ಸದ್ಯ ಬೀಚನಹಳ್ಳಿ ಪೊಲೀಸರು ಆರೋಪಿಗಳಾದ ಶಿವರಾಮು, ಮಲ್ಲಮ್ಮ ಹಾಗೂ ಸಾವಿತ್ರಿಯನ್ನು ಠಾಣೆಗೆ ಕರೆದೊಯ್ದು, ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತ ಯುವತಿಗೆ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಮೈಸೂರು: ಗೆಳತಿಗೆ ನಿಶ್ಚಿತವಾಗಿದ್ದ ಹುಡುಗನ ಮೇಲೆ ಆಸೆಪಟ್ಟ ಯುವತಿ, ತಾನೇ ಮುಂದೆ ನಿಂತು ಆಕೆಯನ್ನು ರೇಪ್ ಮಾಡಿಸಿರುವ ವಿಲಕ್ಷಣ ಘಟನೆ ಜಿಲ್ಲೆಯ ಹೆಚ್.ಡಿ.ಕೋಟೆ ತಾಲೂಕಿನ ಗೆಂಡತ್ತೂರು ಗ್ರಾಮದಲ್ಲಿ ನಡೆದಿದೆ. ಗ್ರಾಮದ 19 ವರ್ಷದ ಯುವತಿ ಅತ್ಯಾಚಾರಕ್ಕೆ ಒಳಗಾದವಳು. ಸಂತ್ರಸ್ತೆಯ ಗೆಳತಿ ಮಲ್ಲಮ್ಮನ ನೆರವಿನಿಂದ ಅದೇ ಗ್ರಾಮದ ಶಿವರಾಮು ಎಂಬುವನು ಅತ್ಯಾಚಾರ ಎಸಗಿದ್ದಾನೆ.
ಅತ್ಯಾಚಾರಕ್ಕೆ ಒಳಗಾದ ಯುವತಿ ಹಾಗೂ ಮಲ್ಲಮ್ಮ ಗೆಳತಿಯರಾಗಿದ್ದು, ಯುವತಿಗೆ ಅದೇ ಗ್ರಾಮದ ಯುವಕನೊಂದಿಗೆ ವಿವಾಹ ನಿಶ್ಚಯವಾಗಿತ್ತು. ಆದರೆ ಅದೇ ಯುವಕನ ಮೇಲೆ ಆಸೆ ಇಟ್ಟುಕೊಂಡಿದ್ದ ಮಲ್ಲಮ್ಮ ಹೇಗಾದರೂ ಮದುವೆಯನ್ನು ಮುರಿಯಬೇಕು ಎಂದು ಪ್ಲಾನ್ ಮಾಡಿದ್ದಾಳೆ. ಅದರಂತೆ ಶಿವರಾಮು ನೆರವು ಪಡೆದುಕೊಂಡ ಈಕೆ ಕಳೆದ ಮಂಗಳವಾರ ಯುವತಿಯನ್ನು ತನ್ನ ಮನೆಗೆ ಕರೆಸಿಕೊಳ್ಳುತ್ತಾಳೆ. ಮನೆಗೆ ಹೋದಾಗ ನೀರನ್ನು ಕುಡಿಸುವ ನೆಪಮಾಡಿ ಅಡುಗೆ ಕೋಣೆಗೆ ಕಳುಹಿಸಿದ್ದಾಳೆ. ಆ ಸಂದರ್ಭದಲ್ಲಿ ಅಲ್ಲೇ ಅಡಗಿ ಕುಳಿತಿದ್ದ ಆರೋಪಿ ಶಿವರಾಮು, ಯುವತಿಯನ್ನು ಹಿಡಿದುಕೊಂಡು ಬಲಾತ್ಕಾರ ಮಾಡಲು ಮುಂದಾಗಿದ್ದಾನೆ. ಈ ವೇಳೆ ಮಲ್ಲಮ್ಮನ ಅತ್ತಿಗೆ ಸಾವಿತ್ರಿ ಎಂಬುವರು ಮನೆಯ ಬಾಗಿಲನ್ನು ಹಾಕಿಕೊಂಡು ಅತ್ಯಾಚಾರ ಮಾಡಲು ನೆರವು ನೀಡಿದರು ಎಂದು ಸಂತ್ರಸ್ತ ಯುವತಿ ಹೇಳಿಕೆ ನೀಡಿದ್ದಾಳೆ.
ಸದ್ಯ ಬೀಚನಹಳ್ಳಿ ಪೊಲೀಸರು ಆರೋಪಿಗಳಾದ ಶಿವರಾಮು, ಮಲ್ಲಮ್ಮ ಹಾಗೂ ಸಾವಿತ್ರಿಯನ್ನು ಠಾಣೆಗೆ ಕರೆದೊಯ್ದು, ತನಿಖೆ ನಡೆಸುತ್ತಿದ್ದಾರೆ. ಸಂತ್ರಸ್ತ ಯುವತಿಗೆ ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಗೆಳತಿಯ ದ್ರೋಹಕ್ಕೆ ಬಲಿಯಾಗಿರುವ ಯುವತಿ ತನಗೆ ನ್ಯಾಯ ಕೊಡಿಸುವಂತೆ ಕೇಳಿಕೊಂಡಿದ್ದು, ವಿವಾಹ ನಿಶ್ಚಿತವಾಗಿರುವ ಹುಡುಗ ತನ್ನನ್ನು ಮದುವೆಯಾಗಬೇಕು ಎಂದು ಕೋರಿಕೊಂಡಿದ್ದಾಳೆ.
ವರದಿ: ಮಧು ಎಂ.ಚಿನಕುರಳಿ, ಸುವರ್ಣ ನ್ಯೂಸ್, ಮೈಸೂರು