ಕೊನೆಗೂ ಸಂದೇಶ್‌ಖಾಲಿ ಆರೋಪಿ ಶೇಖ್‌ ಸಿಬಿಐ ವಶಕ್ಕೆ: ರೇಪ್ ಸಂತ್ರಸ್ತರಿಗೆ ಮೋದಿ ಸಂತೈಕೆ

By Kannadaprabha NewsFirst Published Mar 7, 2024, 9:07 AM IST
Highlights

ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲಿನ ದಾಳಿ ಪ್ರಕರಣದ ಆರೋಪಿ ಶಜಹಾನ್‌ ಶೇಖ್‌ನನ್ನು ಕೊನೆಗೂ ಸಿಬಿಐ ತನ್ನ ವಶಕ್ಕೆ ಪಡೆದಿದೆ. ಶೇಖ್‌ನನ್ನು ಬುಧವಾರವೇ ಸಿಬಿಐ ವಶಕ್ಕೆ ಒಪ್ಪಿಸುವಂತೆ ಕಲ್ಕತಾ ಹೈಕೋರ್ಟ್‌ ಆದೇಶಿಸಿತ್ತಾದರೂ, ಅದನ್ನು ಬಂಗಾಳ ಪೊಲೀಸರು ತಿರಸ್ಕರಿಸಿದ್ದರು.

ಕೋಲ್ಕತಾ: ಜಾರಿ ನಿರ್ದೇಶನಾಲಯದ ಅಧಿಕಾರಿಗಳ ಮೇಲಿನ ದಾಳಿ ಪ್ರಕರಣದ ಆರೋಪಿ ಶಜಹಾನ್‌ ಶೇಖ್‌ನನ್ನು ಕೊನೆಗೂ ಸಿಬಿಐ ತನ್ನ ವಶಕ್ಕೆ ಪಡೆದಿದೆ. ಶೇಖ್‌ನನ್ನು ಬುಧವಾರವೇ ಸಿಬಿಐ ವಶಕ್ಕೆ ಒಪ್ಪಿಸುವಂತೆ ಕಲ್ಕತಾ ಹೈಕೋರ್ಟ್‌ ಆದೇಶಿಸಿತ್ತಾದರೂ, ಅದನ್ನು ಬಂಗಾಳ ಪೊಲೀಸರು ತಿರಸ್ಕರಿಸಿದ್ದರು.

ಹೈಕೋರ್ಟ್‌ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿರುವ ಕಾರಣ ಪ್ರಕರಣ ಮತ್ತು ಶಜಹಾನ್‌ನನ್ನು ಸಿಬಿಐ ವಶಕ್ಕೆ ಒಪ್ಪಿಸಲ್ಲ ಎಂದು ಪೊಲೀಸರು ಪಟ್ಟು ಹಿಡಿದಿದ್ದರು. ಆದರೆ ಸುಪ್ರೀಂಕೋರ್ಟ್‌ನಲ್ಲಿ ಬುಧವಾರವೂ ಬಂಗಾಳದ ಸರ್ಕಾರದ ಮೇಲ್ಮನವಿ ವಿಚಾರಣೆಗೆ ಬರದ ಹಿನ್ನೆಲೆಯಲ್ಲಿ ಸಂಜೆಯೊಳಗೆ ಶೇಖ್‌ನನ್ನು ಸಿಬಿಐ ವಶಕ್ಕೆ ಒಪ್ಪಿಸುವಂತೆ ಹೈಕೋರ್ಟ್‌ ಮತ್ತೊಮ್ಮೆ ತಾಕೀತು ಮಾಡಿತ್ತು. ಅದರ ಬೆನ್ನಲ್ಲೇ ಸೂಕ್ತ ವೈದ್ಯಕೀಯ ತಪಾಸಣೆಗಳನ್ನು ಮಾಡಿ ಪೊಲೀಸರು ಶೇಖ್‌ನನ್ನು ಸಿಬಿಐಗೆ ಹಸ್ತಾಂತರಿಸಿದ್ದಾರೆ. ಹೀಗಾಗಿ ಬಂಗಾಳ ಸರ್ಕಾರ ಮತ್ತು ಹೈಕೋರ್ಟ್‌ ನಡುವಿನ ಸಂಘರ್ಷ ತಪ್ಪಿದೆ.

ಸಂದೇಶ್‌ಖಾಲಿ ರೇಪ್ ಸಂತ್ರಸ್ತರಿಗೆ ಮೋದಿ ಸಂತೈಕೆ

ಪಿಟಿಐ ಬರಾಸತ್: ಉಚ್ಚಾಟಿತ ಟಿಎಂಸಿ ನಾಯಕ ಶೇಖ್‌ ಶಾಜಹಾನ್‌ ಬೆಂಬಲಿಗರರಿಂದ ಅತ್ಯಾಚಾರಕ್ಕೆ ಒಳಗಾದ ಪ.ಬಂಗಾಳದ ಸಂದೇಶ್‌ಖಾಲಿ ಗ್ರಾಮದ ಮಹಿಳೆಯನ್ನು ಪ್ರಧಾನಿ ನರೇಂದ್ರ ಮೋದಿ ಬುಧವಾರ ಭೇಟಿ ಮಾಡಿ, ಅವರನ್ನು ಸಂತೈಸಿದರು. ದೇಶವನ್ನೇ ಬೆಚ್ಚಿ ಬೀಳಿಸಿದ ಸಂದೇಶ್‌ಖಾಲಿ ಸಂತ್ರಸ್ತೆಯರನ್ನು ಪ್ರಧಾನಿ ಭೇಟಿ ಮಾಡಿದ್ದು ಇದೇ ಮೊದಲು. ಈ ವೇಳೆ ಮೋದಿ ಅವರು ನೋವು ಆಲಿಸಿ ‘ಪಿತೃಸ್ವರೂಪ’ರಾಗಿ ಸಂತ್ರಸ್ತೆಯರನ್ನು ಸಮಾಧಾನಪಡಿಸಿದರು ಎಂದು ಬಿಜೆಪಿ ನಾಯಕರು ಹೇಳಿದ್ದಾರೆ.

ಹೈಕೋರ್ಟ್ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಬಂಗಾಳ ಸರ್ಕಾರ, 56 ದಿನ ಬಳಿಕ ಶಹಜಹಾನ್ ಬಂಧನ!

ಈ ನಡುವೆ, ತಮ್ಮ ಬಂಗಾಳ ಪ್ರವಾಸದ ವೇಳೆ ಉತ್ತರ 24-ಪರಗಣ ಜಿಲ್ಲೆಯ ಬರಸಾತ್‌ನಲ್ಲಿ ನಡೆದ ಸಾರ್ವಜನಿಕ ಸಮಾರಂಭದಲ್ಲಿ ಟಿಎಂಸಿ ನಾಯಕಿ ಹಾಗೂ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರನ್ನು ತರಾಟೆಗೆ ತೆಗೆದುಕೊಂಡ ಮೋದಿ, ‘ಸಂದೇಶ್‌ಖಾಲಿ ಘಟನೆ ನಾಚಿಕೆಗೇಡಿನ ವಿಷಯ. ಬಂಗಾಳ ಸರ್ಕಾರವು ‘ಅಪರಾಧಿ’ಯನ್ನು ರಕ್ಷಿಸಲು ತನ್ನ ಎಲ್ಲಾ ಶಕ್ತಿಯನ್ನು ಬಳಸುತ್ತಿದೆ. ಸಂದೇಶ್‌ಖಾಲಿಯ ಮಹಿಳೆಯರು ದುರ್ಗಾಮಾತಾ ಸ್ವರೂಪಿ ಆಗಿದ್ದಾರೆ. ಸಂದೇಶ್‌ಖಾಲಿ ಬಿರುಗಾಳಿಯಲ್ಲಿ ತೃಣಮೂಲ ಕಾಂಗ್ರೆಸ್ ಲೋಕಸಭೆ ಚುನಾವಣೆಯಲ್ಲಿ ಧೂಳೀಪಟವಾಗಲಿದೆ’ ಎಂದು ಶಾಜಹಾನ್‌ ಹೆಸರೆತ್ತದೇ ವಾಗ್ದಾಳಿ ನಡೆಸಿದರು.

ಸಾರ್ವಜನಿಕ ಸಭೆಯ ನಂತರ, ಮೋದಿ ಅವರು ಸಂದೇಶಖಾಲಿಯ ಕೆಲವು ಮಹಿಳೆಯರನ್ನು ಭೇಟಿಯಾದರು. ಈ ವೇಳೆ ಮಹಿಳೆಯರು ತಮ್ಮ ಮೇಲೆ ನಡೆದ ದೌರ್ಜನ್ಯದ ಬಗ್ಗೆ ಮಾತನಾಡಿ ಭಾವುಕರಾದರು. ‘ತಂದೆಯಂತೆ’ ತಾಳ್ಮೆಯಿಂದ ಅವರ ನೋವು ಕೇಳಿದ ಮೋದಿ, ಮಹಿಳೆಯರ ನೋವನ್ನು ಅರ್ಥಮಾಡಿಕೊಂಡರು ಹಾಗೂ ಸಂತೈಸಿದರು. ನ್ಯಾಯ ಒದಗಿಸುವ ಭರವಸೆ ನೀಡಿದರು’ ಎಂದು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಗ್ನಿಮಿತ್ರ ಪೌಲ್ ಹಾಗೂ ಪಕ್ಷದ ಕೆಲವು ನಾಯಕರು ತಿಳಿಸಿದ್ದಾರೆ.

ಸಂದೇಶ್‌ಖಾಲಿ ಕೇಸ್‌, ಶಹಜಹಾನ್‌ನನ್ನು ಸಿಬಿಐಗೆ ಒಪ್ಪಿಸಲು ನಿರಾಕರಿಸಿದ ಪಶ್ಚಿಮ ಬಂಗಾಳ ಸರ್ಕಾರ!

ಕೆಲ ಸಂತ್ರಸ್ತೆಯರಿಗೆ ತಡೆ:

ಬರಸಾತ್‌ನಲ್ಲಿ ನಡೆದ ಮೋದಿಯವರ ಸಭೆಗೆ ಪ್ರಯಾಣಿಸುತ್ತಿದ್ದ ಸಂದೇಶಖಾಲಿ ಮಹಿಳೆಯರ ಕೆಲವು ಬಸ್‌ಗಳನ್ನು ಪೊಲೀಸರು ‘ಭದ್ರತಾ ಪ್ರೋಟೋಕಾಲ್’ ನೆಪದಲ್ಲಿ ಪೊಲೀಸರು ತಡೆದಿದ್ದಾರೆ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯ ಸಂದೇಶ್‌ಖಾಲಿ ಎಂಬ ನದಿತೀರದ ದ್ವೀಪದಲ್ಲಿ ಇಎಂಸಿ ನಾಯಕ ಶೇಖ್‌ ಶಾಜಹಾನ್‌ ಹಾಗೂ ಆತನ ಸಹಚರರು ಹಿಂದೂ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ, ಅವರ ಭೂಕಬಳಿಕೆ ಮಾಡಿದ ಆರೋಪ ಹೊತ್ತಿದ್ದಾರೆ. ಇತ್ತೀಚೆಗೆ ಶೇಖ್‌ ಹಾಗೂ ಆತನ 17 ಬಂಟರ ಬಂಧನವಾಗಿದೆ.

click me!