Ballari News: ಕಾಡ್ಗಿಚ್ಚು ತಡೆಗೆ ಅರಣ್ಯ ಇಲಾಖೆ ಸನ್ನದ್ಧ

By Kannadaprabha NewsFirst Published Dec 31, 2022, 12:49 PM IST
Highlights

ಸಂಡೂರನ್ನು ಗಣಿ ತಾಲೂಕು ಎಂದು ಕರೆಯುವ ಜತೆಗೆ ಮಿನಿ ಮಲೆನಾಡು, ಬಿಸಿಲು ನಾಡಿನ ಓಯಾಸಿಸ್‌ ಎಂದು ಕೂಡ ಕರೆಯಲಾಗುತ್ತದೆ. ಇಲ್ಲಿನ ಪ್ರಕೃತಿ ಸಂಪತ್ತು ಈ ಅನ್ವರ್ಥಕಕ್ಕೆ ಪೂರಕವಾಗಿದೆ ಎಂದು ಹೇಳಬಹುದು. ಆದರೂ ಇಲ್ಲಿನ ಅರಣ್ಯ ಪ್ರದೇಶಕ್ಕೆ ಕೆಲವು ಕಿಡಿಗೇಡಿಗಳಿಂದ ಕಂಟಕ ಉಂಟಾಗುತ್ತಿದೆ.

ರಾಮು ಅರಕೇರಿ

ಸಂಡೂರು (ಡಿ.31) : ಸಂಡೂರನ್ನು ಗಣಿ ತಾಲೂಕು ಎಂದು ಕರೆಯುವ ಜತೆಗೆ ಮಿನಿ ಮಲೆನಾಡು, ಬಿಸಿಲು ನಾಡಿನ ಓಯಾಸಿಸ್‌ ಎಂದು ಕೂಡ ಕರೆಯಲಾಗುತ್ತದೆ. ಇಲ್ಲಿನ ಪ್ರಕೃತಿ ಸಂಪತ್ತು ಈ ಅನ್ವರ್ಥಕಕ್ಕೆ ಪೂರಕವಾಗಿದೆ ಎಂದು ಹೇಳಬಹುದು. ಆದರೂ ಇಲ್ಲಿನ ಅರಣ್ಯ ಪ್ರದೇಶಕ್ಕೆ ಕೆಲವು ಕಿಡಿಗೇಡಿಗಳಿಂದ ಕಂಟಕ ಉಂಟಾಗುತ್ತಿದೆ.

ಬೇಸಿಗೆ ಆರಂಭವಾಗುತ್ತಿದ್ದಂತೆ ಅಲ್ಲಲ್ಲಿ ಬೆಂಕಿ ಹಚ್ಚಿ ಕಾಡನ್ನು ಸುಡುವ ಮೂಲಕ ವಿಕೃತಿ ಮೆರೆಯುತ್ತಾರೆ. ಹೀಗಾಗಿ ಇಲ್ಲಿ ಕರ್ತವ್ಯ ನಿರ್ವಹಿಸುವ ಅರಣ್ಯ ಇಲಾಖೆ ಸಿಬ್ಬಂದಿ ನಾಲ್ಕೈದು ತಿಂಗಳು ಕಾಲ ಹೈರಾಣಾಗುತ್ತಾರೆ. ಹೀಗಾಗಿ ಇಲಾಖೆ ಕೆಲವು ವಿಶೇಷ ತಂತ್ರಗಳೊಂದಿಗೆ ಬೆಂಕಿ ತಡೆಗೆ ಸನ್ನದ್ಧವಾಗಿ ಕೆಲಸ ಆರಂಭಿಸಿದೆ.

Sariska Fire ಸಾರಿಸ್ಕಾ ಕಾಡ್ಗಿಚ್ಚು ಬಹುತೇಕ ನಿಯಂತ್ರಣಕ್ಕೆ, ಬೆಂಕಿಯಿಂದ ಹುಲಿಗೆ ತೊಂದರೆಯಾಗಿಲ್ಲ!

ಕಳೆದ ಕೆಲವು ವರ್ಷಗಳಿಂದ ಹೆಚ್ಚು ಬೆಂಕಿ ಬೀಳುವ ಸ್ಥಳ ಗುರುತಿಸಿ ಈ ಸಲ ಅಲ್ಲಿಯೇ ಪ್ರಾಮುಖ್ಯತೆ ಕೊಟ್ಟು ಹೆಚ್ಚು ಫೈರ್‌ಲೈನ್‌(Fireline) ಮಾಡಲಾಗುತ್ತಿದೆ. ಹೆಚ್ಚಿನ ಸಂಖ್ಯೆಯ ಅಡ್ಡ-ಉದ್ದ ಲೈನ್‌ ಮಾಡುವ ಮೂಲಕ ಬೆಂಕಿ ಬಿದ್ದರೂ ಹೆಚ್ಚು ವ್ಯಾಪಿಸದಂತೆ ಮುಂಜಾಗ್ರತೆ ವಹಿಸಲಾಗುತ್ತಿದೆ. ಸಂಡೂರು ಅರಣ್ಯ (Sanduru forest)ದ ಉತ್ತರ ವಲಯ ವ್ಯಾಪ್ತಿಯ ಮೌಂಟೇನ್‌ ವ್ಯಾಲಿ ರೆಸಾರ್ಟ್ ಪ್ರದೇಶ, ಮುರಾರಿಪುರ, ತಿಮ್ಮಪ್ಪನಗುಡಿ, ವೆಂಕಟಗಿರಿ ಗ್ರಾಮ ವ್ಯಾಪ್ತಿ ಒಳಗೊಂಡಂತೆ ಕೆಲವು ಕಡೆ ಹೆಚ್ಚು ಬೆಂಕಿ ಬಿದ್ದ ಉದಾಹರಣೆಗಳಿದ್ದು, ಈ ವಿಭಾಗದ 8 ಬೀಟ್‌ಗಳಲ್ಲಿ ಪ್ರತಿ ಬೀಟ್‌ನಲ್ಲೂ 10 ಜನರಂತೆ ಫೈರ್‌ಲೈನ್‌ ಸಿದ್ಧಪಡಿಸುತ್ತಿದ್ದು ಹೆಚ್ಚು ಬೆಂಕಿ ಬೀಳುವೆಡೆ 10 ಜನರ ಎರಡೆರಡು ತಂಡ ಸೇರಿ ಪ್ರತಿದಿನ 100ರಿಂದ 130 ಜನ ಶ್ರಮಿಸುತ್ತಿದ್ದಾರೆ

ಬೆಂಕಿ ತಡೆಗೆ ನೂತನ ತಂತ್ರ

ಕರ್ನಾಟಕ ಸ್ಟೇಟ್‌ ರಿಮೋಟ್‌ ಸೆನ್ಸಿಂಗ್‌ ಅಪ್ಲಿಕೇಷನ್‌ ಸಂಸ್ಥೆಯ ಸಹಯೋಗದೊಂದಿಗೆ ಬೆಂಕಿ ತಡೆ ಕಾರ್ಯ ಯೋಜನೆ ರೂಪಿಸಲಾಗಿದೆ. ಈ ತಂತ್ರಜ್ಞಾನದ ಮೂಲಕ ಕಾಡಲ್ಲಿ ಬೆಂಕಿ ಬಿದ್ದರೆ ಅರಣ್ಯ ಇಲಾಖೆ ಸಿಬ್ಬಂದಿ ಮೊಬೈಲ್‌ಗೆ ಸ್ಯಾಟಲೈಟ್‌ ಮೂಲಕ ಮೆಸೇಜ್‌ ರವಾನೆಯಾಗುತ್ತದೆ. ಸಿಬ್ಬಂದಿಗೆ ಅವಘಡ ಸ್ಥಳದ ಲೊಕೇಷನ್‌ ಕೂಡಾ ತಿಳಿಯುತ್ತದೆ. ಆ ಸ್ಥಳದಲ್ಲಿ ಸಿಬ್ಬಂದಿ ಬೆಂಕಿ ನಂದಿಸಿ ಫೋಟೋಟ್ಯಾಗ್‌ ಮಾಡಬೇಕಾಗುತ್ತದೆ. ಈ ರೀತಿಯ ತಂತ್ರಜ್ಞಾನ ಇತ್ತೀಚೆಗೆ ಬಳಸಲಾಗುತ್ತದೆ. ಕಾಡಿಗೆ ಬೆಂಕಿ ಬಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ನಿಯೋಜಿಸಿದ ಕಾರ್ಮಿಕರು ಸಾಕಷ್ಟುಕಷ್ಟಪಡಬೇಕಾಗುತ್ತದೆ. ಮೊದಲೆಲ್ಲ ಬೆಂಕಿ ನಂದಿಸಲು ಅಡವಿ ಎಲೆಗಳನ್ನು ಬಳಸುತ್ತಿದ್ದರೆ ಇದೀಗ ಏರ್‌ ಬ್ಲೋವರ್‌ ಒದಗಿಸಲು ಮುಂದಾಗಿದ್ದಾರೆ. ಹತ್ತು ಜನರು ಮಾಡುವ ಕೆಲಸವನ್ನು ಈ ಮಶಿನ್‌ ಮಾಡುತ್ತದೆ. ಇದರ ಜತೆಗೆ ಹೆಚ್ಚುವರಿ ವಾಚ್‌ ಟವರ್‌ ನಿರ್ಮಾಣ, ಬೆಂಕಿ ತಡೆ ಗಸ್ತು ವಾಹನ, ಬೆಂಕಿ ತಡೆ ಸಿಬ್ಬಂದಿಗೆ ಎಲ್ಲ ಸೌಲಭ್ಯಗಳನ್ನು ಒದಗಿಸಿ ಅಲ್ಲಿಯೇ ತಂಗಲು ಅನುಕೂಲವಾಗುವ ಫೈರ್‌ಪೊ›ಟೆಕ್ಷನ್‌ ಕ್ಯಾಂಪ್‌ಗೆ ಬೇಕಾದ ಅನುಕೂಲ ಮುಂದಿನ ದಿನಗಳಲ್ಲಿ ಮಾಡಲು ಉದ್ದೇಶಿಸಿದ್ದು ಈ ಬಗ್ಗೆ ಇಲಾಖೆ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. 

Chikkamagalur: ಕಾಡ್ಗಿಚ್ಚು ತಡೆಯಲು ಮಾಸ್ಟರ್ ಪ್ಲಾನ್: ಬೆಂಕಿ ತಡೆಯಲು ಡ್ರೋಣ್ ಕಣ್ಗಾವಲು..!

ಕಾನೂನು ಕ್ರಮ:

ಕಾಡಂಚಿನ ಗ್ರಾಮಗಳ ಜನರಿಗೆ ಅರಣ್ಯ ಇಲಾಖೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಾ ಬಂದಿದೆ. ಹುಲ್ಲು ಸುಟ್ಟರೆ ಹೊಸ ಚಿಗುರು ಬರುತ್ತದೆ, ಬೆಂಕಿ ಹಚ್ಚಿದರೆ ಬೇಟೆಯಾಡಲು ಸುಲಭ, ಉರುವಲು, ಇತರೆ ಕೆಟ್ಟಉದ್ದೇಶಕ್ಕೆ ಕಿಡಿಗೇಡಿಗಳು ಕಾಡಿಗೆ ಬೆಂಕಿ ಹಚ್ಚುವ ಕೆಲಸ ಮಾಡುತ್ತಾರೆ. ಇದಕ್ಕಾಗಿ ಕೆಲ ಗ್ರಾಮಗಳ ಪಟ್ಟಿತಯಾರಿಸಿ ಬೀದಿ ನಾಟಕ, ಬ್ಯಾನರ್‌, ಫ್ಲೆಕ್ಸ್‌ ಹಾಕಿಸಲಾಗುತ್ತಿದೆ. ಪ್ರತಿ ವರ್ಷ 30 ಕಿಮೀ ಫೈರ್‌ಲೈನ್‌ ಮಾಡಿದರೆ, ಈ ವರ್ಷ 120 ಕಿಮೀ ಫೈರ್‌ಲೈನ್‌ ಮಾಡಿಸಲಾಗುತ್ತಿದೆ. ಇಷ್ಟೆಲ್ಲ ಜಾಗೃತಿಯ ನಂತರವೂ ಯಾರಾದರೂ ಬೆಂಕಿ ಹಚ್ಚುವ ಮೂಲಕ ಅರಣ್ಯಕ್ಕೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸಿದರೆ ಅಂಥವರ ವಿರುದ್ಧ ಕನಾಟಕ ಅರಣ್ಯ ಕಾಯ್ದೆ 1963 24(ಬಿ) ಪ್ರಕಾರ ಕಠಿಣ ಕ್ರಮ ಜರುಗಿಸಲಾಗುವುದು ಎನ್ನುತ್ತಾರೆ ಇಲ್ಲಿನ ಉತ್ತರ ವಲಯ ಅರಣ್ಯಾಧಿಕಾರಿ ಆರ್‌.ಉಮೇಶ್‌

ಬೆಂಕಿ ತಡೆಗೆ ಬೇಕಾದ ಅಗತ್ಯ ಕ್ರಮ ತೆಗೆದುಕೊಂಡಿದ್ದೇವೆ. ಇಲಾಖೆಯ ಜತೆಗೆ ಸಾರ್ವಜನಿಕರ ಸಹಕಾರವೂ ಮುಖ್ಯ. ಇದರ ಮೇಲೆ ಯಾರಾದರೂ ಕಿಡಿಗೇಡಿಗಳು ಬೆಂಕಿ ಹಚ್ಚುವ ಕೆಲಸ ಮಾಡಿದರೆ ಕಾನೂನು ಪ್ರಕಾರ ಶಿಸ್ತು ಕ್ರಮ ಜರುಗಿಸಲಾಗುವುದು.

ಆರ್‌. ಉಮೇಶ್‌, ವಲಯ ಅರಣ್ಯಾಧಿಕಾರಿಗಳು, ಉತ್ತರ ವಲಯ ಸಂಡೂರು

click me!