ಗಡಿ ಜಲ ವಿವಾದ ರಾಜಕೀಯಕ್ಕೆ ಬಳಕೆ ಬೇಡ: ಜೆ.ಸಿ.ಮಾಧುಸ್ವಾಮಿ

By Kannadaprabha NewsFirst Published Feb 5, 2023, 7:04 AM IST
Highlights

ಜಲ ಮತ್ತು ಗಡಿ ವಿವಾದವು ಭಾವನಾತ್ಮಕ ವಿಚಾರದ ಮೂಲಕ ರಾಜಕೀಯ ಲಾಭ ಪಡೆಯುತ್ತಿದ್ದು, ನಾವು ಭಾಷಾವಾರು ಪ್ರಾಂತ್ಯಗಳನ್ನು ವಿಂಗಡಿಸುತ್ತ ಹೋದರೆ ಮುಂದೊಂದು ದಿನ ಹಳೇ ಮೈಸೂರು ಪ್ರಾಂತ್ಯಕ್ಕೆ ಸೀಮಿತವಾಗಬೇಕಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಮೈಸೂರು (ಫೆ.5) : ಜಲ ಮತ್ತು ಗಡಿ ವಿವಾದವು ಭಾವನಾತ್ಮಕ ವಿಚಾರದ ಮೂಲಕ ರಾಜಕೀಯ ಲಾಭ ಪಡೆಯುತ್ತಿದ್ದು, ನಾವು ಭಾಷಾವಾರು ಪ್ರಾಂತ್ಯಗಳನ್ನು ವಿಂಗಡಿಸುತ್ತ ಹೋದರೆ ಮುಂದೊಂದು ದಿನ ಹಳೇ ಮೈಸೂರು ಪ್ರಾಂತ್ಯಕ್ಕೆ ಸೀಮಿತವಾಗಬೇಕಾಗುತ್ತದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.

ಬನ್ನೂರು ರಸ್ತೆಯ ವಿದ್ಯಾವಿಕಾಸ ಶಿಕ್ಷಣ ಸಂಸ್ಥೆಯಲ್ಲಿ ಕರ್ನಾಟಕ ಕಾನೂನು ಮತ್ತು ಪಾರ್ಲಿಮೆಂಟರಿ ಸುಧಾರಣಾ ಸಂಸ್ಥೆ, ವಿದ್ಯಾವಿಕಾಸ ಕಾನೂನು ಅಧ್ಯಯನ ವಿಭಾಗದ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಅಂತರ್‌ ರಾಜ್ಯ ಗಡಿ ಮತ್ತು ಜಲವಿವಾದ ನಿಯಂತ್ರಿಸುವ ಕಾನೂನು ಕುರಿತ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಪಕ್ಷ ಸೇರುವಾಗಿನ ಉತ್ಸಾಹ ಸಂಘಟನೆಯಲ್ಲೂ ಇರಲಿ: ನಿಖಿಲ್ ಕುಮಾರಸ್ವಾಮಿ ಸಲಹೆ

ಅಂತಾರಾಜ್ಯ ಗಡಿ, ನೀರಾವರಿ ವಿವಾದಕ್ಕೆ ಸಂಬಂಧಿಸಿದಂತೆ ಅರಿಯಲು ಒಂದು ಪಠ್ಯಕ್ರಮವನ್ನೇ ಮಾಡುವ ಬಗ್ಗೆ ಚಿಂತನೆ ಇದೆ. ರಾಜಕೀಯವಾಗಿ ನಾವು ನಮ್ಮ ಹಕ್ಕನ್ನು ಪಡೆಯಲು ವಿಫಲವಾಗಿದ್ದೇವೆ. ಇದು ಒಂದು ಪಕ್ಷಕ್ಕೆ ಸೀಮಿತವಲ್ಲ. ಎಲ್ಲಾ ಪಕ್ಷಗಳ ಕಾಲದಲ್ಲೂ ನಿರ್ಮಾಣವಾಗಿದೆ. ಸದಾ ಕಾಲ ಅವರ ಮರ್ಜಿಯಲ್ಲಿ ಕುಳಿತುಕೊಳ್ಳುವ ಕೆಲಸ ಮಾಡದೆ ನಾವೇ ಕಮಾಂಡ್‌ ಮಾಡುವಂತಾಗಬೇಕಿದೆ ಎಂದರು.

ಗಡಿ ಮತ್ತು ಜಲ ವಿವಾದವನ್ನು ಮಾತುಕತೆ ಮೂಲಕ ಪರಿಹರಿಸಿಕೊಳ್ಳಲು ಮುಂದಾದರೂ ಪ್ರತಿ ಚುನಾವಣೆ ಮೂಲಕ ರಾಜಕೀಯ ಲಾಭ ಪಡೆಯುತ್ತಿರುವುದರಿಂದ ಸಮಸ್ಯೆ ಜೀವಂತವಾಗಿ ಉಳಿದಿದೆ. ಪ್ರಜಾಸತ್ತಾತ್ಮಕ ಸರ್ಕಾರ ಬಂದ ಮೇಲೆ ತೀರ್ಮಾನ ಮಾಡಿಕೊಳ್ಳ ಎಂದರೆ ಸಂವಿಧಾನ ಜಾರಿಗೊಳಿಸಲಾಯಿತು. ಭಾಷಾವಾರು ಪ್ರಾಂತ್ಯದ ಮೇಲೆ ರಾಜ್ಯಗಳ ವಿಂಗಡಿಸಿಕೊಳ್ಳುವ ಬದಲಿಗೆ ಸಮಗ್ರ ಅಭಿವೃದ್ಧಿ ಚಿಂತನೆಯುಳ್ಳ ರಾಜ್ಯ ವಿಂಗಡಿಸಲಾಯಿತು.

ಕಾವೇರಿಯಿಂದ ಗೋದಾವರಿ ತನಕ ಸೇರಿ ಕರ್ನಾಟಕವನ್ನು ರಚನೆ ಮಾಡಲಾಯಿತು. ಆದರೆ, ಮಹಾರಾಷ್ಟ್ರದವರು ಮರಾಠಿ ಭಾಷಿಕರು ಜಾಸ್ತಿ ಇರುವ ಪ್ರದೇಶಗಳನ್ನು ಸೇರಿಸಬೇಕೆಂದು ಹೇಳಿ ಸುಪ್ರೀಂಕೋರ್ಚ್‌ ಮೊರೆ ಹೋಯಿತು. ಅಂದು ಮಹಾಜನ್‌ ಆಯೋಗ ರಚನೆಗೆ ವಿರೋಧಿಸಿದ್ದ ಕರ್ನಾಟಕ ಸರ್ಕಾರ ಹಲವಾರು ಅನ್ಯಾಯಗಳಾದರೂ ಮಹಾಜನ್‌ ವರದಿ ಅಂತಿಮ ಎಂದು ಹೇಳಿದೆ. ಮಹಾರಾಷ್ಟ್ರಕ್ಕೆ 800 ಹಳ್ಳಿಗಳು, ಕರ್ನಾಟಕಕ್ಕೆ 200 ಹಳ್ಳಿಗಳು ಸೇರಬೇಕೆಂದು ಹೇಳಿದರೂ ಈವರೆಗೆ ಸಾಧ್ಯವಾಗಿಲ್ಲ. ಮಹಾಜನ್‌ ವರದಿಯನ್ನು ನಾವು ಸ್ವೀಕರಿಸಿದ್ದರೂ ವರದಿ ಒಪ್ಪಲು ಮಹಾರಾಷ್ಟ್ರ ತಯಾರಾಗಿಲ್ಲ ಎಂದರು.

ಕರ್ನಾಟಕ ಯಾವುದೇ ವಿವಾದ ಮಾಡದೆ ಇದ್ದರೂ ಆಗಿಂದಾಗ್ಗೆ ಮಹಾರಾಷ್ಟ್ರ ಈ ವಿಚಾರವನ್ನು ಕೆದಕಿಕೊಂಡು ಬರುತ್ತಿದೆ. ಕೊಂಕಣಿ ಮಾತನಾಡುವವರು ಮರಾಠಿಗರು ಎನ್ನುತ್ತಾರೆ. ಕೊಂಕಣಿ ಕನ್ನಡವೋ ಅಥವಾ ಮರಾಠಿ ಎನ್ನುವುದು ಗೊತ್ತಿಲ್ಲ. ಬೆಂಗಳೂರಿನಲ್ಲಿ ಶೇ. 22ರಷ್ಟುತಮಿಳರು ಇದ್ದಾರೆ. ಮತ್ತೊಂದು ಕಡೆ ತೆಲುಗು ಭಾಷಿಕರು ಇದ್ದಾರೆ. ಈ ರೀತಿ ಭಾಷಾವಾರು ವಿಂಗಡಣೆ ಮಾಡಿಕೊಂಡು ಹೋದರೆ ಹಳೆಯ ಮೈಸೂರು ಪ್ರಾಂತ್ಯಕ್ಕೆ ಸೀಮಿತವಾಗಬೇಕಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಗಡಿ ವಿಚಾರಗಳನ್ನು ನ್ಯಾಯಾಲಯದ ಹೊರಗೆ ಇತ್ಯರ್ಥಪಡಿಸಿಕೊಳ್ಳಲು ಅವಕಾಶವಿದ್ದರೂ ರಾಜಕೀಯ ಕಾರಣಕ್ಕಾಗಿ ಮುಂದಾಗುತ್ತಿಲ್ಲ. ಪ್ರತಿಚುನಾವಣೆ ಬಂದಾಗ ಗಡಿ ವಿಚಾರ ಪ್ರಸ್ತಾಪಿಸುತ್ತಾರೆ. ಈಗ ಸ್ಥಳೀಯ ಸಂಸ್ಥೆಗಳ ಚುನಾವಣೆ ಹತ್ತಿರ ಬಂದಿರುವುದರಿಂದ ಭಾವನಾತ್ಮಕ ವಿಚಾರ ಎತ್ತುತ್ತಿದ್ದಾರೆ. ಕಾಸರಗೋಡಿನ ಚಂದ್ರಗಿರಿ ಬಿಟ್ಟರೆ ಉಳಿದ ಪ್ರದೇಶಗಳಲ್ಲಿ ಮತ್ತು ಪಾವಗಡದ ಮಡಕಶಿರದಲ್ಲಿ ಕನ್ನಡಿಗರೇ ಹೆಚ್ಚಾಗಿದ್ದಾರೆ. ಆದರೆ, ಈ ಪ್ರದೇಶಗಳು ನಮಗೆ ಸೇರಿಲ್ಲ ಎಂದು ಬೇಸರಿಸಿದರು. ಮಲಗಿದ್ದವರನ್ನು ಎಚ್ಚರಿಸಬಹುದು. ಆದರೆ, ಮಲಗಿದಂತೆ ನಿದ್ರೆ ಮಾಡುವವರನ್ನು ಎಚ್ಚರಿಸುವುದು ಕಷ್ಟ. ಹಾಗಾಗಿ, 1956 ಕಾಯ್ದೆಯಂತೆ ರಾಜ್ಯಗಳ ವಿಂಗಡಣೆ ಮಾಡಿರುವುದಕ್ಕೆ ಈಗಲೂ ಕರ್ನಾಟಕ ಬದ್ಧವಿದೆ ಎಂದು ಅವರು ನುಡಿದರು.

ಮಹಾಜನ್‌ ವರದಿ ವಿಚಾರದಲ್ಲಿ ಯಾವುದೇ ರಾಜೀಯಾಗಲ್ಲ. ಸಾಧ್ಯನೂ ಇಲ್ಲ. ಎಲ್ಲಿಯ ತನಕ ಈ ವಿವಾದ ಇರುತ್ತದೆಯೋ ಅಲ್ಲಿಯ ತನಕವೂ ನಮ್ಮ ಹೋರಾಟ ಇರುತ್ತದೆ ಎಂದು ಹೇಳಿದರು.

ನದಿ ನೀರಿನ ವಿಚಾರದಲ್ಲಿ ರಾಜ್ಯ-ರಾಜ್ಯಗಳ ನಡುವೆ ವಿವಾದವಾಗಿರುವ ಜತೆಗೆ ಜಿಲ್ಲೆ-ಜಿಲ್ಲೆಗೂ ವಿವಾದ ಉಂಟಾಗಿದೆ. ಮದ್ರಾಸ್‌ ಆಳ್ವಿಕೆ ಇದದ್ದಾಗ ಬರವಣಿಗೆ ಮೂಲಕ ಮೆಟ್ಟೂರು ಡ್ಯಾಂ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬರೆದುಕೊಟ್ಟಿದ್ದು ತಪ್ಪು. ತಮಿಳುನಾಡು ವರ್ಷಕ್ಕೆ 11 ರಿಂದ 12 ಲಕ್ಷ ಹೆಕ್ಟೇರ್‌ನಲ್ಲಿ ಮೂರು ಬೆಳೆ ಬೆಳೆದರೆ, ಕಾವೇರಿ ಪ್ರಾಂತ್ಯದಲ್ಲಿ 5ಲಕ್ಷದಷ್ಟುಬೆಳೆ ಬೆಳೆಯಲಾಗುತ್ತಿದೆ. ಉಪ ನದಿಗಳನ್ನು ಕಾವೇರಿ ವ್ಯಾಪ್ತಿಗೆ ಸೇರಿಸಿದ್ದು ತಪ್ಪಾಗಿದೆ ಎಂದರು.

ಕಾವೇರಿ ನದಿ ನ್ಯಾಯಾಧೀಕರಣ ತೀರ್ಪಿನಲ್ಲಿ ನಮಗೆ 290 ಟಿಎಂಸಿ ಸಿಗುವ ಬದಲಿಗೆ 270 ಟಿಎಂಸಿ ಸಿಕ್ಕಿತ್ತು. ಬೆಂಗಳೂರು ನಗರಕ್ಕೆ 24 ಟಿಎಂಸಿ ನೀರು ಅಗತ್ಯವಿದ್ದರೂ 8 ಟಿಎಂಸಿ ಹಂಚಿಕೆಯಾಗಿದೆ. ನಮ್ಮ ನೀರನ್ನು ನಾವು ಬಳಸಿಕೊಳ್ಳುವುದಕ್ಕೂ ಅವಕಾಶ ಸಿಗದಿದ್ದರೆ ಸಮುದ್ರಕ್ಕೆ ಪೋಲಾಗುತ್ತಿದೆ ಎಂದರು.

ಚಿಕ್ಕನಾಯಕನಹಳ್ಳಿ ಕ್ಷೇತ್ರದಲ್ಲಿ ಸಚಿವ ಜೆ.ಸಿ ಮಾಧುಸ್ವಾಮಿ ಮತ್ತು ಸುರೇಶ್ ಬಾಬು ಮಾತಿನ ಸಮರ

ಹೇಮಾವತಿ ನದಿಯಿಂದ ನಾಗಮಂಗಲ, ಕೆ.ಆರ್‌. ಪೇಟೆ, ತುಮಕೂರು ಭಾಗಕ್ಕೆ ನೀರು ಕೊಡಬಹುದಾಗಿತ್ತು. ಹೇಮಾವತಿ ನೀರು ಹೊರಗೆ ಹೋದರೆ ಕಾವೇರಿ ನದಿಯಿಂದ ಬಿಡುಗಡೆ ಮಾಡುತ್ತಾರೆ ಎಂದು ಲೆಕ್ಕ ಕೊಡಿ ಎನ್ನುತ್ತದೆ. ಹೊರರಾಜ್ಯಗಳ ವಿಚಾರ ಇರಲೀ ನಮ್ಮ ಭಾಗದ ನೀರನ್ನು ಬಳಸಿಕೊಳ್ಳಲು ದೊಡ್ಡತನ ಬಂದಿಲ್ಲ ಎಂದು ಹೇಳಿದರು.

click me!