. ಕೊರೋನಾದಿಂದಲೇ ಮೃತಪಟ್ಟಿದ್ದಾರೆ ಎಂದು ದೃಢೀಕರಿಸಲು ಐಸಿಎಂಆರ್‌ ಮಾನ್ಯತೆ ಪಡೆದ ಪರೀಕ್ಷೆಯಲ್ಲಿ ಕೊರೋನಾ ಸೋಂಕಿತನಾಗಿರುವುದು ದೃಢಪಟ್ಟಿರಬೇಕು. ಜತೆಗೆ ಮನೆ, ಕೊರೋನಾ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದ ಬಗ್ಗೆ ಎಸ್‌3 ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಿದ ಕೊರೋನಾ ಪಾಸಿಟಿವ್‌ ವರದಿಯನ್ನು ವೈದ್ಯರು ದೃಢೀಕರಿಸಿರಬೇಕು ಎಂದು ಹೇಳಲಾಗಿದೆ.

ಪರಿಹಾರಕ್ಕೆ ಷರತ್ತುಗಳು:

1 ಲಕ್ಷ ರು. ಪರಿಹಾರ ನೀಡಲು 2021-22ನೇ ಸಾಲಿನ ಆಯವ್ಯಯದ ನೂತನ ಸಾಮಾಜಿಕ ಭದ್ರತೆ ಪಿಂಚಣಿ ಅಡಿ ವೆಚ್ಚ ಭರಿಸಲು ಅವಕಾಶ ನೀಡಲಾಗಿದೆ.

ಇದೇ ವೇಳೆ, ಬಡತನ ರೇಖೆಗಿಂತ ಕೆಳಗಿರುವ ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಸದಸ್ಯರು ಕೊರೋನಾದಿಂದ ಮರಣ ಹೊಂದಿದ್ದರೂ ಒಬ್ಬ ಸದಸ್ಯರಿಗೆ ಮಾತ್ರ 1 ಲಕ್ಷ ರು. ಪರಿಹಾರ ನೀಡಬೇಕು. ಕೊರೋನಾ ತಾಂತ್ರಿಕ ಸಲಹಾ ಸಮಿತಿ ಕೊರೋನಾ ಮರಣ ದೃಢೀಕರಿಸಲು ನೀಡಿರುವ ಮಾನದಂಡಗಳ ಆಧಾರದ ಮೇಲೆ ದೃಢಪಡಿಸಿರುವಂತಹ ಸಾವಿನ ಪ್ರಕರಣಗಳಿಗೆ ಮಾತ್ರ ಪರಿಹಾರ ಪಾವತಿಸಬೇಕು. ಜಿಲ್ಲಾಧಿಕಾರಿಗಳು ಕೊರೋನಾ ವೈರಾಣು ಸೋಂಕಿನಿಂದ ಮೃತಪಟ್ಟಂತಹ ವ್ಯಕ್ತಿಗಳ ಸಂಪೂರ್ಣ ವಿವರಗಳನ್ನು ಜಿಲ್ಲಾ ವೈದ್ಯಾಧಿಕಾರಿಗಳಿಂದ ಪಡೆಯಬೇಕು.

ಜಿಲ್ಲಾ ವೈದ್ಯಾಧಿಕಾರಿಗಳು ನೀಡಿರುವ ಮೃತ ವ್ಯಕ್ತಿಗಳ ಮಾಹಿತಿಯ ಆಧಾರದ ಮೇಲೆ ಮೃತರ ಕಾನೂನು ಬದ್ಧ ವಾರಸುದಾರರನ್ನು, ಕುಟುಂಬದ ಸದಸ್ಯರನ್ನು ನಿಯಮಾನುಸಾರ ಗುರುತಿಸಿ ದೃಢಪಡಿಸಿಕೊಂಡ ನಂತರವಷ್ಟೇ ವಾರಸುದಾರರಿಂದ ಅಧಿಕೃತ ಗುರುತು ಪತ್ರ ಮತ್ತು ಬ್ಯಾಂಕ್‌ ವಿವರಗಳನ್ನು ಜಿಲ್ಲಾಧಿಕಾರಿಗಳು ಪಡೆಯಬೇಕು.

ಈ ವಿವರಗಳನ್ನು ಕಂದಾಯ ಇಲಾಖೆಯ ಸಾಮಾಜಿಕ ಭದ್ರತೆ ಮತ್ತು ಪಿಂಚಣಿಗಳ ನಿರ್ದೇಶನಾಲಯಕ್ಕೆ ಕಳುಹಿಸಬೇಕು. ನಿರ್ದೇಶನಾಲಯ ಆರ್‌ಟಿಜಿಎಸ್‌/ನೆಫ್ಟ್‌ ಮೂಲಕವೇ ಹಣ ವರ್ಗಾವಣೆ ಮಾಡಬೇಕು. ಈ ಬಗ್ಗೆ ಪ್ರತಿ ವಾರ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಬೇಕು. ಯಾವುದೇ ಲೋಪ ಕಂಡು ಬಂದರೂ ಅಧಿಕಾರಿಗಳನ್ನೇ ಹೊಣೆಯಾಗಿಸಬೇಕು ಎಂದು ಕಂದಾಯ ಇಲಾಖೆ ಆಯುಕ್ತ ಮಂಜುನಾಥ ಪ್ರಸಾದ್‌ ಆದೇಶದಲ್ಲಿ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಡಿಕೆಸು ಹೆಸರಿನಲ್ಲಿ ಕೋಟ್ಯಂತರ ವಂಚನೆ ಪ್ರಕರಣ.. 'ಬಂಗಾರಿ' ಕೇಸ್‌ನಲ್ಲಿ ನಟ ಧರ್ಮಗೆ ಧ್ವನಿ ಪರೀಕ್ಷೆ?
ಬೆಳಗಾವಿಯ 31 ಕೃಷ್ಣಮೃಗ ಸಾವಿಗೆ ಸಿಬ್ಬಂದಿ ನಿರ್ಲಕ್ಷ್ಯ ಕಾರಣವಲ್ಲ: ಸಚಿವ ಈಶ್ವರ್ ಖಂಡ್ರೆ