Harsha Murder Case: ಹರ್ಷ ಹತ್ಯೆ ಕೇಸಲ್ಲಿ ನನ್ನನ್ನೂ ಬಂಧಿಸಲಿ: ಡಿಕೆಶಿ

By Kannadaprabha NewsFirst Published Feb 24, 2022, 3:25 AM IST
Highlights

ಶಿವಮೊಗ್ಗದಲ್ಲಿ ನಡೆದ ಯುವಕ ಹರ್ಷ ಕೊಲೆಗೆ ನನ್ನ ಪ್ರಚೋದನೆ ಇದೆ ಎಂದು ಸಚಿವರು ಹೇಳಿದ್ದಾರೆ. ಹೀಗಾಗಿ ನನ್ನನ್ನೂ ಬಂಧಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸವಾಲು ಹಾಕಿದ್ದಾರೆ.

ಬೆಂಗಳೂರು (ಫೆ.24): ಶಿವಮೊಗ್ಗದಲ್ಲಿ (Shivamogga) ನಡೆದ ಯುವಕ ಹರ್ಷ (Harsha) ಕೊಲೆಗೆ  (Murder)ನನ್ನ ಪ್ರಚೋದನೆ ಇದೆ ಎಂದು ಸಚಿವರು ಹೇಳಿದ್ದಾರೆ. ಹೀಗಾಗಿ ನನ್ನನ್ನೂ ಬಂಧಿಸಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ (DK Shivakumar) ಸವಾಲು ಹಾಕಿದ್ದಾರೆ.

ರಾಜ್ಯ ಕಾಂಗ್ರೆಸ್‌ (Congress) ಟ್ವೀಟರ್‌ (Twitter) ಖಾತೆ ಮೂಲಕ ತಮ್ಮ ಹೇಳಿಕೆ ದಾಖಲಿಸಿರುವ ಅವರು, ಹರ್ಷ ಕೊಲೆಯಲ್ಲಿ ಕೆಲವರನ್ನು ಬಂಧಿಸಿದ್ದಾರೆ. ಘಟನೆಗೆ ನನ್ನ ಪ್ರಚೋದನೆಯೂ ಇದೆ ಎಂದು ಹೇಳಿರುವುದರಿಂದ ನನ್ನನ್ನೂ ಬಂಧಿಸಲಿ ಎಂದು ಹೇಳಿದರು. ಇನ್ನು ಸಚಿವರೇ ನಿಷೇಧಾಜ್ಞೆ ಮುರಿದು ಪಾರ್ಥಿವ ಶರೀರದ ಮೆರವಣಿಗೆ ನಡೆಸಿದ್ದಾರೆ. ಈ ವೇಳೆ ಕಲ್ಲು ತೂರಾಟ ಮಾಡಿಸಿದ್ದಾರೆ. ಆದರೂ ಅವರ ಮೇಲೆ ಪ್ರಕರಣ ಏಕೆ ದಾಖಲಿಸಿಲ್ಲ. ಇದಕ್ಕೆ ಖಾಕಿ ತೊಟ್ಟವರು ಉತ್ತರಿಸಬೇಕು ಎಂದು ಪ್ರಶ್ನಿಸಿದ್ದಾರೆ.

Latest Videos

ಇನ್ನಾದರೂ ಈಶ್ವರಪ್ಪನ ವಜಾ ಮಾಡಿ- ಡಿಕೆಶಿ: ರಾಷ್ಟ್ರಧ್ವಜದ ಬಗ್ಗೆ ಸಚಿವ ಈಶ್ವರಪ್ಪ (Eshwarappa) ನೀಡಿರುವ ಹೇಳಿಕೆ ಬೇಜವಾಬ್ದಾರಿತನದ್ದು ಎಂದು ಖುದ್ದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರೇ ಹೇಳಿದ್ದಾರೆ. ಈಶ್ವರಪ್ಪ ಅವರನ್ನು ಸಮರ್ಥಿಸುತ್ತಿದ್ದ ರಾಜ್ಯ ನಾಯಕರಿಗೆ ಅವರ ನಾಯಕರೇ ಉತ್ತರ ನೀಡಿದ್ದಾರೆ. ಇನ್ನಾದರೂ ಈಶ್ವರಪ್ಪ ಅವರನ್ನು ವಜಾಗೊಳಿಸಿ ಬಿಜೆಪಿ ತನ್ನ ಗೌರವ ಉಳಿಸಿಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಶಿವಕುಮಾರ್‌ ಹೇಳಿದರು.

Shivamogga ಮುಸಲ್ಮಾನ ಗೂಂಡಾಗಳು ಹಿಂದೂ ಕಾರ್ಯಕರ್ತನನ್ನು ಹತ್ಯೆ ಮಾಡಿದ್ದಾರೆ, ಈಶ್ವರಪ್ಪ ಗಂಭೀರ ಆರೋಪ

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಕೆ.ಎಸ್‌. ಈಶ್ವರಪ್ಪ ವಿರುದ್ಧ ಕಾಂಗ್ರೆಸ್‌ ಹೋರಾಟಕ್ಕೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಹೇಳಿಕೆ ಮೂಲಕ ಸಮರ್ಥನೆ ದೊರಕಿದೆ. ಕೊನೆಗೂ ಅವರಿಗೆ ತಮ್ಮ ಪಕ್ಷದವರ ತಪ್ಪಿನ ಅರಿವಾಗಿದ್ದು ಅದಕ್ಕಾಗಿ ಅವರಿಗೆ ಅಭಿನಂದಿಸುತ್ತೇನೆ. ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದರೂ ಅವರ ಪಕ್ಷದ ರಾಜ್ಯ ನಾಯಕರು ಈಶ್ವರಪ್ಪ ಅವರನ್ನು ಸಮರ್ಥಿಸಿಕೊಂಡಿದ್ದರು. ಈಗಲಾದರೂ ಸಂಪುಟದಿಂದ ಅವರನ್ನು ವಜಾಗೊಳಿಸಿ ಗೌರವ ಉಳಿಸಿಕೊಳ್ಳಬೇಕು ಎಂದರು.

ಈಶ್ವರಪ್ಪ ಹೇಳಿಕೆ ವಿರುದ್ಧ ಜವಾಬ್ದಾರಿಯುತ ಪಕ್ಷವಾಗಿ ಹೋರಾಟ ಮಾಡಿದ್ದೇವೆ. ಮಂಗಳವಾರ ರಾಜ್ಯಪಾಲರನ್ನು ಭೇಟಿ ಮಾಡಿ ಈಶ್ವರಪ್ಪ ಅವರನ್ನು ವಜಾಗೊಳಿಸುವಂತೆ ಒತ್ತಾಯಿಸಿದ್ದೇವೆ. ರಾಜ್ಯಪಾಲರು ಏನು ತೀರ್ಮಾನ ಮಾಡುತ್ತಾರೆಂಬುದು ನೋಡಬೇಕು. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಉಳಿಯಬೇಕು ಎಂಬುದೇ ನಮ್ಮ ಅಂತಿಮ ಗುರಿ ಎಂದು ಹೇಳಿದರು.

ಮೇಕೆದಾಟು ಪಾದಯಾತ್ರೆ ಆರಂಭ: ಮೇಕೆದಾಟು (Mekedatu) ಕುರಿತು ಮಾತನಾಡಿ, ಫೆ.27 ರಂದು ಭಾನುವಾರ ರಾಮನಗರದಿಂದ ಮೇಕೆದಾಟು ಯೋಜನೆಗೆ ಆಗ್ರಹಿಸಿ ಪಾದಯಾತ್ರೆ ಮತ್ತೆ ಆರಂಭವಾಗಲಿದೆ. ಹೋರಾಟಕ್ಕೆ ಯಾರಾದರೂ ಬರಬಹುದು. ಬಿಜೆಪಿ, ಜೆಡಿಎಸ್‌ ನಾಯಕರು ಸಹ ಪಾದಯಾತ್ರೆಯಲ್ಲಿ ಭಾಗವಹಿಸಬಹುದು. ಈಗಾಗಲೇ ಸಂಘ, ಸಂಸ್ಥೆಗಳ ಜತೆ ಸಭೆ ನಡೆಸಲಾಗಿದೆ. 

ಸರ್ಕಾರದ ಒಬ್ಬ ದೇಶದ್ರೋಹಿ ಸಚಿವರನ್ನ ಬಿಜೆಪಿ ಸಮರ್ಥಿಸಿಕೊಂಡಿದೆ, ಈಶ್ವರಪ್ಪ ವಿರುದ್ಧ ವಾಗ್ದಾಳಿ

ಅವರೆಲ್ಲರೂ ಸಹ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಬಹುದು. ಪಾದಯಾತ್ರೆ ಮುಗಿದ ಬಳಿಕ ಉಳಿದ ಹೋರಾಟಗಳ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಡಿ.ಕೆ. ಶಿವಕುಮಾರ್‌ ತಿಳಿಸಿದರು. ಮೇಕೆದಾಟು ಯೋಜನೆಯಿಂದ ಯಾರಿಗೆ ನೀರು ಬರುತ್ತದೆ ಎಂಬುದು ಗೊತ್ತಿಲ್ಲ ಎಂಬ ಎಚ್‌.ಡಿ. ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಇನ್ನು ಮುಂದೆ ಕುಮಾರಸ್ವಾಮಿ ಅವರ ಬಳಿ ತರಬೇತಿ ತೆಗೆದುಕೊಳ್ಳುತ್ತೇನೆ ಎಂದು ತಿರುಗೇಟು ನೀಡಿದರು.

click me!