ರೇಪ್ ಬಗ್ಗೆ ಬೇಜವಾಬ್ದಾರಿ ಹೇಳಿಕೆ, ಮಮತಾ ಸಿಎಂ ಆಗಲು ಲಾಯಕ್ಕಲ್ಲ ಎಂದ ನಿರ್ಭಯಾ ತಾಯಿ!

By Suvarna NewsFirst Published Apr 12, 2022, 3:35 PM IST
Highlights

ಮಮತಾ ಬ್ಯಾನರ್ಜಿ ಅವರು ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯ ಬಗ್ಗೆ ಈ ರೀತಿ ಕಾಮೆಂಟ್ ಮಾಡುತ್ತಿದ್ದರೇ ಅವರು ಸಿಎಂ ಸ್ಥಾನಕ್ಕೆ ಅರ್ಹರಲ್ಲ ಎಂದು ನಿರ್ಭಯಾತಾಯಿ ಆಶಾ ದೇವಿ ಕಿಡಿಕಾರಿದರು.

ನವದೆಹಲಿ(ಏ.12): ನಾಡಿಯಾ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ತಮ್ಮ ಹೇಳಿಕೆಗಾಗಿ ಟೀಕೆಗೆ ಗುರಿಯಾಗಿದ್ದಾರೆ. ಖುದ್ದು ದೀದೀ ಅತ್ಯಾಚಾರದ ಬಗ್ಗೆ ಪ್ರಶ್ನಿಸಿದ್ದಾರೆ. ಆದರೀಗ ದೀದೀ ಹೇಳಿಕೆಯನ್ನು ನಿರ್ಭಯಾ ತಾಯಿ ಆಶಾ ದೇವಿ ಖಂಡಿಸಿದ್ದು, ಕಿಡಿ ಕಾರಿದ್ದಾರೆ.‘ಅವರು ಸಿಎಂ ಆಗಲು ಲಾಯಕ್ಕಲ್ಲ, ಮಮತಾ ಬ್ಯಾನರ್ಜಿ ಅವರು ಒಂದು ಮಹಿಳೆಯಾಗಿ ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ' ಎಂದಿದ್ದಾರೆ.

ಮಮತಾ ಹೇಳಿದ್ದೇನು?

14 ವರ್ಷದ ಬಾಲಕಿಯ ಮೇಲೆ  ಅತ್ಯಾಚಾರ ನಡೆದಿದೆ ಎನ್ನುವ ವಿಚಾರಕ್ಕೆ ಇದು ಅತ್ಯಾಚಾರವೋ? ಅಥವಾ ಅವಳು ಪ್ರೇಮ ಪ್ರಕರಣದ ಪರಿಣಾಮ ಗರ್ಭಿಣಿಯಾಗಿದ್ದಾಳೋ? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಮತ್ತು ಮಾಧ್ಯಮಗಳ ವಿರುದ್ಧ ಕಿಡಿಕಾರುವ ಸಂದರ್ಭ ಇಂಥದ್ದೊಂದು ಹೇಳಿಕೆ ನೀಡಿದ್ದಾರೆ.

ಅತ್ಯಾಚಾರದಿಂದ ಅಪ್ರಾಪ್ತ ಬಾಲಕಿ ಸಾವನ್ನಪ್ಪಿದ್ದಾರೆ ಎಂದು ಬಿಜೆಪಿಯವರು ತೋರಿಸುತ್ತಿರುವ ಈ ಕಥೆಯನ್ನು ನೀವು ಅತ್ಯಾಚಾರ ಎಂದು ಕರೆಯುತ್ತೀರಾ? ಅವಳು ಗರ್ಭಿಣಿಯಾಗಿದ್ದಳೋ ಅಥವಾ ಪ್ರೇಮ ಸಂಬಂಧ ಹೊಂದಿದ್ದಾಳೋ?  ಅವರ ಕುಟುಂಬಕ್ಕೆ ಈ ವಿಚಾರ ಗೊತ್ತಿತ್ತಾ? ಪ್ರೇಮ ಸಂಬಂಧ ಹೊಂದಿದ್ದರೆ ನಾವು ಏನು ಮಾಡಲು ಸಾಧ್ಯ? ಹೀಗೆ ಪ್ರಶ್ನೆಗಳ ಬಾಣ ಎಸೆದಿದ್ದಾರೆ.

ಕುಟುಂಬದವರು ಬಾಲಕಿಯ ಅಂತ್ಯ ಸಂಸ್ಕಾರ ಮಾಡಿ ಮುಗಿಸಿದ್ದಾರೆ.  ಬಾಲಕಿಯ ಕೆನ್ನೆಗೆ ಬಾರಿಸಿದ್ದಕ್ಕೆ ಆಕೆ ಅನಾರೋಗ್ಯಕ್ಕೆ ತುತ್ತಾಗಿದ್ದಳು ಎಂಬ ಮಾಃಇತಿಯೂ ಇದೆ ಎಂದಿದ್ದಾರೆ. ಮಮತಾ ಈ ರೀತಿ   ಹೇಳಿಕೆ ನೀಡುವ ಮುಖಾಂತರ ತನಿಖೆ ಮೇಲೆ ಪ್ರಭಾವ ಬೀರುತ್ತಿದ್ದಾರೆ ಎಂದು ವಿಪಕ್ಷ ಬಿಜೆಪಿ ಆರೋಪಿಸಿದೆ.

ಹುಟ್ಟುಹಬ್ಬದ ಪಾರ್ಟಿಗೆ ಹೋದಾಗ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಲಾಗಿದ್ದು, ಬಾಲಕಿಯು ಇದೇ ಮಂಗಳವಾರ ನಿಧನರಾಗಿದ್ದಾಳೆ. ಸಂತ್ರಸ್ತೆಯ ಕುಟುಂಬವು ಸ್ಥಳೀಯ ತೃಣಮೂಲ ಕಾಂಗ್ರೆಸ್ ಪಂಚಾಯತ್ ನಾಯಕನ ಒತ್ತಡದ ಮೇರೆಗೆ ಶವಪರೀಕ್ಷೆ ಇಲ್ಲದೆ ಶವವನ್ನು ಸುಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಅವರ ಮಗ ಬ್ರಜ್ ಗೋಪಾಲ್ ಗೋಲಾ (21) ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ. ಘಟನೆ ನಡೆದ ಐದು ದಿನಗಳ ನಂತರ ಪೊಲೀಸ್ ದೂರು ದಾಖಲಾಗಿದೆ.

9ನೇ ತರಗತಿ ವಿದ್ಯಾರ್ಥಿನಿಯ ಗ್ಯಾಂಗ್‌ರೇಪ್‌ ಮಾಡಿ ಸುಟ್ಟುಹಾಕಿದ ರಾಜಕಾರಣಿಯ ಮಗ

ಎಪ್ರಿಲ್ 5 ರಂದು ಆಕೆ ಸಾವನ್ನಪ್ಪಿದ್ದು, ಅವಳ ಕುಟುಂಬ ಘಟನೆ ನಡೆದ ದಿನ ಪೊಲೀಸರ ಹತ್ತಿರ ಯಾಕೆ ಹೋಗಲಿಲ್ಲ? ಈಗಾಗಲೇ ಅವಳ ಶವವನ್ನು ಅವರು ಸುಟ್ಟುಹಾಕಿದ್ದಾರೆ. ಹಾಗಾದರೆ ಪೊಲೀಸರಿಗೆ ಎಲ್ಲಿ ಸಾಕ್ಷಿ ಸಿಗುತ್ತದೆ ಎಂಬ ಪ್ರಶ್ನೆಯನ್ನು ಮಮತಾ ಮಾಡಿದ್ದಾರೆ.

ಬಿಜೆಪಿ ಆರೋಪಗಳನ್ನು ತಳ್ಳಿ ಹಾಕಿರುವ ಮಮತಾ, ಇದು ಉತ್ತರ ಪ್ರದೇಶ ಅಲ್ಲ.. ಇಲ್ಲಿ ಲವ್ ಜಿಹಾದೂ ಇಲ್ಲ.. ಕಾನೂನು ಯಾವ ರೀತಿ ಇದೆಯೋ ಅದನ್ನು ಎಲ್ಲರೂ ಪಾಲಿಸಬೇಕಾಗುತ್ತದೆ. ಬಿಜೆಪಿ ತನ್ನ ಮೂಗಿನ ನೇರಕ್ಕೆ ಪ್ರಕರಣವನ್ನು ತಿರುಚುತ್ತಿದೆ. ಮಾಧ್ಯಮಗಳು ಬಿಜೆಪಿಯ ಕೈಗೊಂಬೆಗಳಾಗಿವೆ.  ದೇಶದ ಸಮಸ್ಯೆಗಳನ್ನು, ಇಂಧನ ದರ ಏರಿಕೆಯನ್ನು ಎಲ್ಲಿ ತೋರಿಸುತ್ತಾರೆ? ಬಿಜೆಪಿ ಹೇಳಿದಂತೆ ಮಾಧ್ಯಮಗಳು ಕೇಳುತ್ತಿವೆ ಎಂದು ಆರೋಪಿಸಿದ್ದಾರೆ.

ಇನ್ನೊಂದು ಕಡೆ ಬಿಜೆಪಿ ಇದೇ ವಿಚಾರ ಇಟ್ಟುಕೊಂಡು ಪ್ರತಿಭಟನೆ ನಡೆಸುತ್ತಿದೆ. ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಆಗ್ರಹಿಸಿ  ರಾಣಾಘಾಟ್‍ ಬಂದ್ ಗೆ ಕರೆ ನೀಡಿತ್ತು. ಬಿಜೆಪಿ ನಾಯಕರು ಬಾಲಕಿಯ ಕುಟುಂಬ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. 

ಕುಟುಂಬಸ್ಥರ ಆರೋಪವೇನು?:

ಮಗಳು ಸಾವನ್ನಪ್ಪಿದ ನಂತರ, ಹುಟ್ಟುಹಬ್ಬದಲ್ಲಿ ಭಾಗಿಯಾಗಿದ್ದ ಇತರರನ್ನು ಪೋಷಕರು ವಿಚಾರಿಸಿದ್ದಾರೆ. ಆಗ ಯುವತಿಯ ಮೇಲೆ ಅತ್ಯಾಚಾರ ನಡೆದಿರುವ ಬಗ್ಗೆ ಅಲ್ಲಿದ್ದವರು ಮಾಹಿತಿ ನೀಡಿದ್ದಾರೆ. ಸಾವನ್ನಪ್ಪಿದ ಮಗಳ ಶರೀರವನ್ನು ಯಾವುದೇ ಸರ್ಕಾರಿ ಆಸ್ಪತ್ರೆಗಾಗಲೀ ಅಥವಾ ಖಾಸಗಿ ಆಸ್ಪತ್ರೆಗಾಗಲೀ ತೆಗೆದುಕೊಂಡು ಹೋಗಬಾರದು ಎಂದು ಆರೋಪಿ ಕಡೆಯವರು ಬೆದರಿಕೆ ಹಾಕಿದರಂತೆ. ಹೋಗುವುದಾದರೆ ಸ್ಥಳೀಯ ಕ್ಲಿನಿಕ್‌ಗೆ ಹೋಗಿ ಎಂದರು, ಆದರೆ ನಂತರ ಬಲವಂತದಿಂದ ಅಂತ್ಯಕ್ರಿಯೆ ಮಾಡಿದರು ಎಂದು ಕುಟುಂಬದವರು ನೋವು ತೋಡಿಕೊಂಡಿದ್ದಾರೆ. ಈ ಪ್ರಕರಣ 2020ರ ಹತ್ರಾಸ್‌ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ನೆನಪಿಸುವಂತಿದೆ

click me!