ಮೈಸೂರು ಮಹಾನಗರ ಪಾಲಿಕೆ ಮೇಯರ್ ಸ್ಥಾನವನ್ನ ಕಾಂಗ್ರೆಸ್ ಗೆ ಒಲಿಸಿಕೊಳ್ಳಲು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಹೊಸ ದಾಳ ಉರುಳಿಸಿದ್ದಾರೆ.
ಮೈಸೂರು,(ನ.15): ಮೈಸೂರು ಪಾಲಿಕೆ ಮೇಯರ್ ಹುದ್ದೆಗೆ ಮೈತ್ರಿ ಪಕ್ಷಗಳಾದ ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆದಿದೆ.
ಮೇಯರ್ ಪಟ್ಟವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಶತಾಯಗತಾವಾಗಿ ಮೇಯರ್ ಪಟ್ಟವನ್ನ ಕಾಂಗ್ರೆಸ್ ಗೆ ಒಲಿಸಿಕೊಳ್ಳಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಈ ಸಂಬಂಧ ಪಾಲಿಕೆಯಲ್ಲಿ ತಮ್ಮ ಸ್ಥಾನಗಳನ್ನ ಹೆಚ್ಚಿಸಿಕೊಳ್ಳಲು ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಹೊಸ ದಾಳ ಉರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಜಯಗಳಿಸಿರುವ ಸಮಿ ಅವರನ್ನ ಮನವೋಲಿಸಿ ಕಾಂಗ್ರೆಸ್ ಗೆ ಸೆಳೆದಿದ್ದು, ಇಂದು [ಗುರುವಾರ] ಸಮಿ ಅವರನ್ನು ಪಕ್ಷಕ್ಕೆ ಅಧಿಕೃತವಾಗಿ ಬರಮಾಡಿಕೊಂಡರು. ಬಳಿಕ ಸಿದ್ದರಾಮಯ್ಯ ಖಾಸಗಿ ಹೋಟೆಲ್ನಲ್ಲಿ ಕಾಂಗ್ರೆಸ್ ಸದಸ್ಯರ ಸಭೆ ನಡೆಸಿದ್ದು, ಮೇಯರ್ ಪಟ್ಟ ಒಲಿಸಿಕೊಳ್ಳಲು ಚರ್ಚೆ ನಡೆಸಿದರು.
ಮಿತ್ರ ಪಕ್ಷಗಳಲ್ಲಿ ಅತಿ ಹೆಚ್ಚು ಸ್ಥಾನಗಳಿಸಿರುವುದು ಕಾಂಗ್ರೆಸ್. ಹೀಗಾಗಿ ಕಾಂಗ್ರೆಸ್ ಮೇಯರ್ ಸ್ಥಾನಕ್ಕಾಗಿ ಡಿಮ್ಯಾಂಡ್ ಮಾಡುತ್ತಿದೆ. ಮತ್ತೊಂದೆಡೆ ಜೆಡಿಎಸ್ ಕೂಡ ಮೇಯರ್ ಸ್ಥಾನ ನಮಗೆ ಬೇಕೆಂದು ಪಟ್ಟು ಹಿಡಿದಿದೆ. ಹೀಗಾಗಿ ಮೇಯರ್ ಸ್ಥಾನ ಗಿಟ್ಟಿಸಿಕೊಳಲು ಕಾಂಗ್ರೆಸ್-ಜೆಡಿಎಸ್ ನಡುವೆ ಹಗ್ಗಜಗ್ಗಾಟ ಜೋರಾಗಿಯೇ ನಡೆದಿದೆ.
ಇದೇ ನವೆಂಬರ್ 17ರಂದು ಮೈಸೂರು ಮಹಾನಗರ ಪಾಲಿಕೆ ಮೇಯರ್, ಉಪ ಮೇಯರ್ ಉಪ ಚುನಾವಣೆ ನಡೆಯಲಿದ್ದು, ಮೇಯರ್ ಸ್ಥಾನ ಯಾರಿಗೆ ಒಲಿಯಲಿದೆ ಎನ್ನುವುದನ್ನ ಕಾದುನೋಡಬೇಕಿದೆ.