ಹೊಸ ನಾಡಧ್ವಜ ವಿನ್ಯಾಸ ಇನ್ನೂ ಅಂತಿಮವಾಗಿಲ್ಲ

By Suvarna Web DeskFirst Published Jan 19, 2018, 8:33 AM IST
Highlights

ರಾಜ್ಯಕ್ಕೆ ಪ್ರತ್ಯೇಕ ಧ್ವಜ ರೂಪಿಸುವ ಸಲುವಾಗಿ ರಚಿಸಿರುವ ಧ್ವಜ ಸಮಿತಿಯು ಯಾವುದೇ ಧ್ವಜದ ವಿನ್ಯಾಸವನ್ನು ಅಂತಿಮಗೊಳಿಸಿಲ್ಲ. ಈ ಬಗ್ಗೆ ವಿಸ್ತೃತ ಚರ್ಚೆ ನಡೆಯುತ್ತಿದ್ದು, ಎಂಟ್ಹತ್ತು ಕರಡು ಮಾದರಿಗಳನ್ನು ಇನ್ನು ಪರಿಶೀಲಿಸಲಾಗುತ್ತಿದೆಯೇ ಯಾವ ಮಾದರಿಯನ್ನು ಅಂತಿಮಗೊಳಿಸಲಾಗಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶು ಕುಮಾರ್ ತಿಳಿಸಿದ್ದಾರೆ.

ಬೆಂಗಳೂರು (ಜ.19): ರಾಜ್ಯಕ್ಕೆ ಪ್ರತ್ಯೇಕ ಧ್ವಜ ರೂಪಿಸುವ ಸಲುವಾಗಿ ರಚಿಸಿರುವ ಧ್ವಜ ಸಮಿತಿಯು ಯಾವುದೇ ಧ್ವಜದ ವಿನ್ಯಾಸವನ್ನು ಅಂತಿಮಗೊಳಿಸಿಲ್ಲ. ಈ ಬಗ್ಗೆ ವಿಸ್ತೃತ ಚರ್ಚೆ ನಡೆಯುತ್ತಿದ್ದು, ಎಂಟ್ಹತ್ತು ಕರಡು ಮಾದರಿಗಳನ್ನು ಇನ್ನು ಪರಿಶೀಲಿಸಲಾಗುತ್ತಿದೆಯೇ ಯಾವ ಮಾದರಿಯನ್ನು ಅಂತಿಮಗೊಳಿಸಲಾಗಿಲ್ಲ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ವಿಶು ಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಅವರು, ಧ್ವಜ ಕುರಿತು ಜ.22 ಕ್ಕೆ ಸಭೆಯೊಂದನ್ನು ನಡೆಸಲಿದ್ದು, ಆ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಂಡು ಸರ್ಕಾರಕ್ಕೆ ನಿರ್ದಿಷ್ಟ ಬಾವುಟವನ್ನು ಶಿಫಾರಸು ಮಾಡಲಾಗುವುದು.  ಈ ಕ್ಷಣದವರೆಗೂ ಯಾವುದೇ ಒಂದು ಧ್ವಜ ಮಾದರಿ ಅಥವಾ ನಾಲ್ಕು ಮಾದರಿಗಳನ್ನ  ಆಯ್ಕೆ ಮಾಡಿಲ್ಲ ಎಂದು ತಿಳಿಸಿದರು. ನಾಡ ಧ್ವಜ ವಿನ್ಯಾಸದಲ್ಲಿ ಯಾವ ಯಾವ  ಅಂಶಗಳು ಇರಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ. ಇಲಾಖೆ ನೀಡಿರುವ ಕೆಲವು ವಿನ್ಯಾಸದಲ್ಲಿ ಕೆಲವೊಂದು ಅಂಶಗಳು ಇದ್ದು, ಇನ್ನೂ ಸಾಕಷ್ಟು ಬದಲಾವಣೆ ಮಾಡಬೇಕಿದೆ. ಧ್ವಜದ ಅಳತೆ, ಬಣ್ಣ ಮತ್ತು ಯಾವ ಅಂಶಗಳು ಇರಬೇಕು ಎಂಬುದರ ಕುರಿತು ಮಾದರಿ ವಿನ್ಯಾಸಗಳನ್ನು ಮಾಡಬೇಕಿದೆ. ಸರ್ವ ಸಮ್ಮತವಾದ ವಿನ್ಯಾಸ ಆದ ಬಳಿಕೆ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಈ ಕುರಿತು ಜ.22 ಕ್ಕೆ ಧ್ವಜ ಸಮಿತಿ ಅಂತಿಮ ಸಭೆ ನಡೆಯಲಿದೆ. ಅಂದು ಸಮಗ್ರವಾಗಿ ಧ್ವಜ ವಿನ್ಯಾಸದ ಕುರಿತು ಚರ್ಚೆ ನಡೆಸಿ, ವಿನ್ಯಾಸವನ್ನು ಅಂತಿಮಗೊಳಿಸಲಾಗುವುದು. ಬಳಿಕ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಕೆಲವು ಮಾಧ್ಯಮಗಳಲ್ಲಿ ಬಂದಿರುವ ಸುದ್ದಿಯು ಸತ್ಯಕ್ಕೆ  ದೂರವಾಗಿದೆ ಎಂದರು. ಧ್ವಜ ಸಮಿತಿ ಸದಸ್ಯರಾದ ಕಸಾಪ ಅಧ್ಯಕ್ಷ ಡಾ.ಮನು ಬಳಿಗಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಿವಿಧ ವಿನ್ಯಾಸಗಳ ಮಾದರಿಯನ್ನು ಸಮಿತಿಗೆ ನೀಡಿದೆ. ಅದರಲ್ಲಿ ಯಾವುದನ್ನು ಅಂತಿಮ ಮಾಡಬೇಕು ಎಂಬ ನಿರ್ಣಯ ಬಾಕಿ ಇದೆ. ಕಾನೂನಿನ ತೊಡಕುಗಳನ್ನು ನಿವಾರಿಸಬೇಕಿದೆ. ಅದನ್ನು ಕಾನೂನು ವಿಭಾಗದವರು ನೋಡಿಕೊಳ್ಳಲಿದ್ದು, 22 ಕ್ಕೆ ವರದಿ ನೀಡಲಿದ್ದಾರೆ.

ಕಾನೂನು ಸಮಸ್ಯೆಯ ಸಾಧಕ ಬಾಧಕಗಳನ್ನು ಗೃಹ ಇಲಾಖೆ ಡಿಪಿಎಆರ್, ಕಾನೂನು ಇಲಾಖೆ, ಸಂಸದೀಯ ವ್ಯವಹಾರಗಳ ಇಲಾಖೆ, ಅವರೆಲ್ಲರೂ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ. ಎಲ್ಲವೂ ಅಂತಿಮಗೊಂಡ ನಂತರ ಕೇಂದ್ರ ಸರ್ಕಾರದ ಒಪ್ಪಿಗೆಗೆ ಕಳುಹಿಸಿಕೊಡಲಾಗುವುದು. ಅದಕ್ಕೂ ಮೊದಲು ಸಚಿವ ಸಂಪುಟದ ಒಪ್ಪಿಗೆ ಬೇಕು. ಇದೆಲ್ಲವನ್ನೂ ಮುಂದಿನ ಸಭೆಗಳ ನಂತರ ತೀರ್ಮಾನಿಸಿ ಕಾನೂನಾತ್ಮಕ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕಿದೆ ಎಂದು ತಿಳಿಸಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಧಾನಕಾರ್ಯದರ್ಶಿ ಚಕ್ರವರ್ತಿ ಮೋಹನ್  ಅಧ್ಯಕ್ಷರಾಗಿದ್ದಾರೆ.

 

click me!