ಕರ್ನಾಟಕದ ಮಾವು ಬೆಳೆಗಾರರಿಗೆ ನಿಫಾ ಕಂಟಕ

First Published Jun 10, 2018, 5:20 PM IST
Highlights

ಕೇರಳದಲ್ಲಿ ಕಾಣಿಸಿಕೊಂಡ ನಿಫಾ ವೈರಸ್ ಕರ್ನಾಟಕದ ಮಾವು ಬೆಳೆಗಾರರಿಗೆ ಆತಂಕ ತಂದಿದ್ದು  ಅರಬ್ ರಾಷ್ಟ್ರಗಳಿಗೆ ರಫ್ತಾಗಬೇಕಿದ್ದ ಮಾವಿನ ಪ್ರಮಾಣ ಕುಸಿಯಲು ಕಾರಣವಾಗಿದೆ. ಕೇರಳದಿಂದ ರಫ್ತಾಗುವ ಎಲ್ಲ ಬಗೆಯ ಹಣ್ಣುಗಳಿಗೆ ಯುಎಇ, ಬಹರೇನ್, ಸೌದಿ ಅರೇಬಿಯಾ, ಖತಾರ್ ಮತ್ತು ಕುವೈತ್ ನಲ್ಲಿ ನಿಷೇಧ ಹೇರಲಾಗಿದೆ. ಈ ನಿಷೇಧದ ಬಿಸಿ ಕರ್ನಾಟಕದ ಬೆಳೆಗಾರರಿಗೂ ತಟ್ಟಿದೆ.
 

ಬೆಂಗಳೂರು: ನಿಫಾ ವೈರಸ್ ಭೀತಿಯಿಂದ ಈ ಬಾರಿ ಕರ್ನಾಟಕದ ಮಾವು ಬೆಳೆಗಾರರಿಗೆ ಹಣ್ಣು ಹುಳಿಯಾಗಿದೆ. ಕೇರಳಿಗರನ್ನು ಕಂಗೆಡಿಸಿದ್ದ ನಿಫಾ ವೈರಸ್ ಇದೀಗ ಕರ್ನಾಟಕದ ಮಾವು ಬೆಳೆಗಾರರ ನಿದ್ದೆಗೆಡಿಸಿದೆ. ಈ ಬಾರಿ ಮಾವು ರಫ್ತಿಗೆ ನಿಫಾ ಬ್ರೇಕ್ ಹಾಕಿದ್ದು ಕೇರಳದ  ಜನರನ್ನು ಕಾಡಿದ್ದ ನಿಫಾ ಅರಬ್ ದೇಶಗಳಿಗೆ ಕರ್ನಾಟಕದಿಂದ ರಫ್ತಾಗಬೇಕಿದ್ದ ಮಾವಿನ ಪ್ರಮಾಣ ಕುಸಿತಕ್ಕೂ ಕಾರಣವಾಗಿದೆ. 

ರಮ್ ಜಾನ್ ತಿಂಗಳಿನಲ್ಲಿ ಮಾವಿನ ರಫ್ತು ಏರಿಕೆಯಾಗಬಹುದೆಂಬ ನಿರೀಕ್ಷೆಗೂ ನಿಫಾ ಅಡ್ಡಗಾಲು ಹಾಕಿದೆ. ಕೇರಳದ ವ್ಯಾಪಾರಿಗಳು ಕರ್ನಾಟಕದಿಂದ ಮಾವು ಖರೀದಿಸಿ ರಫ್ತು ಮಾಡುತ್ತಿದ್ದರು. 
ತೋಟಗಾರಿಕಾ ಇಲಾಖೆ ಅಧಿಕಾರಿಗಳು ಹೇಳುವಂತೆ ಪ್ರತಿ ವರ್ಷ ರಾಜ್ಯದಿಂದ 15 ಸಾವಿರ ಟನ್ ಮಾವು ವಿವಿಧ ದೇಶಗಳಿಗೆ ರಫ್ತಾಗುತ್ತಿತ್ತು. ಆದರೆ ನಿಫಾ ಭೀತಿಯಿಂದ ಮಾವಿನ ಹಣ್ಣಿನ ರಫ್ತು ಪ್ರಮಾಣ ಗಣನೀಯವಾಗಿ ಕುಸಿದಿದೆ. 

ನಿಪಾಗೆ ಬಲಿಯಾದವರಿಗೆ ವೈದ್ಯನಿಂದಲೇ ಅಂತ್ಯಸಂಸ್ಕಾರ

ಅರಬ್ ರಾಷ್ಟ್ರಗಳನ್ನು ಹೊರತುಪಡಿಸಿ ಉಳಿದ ರಾಷ್ಟ್ರಗಳಿಗೆ ರಫ್ತಾಗುವ ಮಾವಿನ ಪ್ರಮಾಣದ ಮೇಲೆ ನಿಫಾ ಯಾವುದೇ ಪರಿಣಾಮ ಬೀರಿಲ್ಲ ಎಂದು ತೋಟಗಾರಿಕಾ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕೇರಳದಿಂದ ರಫ್ತಾಗುವ ಎಲ್ಲ ಬಗೆಯ ಹಣ್ಣುಗಳಿಗೆ ಯುಎಇ, ಬಹರೇನ್, ಸೌದಿ ಅರೇಬಿಯಾ, ಖತಾರ್ ಮತ್ತು ಕುವೈತ್ ನಲ್ಲಿ ನಿಷೇಧ ಹೇರಲಾಗಿದೆ. ಈ ನಿಷೇಧದ ಬಿಸಿ ಕರ್ನಾಟಕದ ಬೆಳೆಗಾರರಿಗೂ ತಟ್ಟಿದೆ.

ನಿಫಾ ವೈರಸ್‌ ಎಂದರೇನು? 
ಈ ಸೋಂಕು ಮನುಷ್ಯರಿಂದ ಪ್ರಾಣಿಗಳಿಗೆ, ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಈ ರೋಗ ಮೊದಲಿಗೆ 1998ರಲ್ಲಿ ಮಲೇಷ್ಯಾ ಹಾಗೂ ಸಿಂಗಾಪುರದಲ್ಲಿ ಪತ್ತೆಯಾಯಿತು ಎಂದು ದಾಖಲೆಗಳು ಹೇಳುತ್ತವೆ. ನಿಫಾ ವೈರಸ್‌ ಹರಡಲು ಬಾವಲಿಗಳು ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಬಾವಲಿಗಳಿಂದ ಇತರ ಪ್ರಾಣಿಗಳಿಗೆ , ಸೋಂಕು ಪೀಡಿತ ಬಾವಲಿಗಳು ತಿಂದ ಹಣ್ಣುಗಳನ್ನು ಮನುಷ್ಯ ತಿನ್ನುವುದರಿಂದ ರೋಗ ಹರಡುತ್ತದೆ ಎಂದು ಆರಂಭಿಕ ಸಂಶೋಧನೆಗಳು ಹೇಳಿವೆ. ಇದೇ ಕಾರಣಕ್ಕೆ ಸೋಂಕು ಕಾಣಿಸಿಕೊಂಡ ಕೇರಳದ ಹಣ್ಣುಗಳಿಗೆ ಬೇಡಿಕೆ ಕುಸಿತವಾಯಿತು.

click me!