Uttara Kannada: ಭೂ ಕುಸಿತದಂತಹ ಸಮಸ್ಯೆಗಳನ್ನು ನಿಭಾಯಿಸಲು ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಪ್ಲ್ಯಾನ್!

By Govindaraj SFirst Published Jun 12, 2022, 2:30 AM IST
Highlights

ಜಿಲ್ಲೆಯಲ್ಲಿ ಕಳೆದ ಬಾರಿ ಕಾಣಿಸಿಕೊಂಡಿದ್ದ ನೆರೆ ಹಾಗೂ ಭೂ ಕುಸಿತದಿಂದಾಗಿ ಜನರಂತೂ ಅಕ್ಷರಶಃ ಹೈರಾಣಾಗಿ ಹೋಗಿದ್ದರು. ಈ ಬಾರಿ ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ಮತ್ತೆ ಹಲವೆಡೆ ನೆರೆ ಭೀತಿ ಹಾಗೂ ಭೂ ಕುಸಿತದ ಆತಂಕ ಎದುರಾಗಿದೆ. 

ಭರತ್‌ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ (ಜೂ.12): ಜಿಲ್ಲೆಯಲ್ಲಿ ಕಳೆದ ಬಾರಿ ಕಾಣಿಸಿಕೊಂಡಿದ್ದ ನೆರೆ ಹಾಗೂ ಭೂ ಕುಸಿತದಿಂದಾಗಿ ಜನರಂತೂ ಅಕ್ಷರಶಃ ಹೈರಾಣಾಗಿ ಹೋಗಿದ್ದರು. ಈ ಬಾರಿ ಈಗಾಗಲೇ ಮಳೆಗಾಲ ಪ್ರಾರಂಭವಾಗಿದ್ದು, ಮತ್ತೆ ಹಲವೆಡೆ ನೆರೆ ಭೀತಿ ಹಾಗೂ ಭೂ ಕುಸಿತದ ಆತಂಕ ಎದುರಾಗಿದೆ. ಇದನ್ನು ಸಮರ್ಥವಾಗಿ ಎದುರಿಸಲು ಹಾಗೂ ಜನರ ಸುರಕ್ಷತೆಯ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾಡಳಿತ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಪ್ಲ್ಯಾನ್ ತಯಾರು ಮಾಡಿದ್ದು, ಗ್ರಾಮ ಮಟ್ಟದಲ್ಲೇ ಸಮಸ್ಯೆಗಳಿಗೆ ಕ್ಷಿಪ್ರ ಸ್ಪಂದನೆ ದೊರಕಲು ಸಿದ್ಧತೆ ಮಾಡಿಕೊಂಡಿದೆ. ಅಷ್ಟಕ್ಕೂ ಜಿಲ್ಲಾಡಳಿತ ಯಾವ ಯಾವ ವಿಚಾರದತ್ತ ಗಮನ ಹರಿಸಿದೆ ಅಂತೀರಾ. ಈ ಸ್ಟೋರಿ ನೋಡಿ... 

ಹೌದು! ಈ ಬಾರಿಯ ಮಳೆ, ನೆರೆಕಾಟ, ಭೂ ಕುಸಿತದಂತಹ ಸಮಸ್ಯೆಗಳನ್ನು ನಿಭಾಯಿಸಲು ಉತ್ತರ ಕನ್ನಡ ಜಿಲ್ಲಾಡಳಿತ ಡೀ ಸೆಂಟ್ರಲೈಸ್ಡ್ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಅನ್ನೋ ಕಾನ್ಸೆಪ್ಟ್ ಮೇಲೆ ಯೋಜನೆ ರೂಪಿಸಿದೆ. ನೆರೆ ಪೀಡಿತ ಪ್ರದೇಶಗಳನ್ನು ಈ ಹಿಂದಿನ 10-15ವರ್ಷಗಳ ಡೇಟಾ ಆಧರಿಸಿ ಗುರುತಿಸಲಾಗಿದ್ದು, ಎಲ್ಲೆಲ್ಲಿ ನೆರೆ ಕಾಟ ಪ್ರಾರಂಭವಾಗಬಹುದು ಎಂದು ಅಂದಾಜಿಸಲಾಗಿದೆ. 153 ಗ್ರಾಮಗಳು ಹಾಗೂ ನಗರ ಪ್ರದೇಶದ 17 ವಾರ್ಡ್‌ಗಳನ್ನು ನೆರೆ ಕಾಣಿಸಿಕೊಳ್ಳುವ ಸಾಧ್ಯತೆಗಳಿರೋ ಪ್ರದೇಶಗಳೆಂದು ಹಾಗೂ 5 ಪ್ರದೇಶಗಳನ್ನು ಭೂ ಕುಸಿತದ ಸಾಧ್ಯತೆಗಳಿರುವ ಪ್ರದೇಶಗಳೆಂದು ಗುರುತಿಸಲಾಗಿದೆ. 

ಆನೆ ಕಾರಿಡಾರಲ್ಲಿ ಮಾನವ ಹಸ್ತಕ್ಷೇಪ: 79 ಆನೆ ಬಲಿ

ಈ ಹಿಂದೆ ಜಿಲ್ಲೆಯ ಭೂ ಕುಸಿತದ ಪ್ರದೇಶಗಳ ಸರ್ವೇ ನಡೆಸಿದ್ದ ಜಿಯೋಲಾಜಿಕಲ್ ಸರ್ವೇ ಆಫ್ ಇಂಡಿಯಾ, ಕಳಚೆಯ ಮಣ್ಣಿನ ಗುಣದ ಕಾರಣ ಭೂ ಕುಸಿತವಾಗಿದೆ ಎಂದು ತಿಳಿಸಿದ್ರೆ, ಜಿಲ್ಲೆಯ ಇತರ ಭಾಗಗಳಲ್ಲಿ ಇಂತದ್ದೇ ಕಾರಣಗಳಿಂದ ಭೂ ಕುಸಿತವಾಗಿದೆ ಎಂದು ಸ್ಪಷ್ಟವಾಗಿ ತಿಳಿಸಿಲ್ಲ. ಆದರೂ, ಭೂ ಕುಸಿತದ ಸಾಧ್ಯತೆಗಳಿರುವ ಪ್ರದೇಶದ ಮೇಲೆ ಹೆಚ್ಚಿನ ಗಮನ ಹರಿಸಲಾಗಿದೆ.‌ ಗ್ರಾಮ ಪಂಚಾಯತ್ ಮಟ್ಟದಲ್ಲೂ ಡೀ ಸೆಂಟ್ರಲೈಸ್ಡ್ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಅನ್ನೋ ಕಾನ್ಸೆಪ್ಟ್ ಮೇಲೆಯೇ ಯೋಜನೆ ರೂಪಿಸಿ ತಾಲೂಕು ಮಟ್ಟದ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ. 

ಎಲ್ಲೆಲ್ಲಿ ನೆರೆ ಕಾಟ, ಭೂ ಕುಸಿತ ಹಾಗೂ ಕುಗ್ರಾಮಗಳಿವೆ ಅವೆಲ್ಲದಕ್ಕೂ ಯಾವ ರೀತಿಯ ರೆಸ್ಕ್ಯೂ ಆಪರೇಷನ್ ಬೇಕಿದೆ, ರಕ್ಷಣಾ ವಸ್ತುಗಳು ಹಾಗೂ ಅಗತ್ಯ ವಸ್ತುಗಳ ಅಗತ್ಯತೆಯನ್ನು ಈಗಾಗಲೇ ಎಲ್ಲರಿಂದ ಮಾಹಿತಿ ಪಡೆದು ಗ್ರಾಮ ಪಂಚಾಯತ್ ಮಟ್ಟದಲ್ಲೇ ಪ್ಲ್ಯಾನ್ ಮಾಡಲಾಗಿದೆ. ಅಲ್ಲದೇ, ಸ್ಥಳೀಯವಾಗಿ ದೊರೆಯುವ ಎಲ್ಲಾ ಸಂಪನ್ಮೂಲಗಳನ್ನು ಬಳಸಲು ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇನ್ನು ಈ ಬಾರಿ ನೆರೆ ಹಾಗೂ ಭೂ ಕುಸಿತದ ಸಮಸ್ಯೆಗಳನ್ನು ನಿಭಾಯಿಸಲು ಸಾರ್ವಜನಿಕರ ಸಹಕಾರವನ್ನು ಕೂಡಾ ಜಿಲ್ಲಾಡಳಿತ ಬಳಸಿಕೊಳ್ಳುತ್ತಿದ್ದು, ಇದಕ್ಕಾಗಿ ಆಪತ್ತು ಮಿತ್ರ ಅನ್ನೋ‌ ಯೋಜನೆ ರೂಪಿಸಿದೆ. 

Karwar: ಕೋಟಿಗಟ್ಟಲೆ ಅಕ್ರಮ ಹಣ ಸಾಗಾಟ: ರಾಜಸ್ಥಾನ ಮೂಲದ ವ್ಯಕ್ತಿಯ ಬಂಧನ

ಪ್ರತಿಯೊಂದು ಪಂಚಾಯತ್ ವ್ಯಾಪ್ತಿ ಹಾಗೂ ಗ್ರಾಮ ವ್ಯಾಪ್ತಿಯಲ್ಲಿ ಯುವಕರನ್ನು ನಿಯೋಜಿಸಿ ಸೂಕ್ತ ಸಮಯದಲ್ಲಿ ಯಾವುದೇ ಸಮಸ್ಯೆಯಿರುವ ಮಾಹಿತಿಗಳನ್ನು ಸಂಬಂಧಪಟ್ಟ ಇಲಾಖೆಗೆ ನೀಡಲು ಹಾಗೂ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಆಪತ್ತು ಮಿತ್ರರನ್ನು ಗುರುತಿಸಿಕೊಳ್ಳಲಾಗುತ್ತಿದೆ. ಗುರುತಿನ ಚೀಟಿ, ತರಬೇತಿ ನೀಡಿ ಜಿಲ್ಲೆಯ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಟೀಂ ಜತೆ ಅವರು ಕೈ ಜೋಡಿಸುವಂತೆ ಮಾಡಲಾಗುತ್ತಿದೆ. ಒಟ್ಟಿನಲ್ಲಿ ಕಳೆದ ಬಾರಿ ಮಳೆಗಾಲದ ಸಂದರ್ಭದಲ್ಲಿ ಎದುರಾದ ಸಂಕಷ್ಟ ಈ ಬಾರಿಯೂ ಕಾಣಿಸಿಕೊಳ್ಳಬಾರದು ಎಂಬ ನಿಟ್ಟಿನಲ್ಲಿ ಉತ್ತರಕನ್ನಡ ಜಿಲ್ಲಾಡಳಿತ ನೂತನ ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಪ್ಲ್ಯಾನ್ ರೂಪಿಸಿದೆ. ಈ ಯೋಜನೆ ಜನಸಾಮಾನ್ಯರ ಎಷ್ಟರಮಟ್ಟಕ್ಕೆ ಸಹಾಯಕವಾಗಲಿದೆ ಹಾಗೂ ಸೂಕ್ತ ಸ್ಪಂದನೆ ದೊರೆಯಲಿದೆ ಅನ್ನೋದು ಕಾದು ನೋಡಬೇಕಷ್ಟೇ. 

click me!