ಶಿವಮೊಗ್ಗ: ಮಿತಿ ಮೀರಿದ ಸೊಳ್ಳೆ ಕಾಟ, ರೋಗ ಭೀತಿ

By Kannadaprabha NewsFirst Published Jul 30, 2019, 12:26 PM IST
Highlights

ಸತತ ವಾರಗಟ್ಟಲೆ ಬಿಸಿಲು ಮಳೆ, ಈಗ ಏಕಾಏಕಿ ಮಳೆ ಬಿಡದೆ ಸುರಿಯುತ್ತಿರುವ ಬೆನ್ನಲ್ಲೆ ಸೊಳ್ಳೆಗಳ ಹಾವಳಿ ಅಧಿಕವಾಗಿದ್ದು, ಡೆಂಘೀ ಜ್ವರ ಅಲ್ಲಲ್ಲಿ ಕಂಡು ಬಂದಿದೆ. ಇಷ್ಟಾದರೂ ಪಟ್ಟಣ ಪಂಚಾಯಿತಿ ಆಡಳಿತ ಎಚ್ಚರಗೊಳ್ಳದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಶಿವಮೊಗ್ಗ(ಜು.30): ಸೊರಬದಲ್ಲಿ ಸತತ ವಾರಗಟ್ಟಲೆ ಬಿಸಿಲು ಮಳೆ, ಈಗ ಏಕಾಏಕಿ ಮಳೆ ಬಿಡದೆ ಸುರಿಯುತ್ತಿರುವ ಬೆನ್ನಲ್ಲೆ ಸೊಳ್ಳೆಗಳ ಹಾವಳಿ ಅಧಿಕವಾಗಿದ್ದು, ಡೆಂಘೀ ಜ್ವರ ಅಲ್ಲಲ್ಲಿ ಕಂಡು ಬಂದಿದೆ. ಇಷ್ಟಾದರೂ ಪಟ್ಟಣ ಪಂಚಾಯಿತಿ ಆಡಳಿತ ಎಚ್ಚರಗೊಳ್ಳದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸುಮಾರು 15 ಸಾವಿರ ಜನಸಂಖ್ಯೆ ಹೊಂದಿರುವ ಪಟ್ಟಣದ 12 ವಾರ್ಡ್‌ಗಳ ಪೈಕಿ ಬಹುತೇಕ ಎಲ್ಲ ವಾರ್ಡ್‌ಗಳಲ್ಲೂ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಪಟ್ಟಣದ ಚಿಕ್ಕಪೇಟೆ, ಮುಖ್ಯರಸ್ತೆ, ಸೊಪ್ಪಿನ ಕೇರಿ, ಹಿರೇಶಕುನ, ಚಾಮರಾಜಪೇಟೆ, ಕಾನಕೇರಿ ಬಡಾವಣೆಗಳಲ್ಲಿ ಸೊಳ್ಳೆಗಳು ಹೆಚ್ಚಾಗಿ ಕಂಡು ಬರುತ್ತಿವೆ.

ವಾರ್ಡ್‌ಗಳಲ್ಲಿ ಈಗಾಗಲೇ ಕೆಲವರು ಜ್ವರದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ರಸ್ತೆ ವಿಸ್ತರಣೆ ಪ್ರಕ್ರಿಯೆ ಸುದೀರ್ಘ 10 ವರ್ಷದಿಂದ ಸಾಗುತ್ತಿದ್ದು, ಪೂರ್ಣಗೊಳ್ಳುವ ಯಾವುದೇ ಸೂಚನೆ ಕಾಣುತ್ತಿಲ್ಲ. ಕಟ್ಟಡ ನಿರ್ಮಾಣ ಪ್ರದೇಶ, ಖಾಲಿ ನಿವೇಶನಗಳು, ಚರಂಡಿಗಳ ಸುತ್ತಮುತ್ತಲ ಪ್ರದೇಶಗಳಲ್ಲಿ ಸೊಳ್ಳೆಗಳ ಕಾಟ ಇನ್ನೂ ಜಾಸ್ತಿ ಇದೆ.

ಅರೆಬರೆ ಕಾಮಗಾರಿಯಿಂದಾಗಿ ಪಟ್ಟಣ ನಿವಾಸಿಗಳ ಎಲ್ಲ ಕೊಳಕು ರಸ್ತೆಯಲ್ಲಿ ಹರಡುತ್ತಿದ್ದು, ದುರ್ನಾತದ ಜೊತೆಗೆ ಸಾಂಕ್ರಾಮಿಕ ರೋಗ ಹರಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಕೇಂದ್ರ ಸ್ಥಾನದಲ್ಲಿ ಮುಖ್ಯಾಧಿಕಾರಿ ಇರದ ಕಾರಣ ಪಪಂ ವ್ಯಾಪ್ತಿಯಲ್ಲಿ ಆರೋಗ್ಯ ಅಧಿಕಾರಿಗಳು ನೈರ್ಮಲ್ಯದ ಕಡೆ ಗಮನ ಕೊಡುತ್ತಿಲ್ಲ. ಸೊಳ್ಳೆಗಳ ನಿಯಂತ್ರಣಕ್ಕೆ ಫಾಗಿಂಗ್‌ ನಡೆದಿಲ್ಲ.

ಮುಖ್ಯಾಧಿಕಾರಿ ನಿರ್ಲಕ್ಷ್ಯ:

ಪಪಂ ಮುಖ್ಯಾಧಿಕಾರಿ ಕಸ ವಿಲೇವಾರಿ, ಸ್ವಚ್ಛತೆ ಮತ್ಯಾವುದರ ಕಡೆಯೂ ಗಮನ ನೀಡುತ್ತಿಲ್ಲ. ಪಪಂಗೆ ಚುನಾಯಿತ ಜನಪ್ರತಿನಿಧಿಗಳು ಆಯ್ಕೆಗೊಂಡಿದ್ದರೂ ಅಧಿಕಾರ ಹಸ್ತಾಂತರವಾಗದೆ ಇರುವುದರಿಂದ ಹೇಳುವವರು-ಕೇಳುವವರು ಯಾರು ಇಲ್ಲ ಎಂಬಂತಾಗಿದೆ ಎಂಬುದು ಸಾರ್ವಜನಿಕರ ಗಂಭೀರ ಆರೋಪವಾಗಿದೆ.

ಶಿವಮೊಗ್ಗದ ಆನಂದಪುರದಲ್ಲಿ 10 ಡೆಂಘೀ ಪ್ರಕರಣ: ಫಾಗಿಂಗ್

ಸೊಳ್ಳೆಗಳ ನಿಯಂತ್ರಣಕ್ಕಾಗಿ ಪಟ್ಟಣ ಪಂಚಾಯ್ತಿಯಿಂದ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಗುರುತಿಸಿ ಔಷಧ ಸಿಂಪಡಣೆ, ಫಾಗಿಂಗ್‌ ಮಾಡಲಾಗುವುದು. ಪ್ರತಿ ವಾರ್ಡ್‌ಗಳಲ್ಲಿ ಪೌರ ಕಾರ್ಮಿಕರು ಹಾಗೂ ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಕಾರ್ಯ ನಡೆದಿದೆ. ದೂರು ಬಂದ ಕಡೆಗಳಲ್ಲಿ ಸಮೀಕ್ಷೆ ನಡೆಸಿ ಸೊಳ್ಳೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎನ್ನುತ್ತಾರೆ ಪಪಂ ಅಧಿಕಾರಿಗಳು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಾಸ್ತವಾಗಿ ಪಟ್ಟಣದ 8ನೇ ವಾರ್ಡ್‌ನಲ್ಲಿ ಮಾತ್ರ ಆಶಾಕಾರ್ಯಕರ್ತೆಯರು ಜನತೆಯಲ್ಲಿ ಜಾಗೃತಿ ಮೂಡಿಸಿದ್ದಾರೆ. ಉಳಿದಂತೆ ಇನ್ಯಾವುದೇ ವಾರ್ಡ್‌ಗಳಲ್ಲಿ ಸೊಳ್ಳೆಗಳ ನಿಯಂತ್ರಣಕ್ಕೆ ಪಪಂ ಅಧಿಕಾರಿಗಳು ಮುಂದಾಗಿಲ್ಲ ಎಂಬುದು ವಾರ್ಡ್‌ ವಾಸಿಗಳ ದೂರು.

click me!