Mann Ki Baat: ಕರ್ನಾಟಕದ 3 ಸಂಸ್ಥೆಗಳಿಗೆ ಪ್ರಧಾನಿ ಮೋದಿ ಪ್ರಶಂಸೆ

By Kannadaprabha NewsFirst Published Jan 30, 2023, 7:12 AM IST
Highlights

ಸಿರಿಧಾನ್ಯದ ಮಹತ್ವವನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ತಿಳಿಸಲು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಈ ವಿಷಯದಲ್ಲಿ ಕರ್ನಾಟಕದ ಎರಡು ರೈತ ಸಂಘಟನೆಗಳ ಸಾಧನೆಯನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ.  ಕಲಬುರಗಿ, ಬೀದರ್‌ ಸಿರಿಧಾನ್ಯ ಕಂಪನಿಗಳು ಹಾಗೂ ಬೆಂಗಳೂರಿನ ಐಐಎಸ್ಸಿ ಸಾಧನೆ ಬಗ್ಗೆ ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನವದೆಹಲಿ (ಜ.30): ಸಿರಿಧಾನ್ಯದ ಮಹತ್ವವನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟಕ್ಕೆ ತಿಳಿಸಲು ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಈ ವಿಷಯದಲ್ಲಿ ಕರ್ನಾಟಕದ ಎರಡು ರೈತ ಸಂಘಟನೆಗಳ ಸಾಧನೆಯನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಭಾನುವಾರ ಮಾಸಿಕ ಮನ್‌ ಕೀ ಬಾತ್‌(Mann Ki Baat) ರೇಡಿಯೋ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಕಲಬುರಗಿ ಜಿಲ್ಲೆಯ ಆಳಂದ ಭೂತಾಯಿ ಸಿರಿಧಾನ್ಯ ಬೆಳೆಗಾರರ ಕಂಪನಿ ಮತ್ತು ಬೀದರ್‌ನ ಹುಲ್ಸೂರು ಸಿರಿಧಾನ್ಯ ಉತ್ಪಾದಕ ಕಂಪನಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜೊತೆಗೆ ‘ಭಾರತದ ಕನಸಿನ ಟೆಕೇಡ್‌’ (ತಂತ್ರಜ್ಞಾನ ಕೇಂದ್ರಿತ ದಶಕ) ಸಾಕಾರದಲ್ಲಿ ನೆರವಾಗುತ್ತಿರುವ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ಸಾಧನೆಯನ್ನು ಕೊಂಡಾಡಿದ್ದಾರೆ.

 

ತಮಿಳುನಾಡಿನಿಂದ ಪ್ರಧಾನಿ ಮೋದಿ ಲೋಕಸಭೆಗೆ ಸ್ಪರ್ಧೆ?

ಪ್ರಧಾನಿ ಮೆಚ್ಚುಗೆ:

ಭಾರತದ ಯೋಗ ಮತ್ತು ಸಿರಿಧಾನ್ಯ ಇದೀಗ ವಿಶ್ವವ್ಯಾಪಿಯಾಗುತ್ತಿದೆ. ಜೊತೆಗೆ ಸಿರಿಧಾನ್ಯವು ಭಾರತದಲ್ಲಿ ಸ್ವಸಹಾಯ ಸಂಘಗಳಿಗೆ ಆದಾಯದ ಹೊಸ ಮೂಲವಾಗಿ ಹೊರಹೊಮ್ಮಿದೆ. ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿರುವ ಅಳಂದ ಭೂತಾಯಿ ಸಿರಿಧಾನ್ಯ ಬೆಳೆಗಾರರ ಸಂಸ್ಥೆಯು ಭಾರತೀಯ ಸಿರಿಧಾನ್ಯ ಸಂಶೋಧನಾ ಸಮಿತಿಯ ಮೇಲ್ವಿಚಾರಣೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಈ ಸಂಸ್ಥೆ ತಯಾರು ಮಾಡುತ್ತಿರುವ ಖಾಕ್ರಾ ಮತ್ತು ಬಿಸ್ಕತ್ತುಗಳಿಗೆ ಎಲ್ಲೆಡೆ ಭಾರಿ ಬೇಡಿಕೆ ಸಿಕ್ಕಿದೆ.

ಹಾಗೆಯೇ ಬೀದರ್‌ ಜಿಲ್ಲೆಯಲ್ಲಿರುವ ಹುಲ್ಸೂರು ಸಿರಿಧಾನ್ಯ ಉತ್ಪಾದಕ ಕಂಪನಿ ಸಿರಿಧಾನ್ಯಗಳನ್ನು ಬೆಳೆಯುವುದರ ಜೊತೆಗೆ ಅವುಗಳನ್ನು ಹಿಟ್ಟು ಮಾಡಿ ಮಾರಾಟ ಮಾಡುತ್ತಿದೆ. ಇದರಿಂದ ಅವರ ಅದಾಯವೂ ಸಹ ಹೆಚ್ಚಳವಾಗಿದೆ ಎಂದು ಮೋದಿ ಹೇಳಿದ್ದಾರೆ. ಇದೇ ವೇಳೆ ಛತ್ತೀಸ್‌ಗಢದ ಸಂದೀಪ್‌ ಶರ್ಮಾ ಸಾವಯವ ಕೃಷಿಯ ಮೂಲಕ ಸಿರಿಧಾನ್ಯಗಳನ್ನು ಬೆಳೆಯುತ್ತಿದ್ದು, 12 ರಾಜ್ಯಗಳ ರೈತರನ್ನು ಒಳಗೊಂಡಂತೆ ಕೃಷಿ ಉತ್ಪಾದಕ ಸಂಘ (ಎಫ್‌ಪಿಒ)ವನ್ನು ರಚನೆ ಮಾಡಿದ್ದಾರೆ. ಬಿಲಾಸ್‌ಪುರ್‌ನಲ್ಲಿರುವ ಈ ಎಫ್‌ಪಿಒ 8 ಮಾದರಿಯ ಸಿರಿಧಾನ್ಯವನ್ನು ಬೆಳೆದು ಅವುಗಳ ಹಿಟ್ಟನ್ನು ಮಾರಾಟ ಮಾಡುತ್ತಿವೆ ಎಂದಿದ್ದಾರೆ.

 

 ಮೋದಿ ಸರ್ಕಾರಕ್ಕೆ ಜನ ನೀಡಿದ ಮಾರ್ಕ್ಸ್‌ ಇಷ್ಟು!

ಐಐಎಸ್‌ಸಿ ಸಾಧನೆ:

ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) 2022ರಲ್ಲಿ ಒಟ್ಟು 145 ಹಕ್ಕುಸ್ವಾಮ್ಯಗಳನ್ನು ಪಡೆದುಕೊಂಡಿದೆ. ಇದು ಅಪರೂಪದ ದಾಖಲೆಯಾಗಿದೆ. ಇಂತಹ ಸಾಧನೆಗಳು ಭಾರತದ ಕನಸಿನ ಟೆಕೇಡ್‌ (ತಂತ್ರಜ್ಞಾನ ಕೇಂದ್ರಿತ ದಶಕ) ಸಾಕಾರಗೊಳ್ಳುತ್ತಿದೆ. ಅಲ್ಲದೇ ಇದು ವೈಜ್ಞಾನಿಕ ಕ್ಷೇತ್ರದಲ್ಲಿ ಭಾರತದ ಸಾಮರ್ಥ್ಯ ಹೆಚ್ಚಳವಾಗುತ್ತಿರುವುದಕ್ಕೆ ಸಾಕ್ಷಿ ಎಂದು ಹೇಳಿದರು. ಜಾಗತಿಕ ಹಕ್ಕು ಸ್ವಾಮ್ಯ ನೋಂದಣಿಯಲ್ಲಿ ಭಾರತ 7ನೇ ಸ್ಥಾನದಲ್ಲಿದೆ. ಕಳೆದ 5 ವರ್ಷದಲ್ಲಿ ಭಾರತದ ಹಕ್ಕುಸ್ವಾಮ್ಯ ನೋಂದಣಿ ಶೇ.50ರಷ್ಟುಹೆಚ್ಚಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು. ಈ ಸಾಲಿನ ಪದ್ಮ ಪ್ರಶಸ್ತಿಗಳನ್ನು ‘ಜನರ ಪದ್ಮ’ ಎಂದು ಕರೆದಿರುವ ಪ್ರಧಾನಿ ಮೋದಿ ಪ್ರಶಸ್ತಿ ಪುರಸ್ಕೃತರ ಯಶೋಗಾಥೆಗಳನ್ನು ಓದಲು ಕರೆ ನೀಡಿದ್ದಾರೆ.

click me!