ಬ್ಯಾನ್ ಹಿಂಪಡೆಯುವಂತೆ ಜಾಗತಿಕ ಒಕ್ಕೂಟಕ್ಕೆ WFI ಮೊರೆ..!

By Kannadaprabha NewsFirst Published Dec 23, 2023, 11:32 AM IST
Highlights

ಸಂಜಯ್ ಸಿಂಗ್, ಡಬ್ಲ್ಯುಎಫ್‌ಐಗೆ ಚುನಾವಣೆ ನಡೆದು ನೂತನ ಸಮಿತಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಫೆಡರೇಷನ್ ಮೇಲಿನ ಅಮಾನತು ಆದೇಶವನ್ನು ಹಿಂಪಡೆಯಲು ಜಾಗತಿಕ ಸಮಿತಿಗೆ ಮನವಿ ಮಾಡಿದ್ದೇವೆ. ಶೀಘ್ರದಲ್ಲೇ ಅಮಾನತು ತೆರವುಗೊಳ್ಳುವ ನಿರೀಕ್ಷೆಯಿದೆ’ ಎಂದಿದ್ದಾರೆ.

ನವದೆಹಲಿ(ಡಿ.23): ಭಾರತೀಯ ಕುಸ್ತಿ ಫೆಡರೇಷನ್(ಡಬ್ಲ್ಯುಎಫ್‌ಐ) ಮೇಲಿನ ಮಾನತು ಹಿಂಪಡೆಯುವಂತೆ ಸಂಸ್ಥೆಯು ಕುಸ್ತಿಯ ಜಾಗತಿ ಆಡಳಿತ ಮಂಡಳಿಯಾಗಿರುವ ಯುಡಬ್ಲ್ಯುಡಬ್ಲ್ಯು ಮೊರೆ ಹೋಗಿದೆ. ಈ ಬಗ್ಗೆ ಈಗಾಗಲೇ ಯುಡಬ್ಲ್ಯುಡಬ್ಲ್ಯುಗೆ ಕುಸ್ತಿ ಸಂಸ್ಥೆ ನೂತನ ಅಧ್ಯಕ್ಷ ಸಂಜಯ್ ಸಿಂಗ್ ಪತ್ರ ಬರೆದಿದ್ದಾರೆ.

ಶುಕ್ರವಾರ ಇದರ ಬಗ್ಗೆ ಪ್ರತಿಕ್ರಿಯಿಸಿದ ಸಂಜಯ್ ಸಿಂಗ್, ಡಬ್ಲ್ಯುಎಫ್‌ಐಗೆ ಚುನಾವಣೆ ನಡೆದು ನೂತನ ಸಮಿತಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಫೆಡರೇಷನ್ ಮೇಲಿನ ಅಮಾನತು ಆದೇಶವನ್ನು ಹಿಂಪಡೆಯಲು ಜಾಗತಿಕ ಸಮಿತಿಗೆ ಮನವಿ ಮಾಡಿದ್ದೇವೆ. ಶೀಘ್ರದಲ್ಲೇ ಅಮಾನತು ತೆರವುಗೊಳ್ಳುವ ನಿರೀಕ್ಷೆಯಿದೆ’ ಎಂದಿದ್ದಾರೆ. ಡಬ್ಲ್ಯುಎಫ್‌ಐಗೆ ಚುನಾವಣೆ ನಡೆಸದ ಕಾರಣ ಆ.23ರಂದು ಭಾರತ ಕುಸ್ತಿ ಸಂಸ್ಥೆಯನ್ನು ಅಮಾನತುಗೊಳಿಸಿ ಜಾಗತಿಕ ಸಂಸ್ಥೆ ಆದೇಶ ಹೊರಡಿಸಿತ್ತು.

ಕುಸ್ತಿ ಸಂಸ್ಥೆ ಮೇಲಿನ ನಿಷೇಧ ಶೀಘ್ರ ತೆರವು?

ಭಾರತೀಯ ಕುಸ್ತಿ ಫೆಡರೇಷನ್‌ಗೆ ಚುನಾವಣೆ ನಡೆಸದ ಕಾರಣ ಜಾಗತಿಕ ಕುಸ್ತಿ ಆಡಳಿ ಸಮಿತಿ (ಯುಡಬ್ಲ್ಯುಡಬ್ಲ್ಯು)ಯು ಇತ್ತೀಚೆಗೆ ಭಾರತ ಕುಸ್ತಿ ಸಂಸ್ಥೆಯನ್ನು ಅಮಾನತುಗೊಳಿಸಿತ್ತು. ಆದರೆ ಸದ್ಯ ಚುನಾವಣೆ ನಡೆದಿರುವುದರಿಂದ ಶೀಘ್ರದಲ್ಲೇ ಕುಸ್ತಿ ಸಂಸ್ಥೆ ಮೇಲಿನ ಅಮಾನತನ್ನು ಯುಡಬ್ಲ್ಯು ಡಬ್ಲ್ಯು ತೆರವುಗೊಳಿಸುವ ನಿರೀಕ್ಷೆಯಿದೆ. ಇದರೊಂದಿಗೆ ಭಾರತೀಯ ಕುಸ್ತಿಪಟುಗಳು ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸ್ಪರ್ಧಿಸುವ ಅವಕಾಶ ಪಡೆಯಲಿದ್ದಾರೆ.

ರಾಜ್ಯದ ಗುಣರಂಜನ್ ಶೆಟ್ಟಿ ಜಂಟಿ ಕಾರ್ಯದರ್ಶಿ

ಬ್ರಿಜ್‌ಭೂಷಣ್ ಸಿಂಗ್ ಬಳಗದಲ್ಲಿ ಗುರುತಿಸಿಕೊಂಡಿರುವ ಕರ್ನಾಟಕ ರಾಜ್ಯ ಕುಸ್ತಿ ಸಂಸ್ಥೆ ಅಧ್ಯಕ್ಷ ಬೆಳ್ಳಿಪ್ಪಾಡಿ ಗುಣರಂಜನ್ ಶೆಟ್ಟಿ ನಿರೀಕ್ಷೆಯಂತೆಯೇ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಈ ಮೂಲಕ ಡಬ್ಲ್ಯುಎಫ್‌ಐನಲ್ಲಿ ಉನ್ನತ ಹುದ್ದೆಗೇರಿದ ಮೊದಲ ಕನ್ನಡಿಗ ಎಂಬ ಖ್ಯಾತಿ ಪಡೆದಿದ್ದಾರೆ. 

ಕ್ರೀಡೆಗೆ ಈಗ ನ್ಯಾಯ ಸಿಕ್ಕಿದೆ: ಗುಣರಂಜನ್

ಚುನಾವಣೆಯಲ್ಲಿ ಜಯ ಸಾಧಿಸಿದ ಬಳಿಕ ‘ಕನ್ನಡಪ್ರಭ’ದೊಂದಿಗೆ ತಮ್ಮ ಸಂಭ್ರಮ ಹಂಚಿಕೊಂಡ ಗುಣರಂಜನ್, ‘ಕಳೆದ 10-11 ತಿಂಗಳು ದೇಶದ ಕುಸ್ತಿಗೆ ದೊಡ್ಡ ಹೊಡೆತ ಬಿದ್ದಿತ್ತು. ಪ್ರತಿಭಾವಂತ ಕುಸ್ತಿಪಟುಗಳು ತೀವ್ರ ಸಂಕಷ್ಟ ಅನುಭವಿಸುವಂತಾಗಿತ್ತು. ಆದರೆ ಈಗ ಹೊಸ ಸಮಿತಿ ಅಧಿಕಾರಕ್ಕೆ ಬಂದಿದೆ. ಇದು ದೇಶದ ಕ್ರೀಡಾ ವ್ಯವಸ್ಥೆಗೆ ಸಿಕ್ಕ ನ್ಯಾಯ. ಇನ್ನು ಯಾವುದೇ ಕುಸ್ತಿಪಟುಗೂ ಕೂಡಾ ಅನ್ಯಾಯವಾಗುವುದಿಲ್ಲ. ಚುನಾವಣೆ ನಡೆಸಲು ಸಹಕರಿಸಿದ ಕೇಂದ್ರ ಸರ್ಕಾರ, ಸುಪ್ರೀಂಕೋರ್ಟ್‌ಗೆ ಧನ್ಯವಾದ ಹೇಳಲು ಇಚ್ಛಿಸುತ್ತೇನೆ’ ಎಂದರು.

ಧೃವ್ ಚೊಚ್ಚಲ ರಾಷ್ಟ್ರೀಯ ಬಿಲಿಯರ್ಡ್ಸ್‌ ಚಾಂಪಿಯನ್

ಚೆನ್ನೈ: ತಾರಾ ಬಿಲಿಯರ್ಡ್ಸ್ ಪಟು ಧ್ರುವ್ ಸಿತ್ವಾಲಾ ಚೊಚ್ಚಲ ಬಾರಿ ರಾಷ್ಟ್ರೀಯ ಚಾಂಪಿಯನ್ ಎನಿಸಿಕೊಂಡಿದ್ದಾರೆ. ಅವರು ಶುಕ್ರವಾರ ನಡೆದ ಫೈನಲ್‌ನಲ್ಲಿ ಸೌರವ್ ಕೊಠಾರಿ ವಿರುದ್ಧ 5-3 ಅಂತರದಲ್ಲಿ ಗೆಲುವು ಸಾಧಿಸಿದರು. ಧ್ರುವ್ ಅವರು ಸೆಮಿಫೈನಲ್‌ನಲ್ಲಿ ವಿಶ್ವ ಚಾಂಪಿಯನ್ ಪಂಕಜ್ ಅಡ್ವಾಣಿ ವಿರುದ್ಧ ಅಚ್ಚರಿಯ ಗೆಲುವು ಪಡೆದು ಫೈನಲ್ ಪ್ರವೇಶಿಸಿದ್ದರು. 

ಕಳೆದ ಬಾರಿ ರನ್ನರ್-ಅಪ್ ಅಗಿದ್ದ ಧ್ರುವ್ ಈ ಬಾರಿ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಇದೇ ವೇಳೆ ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ನತಾಶಾ ಚೇತನ್ ರನ್ನರ್-ಅಪ್ ಆದರು.
 

click me!