ರಗ್ಬಿ ಬಿಟ್ಟು ಕಬಡ್ಡಿ ಪಟುವಾದ ಮೊಂಡಲ್‌!

By Web DeskFirst Published Nov 6, 2018, 10:28 AM IST
Highlights

ಅಮರೇಶ್‌ ಸಾಧನೆ ಹಿಂದೆ ಕರುಣಾಜನಕ ಕಥೆ ಇದೆ. ಇವರು ಜನಿಸುವ ಮೊದಲೇ ತಂದೆಯನ್ನು ಕಳೆದುಕೊಂಡಿದ್ದರು. ಸಣ್ಣ ವಯಸ್ಸಿನಲ್ಲೇ ತಾಯಿಯೂ ಪ್ರಾಣ ಬಿಟ್ಟರು. ಅಜ್ಜಿ, ತಾತನ ಜತೆಯೇ ಬೆಳೆದ ಅಮರೇಶ್‌ರದ್ದು ಬಡ ಕುಟುಂಬ. ಪಶ್ಚಿಮ ಬಂಗಾಳದ ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಬಾಂಗಾಂವ್‌ ಎನ್ನುವ ಹಳ್ಳಿ ಇವರದ್ದು. ಇವರ ಊರಿನಿಂದ ಬಾಂಗ್ಲಾ ಗಡಿ ಕೇವಲ 5 ನಿಮಿಷ ಪ್ರಯಾಣ ಮಾತ್ರವಂತೆ. 

ಗ್ರೇಟರ್‌ ನೋಯ್ಡಾ[ನ.06]: ಕಬಡ್ಡಿ ದೇಶದಲ್ಲಿ ಕಬಡ್ಡಿ ಆಟವನ್ನು ಎಷ್ಟರ ಮಟ್ಟಿಗೆ ಬದಲಾಯಿಸಿದೆ ಎಂದರೆ, ಕ್ರೀಡಾಪಟುಗಳು ದೇಸಿ ಕ್ರೀಡೆಯನ್ನು ವೃತ್ತಿ ಬದುಕಾಗಿ ತೆಗೆದುಕೊಳ್ಳುವಷ್ಟು. ಅದರಲ್ಲೂ ಅಮರೇಶ್‌ ಮೊಂಡಲ್‌ರಂತಹ ಆಟಗಾರರ ಕಥೆ ಮತ್ತಷ್ಟು ಜನರನ್ನು ಕಬಡ್ಡಿಯತ್ತ ಸೆಳೆಯಲಿದೆ. ಕಾರಣ, ಇವರು ರಗ್ಬಿ ಆಟವನ್ನು ತೊರೆದು ಕಬಡ್ಡಿಗೆ ಬಂದಿದ್ದಾರೆ.

ಅಮರೇಶ್‌ ಸಾಧನೆ ಹಿಂದೆ ಕರುಣಾಜನಕ ಕಥೆ ಇದೆ. ಇವರು ಜನಿಸುವ ಮೊದಲೇ ತಂದೆಯನ್ನು ಕಳೆದುಕೊಂಡಿದ್ದರು. ಸಣ್ಣ ವಯಸ್ಸಿನಲ್ಲೇ ತಾಯಿಯೂ ಪ್ರಾಣ ಬಿಟ್ಟರು. ಅಜ್ಜಿ, ತಾತನ ಜತೆಯೇ ಬೆಳೆದ ಅಮರೇಶ್‌ರದ್ದು ಬಡ ಕುಟುಂಬ. ಪಶ್ಚಿಮ ಬಂಗಾಳದ ಭಾರತ-ಬಾಂಗ್ಲಾದೇಶ ಗಡಿಯಲ್ಲಿರುವ ಬಾಂಗಾಂವ್‌ ಎನ್ನುವ ಹಳ್ಳಿ ಇವರದ್ದು. ಇವರ ಊರಿನಿಂದ ಬಾಂಗ್ಲಾ ಗಡಿ ಕೇವಲ 5 ನಿಮಿಷ ಪ್ರಯಾಣ ಮಾತ್ರವಂತೆ. ಜೀರ್ಣಿಸಿಕೊಳ್ಳಲು ಅಸಾಧ್ಯವಾಗುವಂತಹ ಮಧ್ಯಾಹ್ನದ ಬಿಸಿಯೂಟ ನೀಡುವ ಶಾಲೆಯಲ್ಲಿ ಕಲಿತ ಅಮರೇಶ್‌ರದ್ದು ಅತ್ಯಂತ ನಿರ್ಲಕ್ಷಿತ ಹಳ್ಳಿ. ಕೊಳಚೆ ನೀರು, ಕೆಸರು ಮೈದಾನಗಳಲ್ಲೇ ಆಡಿ ಬೆಳೆದ ಅವರು, ತಮ್ಮ ಸೋದರ ಸಂಬಂಧಿಯೊಬ್ಬ ಆಸ್ಪ್ರೇಲಿಯಾದಲ್ಲಿ ರಗ್ಬಿ ಆಟಗಾರನಾಗಿದ್ದ ಕಾರಣ, ತಾವು ಸಹ ಆಸ್ಪ್ರೇಲಿಯಾಗೆ ತೆರಳಿದರು.

ಅಮರೇಶ್‌ಗೆ ಬಾಲ್ಯದಿಂದಲೂ ರಗ್ಬಿಯತ್ತ ವಿಶೇಷ ಆಸಕ್ತಿ. ಪಶ್ಚಿಮ ಬಂಗಾಳದಲ್ಲಿ ಜನ ಫುಟ್ಬಾಲನ್ನು ಆರಾಧಿಸುತ್ತಾರೆ. ಆದರೆ ಮೊಂಡಲ್‌ರ ಊರಿನಲ್ಲಿ ರಗ್ಬಿ ಹಾಗೂ ಕಬಡ್ಡಿ ಬಿಟ್ಟು ಬೇರೆ ಆಟವನ್ನೇ ಆಡುವುದಿಲ್ಲ ಎನ್ನುವ ಸಂಗತಿ ಹುಬ್ಬೇರಿಸುವಂತೆ ಮಾಡುತ್ತದೆ.

ರಗ್ಬಿ ತೊರೆದಿದ್ದು ಏಕೆ?: 
ಶಾಲೆಯಲ್ಲಿ ಉತ್ತಮ ರಗ್ಬಿ ಆಟಗಾರನಾಗಿದ್ದ ಅಮರೇಶ್‌, ರಾಷ್ಟ್ರೀಯ ಟೂರ್ನಿಗಳಲ್ಲಿ ಬಂಗಾಳ ತಂಡವನ್ನು ಪ್ರತಿನಿಧಿಸಿದರು. ಬಳಿಕ ಭಾರತ ತಂಡದಲ್ಲೂ ಆಡಿದ ಅನುಭವ ಪಡೆದುಕೊಂಡಿದ್ದಾರೆ. ಆಸ್ಪ್ರೇಲಿಯಾಗೆ ತೆರಳಿ ಅಲ್ಲಿನ ಆಹ್ವಾನಿತ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದರು. ಭಾರತದಲ್ಲಿ ಹೆಚ್ಚು ಜನಪ್ರಿಯತೆ, ಹಣ ಇಲ್ಲದಿದ್ದರೂ ಆಸ್ಪ್ರೇಲಿಯಾದಲ್ಲಿ ಅನೇಕ ರಗ್ಬಿ ಕ್ಲಬ್‌ಗಳಿವೆ. ಅಲ್ಲಿನ ಒಂದು ಕ್ಲಬ್‌ ಇವರಿಗೆ ಒಪ್ಪಂದದ ಪ್ರಸ್ತಾಪವನ್ನೂ ನೀಡಿತ್ತು. ಆದರೆ ವಯಸ್ಸಾದ ಅಜ್ಜಿ, ತಾತನನ್ನು ಬಿಟ್ಟು ದೂರದ ಆಸ್ಪ್ರೇಲಿಯಾಗೆ ತೆರಳುವ ಸ್ಥಿತಿಯಲ್ಲಿ ಅಮರೇಶ್‌ ಇರಲಿಲ್ಲ. ಹೀಗಾಗಿ 6 ವರ್ಷದ ರಗ್ಬಿ ಬದುಕಿಗೆ ವಿರಾಮ ಹಾಕಬೇಕಾಯಿತು.

ಕಬಡ್ಡಿಗೆ ಬಂದಿದ್ದು ಹೇಗೆ?: 
ಆಗಷ್ಟೇ 10ನೇ ತರಗತಿ ಪಾಸಾಗಿದ್ದ ಅಮರೇಶ್‌ಗೆ ಅವರ ದೈಹಿಕ ಶಿಕ್ಷಕ ರಗ್ಬಿ ಜತೆ ಕಬಡ್ಡಿಯನ್ನೂ ಕಲಿಯುವಂತೆ ಸಲಹೆ ನೀಡಿದ್ದರು. ಯಾವುದರಲ್ಲಿ ವೃತ್ತಿಬದುಕು ಕಂಡುಕೊಳ್ಳಲು ಸಾಧ್ಯವೋ ಅದನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸಿದ್ದರು. ಆ ಸಲಹೆಯನ್ನು ಪರಿಗಣಿಸಿದ ಅಮರೇಶ್‌ ಬದುಕು ಈಗ ಬದಲಾಗಿದೆ. ಆಸ್ಪ್ರೇಲಿಯಾದಿಂದ ವಾಸಪಾದ ಬಳಿಕ, ತಮ್ಮ ಹಳ್ಳಿಯಿಂದ 80 ಕಿ.ಮೀ ದೂರದಲ್ಲಿರುವ ಕೋಲ್ಕತಾದ ಕಬಡ್ಡಿ ಅಕಾಡೆಮಿಯಲ್ಲಿ ತರಬೇತಿ ಪಡೆದರು. 2017ರಲ್ಲಿ ಪ್ರೊ ಕಬಡ್ಡಿ ಆಯೋಜಕರು ‘ನ್ಯೂ ಯಂಗ್‌ ಪ್ಲೇಯರ್‌’ ಎನ್ನುವ ವರ್ಗವನ್ನು ಪರಿಚಯಿಸಿದರು. ರಗ್ಬಿ ಆಟಗಾರನಾಗಿದ್ದ ಕಾರಣ, ಅಮರೇಶ್‌ ಫಿಟ್ನೆಸ್‌ ಉತ್ತಮವಾಗಿತ್ತು. ಬಲಶಾಲಿಯಾಗಿದ್ದ ಅಮರೇಶ್‌ರ ಕಬಡ್ಡಿ ಕೌಶಲ್ಯ ಪ್ರತಿಭಾನ್ವೇಷಣೆಗೆ ತೆರಳಿದ್ದ ಬೆಂಗಾಲ್‌ ವಾರಿಯರ್ಸ್ ತಂಡದ ಅಧಿಕಾರಿಗಳ ಗಮನ ಸೆಳೆಯಿತು. ಹಲವು ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿ ಗಾಂಧಿನಗರ, ಮುಂಬೈನಲ್ಲಿ ನಡೆದ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡ ಅಮರೇಶ್‌ರನ್ನು ಆಟಗಾರರ ಹರಾಜಿನಲ್ಲಿ ಬೆಂಗಾಲ್‌ ವಾರಿಯ​ರ್ಸ್ ಖರೀದಿ ಮಾಡಿತ್ತು. ಕಳೆದ ವರ್ಷ ಬೆಂಗಾಲ್‌ ವಾರಿಯ​ರ್ಸ್ ತಂಡದಲ್ಲಿದ್ದ ಏಕೈಕ ಬಂಗಾಳಿ ಆಟಗಾರ ಎನ್ನುವ ಖ್ಯಾತಿಗೂ ಅವರು ಪಾತ್ರರಾಗಿದ್ದರು.

ಇತ್ತೀಚೆಗಷ್ಟೇ ನನ್ನ ಅಜ್ಜ ಸಹ ತೀರಿಕೊಂಡರು. ಅಜ್ಜಿ ಒಬ್ಬರೇ ಇರುವುದರಿಂದ ಆಸ್ಪ್ರೇಲಿಯಾದಲ್ಲಿ ರಗ್ಬಿ ಆಡುವುದು ಸೂಕ್ತವಲ್ಲ ಎನಿಸಿತು. ಅಕ್ಕಪಕ್ಕದವರ ಜಮೀನಿನಲ್ಲಿ ಈಗಲೂ ಅಜ್ಜಿ ಕೂಲಿ ಮಾಡುತ್ತಾರೆ. ಪ್ರೊ ಕಬಡ್ಡಿಯಿಂದ ಆರ್ಥಿಕ ಸ್ಥಿತಿ ತಕ್ಕಮಟ್ಟಿಗೆ ಬದಲಾಗಿದೆ.
- ಅಮರೇಶ್‌ ಮೊಂಡಲ್‌, ಬೆಂಗಾಲ್‌ ವಾರಿಯ​ರ್ಸ್ ಆಟಗಾರ

ವರದಿ: ಧನಂಜಯ ಎಸ್‌. ಹಕಾರಿ, ಕನ್ನಡಪ್ರಭ

click me!