ಹಿಂದೂ ಸಂಘಟನೆ ಕಾರ್ಯಕರ್ತರ ಪ್ರತಿಭಟನೆ: ಕಲ್ಲು ತೂರಾಟ, ಪೊಲೀಸರಿಂದ ಲಾಠಿ ಚಾರ್ಜ್‌

By Kannadaprabha NewsFirst Published May 9, 2024, 6:23 AM IST
Highlights

ಹಿಂದೂ ಸಂಘಟನೆಗಳಿಗೆ ಸಿಪಿಐವೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು ಆರೋಪಿಸಿದ್ದನ್ನು ಖಂಡಿಸಿ ಧರಣಿ ನಡೆಸುತ್ತಿರುವುದು ವಿಕೋಪಕ್ಕೆ ಹೋಗಿದ್ದರಿಂದ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ ಘಟನೆ ಬಾಗಲಕೋಟೆ ನವನಗರದಲ್ಲಿ ಬುಧವಾರ ರಾತ್ರಿ ನಡೆದಿದೆ. 

ಬಾಗಲಕೋಟೆ (ಮೇ.09): ಹಿಂದೂ ಸಂಘಟನೆಗಳಿಗೆ ಸಿಪಿಐವೊಬ್ಬರು ಅವಾಚ್ಯ ಶಬ್ದಗಳಿಂದ ನಿಂದಿಸಿದರೆಂದು ಆರೋಪಿಸಿದ್ದನ್ನು ಖಂಡಿಸಿ ಧರಣಿ ನಡೆಸುತ್ತಿರುವುದು ವಿಕೋಪಕ್ಕೆ ಹೋಗಿದ್ದರಿಂದ ಪೊಲೀಸರು ಲಾಠಿ ಚಾರ್ಜ್‌ ನಡೆಸಿದ ಘಟನೆ ಬಾಗಲಕೋಟೆ ನವನಗರದಲ್ಲಿ ಬುಧವಾರ ರಾತ್ರಿ ನಡೆದಿದೆ. ಅನ್ಯ ಕೋಮಿಗೆ ಸೇರಿದ ಪ್ರೇಮಿಗಳ ಪ್ರೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟಿಸುತ್ತಿದ್ದರು. ಈ ವೇಳೆ ಹಿಂದೂ ಕಾರ್ಯಕರ್ತರನ್ನು ಸಿಪಿಐ ಎಸ್‌.ಎಸ್‌.ಬಿರಾದಾರ ಅವರು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ತಮಗೆ ಗೌರವ ಕೊಟ್ಟು ಮಾತನಾಡಿಲ್ಲ ಎಂದು ಆರೋಪಿಸಿ, ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿರುವುದು ವಿಕೋಪಕ್ಕೆ ತಿರುಗಿತು. 

ಈ ವೇಳೆಯೇ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರಿಂದ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಲಾಠಿಚಾರ್ಜ್‌ ನಡೆಸಿದ್ದಾರೆ. ಅಗೌರವ ತೋರಿದ ಸಿಪಿಐ ವಿರುದ್ಧ ಬುಧವಾರ ಸಂಜೆ ಹಿಂದೂ ಸಂಘಟನೆ ಕಾರ್ಯಕರ್ತರು ಮೊದಲು ಎಸ್ಪಿ ಕಚೇರಿ ಎದುರುಗಡೆ ಜಮಾಯಿಸಿ ಒತ್ತಾಯಿಸಿದ್ದರು. ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ನಡುವೆ ಸಣ್ಣಪುಟ್ಟ ವಾಗ್ವಾದ ಕೂಡ ಉಂಟಾಗಿತ್ತು. ನಂತರ ನಗರಸಭೆ ವೃತ್ತದಲ್ಲಿ ಜಮಾಯಿಸಿದ ಹಿಂದೂ ಸಂಘಟನೆಯ ಕಾರ್ಯಕರ್ತರು ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಆರಂಭಿಸಲು ಮುಂದಾದರು. ಆಗ ಪ್ರತಿಭಟನೆ ಕೈಬಿಡುವಂತೆ ಪೊಲೀಸರು ಕಾರ್ಯಕರ್ತರಲ್ಲಿ ಮನವಿ ಮಾಡಿದರು. ಇದೆ ವೇಳೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದರು.

ಆಗ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಪ್ರತಿಭಟನಾಕಾರರ ವಿರುದ್ಧ ಲಾಠಿಚಾರ್ಜ್‌ ಮಾಡಿದರು. ಪೊಲೀಸರ ವಿರುದ್ಧ ಹಿಂದೂ ಸಂಘಟನೆಗಳ ಕಾರ್ಯಕರ್ತರ ಆಕ್ರೋಶ ಹೆಚ್ಚಾದಾಗ ಸ್ಥಳಕ್ಕೆ ಧಾವಿಸಿದ ಎಸ್.ಪಿ.ಅಮರನಾಥ ರೆಡ್ಡಿ ಸಮ್ಮುಖದಲ್ಲಿಯೂ ಪೊಲೀಸರು ಮತ್ತು ಹಿಂದೂ ಸಂಘಟನೆಗಳ ಕಾರ್ಯಕರ್ತರ ಮಧ್ಯೆ ವಾಗ್ವಾದ ಕೂಡ ನಡೆದಿದೆ. ವಿಕೋಪಕ್ಕೆ ತಿರುಗಿದ ಪರಿಸ್ಥಿತಿಯನ್ನು ನಿಯಂತ್ರಿಸಲು ಸ್ಥಳದಲ್ಲಿ ಹೆಚ್ಚುವರಿ ಪೋಲಿಸರ ನಿಯೋಜನೆ ಮಾಡಲಾಗಿದ್ದು, ಸದ್ಯ ಪರಿಸ್ಥಿತಿ ಪೊಲೀಸರ ನಿಯಂತ್ರಣದಲ್ಲಿದೆ. ಘಟನೆಗೆ ಸಂಭದಿಸಿದಂತೆ ಹಿಂದೂ ಸಂಘಟನೆಗಳ ಮೂವರು ಕಾರ್ಯಕರ್ತರನ್ನು ಪೊಲೀಸರು ಬಂಧನ ಮಾಡಿದೆ. 

ಕೇಂದ್ರ ಸರ್ಕಾರ ಪ್ರಜ್ವಲ್‌ ರೇವಣ್ಣಗೆ ರಕ್ಷಣೆ ನೀಡುತ್ತಿದೆ: ಸಿಎಂ ಸಿದ್ದರಾಮಯ್ಯ ಕಿಡಿ

ಮನೋಜ್, ಕುಮಾರಸ್ವಾಮಿ, ವಿಕ್ರಮ ಬಂಧಿತರು. ತಮಗೆ ಅಗೌರವಯುತವಾಗಿ ಮಾತನಾಡಿದ ಸಿಪಿಐ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಕೂಡ ಒತ್ತಾಯಿಸಿದ್ದಾರೆ. ಘಟನೆ ನಡೆದ ಬೆನ್ನಲ್ಲೇ ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಸ್ಥಳಕ್ಕೆ ಭೇಟಿ ನೀಡಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಜೊತೆ ಮಾತುಕತೆ ನಡೆಸಿದರು. ನಂತರ ಸಿಪಿಐ ವಿರುದ್ಧ ಕ್ರಮ ಕೈಗೊಳ್ಳುವಂತೆ ಚರಂತಿಮಠ ಒತ್ತಾಯಿಸಿದರು. ಆಗ ಎಸ್ಪಿ ಅಮರನಾಥ ರೆಡ್ಡಿ ಅವರು ಕ್ರಮ ಕೈಗೊಳ್ಳುವುದಾಗಿ ಭರವಸೆ ಕೂಡ ನೀಡಿದರು. ಮಾಜಿ ಶಾಸಕ ವೀರಣ್ಣ ಚರಂತಿಮಠ ಅವರು ಹಾಗೂ ಹಿಂದು ಸಂಘಟನೆಯ ಕಾರ್ಯಕರ್ತರು ಸಿಪಿಐ ವಿರುದ್ಧ ಕ್ರಮ ಕ್ಯೆಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ, ಈ ಮಧ್ಯೆ ನಾಳೆ ಹಿಂದೂ ಸಂಘಟನೆಗಳ ಸಭೆಯನ್ನು ಮಾಜಿ ಶಾಸಕ ವೀರಣ್ಣ ಚರಂತಿಮಠ ಕರೆದಿದ್ದಾರೆ.

click me!