Leaf Disease: ಉತ್ತರ ಕನ್ನಡಕ್ಕೂ ಅಂಟಿದ ಎಲೆಚುಕ್ಕೆ ರೋಗ!

By Kannadaprabha NewsFirst Published Dec 7, 2022, 11:53 AM IST
Highlights

ಅಡಕೆ ಬೆಳೆಗಾರರನ್ನು ಕಂಗಾಲಾಗಿಸಿರುವ ಎಲೆ ಚುಕ್ಕಿ ರೋಗ ಈಗ ಶಿರಸಿ ತಾಲೂಕಿನಲ್ಲಿಯೂ ಜೋರಾಗುತ್ತಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ರೈತರ ಬಳಿ ತೆರಳಿ ನಿಯಂತ್ರಣದ ಮಾರ್ಗೋಪಾಯ ತಿಳಿಸುವ ಯತ್ನ ಜೋರಾಗಿ ನಡೆಸಿದ್ದಾರೆ.

ಮಂಜುನಾಥ ಸಾಯೀಮನೆ

 ಶಿರಸಿ (ಡಿ.7) : ಅಡಕೆ ಬೆಳೆಗಾರರನ್ನು ಕಂಗಾಲಾಗಿಸಿರುವ ಎಲೆ ಚುಕ್ಕಿ ರೋಗ ಈಗ ಶಿರಸಿ ತಾಲೂಕಿನಲ್ಲಿಯೂ ಜೋರಾಗುತ್ತಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳಿಗೆ ರೈತರ ಬಳಿ ತೆರಳಿ ನಿಯಂತ್ರಣದ ಮಾರ್ಗೋಪಾಯ ತಿಳಿಸುವ ಯತ್ನ ಜೋರಾಗಿ ನಡೆಸಿದ್ದಾರೆ. ಹೌದು. ತಾಲೂಕಿನ ಬನವಾಸಿ, ನೆಗ್ಗು ಗ್ರಾಮ ಪಂಚಾಯಿತಿಯ ನೇರ್ಲದ್ದ, ಹೊಸ್ಮನೆ ಇನ್ನಿತರ ಪ್ರದೇಶದಲ್ಲಿ ಜಾಸ್ತಿಯಾಗಿದೆ. ಶಿರಸಿ ಸಿದ್ದಾಪುರ ತಾಲೂಕಿನ ಗಡಿ ಪ್ರದೇಶದಲ್ಲಿ ಈ ಸಮಸ್ಯೆ ತೀವ್ರವಾಗಿದೆ.

ಅರಳದ ಸಿಂಗಾರ:

ಇಲ್ಲಿಯ ಹೊಸ್ಮನೆ ರವಿ ಹೆಗಡೆ ಅವರ ತೋಟದಲ್ಲಿ ಎಲೆ ಚುಕ್ಕಿ ರೋಗ ತೀವ್ರವಾಗಿದ್ದು, ತೋಟವೇ ಬರಿದಾಗುವ ಆತಂಕಕ್ಕೆ ಒಳಗಾಗಿದ್ದಾರೆ. ಈ ರೋಗ ಬಂದ ಮರಗಳಲ್ಲಿ ಅಡಕೆಯ ಗಾತ್ರವೇ ಚಿಕ್ಕದಾಗಿದೆ. ಈ ಅಡಕೆಯನ್ನು ಸುಲಿದು ಸಂಸ್ಕರಿಸಲೂ ಸಾಧ್ಯವಾಗದ ಸ್ಥಿತಿ ಇದೆ. ಇದಕ್ಕಿಂತಲೂ, ಮುಂದಿನ ಬೆಳೆಯ ಅಡಕೆ ಹೂವು ಸಿಂಗಾರವೇ ಅರಳದೇ ಬರುವ ಬೆಳೆಯೇ ಇಲ್ಲದ ಆತಂಕ ಎದುರಾಗಿದೆ.

 ಅಡಕೆಗೆ ಎಲೆಚುಕ್ಕಿರೋಗ, ಹಳದಿ ರೋಗ ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಬಿಸಿಲು, ಮಳೆಯ ಅನಿಶ್ಚಿತತೆ ಈ ವರ್ಷ ನಡೆದಿದ್ದು, ಆಗಸ್ವ್‌ ತಿಂಗಳ ವೇಳೆ ಅವರ ಅಡಕೆ ತೋಟದಲ್ಲಿ ಎಲೆಗಳ ಮೇಲೆ ಹಳದಿ ಚುಕ್ಕಿಗಳು ಕಾಣಿಸಿಕೊಂಡವು. ಆ ಬಳಿಕ ಈ ಹಳದಿ ವೃತ್ತಗಳು ವಿಸ್ತಾರವಾಗುತ್ತಾ ಸಾಗಿ ಮಧ್ಯೆ ಎಲೆಗಳು ಸಾಯಲಾರಂಭಿಸಿದವು. ಈಗ ಅವರ ಸಂಪೂರ್ಣ ಎರಡೂವರೆ ಎಕರೆ ಅಡಕೆ ತೋಟಕ್ಕೂ ರೋಗ ವಿಸ್ತರಿಸಿಕೊಂಡಿದೆ.

ಅಡಕೆ ತೋಟ ಪರಿಶೀಲನೆ ನಡೆಸಿದ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಿಂಪಡಣೆಗಾಗಿ ಔಷಧ ಸೂಚಿಸಿದ್ದಾರೆ. ಸಂಪೂರ್ಣ ಅಡಕೆ ತೋಟಕ್ಕೆ ಈಗಾಗಲೇ ರವಿ ಹೆಗಡೆ ಎರಡು ಬಾರಿ ಈ ದ್ರಾವಣವನ್ನು ಸಿಂಪಡಣೆ ಮಾಡಿದ್ದಾರೆ.

ಇಂದಿನ ದಿನದಲ್ಲಿ ಅಡಕೆ ಮರ ಏರಿ ಔಷಧ ಸಿಂಪಡಣೆ ಮಾಡುವ ಕಾರ್ಮಿಕರ ಸಂಖ್ಯೆಯೂ ಕಡಿಮೆ ಇದೆ. ಆದರೆ ಅವರ ವೇತನವು ಪ್ರತಿದಿನ .2 ಸಾವಿರದಷ್ಟಿದೆ. ಹೀಗಾಗಿ, ಔಷಧ ಸಿಂಪಡಣೆಗೆ ಪ್ರತಿ ಎಕರೆಗೆ .20 ಸಾವಿರ ವ್ಯಯಿಸಿದ್ದಾರೆ. ಅಡಕೆ ತೋಟಕ್ಕೆ ಪೋಟ್ಯಾಷ್‌ ಕೊರತೆ ಆಗಿರಬಹುದು ಎಂದು ಅದನ್ನೂ ಮಾರುಕಟ್ಟೆಯಿಂದ ತಂದು ಹಾಕಿದ್ದಾರೆ. ಅಡಕೆ ಮರಗಳ ಮೇಲ್‌ಸ್ತರದಲ್ಲಿ ಹೊಸ ಗರಿಗಳಲ್ಲಿ ಇನ್ನೂ ಹಳದಿ ಚುಕ್ಕಿ ಕಾಣಿಸಿಕೊಂಡಿಲ್ಲ. ಇದು ಪ್ರಯತ್ನ ಫಲ ಕೊಟ್ಟಿರಬಹುದು ಎನ್ನುತ್ತಾರೆ ರವಿ ಹೆಗಡೆ.

4ಸಾವಿರ ಹೆಕ್ಟೇರ್‌:

ಉತ್ತರ ಕನ್ನಡ ಜಿಲ್ಲೆಯಲ್ಲಿ ಇದುವರೆಗೆ 4 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಎಲೆ ಚುಕ್ಕಿ ರೋಗ ಕಾಣಿಸಿಕೊಂಡಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ನಿರ್ದೇಶಕ ಪಿ.ಬಿ. ಸತೀಶ. ಶಿವಮೊಗ್ಗ ಜಿಲ್ಲೆಯಲ್ಲಿ ವ್ಯಾಪಕವಾಗಿರುವ ಈ ಸಮಸ್ಯೆ ಉತ್ತರ ಕನ್ನಡದಲ್ಲಿಯೂ ಕಾಣಿಸಿಕೊಳ್ಳುತ್ತಿದ್ದಂತೆಯೇ ಎಲ್ಲ ಕಡೆ ಸಮೀಕ್ಷೆ ನಡೆಸಿದ್ದೇವೆ. ಸಮಸ್ಯೆ ಕಾಣಿಸಿಕೊಂಡ ಪ್ರದೇಶದಲ್ಲಿ ರೈತರಿಗೆ ನಿಯಂತ್ರಣಕ್ಕೆ ಸೂಕ್ತ ಮಾಹಿತಿ ಒದಗಿಸುತ್ತಿದ್ದೇವೆ. ನಿಧಾನವಾಗಿ ರೋಗ ನಿಯಂತ್ರಣಕ್ಕೆ ಬರುತ್ತಿದೆ ಎನ್ನುತ್ತಾರೆ ಅವರು.

ಅಡಿಕೆಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗದ ನಿಯಂತ್ರಣಕ್ಕಾಗಿ ಜಗದ್ಗುರುಗಳ ಮೊರೆಹೋದ ಕೃಷಿಕರು

ಎಲೆ ಚುಕ್ಕೆ ರೋಗ ಅಡಕೆ ಕೊಳೆ ರೋಗಕ್ಕಿಂತ ಭೀಕರವಾಗಿದೆ. ಕೊಳೆ ರೋಗದಲ್ಲಿ ಒಂದು ವರ್ಷದ ಬೆಳೆ ಮಾತ್ರ ನಾಶವಾದರೆ ಎಲೆಚುಕ್ಕಿ ರೋಗದಿಂದ ತೋಟವೇ ಹಾಳಾಗುತ್ತಿದೆ.

-ರವಿ ಹೆಗಡೆ ಹೊಸ್ಮನೆ, ರೈತ

click me!