Latest Videos

ಅಳಿವಿನಂಚಿನ ಹಂಪಿಯ ಸ್ಮಾರಕ ಸಂರಕ್ಷಣೆಗೆ ಆಗ್ರಹ: ತುರ್ತು ರಕ್ಷಣೆಗೆ ಸಾರ್ವಜನಿಕರ ಒತ್ತಾಯ

By Kannadaprabha NewsFirst Published May 26, 2024, 10:26 PM IST
Highlights

ಅಳಿವಿನಂಚಿನಲ್ಲಿರುವ ಹಂಪಿಯ ಸ್ಮಾರಕಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಮೀಸಲಿಡುವ ಕಾರ್ಯವಾಗಬೇಕಿದೆ. ಇದಕ್ಕಾಗಿ ಸಂಬಂಧಪಟ್ಟ ಇಲಾಖೆಗಳು ಕಾರ್ಯ ಪ್ರವೃತ್ತರಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ. 

ಹೊಸಪೇಟೆ (ಮೇ.26): ಅಳಿವಿನಂಚಿನಲ್ಲಿರುವ ಹಂಪಿಯ ಸ್ಮಾರಕಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಮೀಸಲಿಡುವ ಕಾರ್ಯವಾಗಬೇಕಿದೆ. ಇದಕ್ಕಾಗಿ ಸಂಬಂಧಪಟ್ಟ ಇಲಾಖೆಗಳು ಕಾರ್ಯ ಪ್ರವೃತ್ತರಾಗಬೇಕು ಎಂಬ ಆಗ್ರಹ ಕೇಳಿ ಬಂದಿದೆ. ಹಂಪಿ ಸ್ಮಾರಕಗಳು, ಬಿಸಿಲು, ಮಳೆ, ಗಾಳಿಗೆ ನೈಜ ಸ್ವರೂಪ ಕಳೆದುಕೊಳ್ಳುತ್ತಿವೆ. ನೂರಾರು ವರ್ಷಗಳ ಐತಿಹಾಸಿಕ ವಿಗ್ರಹ, ಮಂಟಪ, ಕೋಟೆ-ಕೊತ್ತಲುಗಳು ಪುರಾತನ ಮಂಟಪಗಳು ಬೀಳುವ ಸ್ಥಿತಿಯಲ್ಲಿವೆ. ಇವು ನೆಲಕ್ಕುರುಳುವ ಮುನ್ನ ಕೇಂದ್ರ ಹಾಗೂ ರಾಜ್ಯ ಪುರಾತತ್ವ ಇಲಾಖೆಗಳು ಯೋಜನೆ ರೂಪಿಸಿ, ಸ್ಮಾರಕಗಳಗೆ ಸೂಕ್ತ ರಕ್ಷಣೆ ನೀಡಬೇಕು ಎಂಬ ಕೂಗು ಬಲವಾಗಿ ಕೇಳಿ ಬಂದಿದೆ.

ತುರ್ತು ರಕ್ಷಣೆ: ವಿರೂಪಾಕ್ಷ ರಥ ಬೀದಿಯ ಸಾಲು ಮಂಟಪಗಳು, ಕೃಷ್ಣ ಬಜಾರು ಸಾಲು ಮಂಟಪ, ಅಚ್ಯುತ್ ದೇವಸ್ಥಾನದ ಕಲ್ಯಾಣ ಮಂಟಪ, ದಂಡನಾಯಕನ ಆವರಣದಲ್ಲಿರುವ ಕೋಟೆ, ಹಜಾರ ರಾಮ ದೇವಾಲಯದ ಮುಂದಿರುವ ಕಲ್ಲಿನ ಮಂಟಪಗಳು ಶಿಥಿಲಾವಸ್ಥೆ ತಲುಪಿದ್ದು, ತುರ್ತಾಗಿ ಇವುಗಳನ್ನು ರಕ್ಷಣೆ ಮಾಡುವ ಕಾರ್ಯ ಆಗಬೇಕು ಎಂಬುದು ಸ್ಥಳೀಯರ ಒತ್ತಾಯ. ವರಾಹ ದೇವಸ್ಥಾನದ ಪ್ರಕಾರದಲ್ಲಿರುವ ಗೋಡೆ, ವಿಠಲ ದೇವಾಲಯದ ಬಳಿ ಕಲ್ಲಿನ ಕಂಬಗಳು ಉರುಳಿ ಬಿದ್ದಿದ್ದವು. ಕೆಲ ಪುರಾತನ ದೇಗುಲದ ಗರ್ಭಗೃಹಗಳನ್ನು ನಿಧಿ ಚೋರರು ಹಾನಿ ಮಾಡಿದ್ದರು. ವಿಗ್ರಹಗಳನ್ನು ವಿರೂಪಗೊಳಿಸಿದ್ದರು. ನಿಧಿ ಆಸೆಗಾಗಿ ಮೌಲ್ಯವಂತ ರಘುನಾಥ ದೇವಾಲಯದ ಗಾಳಿ ಗೋಪುರವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದರು.

AI ಇಂಟಲಿಜೆನ್ಸ್‌ನನ್ನು ಏಲಿಯನ್ ಇಂಟೆಲಿಜೆನ್ಸ್ ಎಂದು ಕರೆದ ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್‌!

 ಪಟ್ಟಣದ ಎಲ್ಲಮ್ಮ ದೇವಸ್ಥಾನದ ಗೋಪುರದ ಕಳಸವನ್ನು ಕಳ್ಳರು ಕದ್ದೊಯ್ದಿದ್ದರು. ಕಮಲ ಮಹಲ್ ಬೃಹತ್ ಕೋಟೆಯ ಒಂದು ಭಾಗದ ಗೋಡೆ ಉರುಳಿ ಬಿದ್ದಿತ್ತು. ಜತೆಗೆ ಉತ್ಖನನಕ್ಕಾಗಿ ಹಂಪಿ ಪ್ರದೇಶದಲ್ಲಿದ್ದ ಕೆಲ ರೈತರ ಹೊಲ-ಗದ್ದೆಗಳನ್ನು ಸ್ವಾಧೀನ ಪಡಿಸಿಕೊಂಡು ಹತ್ತಾರು ವರ್ಷಗಳ ಕಳೆದರೂ ಈ ಜಾಗದಲ್ಲಿ ಯಾವುದೇ ಕೆಲಸ-ಕಾರ್ಯಗಳನ್ನು ಇಲಾಖೆ ಆರಂಭಿಸಿಲ್ಲ. ನಿಯಮಗಳನ್ನು ರೂಪಿಸುವ ಇಲಾಖೆಗಳು, ಕೆಲವೊಮ್ಮೆ ನಿಯಮಗಳನ್ನು ಪಾಲನೆ ಮಾಡುತ್ತಿಲ್ಲ ಎಂಬ ಆರೋಪಗಳು ಪದೇ ಪದೇ ಕೇಳಿ ಬರುತ್ತಿವೆ. ಹಂಪಿಯ ಸ್ಮಾರಕಗಳ ರಕ್ಷಣೆಗಾಗಿ ಕೋರ್ ಹಾಗೂ ಬಫರ್ ಝೋನ್ ಎಂದು ವಿಂಗಡಿಸಲಾಗಿದೆ.

ಕಾಮಗಾರಿ, ಉತ್ಖನನ ಕಾರ್ಯ ನಡೆಸುವ ಭರದಲ್ಲಿ ಜೆಸಿಬಿ, ಬೋರ್‌ವೆಲ್, ಬೃಹತ್ ಯಂತ್ರಗಳು ವಾಹನಗಳನ್ನು ಬಳಕೆ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ವಿರೂಪಾಕ್ಷೇಶ್ವರ ದೇವಾಲಯದ ರಥ ಬೀದಿಯ ಸಾಲು ಮಂಟಪ, ಅರಸರ ಅರಮನೆ ಆವರಣ, ವಿರೂಪಾಕ್ಷ ದೇವಾಲಯ ಹಿಂಭಾಗದ ಪುಷ್ಕರಣಿ, ಶಿವಾ ಮಂದಿರದ ಗೋಡೆ, ತುಲಾಭಾರ ಮಂಟಪದ ಬಲ ಭಾಗದಲ್ಲಿರುವ ಲಕ್ಷ್ಮಿನರಸಿಂಹ ದೇವಾಲಯದ ಮುಂದಿನ ಗೋಡೆ, ಕುದುರೆ ಮಂಟಪ, ಕೃಷ್ಣ ಬಜಾರ್ ಸಾಲು ಮಂಟಪ ಹಲವು ಸ್ಮಾರಕಗಳು ಕುಸಿದು ಬಿದ್ದಿವೆ. ಇವುಗಳ ಜೀರ್ಣೋದ್ಧಾರ ಕಾರ್ಯ ಕೂಡ ನಡೆಯುತ್ತಿದೆ. ಇನ್ನು ಕೆಲವೆಡೆ ಉರುಳಿ ಬಿದ್ದ ಸ್ಮಾರಕಗಳನ್ನು ಮರು ಜೋಡಣೆ ಮಾಡೇಕಿದೆ.

ಹಂಪಿ ಪ್ರವಾಸಿತಾಣ ಮಾತ್ರವಲ್ಲ, ಪೌರಾಣಿಕ ಐತಿಹಾಸಿಕ ತಾಣವಾಗಿದೆ. ಇಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಿರಂತರ ನಡೆಯುತ್ತಿವೆ. ವಿಗ್ರಹ, ಪಾಣಿಪೀಠ ಕಳ್ಳರು ನಿರಂತರವಾಗಿ ತಮ್ಮ ಕಾರ್ಯ ನಡೆಸುತ್ತಿದ್ದಾರೆ. ಇದರ ಬಗ್ಗೆ ಗಮನ ಹರಿಸಬೇಕಾದ ಇಲಾಖೆಗಳು ಮೌನಕ್ಕೆ ಶರಣಾಗಿದ್ದಾರೆ ಎಂಬುದು ಸ್ಥಳೀಯರ ಆರೋಪ. ಆದರೆ, ಸುಮಾರು ೫೦೦ ವರ್ಷಗಳ ಹಳೆಯ ಸ್ಮಾರಕಗಳು, ಗಾಳಿ, ಮಳೆ, ಬಿಸಿಲಿಗೆ ಶಿಥಿಲಾವಸ್ಥೆ ತಲುಪಿವೆ. ಅವುಗಳನ್ನು ಹಂತ, ಹಂತವಾಗಿ ಹಾಗೂ ಆದ್ಯತೆಗೆ ಅನುಗುಣವಾಗಿ ಮರುಜೋಡಿಸಿ, ರಕ್ಷಣೆ ಮಾಡುವ ಕಾರ್ಯ ಮಾಡಲಾಗುತ್ತಿದೆ. ಇದಕ್ಕೆ ಸ್ಥಳೀಯ ಸಹಕಾರ ಅಗತ್ಯವಾಗಿ ಎಂಬದು ಪುರಾತತ್ವ ಇಲಾಖಾ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಪ್ರವಾಸಿಗರಿಲ್ಲ ರಕ್ಷಣೆ: ನಿತ್ಯ ಹಂಪಿಗೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಭೇಟಿ ನೀಡುವರು, ಹಂಪಿ ಉತ್ಸವ, ಜಾತ್ರೆ, ಫಲಪೂಜೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೇರುತ್ತಾರೆ. ಈ ವೇಳೆ ಪುರಾತನ ಮಂಟಪಗಳ ಆಶ್ರಯ ಪಡೆಯುವುದು ವಾಡಿಕೆ. ಇತಂಹ ಸಮಯದಲ್ಲಿ ಸ್ಮಾರಕಗಳು ಉರುಳಿ ಬಿದ್ದು ಅವಘಡಗಳು ನಡೆದರೆ ಹೇಗೆ ಎಂಬ ಆತಂಕ ಪ್ರವಾಸಿಗರನ್ನು ಕಾಡುತ್ತಿದೆ.  ಸುಮಾರು ೫೦೦ ವರ್ಷಗಳ ಹಳೆಯ ಸ್ಮಾರಕಗಳು, ಗಾಳಿ-ಮಳೆ, ಬಿಸಿಲಿಗೆ ಶಿಥಿಲಾವಸ್ಥೆ ತಲುಪಿವೆ. ಅವುಗಳನ್ನು ಸಂರಕ್ಷಣೆ ಮಾಡುವುದು ದೊಡ್ಡ ಸವಾಲಿನ ಕೆಲಸವಾಗಿದೆ. 

ನಾರಾಯಣಸ್ವಾಮಿಗೆ ಪ್ರಥಮ ಪ್ರಾಶಸ್ತ್ಯ ಮತ ನೀಡಿ: ಸಿ.ಟಿ.ರವಿ ವಿನಂತಿ

ಇತಂಹ ಸ್ಮಾರಕಗಳನ್ನು ಗುರುತಿಸಿ, ಆದ್ಯತೆ ಮೇರೆಗೆ ಹಂತ-ಹಂತವಾಗಿ ಮರುಜೋಡಿಸಲಾಗುವುದು ಎನ್ನುತ್ತಾರೆ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಡೆಪ್ಯೂಟಿ ಸೂಪರಿಂಟೆಂಡೆಂಟ್ ನಿಹಿಲ್‌ದಾಸ್. ವಿರೂಪಾಕ್ಷ ರಥಬೀದಿಯ ಸಾಲು ಮಂಟಪಗಳು, ಕೃಷ್ಣ ಬಜಾರು ಸಾಲು ಮಂಟಪ, ಅಚ್ಯುತ್ ದೇವಸ್ಥಾನದ ಕಲ್ಯಾಣ ಮಂಟಪ, ದಂಡನಾಯಕನ ಆವರಣದಲ್ಲಿರುವ ಕೋಟೆ, ಹಜಾರ ರಾಮ ದೇವಾಲಯದ ಮುಂದಿರುವ ಕಲ್ಲಿನ ಮಂಟಪಗಳು ಶಿಥಿಲಾವಸ್ಥೆ ತಲುಪಿದ್ದು, ತುರ್ತಾಗಿ ಇವುಗಳನ್ನು ರಕ್ಷಣೆ ಮಾಡುವ ಕಾರ್ಯ ಆಗಬೇಕು ಎನ್ನುತ್ತಾರೆ ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣಾ ಸಮಿತಿ ಕಮಲಾಪುರ ಅಧ್ಯಕ್ಷ ವಿಶ್ವನಾಥ ಮಾಳಗಿ.

click me!