8.65 ಲಕ್ಷ ಉದ್ಯೋಗ ಕಲ್ಪಿಸಲು ನೀತಿ: ಕನ್ನಡಿಗರಿಗೆ ಶೇ.100 ಮೀಸ​ಲು

By Kannadaprabha NewsFirst Published Sep 23, 2020, 8:03 AM IST
Highlights

ಉದ್ಯೋಗದಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ಬಗ್ಗೆ ಸಚಿವ ಜಗದೀಶ್ ಶೆಟ್ಟರ್ ಪ್ರಸ್ತಾಪಿಸಿದ್ದಾರೆ. 

ವಿಧಾನ ಪರಿಷತ್‌ (ಸೆ.23): ರಾಜ್ಯದಲ್ಲಿ ಕಳೆದ ಐದು ವರ್ಷಗಳಲ್ಲಿ 1276 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇದರಿಂದ 1,95,404 ಕೋಟಿ ರೂ. ಬಂಡವಾಳ ಹೂಡಿಕೆಗಿದೆ. ಇದರಿಂದ 8,68,500 ಮಂದಿಗೆ ಉದ್ಯೋಗ ದೊರೆಯಲಿದೆ ಎಂದು ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್‌ ತಿಳಿಸಿದರು.

ಕಾಂಗ್ರೆಸ್‌ ಸದಸ್ಯ ಎಂ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ವಿಶೇಷ ಒತ್ತು ನೀಡಲಾಗಿದೆ. ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಪೋ›ತ್ಸಾಹ ನೀಡುವ ನಿಟ್ಟಿನಲ್ಲಿ ನೂತನ ಕೈಗಾರಿಕಾ ನೀತಿಯನ್ನು ಜಾರಿಗೆ ತರಲಾಗಿದೆ. 

ಇದರಿಂದ ಬಂಡವಾಳ ಹೂಡುವವರಿಗೆ ಅನುಕೂಲವಾಗಲಿದೆ. 1276 ಯೋಜನೆಗಳ ಪೈಕಿ ಹಾಲಿ 270 ಯೋಜನೆಗಳು ಕಾರ್ಯಗತವಾಗಿದ್ದು, 28,800 ಕೋಟಿ ರೂ. ಬಂಡವಾಳ ಹೂಡಲಾಗಿದೆ. 1.90 ಲಕ್ಷ ಮಂದಿಗೆ ಉದ್ಯೋಗ ಲಭಿಸಿದೆ. ಕೈಗಾರಿಕೆಗಳಿಗೆ ಭೂಮಿ ನೀಡಲು 1966ರಿಂದ 2020ರವರೆಗೆ ಕೆಐಎಡಿಬಿ ಮೂಲಕವೇ ಭೂಸ್ವಾಧೀನಪಡಿಸಿಕೊಂಡು ನೀಡಲಾಗುತ್ತಿದೆ ಎಂದು ಹೇಳಿದರು. ತೃಪ್ತರಾಗದ ನಾರಾಯಣಸ್ವಾಮಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.

ಒಂದು ಲಕ್ಷಕ್ಕೂ ಅಧಿಕ ಸರ್ಕಾರಿ ಹುದ್ದೆಗಳು ಖಾಲಿ ಇವೆ, ನೇಮಕಾತಿ ಹೇಗೆ? ...

ಈ ಉತ್ತರದಿಂದ ನಾರಾಯಣಸ್ವಾಮಿ ತೃಪ್ತರಾಗಲಿಲ್ಲ. ಕೈಗಾರಿಕೆಗಳಿಗೆ ಉತ್ತೇಜನ ನೀಡಲಾಗುತ್ತದೆ ಎಂದು ಹೇಳುತ್ತೀರಿ. ಎಲ್ಲಿ ನೀಡಲಾಗಿದೆ. ಕೈಗಾರಿಕೆಗಳು ರಾಜ್ಯದಲ್ಲಿ ಸ್ಥಾಪನೆಯಾಗುವ ಬದಲು ಬೇರೆ ರಾಜ್ಯಗಳತ್ತ ಮುಖ ಮಾಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಿಗರಿಗೆ ಕೆಳ​ಹಂತದ ಹುದ್ದೆ ಶೇ.100 ಮೀಸ​ಲು: ಶೆಟ್ಟ​ರ್‌

ರಾಜ್ಯದಲ್ಲಿ ಹೊಸದಾಗಿ ಸ್ಥಾಪನೆಯಾಗುವ ಕೈಗಾರಿಕೆಗಳಲ್ಲಿ ಕೆಳ ಹಂತದ ಹುದ್ದೆಗಳಲ್ಲಿ ಶೇ. 100ರಷ್ಟುಕನ್ನಡಿಗರಿಗೆ ಉದ್ಯೋಗ ನೀಡಬೇಕು ಎಂದು ನೂತನ ಕೈಗಾರಿಕಾ ನೀತಿಯಲ್ಲಿ ಷರತ್ತು ವಿಧಿಸಲಾಗಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಹೇಳಿದರು. ಬಿಜೆಪಿ ಸದಸ್ಯ ವೈ.ಎ. ನಾರಾಯಣಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಸಿ. ಮತ್ತು ಡಿ ಮಟ್ಟದ ಉದ್ಯೋಗಗಳನ್ನು ಕನ್ನಡಿಗರಿಗೆ ನೀಡಬೇಕು. ಉನ್ನತ ಹುದ್ದೆಗಳಲ್ಲಿ ಶೇ.70ರಷ್ಟುಕನ್ನಡಿಗರಿಗೆ ನೀಡಬೇಕು ಎಂದು ಕೈಗಾರಿಕಾ ನೀತಿಯಲ್ಲಿ ತಿಳಿಸಲಾಗಿದೆ ಎಂದರು.

ಕೋಲಾರದ ಬಿಜಿಎಂಎಲ್ (ಚಿನ್ನದ ಗಣಿ) ಪ್ರದೇಶಕ್ಕೆ 12 ಸಾವಿರ ಎಕರೆ ಪ್ರದೇಶವನ್ನು ನೀಡಲಾಗಿತ್ತು. ಇದರಲ್ಲಿ 3212 ಎಕರೆ ಜಮೀನನ್ನು ಬಳಕೆ ಮಾಡಿಲ್ಲ. ಈ ಜಮೀನನ್ನು ಕೈಗಾರಿಕೆಗಳ ಸ್ಥಾಪನೆಗೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ. ಈ ಜಾಗವನ್ನು ಕೆಐಎಡಿಬಿಗೆ ಹಸ್ತಾಂತರ ಮಾಡಿದಲ್ಲಿ ಈ ಪ್ರದೇಶದಲ್ಲಿ ನೂತನ ಕೈಗಾರಿಕಾ ವಸಾಹತು ಸ್ಥಾಪನೆ ಮಾಡಲಾಗುತ್ತದೆ. ಇದರಿಂದ ಸಾವಿರಾರು ಮಂದಿಗೆ ಉದ್ಯೋಗ ಲಭಿಸಲಿದೆ ಎಂದು ಹೇಳಿದರು.

click me!