ಧಾರವಾಡ ಜಿಲ್ಲೆಯಲ್ಲಿ ಮತ್ತೊಮ್ಮೆ ನೆರೆ ಸಮೀಕ್ಷೆ ನಡೆಸಲು ಒತ್ತಾಯ

By Web DeskFirst Published Sep 28, 2019, 7:43 AM IST
Highlights

ಕುಸಿದ ಮನೆ, ಹಾಳಾದ ಕೃಷಿ ಭೂಮಿ ಸಮೀಕ್ಷೆ ಮತ್ತೊಮ್ಮೆ ನಡೆಯಲಿ | ಅರ್ಹರಿಗೆ ಪರಿಹಾರ, ಆಹಾರ ಕಿಟ್ ದೊರಕಿಲ್ಲ, ಜಿಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಗ್ರಹ|  ಬೆಳಗಾವಿ ಜಿಲ್ಲೆ ಹೊರತು ಪಡಿಸಿದರೆ ರಾಜ್ಯದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ನೆರೆ ಹಾನಿಯಾಗಿದೆ| ಸರಿಯಾಗಿ ಸಮೀಕ್ಷೆ ನಡೆಸದ ಪರಿಣಾಮ ಅರ್ಹರಿಗೆ ಪರಿಹಾರ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ| ಮತ್ತೊಮ್ಮೆ ಸಮೀಕ್ಷೆ ನಡೆಸಿ ಸಂತ್ರಸ್ತರಿಗೆ ನೆರವಾಗಬೇಕು| 

ಧಾರವಾಡ:(ಸೆ. 28) ಬೆಳಗಾವಿ ಜಿಲ್ಲೆ ಹೊರತು ಪಡಿಸಿದರೆ ರಾಜ್ಯದಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ನೆರೆ ಹಾನಿಯಾಗಿದೆ. ಆದರೆ, ಸರಿಯಾಗಿ ಸಮೀಕ್ಷೆ ನಡೆಸದ ಪರಿಣಾಮ ಅರ್ಹರಿಗೆ ಪರಿಹಾರ ಸಿಗದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೊಮ್ಮೆ ಸಮೀಕ್ಷೆ ನಡೆಸಿ ಸಂತ್ರಸ್ತರಿಗೆ ನೆರವಾಗಬೇಕು. ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ತೆಗೆದುಕೊಂಡಿರುವ ಒಕ್ಕೊರಲಿನ ನಿರ್ಣಯವಿದು. 

ಮಹಾಮಳೆಗೆ ಜಿಲ್ಲೆಯ ಗ್ರಾಮೀಣ ಭಾಗ ತತ್ತರಿಸಿದ್ದು ಸಾಕಷ್ಟು ಪ್ರಮಾಣದಲ್ಲಿ ಜನರು ಮನೆ ಕಳೆದುಕೊಂಡಿದ್ದಾರೆ. ಕೆಲವೆಡೆ ಮನೆ ಕಳೆದುಕೊಂಡವರ ಹೆಸರನ್ನು ಕೈ ಬಿಟ್ಟಿದ್ದು ಪರಿಹಾರವನ್ನು ಸಮರ್ಪಕವಾಗಿ ನೀಡಿಲ್ಲ. ಕೇವಲ ಸಾಂಕೇತಿಕವಾಗಿ ಚೆಕ್ ನೀಡಲಾಗಿದೆ. ಇತ್ತ ಅಪಾರ ಪಮಾಣದಲ್ಲಿ ಕೃಷಿ ಭೂಮಿಗೆ ಹಾನಿಯಾದರೂ ಸರಿಯಾಗಿ ಸಮೀಕ್ಷೆ ಮಾಡಿಲ್ಲ ಎಂದು ಸದಸ್ಯರಾದ ಚನ್ನಬಸಪ್ಪ ಮಟ್ಟಿ, ಕಲ್ಲಪ್ಪ ಪುಡಕಲಕಟ್ಟಿ ಆರೋಪಿಸಿದ್ದಾರೆ. 

ಅತಿವೃಷ್ಟಿಯಿಂದ ಹಾನಿಗೊಳಗಾದ ಮನೆಗಳಿಗೆ ಕೊಡಗು ಮಾದರಿಯಲ್ಲಿ ಪರಿಹಾರ ನೀಡುವಂತೆ ಆಗ್ರಹಿಸಿದ ಇತರ ಸದಸ್ಯರು, ಈ ಕುರಿತು ಸಭೆಯಲ್ಲಿ ನಿರ್ಣಯ ಸ್ವೀಕರಿಸಿ, ಆ ನಿರ್ಣಯವನ್ನು ಸರ್ಕಾರಕ್ಕೆ ಕಳಿಸಲು ನಿರ್ಧರಿಸಿದರು. 
ಇದಕ್ಕೆ ಪ್ರತಿಕ್ರಿಯಿಸಿದ ಉಪ ವಿಭಾಗಾಧಿಕಾರಿ ಮಹ್ಮದ್ ಜುಬೇರ, ಅತಿವೃಷ್ಟಿ ಹಾನಿ ಸಮೀಕ್ಷೆ ಸರಿಯಾಗಿ ನಡೆದಿಲ್ಲ ಎಂಬ ನಿರ್ದಿಷ್ಟವಾದ ಪ್ರಕರಣಗಳನ್ನು ಸದಸ್ಯರು ನೀಡಿದರೆ ಆಯಾ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಮನೆಗಳ ಹಾನಿಯ ಬಗ್ಗೆ ಮತ್ತೊಂದು ತಂಡ ರಚಿಸಿ ಸಮೀಕ್ಷೆ ನಡೆ ಸಲು ಜಿಲ್ಲಾಡಳಿತ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು. 

1.53 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾಗೂ 32 358 ಹೆಕ್ಟೇರ್ ತೋಟಗಾರಿಕೆ ಬೆಳೆ ಸೇರಿ ಒಟ್ಟು 125 ಕೋಟಿ ಮೌಲ್ಯದ ಬೆಳೆಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಸಭೆಗೆ ತಿಳಿಸಿದರು. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಆ. 1 ರಿಂದ ಸೆ. 17 ರ ವರೆಗೆ ೪ ಜೀವ ಹಾನಿಯಾಗಿವೆ. 87 ಮನೆಗಳು ಸಂಪೂರ್ಣ ಕುಸಿದಿದ್ದು 5 ಲಕ್ಷ ಪರಿಹಾರ ನೀಡಲಾಗುತ್ತಿದೆ. ಉಳಿದಂತೆ 16872 ಮನೆಗಳಿಗೆ ಹಾನಿಯಾಗಿದ್ದು ಮೂರು ವಿಭಾಗಗಳಲ್ಲಿ ಅವರಿಗೆ ಪರಿಹಾರ ಒದಗಿಸಲಾಗುತ್ತಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ  

ಮನೆಗಳಿಗೆ ಪರಿಹಾರ ವಿತರಿಸಲು 66 ಕೋಟಿ ಅಗತ್ಯವಿದ್ದು ಎರಡು ದಿನಗಳ ಹಿಂದಷ್ಟೇ ಸರ್ಕಾರದಿಂದ ಅನುದಾನ ಬಂದಿದೆ. ಎರಡ್ಮೂರು ದಿನಗಳಲ್ಲಿ ವಿತರಿಸಲು ಕ್ರಮಕೈಗೊಳ್ಳಲಾಗುವುದು ಎಂದು ಸಭೆಗೆ ಮಾಹಿತಿ ನೀಡಿದರು. ಜಿಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪಾಟೀಲ ಸೇರಿದಂತೆ ಸದಸ್ಯರಾದ ಕಲ್ಲಪ್ಪ ಪುಡಕಲಕಟ್ಟಿ, ಚೈತ್ರಾ ಶಿರೂರ, ನಿಂಗಪ್ಪ ಘಾಟೀನ್, ಚನ್ನಬಸಪ್ಪ ಮಟ್ಟಿ, ಉಮೇಶ ಹೆಬಸೂರ, ಅತಿವೃಷ್ಟಿ ಹಾನಿ ಸಮೀಕ್ಷೆ ಸಮರ್ಪಕವಾಗಿ ನಡೆಸಬೇಕು. ಪರಿಹಾರ ಕಾರ್ಯದಲ್ಲಿ ಜಿಲ್ಲಾ ಪಂಚಾಯಿತಿ ಕೂಡ ಪಾಲುದಾರವಾದರೆ ನೇರವಾಗಿ ಗ್ರಾಮೀಣ ಜನರ ಅಹವಾ ಲುಗಳಿಗೆ ಚುನಾಯಿತ ಪ್ರತಿನಿಧಿಗಳು ಸ್ಪಂದಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕು ಎಂದರು. 

ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ಅತವೃಷ್ಟಿಯಿಂದ ಮನೆಗಳಿಗೆ ನೀರು ನುಗ್ಗಿ ಪಾತ್ರೆ, ಬಟ್ಟೆ ಕಳೆದುಕೊಂಡವರಿಗೆ ತಕ್ಷಣದ ಪರಿಹಾರವಾಗಿ ಪ್ರತಿ ಕುಟುಂಬಕ್ಕೆ ತಲಾ 10 ಸಾವಿರ ಪರಿಹಾರ ಒದಗಿಸಲಾಗಿದೆ. ಬೆಳೆವಿಮೆ ಹಣ ಪಡೆದ ಕಂಪನಿಗಳ ಅಧಿಕಾರಿಗಳನ್ನು ಸಾಮಾನ್ಯ ಸಭೆಗೆ ಕರೆಯಿಸಿ ಸದಸ್ಯರಿಗೆ ಸಮರ್ಪಕ ಮಾಹಿತಿ ಒದಗಿಸಲಾಗುವುದು ಎಂದರು. 

ಅತಿಯಾದ ಮಳೆಯಿಂದ ರೈತರ ಹೊಲಗಳಿಗೆ ತೆರಳುವ ರಸ್ತೆಗಳು ಹಾಳಾಗಿದ್ದು ರೈತರ ಜಮೀನಿನ ಮಣ್ಣು ತೇಲಿ ಹೋಗಿ ಕಂದಕ ಸೃಷ್ಟಿಯಾಗಿವೆ. ಶೀಘ್ರ ಸರ್ಕಾರ ಅವರಿಗೆ ಬೆಳೆಹಾನಿ ಪರಿಹಾರ ನೀಡಬೇಕು ಎಂದು ಸದಸ್ಯರು ಒತ್ತಾಯಿಸಿದರು. 

ಇತ್ತೀಚೆಗೆ ಜಿಪಂ ಕಚೇರಿ ಎದುರು ಗ್ರಾಪಂ ನೌಕರರು ಪ್ರತಿಭಟಿಸಿದ್ದು ವರ್ಷದಿಂದ ಸಂಬಳ ನೀಡಿಲ್ಲ ಏಕೆ? ಎಂದು ಸದಸ್ಯ ಚನ್ನಬಸಪ್ಪ ಮಟ್ಟಿ ಪ್ರಶ್ನಿಸಿದರು. ಆಗ ಸಿಇಒ ಸತೀಶ್, ನಿಗದಿತ ಸಂಖ್ಯೆಗಿಂತ ಹೆಚ್ಚಿರುವ ಗ್ರಾಪಂ ನಲ್ಲಿ ಈ ಸಮಸ್ಯೆಯಾಗಿದೆ. ಮೊದಲಿನಂತೆ ಗ್ರಾಪಂಗೆ ಅನುದಾನ ನೀಡದೆ ಪ್ರತಿಯೊಬ್ಬ ನೌಕರರ ಅಕೌಂಟ್‌ಗೆ ಸಂಬಳ ಹೋ ಗುತ್ತಿದ್ದು, ಗ್ರಾಪಂಗಳು ನಿಗದಿತ ಸಂಖ್ಯೆಗೆ ಅನುಗುಣ ವಾಗಿ ಸಿಬ್ಬಂದಿ ನೇಮಕಾತಿ ಮಾಡಿಕೊಳ್ಳಬೇಕು ಎಂದರು. 

ಆಹಾರ ಮತ್ತು ನಾಗರಿಕ ಸರಬರಾಜು,ಗ್ರಾಹಕ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕ ಸದಾಶಿವ ಮರ್ಜಿ ಮಾತನಾಡಿ, ತಾಲೂಕುವಾರು ಬೇಡಿಕೆ ಪಡೆದು 33 852 ಆಹಾರ ಕಿಟ್ ತಯಾರಿಸಿ ವಿತರಿಸಲಾಗುತ್ತಿದೆ. ಎಲ್ಲ ಗ್ರಾಮಗಳಿಗೆ ಈಗಾಗಲೇ ಕಿಟ್ ತಲುಪಿಸಲಾಗಿದೆ ಎಂಬ ಮಾಹಿತಿ ನೀಡಿದರು. 

ನೆರೆ: ಮರು ಸಮೀಕ್ಷ ನಡೆಸಿ  

ಆಹಾರ ಕಿಟ್‌ಗೋಸ್ಕರ ವಾಕ್ಸಮರ ಸಭೆಯಲ್ಲಿ ಆಹಾರ ಕಿಟ್ ವಿತರಣೆ ಬಗ್ಗೆ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಆಹಾರ ಇಲಾಖೆ ಸದಾಶಿವ ಮರ್ಜಿ ಬೇಡಿಕೆಯಂತೆ 33852 ಆಹಾರ ಕಿಟ್ ವಿತರಿಸಲಾಗಿದೆ ಎನ್ನುತ್ತಿದ್ದಂತೆ ಸದಸ್ಯೆ ಚೈತ್ರಾ ಶಿರೂರ, ಜಿಲ್ಲೆಯಲ್ಲಿ 17 ಸಾವಿರ ಕುಟುಂಬಗಳ ಮನೆಗಳು ಬಿದ್ದಿದ್ದು 33 ಸಾವಿರಕ್ಕೂ ಹೆಚ್ಚು ಕಿಟ್‌ಗಳನ್ನು ಹೇಗೆ ವಿತರಿಸಿದ್ದೀರಿ? ಯಾರ ಮೂಲಕ ಯಾರಿಗೆ ಹಂಚಿದ್ದೀರಿ. ನೆರೆ ಪ್ರವಾಹ ನೋಡಿದ ಜನರು ಮರಗಿ ಸ್ವಯಂ ಪ್ರೇರಿತವಾಗಿ ಸಂತ್ರಸ್ತರಿಗೆ ಆಹಾರ ವಸ್ತುಗಳನ್ನು ನೀಡಿದ್ದಾರೆ. 

ಅಧಿಕಾರಿಗಳು ನಿಜವಾದ ಸಂತ್ರಸ್ತರಿಗೆ ಆಹಾರ ಕಿಟ್ ನೀಡುವ ಬದಲು ಬೇರೆಯವರಿಗೆ ನೀಡಿದ್ದಾರೆ ಎಂದು ಆರೋಪಿಸಿದರು. ಆಗ ಉಪಾಧ್ಯಕ್ಷ ಶಿವಾನಂದ ಕರಿಗಾರ, ಈ ಕುರಿತು ಚರ್ಚೆ ಬೇಡ. ಬೇರೆ ವಿಷಯದ ಕುರಿತು ಮಾತನಾಡಿ ಎಂದು ಚೈತ್ರಾಗೆ ಟಾಂಗ್ ನೀಡಿದರು. 

ಇದರಿಂದ ಕುಪಿತಗೊಂಡ ಚೈತ್ರಾ, ತಮ್ಮೊಂದಿಗೆ ತಂದಿದ್ದ ಪಂಚಾಯತ್ ರಾಜ್ ನಿಯಮಗಳ ಕುರಿತ ಪುಸ್ತಕದಲ್ಲಿನ ಅಂಶಗಳನ್ನು ಪೂರಕವಾಗಿಟ್ಟುಕೊಂಡು, ಒರ್ವ ಸದಸ್ಯರು ಒಂದು ವಿಷಯದ ಬಗ್ಗೆ ಚರ್ಚಿಸಲು ಅವಕಾಶವಿದೆ. ಈ ರೀತಿ ನಮ್ಮ ಮಾತುಗಳನ್ನು ಹತ್ತಿಕ್ಕಬೇಡಿ ಎಂದು ತಿರುಗೇಟು ನೀಡಿ ದರು. ನಮಗೂ ಕಾನೂನು, ನ್ಯಾಯ ಗೊತ್ತಿದೆ. ಸಾಕು ಸುಮ್ಮನಿರಿ ಎಂದು ಪಾಧ್ಯಕ್ಷರು ಗದಗಿಸಿದರೂ ಒಬ್ಬರಿಗೊಬ್ಬರ ವಾಕ್ಸಮರ ಮುಂದುವರೆದಿತ್ತು.  

click me!